ಮೊಮೊಸ್ ತಿಂದು ಓರ್ವ ಮಹಿಳೆ ಸಾವನ್ನಪ್ಪಿ ಆಕೆಯ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಕನಿಷ್ಠ 22 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿ ನಡೆದಿದೆ. ಕಳೆದ ವಾರದಿಂದ ಅಸ್ವಸ್ಥರಾಗಿದ್ದ ಮಹಿಲೆ ಸೋಮವಾರ ಸಾವನ್ನಪ್ಪಿದ್ದು ಇತರರು ಇನ್ನು ಕೂಡಾ ಆಸ್ಪತ್ರೆಯಲ್ಲಿದ್ದಾರೆ ಎಂದು ವರದಿಯಾಗಿದೆ.
31 ವರ್ಷದ ರೇಷ್ಮಾ ಬೇಗಂ ಮತ್ತು ಆಕೆಯ 12, 14 ವರ್ಷ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ಅಕ್ಟೋಬರ್ 25ರಂದು ಬೀದಿ ಬದಿಯ ಸ್ಟಾಲ್ ಒಂದರಲ್ಲಿ ಮೊಮೊಸ್ ತಿಂದಿದ್ದರು. ಇದಾದ ಕೆಲವೇ ದಿನಗಳಲ್ಲಿ ಮೂವರು ತೀವ್ರವಾಗಿ ಅಸ್ವಸ್ತರಾಗಿದ್ದರು. ವಾಂತಿ, ಭೇದಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕಡಿಮೆಯಾಗಬಹುದು ಎಂದು ಭಾವಿಸಿ ಆಸ್ಪತ್ರೆಗೆ ದಾಖಲಾಗಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆದರೆ ದಿನ ಕಳೆದಂತೆ ಅವರ ಸ್ಥಿತಿ ಹದಗೆಟ್ಟ ಕಾರಣ ಅಕ್ಟೋಬರ್ 27ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗುವ ಮಾರ್ಗಮಧ್ಯೆ ರೇಷ್ಮಾ ಮೃತಪಟ್ಟರೆ, ಆಕೆಯ ಇಬ್ಬರು ಪುತ್ರಿಯರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಗೋಬಿ, ಪಾನಿಪುರಿ, ಕಬಾಬ್ ಸೇರಿ ಎಲ್ಲ ಖಾದ್ಯಗಳಲ್ಲಿ ಕೃತಕ ಬಣ್ಣ ನಿಷೇಧ: ಸಚಿವ ಗುಂಡೂರಾವ್
ಆಕೆಯ ಕುಟುಂಬ ಸದಸ್ಯರ ದೂರಿನ ಮೇರೆಗೆ, ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ನ ಆಹಾರ ಸುರಕ್ಷತಾ ಅಧಿಕಾರಿಗಳು ಬಂಜಾರಾ ಹಿಲ್ಸ್ ಪೊಲೀಸರೊಂದಿಗೆ ಖೈರತಾಬಾದ್ನ ಚಿಂತಲ್ ಬಸ್ತಿಯಲ್ಲಿದ್ದ ಬೀದಿ ಬದಿ ವ್ಯಾಪಾರಿಯ ಪತ್ತೆ ಮಾಡಿದ್ದಾರೆ.
ಬಿಹಾರ ಮೂಲದ ಇಬ್ಬರು ಮೊಮೊಸ್ ವ್ಯಾಪಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆಯ ವೇಳೆ ಇದೇ ಸ್ಟಾಲ್ನಲ್ಲಿ ಮೊಮೊಸ್ ಸೇವಿಸಿದ ಕನಿಷ್ಠ 20 ಮಂದಿ ಇದೇ ರೀತಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವುದು ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಹಾರ ಸುರಕ್ಷತಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ವ್ಯಾಪಾರಿಗಳು ಕಡ್ಡಾಯ ಎಫ್ಎಸ್ಎಸ್ಎಐ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಜೊತೆಗೆ ಶುಚಿತ್ವ ಕಾಪಾಡಿಕೊಳ್ಳದೆ ಆಹಾರ ತಯಾರಿಸುತ್ತಿರುವುದು ಕಂಡುಬಂದಿದೆ.
ಇದನ್ನು ಓದಿದ್ದೀರಾ? ರಾಮನಗರ | ಬೀದಿಬದಿಗಳಲ್ಲಿ ಆಹಾರ ಸುರಕ್ಷತೆಯ ಬಗ್ಗೆ ಗಮನ ಹರಿಸಲು ಜಿಲ್ಲಾಡಳಿತ ಸೂಚನೆ
“ನಾವು ವ್ಯಾಪಾರಿಗಳು ವಾಸವಿದ್ದ ಸ್ಥಳದಲ್ಲಿ ಕಂಡುಬಂದ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿದ್ದೇವೆ. ಅವುಗಳ ಪರೀಕ್ಷೆಗಾಗಿ ರಾಜ್ಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಇಬ್ಬರು ಕಾರ್ಯಾಚರಣೆ ನಿಲ್ಲಿಸುವಂತೆಯೂ ಆದೇಶ ಹೊರಡಿಸಿದ್ದೇವೆ. ಆಹಾರ ವಿಷಕಾರಿಯಾಗಲು ಕಾರಣ ತಿಳಿಯಲು ಅಸ್ವಸ್ಥರಾದ ಎಲ್ಲರ ರಕ್ತದ ಮತ್ತು ಮಲ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ” ಎಂದು ಆಹಾರ ಸುರಕ್ಷತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನಿಖೆ ನಡೆಸಿ ಆರೋಪಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯ ಎಸ್ಎಚ್ಒಗೆ ಪತ್ರ ಬರೆದಿದ್ದೇವೆ ಎಂದು ಹೇಳಿದ್ದಾರೆ.
