ಬಿಜೆಪಿಯೇತರ ಆಡಳಿತ ಇರುವ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಸಚಿವರು ಕೇರಳದಲ್ಲಿ ಸಮಾಲೋಚನಾ ಸಮಾವೇಶ ನಡೆಸಿದ್ದಾರೆ. ಕೇಂದ್ರ ಸರ್ಕಾರವು ಜಾರಿಗೊಳಿಸಲು ಮುಂದಾಗಿರುವ ‘ಯುಜಿಸಿ ಕರಡು ನಿಯಮಗಳು-2025’ರ ವಿರುದ್ಧ ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳು ಜಂಟಿ ನಿರ್ಣಯ ಅಂಗೀಕರಿಸಿವೆ. ಕರಡು ನಿಯಮಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.
ಸಮಾವೇಶವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಯುಜಿಸಿ ನಿಯಮಗಳು ಉನ್ನತ ಶಿಕ್ಷಣದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ದುರ್ಬಲಗೊಳಿಸುವ, ಧಾರ್ಮಿಕ ಮತ್ತು ಕೋಮು ಸಿದ್ಧಾಂತಗಳನ್ನು ಪ್ರಚೋದಿಸುವ ಹುನ್ನಾರಗಳನ್ನು ಒಳಗೊಂಡಿವೆ. ವಿಶ್ವವಿದ್ಯಾಲಯಗಳ ಪ್ರಮುಖ ಹುದ್ದೆಗಳಿಗೆ (ಕುಲಪತಿ) ಕೋಮುದ್ವೇಷವನ್ನು ಪ್ರಯೋದಿಸುವನ್ನು ಕೂರಿಸುವ ಪ್ರಯತ್ನದ ಭಾಗವಾಗಿವೆ” ಎಂದು ಹೇಳಿದ್ದಾರೆ.
“ಈ ನಿಯಮಗಳು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಶಾಸನಗಳನ್ನು ರೂಪಿಸುವಲ್ಲಿ ರಾಜ್ಯಗಳ ಅಧಿಕಾರವನ್ನು ಉಲ್ಲಂಘಿಸುತ್ತವೆ. ಇದು ದೇಶದ ಫೆಡರಲ್ ಅಡಿಪಾಯವನ್ನು ಹಾಳುಮಾಡುತ್ತದೆ” ಎಂದಿದ್ದಾರೆ.
ಕೇಂದ್ರ ಸರ್ಕಾರ ಮತ್ತು ಯುಜಿಸಿ ವಿಶ್ವವಿದ್ಯಾಲಯಗಳ ಆಡಳಿತದಿಂದ ರಾಜ್ಯ ಸರ್ಕಾರಗಳನ್ನು ಹೊರಗಿಡಲು ಪ್ರಯತ್ನಿಸುತ್ತಿವೆ. ರಾಜ್ಯಗಳು ಜಾರಿಗೆ ತಂದ ಕಾನೂನುಗಳ ಅಡಿಯಲ್ಲಿ ರಚಿಸಲಾದ, ರಾಜ್ಯಗಳ ಹಣಕಾಸು ಮತ್ತು ಆಡಳಿತ ಸಂಪನ್ಮೂಲಗಳನ್ನು ಬಳಸಿಕೊಂಡು ನಡೆಸಲಾಗುತ್ತಿರುವ ವಿಶ್ವವಿದ್ಯಾಲಯಗಳ ಮೇಲೆ ರಾಜ್ಯಗಳು ಯಾವುದೇ ನಿಯಂತ್ರಣವನ್ನು ಹೊಂದಿಲ್ಲ ಎಂಬ ವಾದ ನಿಜವಲ್ಲ” ಎಂದು ಪಿಣರಾಯಿ ಹೇಳಿದ್ದಾರೆ.
ಸಮಾವೇಶದಲ್ಲಿ ಭಾಗಿಯಾಗಿದ್ದ ಕೇರಳ ವಿಪಕ್ಷ ನಾಯಕ ವಿ ಡಿ ಸತೀಶನ್, “ಯುಜಿಸಿ ಸಾಂವಿಧಾನಿಕ ನಿಮಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು” ಎಂದರು.
ಈ ವರದಿ ಓದಿದ್ದೀರಾ?: ಯುಜಿಸಿ ನಿಯಮಾವಳಿ ತಿದ್ದುಪಡಿ- ಒಕ್ಕೂಟ ವ್ಯವಸ್ಥೆಯ ಬುಡಮೇಲು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು, “ಯುಜಿಸಿ ಕರಡು ನಿಯಮಗಳು ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸುತ್ತವೆ. ಮಾತ್ರವಲ್ಲದೆ, ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ದುರ್ಬಲಗೊಳಿಸುವ ಅಪಾಯವನ್ನು ಒಡ್ಡುತ್ತವೆ” ಎಂದಿದ್ದಾರೆ.
ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, “ಕರಡು ನಿಯಮಗಳು ರಾಜ್ಯಗಳು ತಮ್ಮದೇ ವಿಶ್ವವಿದ್ಯಾಲಯಗಳನ್ನು ಕೇವಲ ವೀಕ್ಷಕರಂತೆ ನೋಡುವಂತೆ ಮಾಡುತ್ತವೆ” ಎಂದು ಹೇಳಿದ್ದಾರೆ.
ಸಮಾವೇಶದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಉನ್ನತ ಶಿಕ್ಷಣ ಸಚಿವರಾದ ಎಂ ಸಿ ಸುಧಾಕರ್ ಮತ್ತು ಗೋವಿ ಚೆಝಿಯಾನ್ ಕೂಡ ಭಾಗಿಯಾಗಿದ್ದರು. ಯುಜಿಸಿ ವಿರುದ್ಧ ತಮ್ಮ ಸರ್ಕಾರಗಳ ನಿಲುವನ್ನೂ ವ್ಯಕ್ತಪಡಿಸಿದರು.