ಛತ್ತೀಸ್ಗಢದ ಪತ್ರಕರ್ತ ಮುಕೇಶ್ ಚಂದ್ರಾಕರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಹೈದರಾಬಾದ್ನಲ್ಲಿ ಭಾನುವಾರ (ಜ.5) ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಗುತ್ತಿಗೆದಾರ ಸುರೇಶ್ ಚಂದ್ರಾಕರ್ ಎನ್ನಲಾಗಿದ್ದು ಈತ ಮುಕೇಶ್ ಹತ್ಯೆಯ ಹಿಂದಿನ ಸೂತ್ರಧಾರ ಎಂದು ಹೇಳಲಾಗಿದೆ. ಅಲ್ಲದೆ ಘಟನೆ ಬೆಳಕಿಗೆ ಬಂದಾಗಿನಿಂದ ಸುರೇಶ್ ನಾಪತ್ತೆಯಾಗಿದ್ದ ಎನ್ನಲಾಗಿದೆ.
ಪತ್ರಕರ್ತ ಮುಕೇಶ್ ಚಂದ್ರಾಕರ್ ಹತ್ಯೆ ಬೆನ್ನಲ್ಲೇ ಗುತ್ತಿಗೆದಾರ ಸುರೇಶ್ ನಾಪತ್ತೆಯಾಗಿದ್ದ ಅಲ್ಲದೆ ಆತ ಹೈದರಾಬಾದ್ನಲ್ಲಿರುವ ತನ್ನ ಚಾಲಕನ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಇತ್ತ ಆರೋಪಿಯ ಬಂಧನಕ್ಕೆ ಬಲೆ ಬೀಸಿದ ಪೊಲೀಸರು 200 ಸಿಸಿಟಿವಿಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಜೊತೆಗೆ ಸುಮಾರು 300 ಮೊಬೈಲ್ ಸಂಖ್ಯೆಗಳನ್ನು ಪತ್ತೆಹಚ್ಚಿದರು ಎನ್ನಲಾಗಿದೆ.
ಸುರೇಶ್ ಚಂದ್ರಕರ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಛತ್ತೀಸ್ಘಡದ ಕಂಕೇರ್ ಜಿಲ್ಲೆಯಲ್ಲಿರುವ ಚಂದ್ರಕರ್ ಅವರ ಪತ್ನಿಯನ್ನು ಕೂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾನೂನು ದುರುಪಯೋಗ ಕುರಿತ ಸುಪ್ರೀಂ ಕೋರ್ಟ್ ಹೇಳಿಕೆ ಅಪಾಯಕಾರಿ
ಕಳೆದ ವಾರ ಛತ್ತೀಸ್ಘಡದ ಬಸ್ತಾರ್ನಲ್ಲಿ ಗುತ್ತಿಗೆದಾರರೊಬ್ಬರ ಒಡೆತನದ ಶೆಡ್ನಲ್ಲಿ ಟ್ಯಾಂಕ್ನಲ್ಲಿ ಮುಕೇಶ್ ಚಂದ್ರಾಕರ್ ಅವರ ಮೃತದೇಹ ಪತ್ತೆಯಾಗಿತ್ತು. ಮುಕೇಶ್ ಅವರು ಖಾಸಗಿ ಸುದ್ದಿ ಸಂಸ್ಥೆಯಲ್ಲಿ ವರದಿಗಾರರೂ ಜೊತೆಗೆ ಸ್ವತಂತ್ರ ಪತ್ರಕರ್ತರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು.
ಕಳೆದ ವಾರ ಛತ್ತೀಸ್ಗಢದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಸ್ಥಳೀಯ ಗುತ್ತಿಗೆದಾರನ ಕುರಿತು ವರದಿ ಮಾಡಲಾಗಿತ್ತು. ಇದಾದ ಬಳಿಕ ಮುಕೇಶ್ ಚಂದ್ರಾಕರ್ ನಾಪತ್ತೆಯಾಗಿದ್ದರು. ಈ ನಿಟ್ಟಿನಲ್ಲಿ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದಾದ ಬಳಿಕ ಗುತ್ತಿಗೆದಾರರೊಬ್ಬರ ಒಡೆತನದ ಶೆಡ್ನಲ್ಲಿನ ಟ್ಯಾಂಕ್ನಲ್ಲಿ ಮುಕೇಶ್ ಮೃತದೇಹ ಪತ್ತೆಯಾಗಿತ್ತು.
