ದೆಹಲಿಯ ಅಬಕಾರಿ ನೀತಿಯ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇ.ಡಿ ಜಾರಿಗೊಳಿಸಿದ 7ನೇ ಸಮನ್ಸ್ಗೂ ಗೈರು ಹಾಜರಾಗಿದ್ದಾರೆ. ತನಿಖಾ ಸಂಸ್ಥೆಯು ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿಗೊಳಿಸುವುದರ ಬದಲಿಗೆ ದೆಹಲಿ ಹೈಕೋರ್ಟ್ ಆದೇಶಕ್ಕೆ ಕಾಯಬೇಕು ಎಂದು ಎಎಪಿ ಹೇಳಿದೆ.
ಕಳೆದ ವರ್ಷ ನವೆಂಬರ್ 2ರಿಂದ ಜಾರಿಗೊಳಿಸುತ್ತಿರುವ ಸಮನ್ಸ್ಗೆ ಗೈರು ಹಾಜರಾಗಿರುವ ಕಾರಣ ಜಾರಿ ನಿರ್ದೇಶನಾಲಯ ಫೆ.26ರೊಳಗೆ ವಿಚಾರಣೆಗೆ ಹಾಜರಾಗಬೇಕೆಂದು 7ನೇ ಸಮನ್ಸ್ ಜಾರಿಗೊಳಿಸಿತ್ತು. ಆದರೆ ಈ ನೋಟಿಸ್ಗಳಿಗೆ ಪ್ರತಿಕ್ರಿಯೆ ನೀಡಿರುವ ಎಎಪಿ ಸಮನ್ಸ್ ನೀಡಿರುವುದು ಕಾನೂನಿನಲ್ಲಿ ಸಮರ್ಥನೀಯವಲ್ಲ ಎಂದು ಹೇಳಿದೆ.
ಎರಡನೇ ಸಮನ್ಸ್ಅನ್ನು ಡಿಸೆಂಬರ್ 18ರಂದು ನೀಡಲಾಗಿತ್ತು. ಮೂರನೇ ಸಮನ್ಸ್ ಜನವರಿ 3, ನಾಲ್ಕನೆಯದನ್ನು ಜನವರಿ 18, ಐದನೇ ಸಮನ್ಸ್ ಫೆ.2 ಹಾಗೂ ಆರನೇ ಸಮನ್ಸ್ ಫೆ.19ರಂದು ವಿತರಿಸಲಾಗಿತ್ತು.ಆದಾಗ್ಯೂ ಇವೆಲ್ಲ ಸಮನ್ಸ್ಗಳಿಗೂ ದೆಹಲಿ ಸಿಎಂ ಗೈರು ಹಾಜರಾಗಿದ್ದು, ಸಮನ್ಸ್ಗಳು ಅಕ್ರಮವಾಗಿದ್ದು, ಇವುಗಳನ್ನು ಹಿಂಪಡೆಯುವಂತೆ ದೆಹಲಿ ಸಿಎಂ ಪತ್ರ ಬರೆದಿದ್ದಾರೆ.
ಈ ನಡುವೆ ಸಮನ್ಸ್ಗಳಿಗೆ ಗೈರು ಹಾಜರಾಗಿರುವುದು ವಿಧೇಯಕವಲ್ಲ ಎಂದು ಪ್ರಶ್ನಿಸಿರುವ ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ವಿರುದ್ಧ ದೂರು ದಾಖಲಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿಪಕ್ಷ ನಾಯಕ ಅಶೋಕ್ ಮತ್ತು ಸಾರ್ವಜನಿಕ ಸಭ್ಯತೆ
ಮದ್ಯ ಮಾರಾಟವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಹಾಗೂ ಮದ್ಯ ಮಾರಾಟಗಾರರಿಗೆ ಪರವಾನಗಿ ಶುಲ್ಕದ ಪರಿಮಾಣ ಆಧಾರಿತ ಬದಲು ಗ್ರಾಹಕರಿಗೆ ಉತ್ತಮ ಖರೀದಿ ಅನುಭವ ನೀಡುವ ಮಳಿಗೆಗಳನ್ನು ಸ್ಥಾಪಿಸುವ ಅಬಕಾರಿ ನೀತಿಯನ್ನು 2021-22ರಲ್ಲಿ ದೆಹಲಿ ಸರ್ಕಾರ ಜಾರಿಗೊಳಿಸಿತ್ತು. ನಂತರದಲ್ಲಿ ಈ ಯೋಜನೆಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ರದ್ದುಗೊಳಿಸಿ ಸಿಬಿಐ ತನಿಖೆಗೆ ಆದೇಶಿಸಿದ್ದರು.
ಇ.ಡಿ ವರದಿಯ ಪ್ರಕಾರ ಕೇಜ್ರಿವಾಲ್ ನೇತೃತ್ವದ ಎಎಪಿ ಈ ಯೋಜನೆಯನ್ನು ಅಂತಿಮಗೊಳಿಸಲು 100 ಕೋಟಿ ರೂ. ಲಂಚವನ್ನು ಪಡೆದಿದೆ ಎಂದು ಆರೋಪಿಸಿದೆ. ಇದೇ ಹಣವನ್ನು ಎಎಪಿಯು ಗೋವಾ ಚುನಾವಣಾ ಪ್ರಚಾರಕ್ಕೆ ಬಳಸಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಎಎಪಿ ನಾಯಕರಾದ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರನ್ನು ಬಂಧಿಸಿದೆ.