ಫೋನ್ ಕದ್ದಾಲಿಕೆ ಹಾಗೂ ಕೆಲವು ಕಂಪ್ಯೂಟರ್ಗಳಲ್ಲಿ ಅಧಿಕೃತ ಡೇಟಾವನ್ನು ನಾಶಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಮತ್ತಿಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಹೆಚ್ಚುವರಿ ಡಿಸಿಪಿ ತಿರುಪತಣ್ಣ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್ ಭುಜಂಗ ರಾವ್ ಬಂಧಿತ ಆರೋಪಿಗಳು. ಈ ಇಬ್ಬರೂ ಅಧಿಕಾರಿಗಳು ಈ ಹಿಂದೆ ಕ್ರಮವಾಗಿ ವಿಶೇಷ ಇಂಟೆಲಿಜೆನ್ಸ್ ಬ್ಯೂರೋ (ಎಸ್ಐಬಿ) ಮತ್ತು ಗುಪ್ತಚರ ಇಲಾಖೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಕೆಲಸ ಮಾಡಿದ್ದರು.
“ಹಿಂದಿನ ಬಿಆರ್ಎಸ್ ಸರ್ಕಾರದ ಅವಧಿಯಲ್ಲಿ ವಿವಿಧ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಿಂದ ಗುಪ್ತಚರ ಮಾಹಿತಿಯನ್ನು ಅಳಿಸಿಹಾಕಿದ ಪ್ರಕರಣ ಮತ್ತು ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಅಮಾನತುಗೊಂಡು, ಬಂಧನಕ್ಕೊಳಗಾಗಿರುವ ಡಿಎಸ್ಪಿ ಡಿ ಪ್ರಣೀತ್ ರಾವ್ ಅವರೊಂದಿಗೆ ಈ ಇಬ್ಬರೂ ನಿಕಟ ಸಂಪರ್ಕ ಹೊಂದಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
“ವಿಚಾರಣೆಯ ವೇಳೆ ಇಬ್ಬರು ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡ ಬಗ್ಗೆ ಒಪ್ಪಿಕೊಂಡಿದ್ದಾರೆ. ಖಾಸಗಿ ವ್ಯಕ್ತಿಗಳ ಮೇಲೆ ನಿಗಾ ಇಡುವ ಸಂಚು, ಫೋನ್ ಕದ್ದಾಲಿಕೆಯಂತಹ ಸಂಚಿನಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಜೊತೆಗೆ ಈಗಾಗಲೇ ಬಂಧಿತರಾಗಿರುವ ವಿಶೇಷ ತನಿಖಾ ದಳದ (ಎಸ್ಐಬಿ) ಡಿಎಸ್ಪಿ ಆಗಿದ್ದ ಡಿ ಪ್ರಣೀತ್ ಕುಮಾರ್ ಅಲಿಯಾಸ್ ಪ್ರಣೀತ್ ರಾವ್ ಮತ್ತು ಇತರ ಆರೋಪಿಗಳ ಜೊತೆಗೆ ಸಂಪರ್ಕ ಹೊಂದಿದ್ದಾಗಿ ತಿಳಿಸಿದ್ದಾರೆ. ಈ ಸಂಬಂಧ ಹೆಚ್ಚಿನ ವಿಚಾರಣೆ ಪ್ರಗತಿಯಲ್ಲಿದೆ” ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಣೀತ್ರಾವ್ ಬಂಧನ: ಮಾರ್ಚ್ 10ರಂದು ಎಸ್ಐಬಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ನೀಡಿದ ದೂರಿನ ಆಧಾರದ ಮೇಲೆ, ಪ್ರಣೀತ್ ರಾವ್ ಮತ್ತು ಇತರರ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸೇವಾಧಿಕಾರಿಯಿಂದ ಕ್ರಿಮಿನಲ್ ನಂಬಿಕೆ ದ್ರೋಹ, ಸಾಕ್ಷ್ಯಾಧಾರಗಳ ನಾಶ, ಕ್ರಿಮಿನಲ್ ಪಿತೂರಿ ಆರೋಪದಡಿ ದೂರು ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ತಮಿಳುನಾಡು | ʼಸ್ವಜನಪಕ್ಷಪಾತʼದ ಆರೋಪ; ಬಿಜೆಪಿ ವಿರುದ್ಧ ಉದಯನಿಧಿ ವಾಗ್ದಾಳಿ
ಫೋನ್ ಕದ್ದಾಲಿಕೆ, ಸಾಕ್ಷ್ಯನಾಶ, ನಕಲಿ ಪ್ರೊಫೈಲ್ ತಯಾರಿ, ರಹಸ್ಯ ಅನಧಿಕೃತ ಮತ್ತು ಕಾನೂನುಬಾಹಿರವಾಗಿ ಮೇಲ್ವಿಚಾರಣೆ ಮಾಡಿದ ಆರೋಪದಡಿ ಹಿರಿಯ ಪೊಲೀಸ್ ಅಧಿಕಾರಿ ಪ್ರಣೀತ್ ರಾವ್ ಅವರನ್ನು ಮಾರ್ಚ್ 13ರಂದು ಬಂಧಿಸಲಾಗಿದೆ. ಬಳಿಕ ಗಂಭೀರ ಆರೋಪ ಎದುರಿಸುತ್ತಿರುವ ರಾವ್ ಅವರನ್ನು ತೆಲಂಗಾಣ ಸರ್ಕಾರ ಅಮಾನತುಗೊಳಿಸಿದೆ.