ಮೋದಿ ಮ್ಯಾಜಿಕ್ ಇಲ್ಲ ಮತ್ತು ಬಿಜೆಪಿ ತನ್ನ ಬಲವನ್ನು ಕಳೆದುಕೊಳ್ಳುತ್ತಿದೆ ಎಂಬ ಸ್ಪಷ್ಟವಾದ ಸೂಚನೆ ಇದ್ದರೂ ಕೂಡಾ ಎಲ್ಲ ಎಕ್ಸಿಟ್ ಪೋಲ್ಗಳು ಒಂದೇ ರೀತಿಯ ಫಲಿತಾಂಶವನ್ನು ನೀಡಿದೆ. ಆದರೆ ಈ ದಿನ.ಕಾಮ್ ಈ ಎಕ್ಸಿಟ್ ಪೋಲ್ ಸಮೀಕ್ಷೆ ಮಾಡಿದ ಸಂಸ್ಥೆಗಳಿಗೆ ಸವಾಲೆಸೆದಿದೆ.
2024ರ ಲೋಕಸಭೆ ಚುನಾವಣೆ ಮುಗಿದಿದ್ದು ಇನ್ನು ಕೆಲವೇ ಗಂಟೆಗಳಲ್ಲಿ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಇದರ ಮಧ್ಯೆ ಎಕ್ಸಿಟ್ ಪೋಲ್ ಸಂಖ್ಯೆ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಆದರೆ ಈ ಎಕ್ಸಿಟ್ ಪೋಲ್ಗಳನ್ನು (ಚುನಾವಣೋತ್ತರ ಸಮೀಕ್ಷೆ) ಈ ದಿನ.ಕಾಮ್ ಅನುಮಾನಿಸಿದೆ. ಕರ್ನಾಟಕದ ಮತಗಟ್ಟೆ ಸಮೀಕ್ಷೆಗಳ ಸತ್ಯಾಸತ್ಯತೆ ಬಗ್ಗೆ ಈ ದಿನ.ಕಾಮ್ ಸವಾಲೆಸೆದಿದೆ.
ಚುನಾವಣೆಯ ಮೊದಲ ಹಂತ ಮುಗಿದ ಕೂಡಲೇ ಬಿಜೆಪಿ ಸಹಜವಾಗಿಯೇ ಕೋಮು ಧ್ರುವೀಕರಣದತ್ತ ವಾಲಿದೆ. ನಾಲ್ಕನೇ ಹಂತದ ಚುನಾವಣೆ ನಡೆಯುವಷ್ಟರಲ್ಲಿ ಚುನಾವಣಾ ತಜ್ಞರು ಚುನಾವಣೆಯಲ್ಲಿ ಯಾರಿಗೆ ಗದ್ದುಗೆ ಸಿಗಲಿದೆ ಎಂಬ ಅಭಿಪ್ರಾಯವನ್ನು ಹೇಳಲು ಆರಂಭಿಸಿದರು.
ಜನರ ಆಕ್ರೋಶ, ಬೆಲೆ ಏರಿಕೆ, ನಿರುದ್ಯೋಗ ಎಲ್ಲೆಡೆ ಕಂಡುಬರುತ್ತಿತ್ತು. ಅಂದರೆ ಈ ಬಾರಿಯ ಚುನಾವಣೆ ಈ ಹಿಂದೆ ನಡೆದ ಎರಡು ಲೋಕಸಭೆ ಚುನಾವಣೆಯಂತಲ್ಲ. ಮೋದಿ ಅಲೆ, ಹೈಪರ್ ನ್ಯಾಷನಲಿಸಂ ಕೂಡಾ ಇರಲಿಲ್ಲ, ಸಾಮಾನ್ಯವಾಗಿಯೇ ಚುನಾವಣೆ ನಡೆಯುತ್ತದೆ ಎಂಬುವುದು ಸ್ಪಷ್ಟ ಸೂಚನೆ ಕಂಡುಬಂದಿತ್ತು.
ಇದನ್ನು ಓದಿದ್ದೀರಾ? ‘ಎಕ್ಸಿಟ್ ಪೋಲ್’ಗಳು ಎಷ್ಟು ನಿಖರ? ನಿರಂತರವಾಗಿ ದಾರಿ ತಪ್ಪಿವೆ ಮತಗಟ್ಟೆ ಸಮೀಕ್ಷೆಗಳು!
ಮೋದಿ ಮ್ಯಾಜಿಕ್ ಇಲ್ಲ ಮತ್ತು ಬಿಜೆಪಿ ತನ್ನ ಬಲವನ್ನು ಕಳೆದುಕೊಳ್ಳುತ್ತಿದೆ ಎಂಬ ಸ್ಪಷ್ಟವಾದ ಸೂಚನೆ ಇದ್ದರೂ ಕೂಡಾ ಎಲ್ಲ ಎಕ್ಸಿಟ್ ಪೋಲ್ಗಳು ಒಂದೇ ರೀತಿಯ ಫಲಿತಾಂಶವನ್ನು ನೀಡಿದೆ. ಆದರೆ ಈದಿನ.ಕಾಮ್ ಈ ಎಕ್ಸಿಟ್ ಪೋಲ್ ಸಮೀಕ್ಷೆ ಮಾಡಿದ ಸಂಸ್ಥೆಗಳಿಗೆ ಸವಾಲೆಸೆದಿದೆ.
ಈ ದಿನ ಸಮೀಕ್ಷೆ ಹೇಳುವ ಸಂಖ್ಯೆಗೂ ಇತರೆ ಸಂಸ್ಥೆಗಳ ಎಕ್ಸಿಟ್ ಪೋಲ್ಗಳು ಹೇಳುವ ಸಂಖ್ಯೆಗೂ ಅಜಗಜಾಂತರವಿದೆ. “ನಮ್ಮ ಡೇಟಾವನ್ನು ನಾವು ತೆಗೆದಿಡುತ್ತೇವೆ, ನಿಮ್ಮ ಡೇಟಾವನ್ನು ಕೂಡಾ ಬಹಿರಂಗಪಡಿಸಿ, ನಿಮ್ಮ ಸಮೀಕ್ಷೆ ವಿಧಾನವನ್ನು ತಿಳಿಸಿ” ಎಂದು ಈದಿನ.ಕಾಮ್ ರಿಸರ್ಚ್ ತಂಡ ಸವಾಲು ಹಾಕಿದೆ.
ಸಮೀಕ್ಷೆಗಳು ಏನು ಹೇಳುತ್ತದೆ? ʼಈ ದಿನʼ ಹೇಳುವುದೇನು?
ವಿವಿಧ ಮಾಧ್ಯಮಗಳು ಎನ್ಡಿಎಗೆ 350ರಿಂದ 400 ಸೀಟುಗಳು ಲಭಿಸುತ್ತದೆ ಎಂದು ಅಂದಾಜಿಸಿದೆ. ಕರ್ನಾಟಕದಲ್ಲಿ 3ರಿಂದ 8 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಟಿವಿ ಚಾನೆಲ್ಲುಗಳ ಸಮೀಕ್ಷೆಗಳು ಹೇಳುತ್ತದೆ.
ಇದನ್ನು ಓದಿದ್ದೀರಾ? ಎಕ್ಸಿಟ್ ಪೋಲ್ | ‘ಗೋದಿ ಮೀಡಿಯಾ’ದಲ್ಲಿ ಮೋದಿ ಗೆಲುವಿನ ಭಜನೆ; ವಾಸ್ತವಾಂಶ ಬೇರೆಯೇ ಇದೆ!
ಈ ದಿನ.ಕಾಮ್ ಎರಡು ಚುನಾವಣಾಪೂರ್ವ ಸಮೀಕ್ಷೆಗಳನ್ನು ಮಾಡಿ ಸಮೀಕ್ಷೆ ಫಲಿತಾಂಶ ಪ್ರಕಟಿಸಿದೆ. ಎರಡನೇ ಸಮೀಕ್ಷೆಯಲ್ಲಿ ಕಾಂಗ್ರೆಸ್ಗೆ ಶೇಕಡ 46ರಷ್ಟು ಮತ ಪ್ರಮಾಣ, ಬಿಜೆಪಿ-ಜೆಡಿಎಸ್ ಮೈತ್ರಿಗೆ ಶೇಕಡ 44ರಷ್ಟು ಮತಪ್ರಮಾಣ ಬಂದಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಕೆಲವು ಕಡೆ ತೀವ್ರ ಹಣಾಹಣಿಯಿದ್ದರೆ, ಕೆಲವೆಡೆ ಬಹಳ ವ್ಯತ್ಯಾಸವಿದೆ ಎಂದು ತಿಳಿದುಬಂದಿದೆ.
ಮೊದಲನೆ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ಗೆ 17 ಮತ್ತು ಬಿಜೆಪಿ 11 ಕ್ಷೇತ್ರಗಳಲ್ಲಿ ಗೆಲುವಾಗಬಹುದು. 17 ಕ್ಷೇತ್ರದಲ್ಲಿ 11 ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ಗೆ ಸ್ಪಷ್ಟವಾದ ಮುನ್ನಡೆಯಿದೆ. ಆದರೆ ಎರಡನೇ ಸಮೀಕ್ಷೆ ಪ್ರಕಾರ ಕಾಂಗ್ರೆಸ್ಗೆ 9 ಕ್ಷೇತ್ರದಲ್ಲಿ ಮಾತ್ರ ಸ್ಪಷ್ಟವಾದ ಮುನ್ನಡೆ, ಬಿಜೆಪಿಗೆ 7 ಕ್ಷೇತ್ರದಲ್ಲಿ ಮುನ್ನಡೆ ಇರುವುದು ತಿಳಿದುಬಂದಿದೆ.
ಎರಡನೇ ಸಮೀಕ್ಷೆಯಲ್ಲಿ ಕಾಂಗ್ರೆಸ್ಗೆ ಬಿಜೆಪಿಗಿಂತ ಒಂದುವರೆ ಪ್ರತಿಶತದಷ್ಟು ಮತದಾನ ಪ್ರಮಾಣ ಹೆಚ್ಚು ಬಂದಿದೆ. ಬಿಜೆಪಿಗೆ ಶೇಕಡ 14-15ರಷ್ಟು ಮುನ್ನಡೆಯಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಎರಡು ಪ್ರತಿಶತದಷ್ಟು ಮುನ್ನಡೆಗೆ ಬಂದಿತ್ತು. ಹೀಗಾಗಿ ಹಣಾಹಣಿ ತೀವ್ರವಾಗಿದೆ ಎಂದು ಈದಿನ ಹೇಳಿತ್ತು.
ಬಿಜೆಪಿಗೆ ಶೇಕಡ 2-3ರಷ್ಟು ಮತದಾನ ಪ್ರಮಾಣ ಹೆಚ್ಚಾಗಿ ಬಂದರೆ ಬಿಜೆಪಿಗೆ ಅತೀ ಹೆಚ್ಚು ಸೀಟುಗಳು ಬರುವ ಸಾಧ್ಯತೆಯಿತ್ತು. 17-18 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಬರುವ ಸಾಧ್ಯತೆಯಿತ್ತು. ಆದರೆ ಮತಪ್ರಮಾಣದಲ್ಲಿಯೂ ದೊಡ್ಡ ವ್ಯತ್ಯಾಸವಾಗುವುದು ಆಶ್ಚರ್ಯಕರವಾಗಿರುತ್ತಿತ್ತು.
ಈವರೆಗೆ ಶೇ.90ಕ್ಕಿಂತ ಹೆಚ್ಚು ಬಾರಿ ನಿಖರವಾದ ಮತಗಟ್ಟೆ ಸಮೀಕ್ಷೆಗಳನ್ನು ನಡೆಸಿರುವ ಆಕ್ಸಿಸ್ ಮೈ ಇಂಡಿಯಾದ ಸಮೀಕ್ಷೆಯ ಅಂದಾಜು ಸೇರಿ ಈಗ ಹೊರಬರುತ್ತಿರುವ ಸಮೀಕ್ಷೆ ಅಂದಾಜುಗಳು ಸರಿಯಾಗಿಲ್ಲ ಎಂದು ಈದಿನ.ಕಾಮ್ ಹೇಳುತ್ತದೆ.
ಎಲ್ಲಾ ಕ್ಷೇತ್ರಗಳಲ್ಲೂ ತೀವ್ರ ನೇರ ಹಣಾಹಣಿ ಇರುವ ಸಂದರ್ಭದಲ್ಲಿ ಒಂದೆರಡು ಪರ್ಸೆಂಟ್ ಆಚೀಚೆ ಆದರೂ ಹೆಚ್ಚಿನ ಏರುಪೇರು ಆಗುವುದು ನಿಜ. ಮೈ ಆಕ್ಸಿಸ್ ಪ್ರಕಾರ ಬಿಜೆಪಿ, ಜೆಡಿಎಸ್ ಸೇರಿ ಶೇ.55 ಮತ್ತು ಕಾಂಗ್ರೆಸ್ ಶೇ.41 ಮತಪ್ರಮಾಣ (Vote share) ಲಭ್ಯವಾಗುತ್ತದೆ. ಆದರೆ ಈದಿನ.ಕಾಮ್ ಹೇಳುವಂತೆ ಇದು ಬಹುತೇಕ ಅಸಾಧ್ಯ ಎಂದು ಈದಿನ.ಕಾಮ್ ಹೇಳುತ್ತದೆ. ಇದು ಚುನಾವಣಾ ಪೂರ್ವ ಸಮೀಕ್ಷೆ ಆಧಾರದಲ್ಲಿ ಅಲ್ಲ ಚುನಾವಣೆ ಸಂದರ್ಭದಲ್ಲಿ ನಡೆಸಿದ ಸಮೀಕ್ಷೆ ಆಧಾರದಲ್ಲಿ ಈದಿನ ಈ ವಾದವನ್ನು ಮಾಡುತ್ತಿದೆ.
ಒಂದು ವೇಳೆ ಪುರುಷರ ಮತವನ್ನಷ್ಟೇ ಗಣನೆಗೆ ತೆಗೆದುಕೊಂಡರೂ ಇದು ವಾಸ್ತವವಲ್ಲ. ಮಹಿಳೆಯರ ಮತಪ್ರಮಾಣವನ್ನೂ ಗಣನೆಗೆ ತೆಗೆದುಕೊಂಡರಂತೂ ಅಸಾಧ್ಯ. ಇದರ ಬಗ್ಗೆ ಯಾವುದೇ ಸಂದೇಹವಿಲ್ಲ.
ಯಾರೇ ಯಾವುದೇ ಸಮೀಕ್ಷೆ ಮಾಡಿದಾಗಲೂ ಏರುಪೇರುಗಳಾಗುವುದು, ತಪ್ಪುಗಳಾಗುವುದು ನಡೆಯುತ್ತದೆ. ಡೇಟಾ ಕ್ಲೀನಿಂಗ್ (data cleaning) ಸಮಯದಲ್ಲಿ ಸಮೀಕ್ಷೆ ನಡೆಸುವ ಗಣತಿದಾರರಿಗಿರುವ ರಾಜಕೀಯ ಒಲವು/ ಪೂರ್ವಗ್ರಹಗಳು/ತಪ್ಪಾದ ಸಮೀಕ್ಷೆಗಳನ್ನು ಸರಿ ಮಾಡಲಾಗುತ್ತದೆ. ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿದ ಬಳಿಕ ಶೇಕಡ 3ರಷ್ಟು ತಪ್ಪಾಗಬಹುದು. ಹಾಗಾಗಿ ಈ ಮತಗಟ್ಟೆ ಸಮೀಕ್ಷೆಗಳು ವಾಸ್ತವವನ್ನು ತೋರಿಸುತ್ತಿಲ್ಲ ಎಂದಂತೂ ಸ್ಪಷ್ಟವಾಗಿ ಹೇಳಬಹುದು.
ಈ ನಿಟ್ಟಿನಲ್ಲಿ ಈ ದಿನ.ಕಾಮ್ ಕರ್ನಾಟಕದ ದೃಷ್ಟಿಕೋನದಿಂದ ಸಮೀಕ್ಷೆ ಮಾಡಿದ ಎಲ್ಲರ ಫಲಿತಾಂಶವನ್ನು ಬಹಿರಂಗವಾಗಿ ಸವಾಲು ಮಾಡುತ್ತಿದೆ. ಇತರೆ ಮಾಧ್ಯಮಗಳು ನೀಡಿದ ಸಂಖ್ಯೆಗಳು ಸತ್ಯಕ್ಕೆ ಹತ್ತಿರವಾಗಿಲ್ಲ, ಒಂದು ವೇಳೆ ಸತ್ಯಕ್ಕೆ ಹತ್ತಿರವಾಗಿದ್ದರೆ ಪೂರ್ತಿ ಡೇಟಾವನ್ನು ಬಹಿರಂಗಪಡಿಸಿ ನಮ್ಮ ಡೇಟಾದೊಂದಿಗೆ ತುಲನೆ ಮಾಡಿ ಎಂದು ಈದಿನ.ಕಾಮ್ನ ಡಾ ವಾಸು ಎಚ್ ವಿ ಮತ್ತು ಭರತ್ ಹೆಬ್ಬಾಳ್ ಎಂದು ಸವಾಲು ಹಾಕಿದ್ದಾರೆ.