ದೆಹಲಿ ಪೊಲೀಸರು ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ರೈತರಿಗೆ ಯಾವುದೇ ಅವಕಾಶ ನೀಡಲಾಗಿಲ್ಲ ಎಂದು ಹೇಳಿದ್ದಾರೆ. ಆದರೆ, ರೈತರು ಮಾತ್ರ ಜಂತರ್ ಮಂತರ್ಗೆ ತಮ್ಮ ರ್ಯಾಲಿಯನ್ನು ಮುಂದುವರೆಸಿದ್ದಾರೆ. ರೈತರು ದೆಹಲಿ ಪ್ರವೇಶಿಸುವುದನ್ನು ತಡೆಯಲು ಪೊಲೀಸರು ಭಾರೀ ಪ್ರಯತ್ನ ಮಾಡುತ್ತಿದ್ದಾರೆ. ನಿಷೇಧಾಜ್ಞೆಯ ಅಸ್ತ್ರವನ್ನೂ ಪ್ರಯೋಗಿಸುತ್ತಿದ್ದಾರೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಮುಂದಿಡಲು ರೈತ ಸಂಘಟನೆಗಳು ಮುಂದಾಗಿದೆ. ಈ ನಿಟ್ಟಿನಲ್ಲಿ ದೇಶದ ರೈತರಿಗೆ ಬುಧವಾರ ರಾಷ್ಟ್ರ ರಾಜಧಾನಿ ತಲುಪುವಂತೆ ರೈತ ಮುಖಂಡರುಗಳು ಕರೆ ನೀಡಿದ್ದಾರೆ.
ಮಾರ್ಚ್ 6ರಂದು ರಾಷ್ಟ್ರ ರಾಜಧಾನಿ ದೆಹಲಿಗೆ ತಲುಪುವಂತೆ ಮೂರು ದಿನಕ್ಕೂ ಮುನ್ನ ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಕರೆ ನೀಡಿದೆ. ಈಗ ಪೊಲೀಸರ ನಕಾರದ ಹೊರತಾಗಿಯೂ ರೈತರು ತಮ್ಮ ಬೇಡಿಕೆಯನ್ನು ಸರ್ಕಾರದ ಮುಂದಿಡಲು ದೆಹಲಿಯತ್ತ ಹೊರಟಿದ್ದಾರೆ.
ಫೆಬ್ರವರಿ 13ರಿಂದ ರೈತರು ದೆಲ್ಲಿ ಚಲೋ ಪ್ರತಿಭಟನೆಯನ್ನು ನಡೆಸುತ್ತಿದ್ದು ಹರಿಯಾಣ ಮತ್ತು ಪಂಜಾಬ್ ನಡುವಿನ ಶಂಭು ಮತ್ತು ಕನೌರಿ ಪ್ರದೇಶದಲ್ಲಿ ಧರಣಿ ಕೂತಿದ್ದಾರೆ. ಈಗ ಸರ್ಕಾರವು ನಮ್ಮ ಧನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ರೈತ ಸಂಘಟನೆಗಳು ಹೇಳಿವೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ರೈತರು, “ನಮಗೆ ಅನುಮತಿ ಇಲ್ಲದಿದ್ದರೂ ದೆಹಲಿ ಚಲೋ ಮಾಡಿಯೇ ಮಾಡುತ್ತೇವೆ. ಇದು ನಮ್ಮ ಬೇಡಿಕೆಯನ್ನು ಸರ್ಕಾರದ ಮುಂದೆ ಇಡಲು ಇರುವ ಅವಕಾಶ. ನಾವು ಯಾವ ಸಂದರ್ಭವನ್ನು ಎದುರಿಸಲು ಕೂಡಾ ಸಜ್ಜಾಗಿದ್ದೇವೆ” ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನದಿಂದ ದೆಹಲಿಗೆ ರೈತರು ಬಸ್, ರೈಲುಗಳಲ್ಲಿ ಬರುವ ನಿರೀಕ್ಷೆಯಿದೆ. ದೆಹಲಿ ಪೊಲೀಸರು ಕೂಡಾ ಬಂದೋಬಸ್ತ್ ಹೆಚ್ಚಿಸಲು ಆರಂಭಿಸಿದ್ದಾರೆ. ದೆಹಲಿ ಪೊಲೀಸರು ಟಿಕ್ರಿ, ಸಿಂಘು, ಗಾಜಿಯಾಬಾದ್ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಉತ್ತರ ಪ್ರದೇಶದ ಫಿರೋಜಾಬಾದ್ನಿಂದ ದೆಹಲಿಯತ್ತ ಸಂಚರಿಸುತ್ತಿರುವ ರೈತರೊಬ್ಬರು, “ನಾನು ಮತ್ತು ನನ್ನ ಜೊತೆ ಇರುವ ರೈತ ಪ್ರತಿಭಟನಾಕಾರರು ದೆಹಲಿಯತ್ತ ಸಾಗುತ್ತಿದ್ದೇವೆ. ನಾವು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೇವೆ. ಜಂತರ್ ಮಂತರ್ಗೆ ಮೂರು ಗಂಟೆಗೆ ತಲುಪಲಿದ್ದೇವೆ,” ಎಂದು ತಿಳಿಸಿದ್ದಾರೆ.
ಮಾರ್ಚ್ 10 ರಂದು ರೈಲ್ವೆ ತಡೆ ಪ್ರತಿಭಟನೆಗೂ ರೈತರು ಕರೆಕೊಟ್ಟಿದ್ದಾರೆ. ಇನ್ನು ದೆಹಲಿಯಲ್ಲಿ ಮಾರ್ಚ್ 14ರಂದು ಕಿಸಾನ್ ಮಹಾಪಂಚಾಯತ್ಗೆ ಸಂಯುಕ್ತ ಕಿಸಾನ್ ಮೋರ್ಚ್ ಕರೆ ನೀಡಿದೆ. ಪ್ರಮುಖವಾಗಿ ಎಂಎಸ್ಪಿಗೆ ಕಾನೂನು ಗ್ಯಾರಂಟಿ, ವೃದ್ಧ ಪಿಂಚಣಿ, ಮೊದಲಾದ ಬೇಡಿಕೆಗಳನ್ನು ರೈತರು ಇರಿಸಿದ್ದಾರೆ.