ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರ ಅಧಿಕಾರಾವಧಿ ನವೆಂಬರ್ 10ರಂದು ಅಂತ್ಯಗೊಳ್ಳಲಿದೆ. ಅವರ ನಿವೃತ್ತಿಯಿಂದ ತೆರವಾಗುವ ಸಿಜೆಐ ಹುದ್ದೆಗೆ ನೂತನ ಸಿಜೆಐ ಆಗಿ ನ್ಯಾ. ಸಂಜೀವ್ ಖನ್ನಾ ಅವರನ್ನು ಆಯ್ಕೆ ಮಾಡಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶಿಸಿದ್ದಾರೆ. ಸಂಜೀವ್ ಅವರು ಭಾರತದ 51ನೇ ಸಿಜೆಐ ಆಗಿ ನವೆಂಬರ್ 11ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಸುಪ್ರೀಂ ಕೋರ್ಟ್ಅನ್ನು ಮುನ್ನಡೆಸಲಿದ್ದಾರೆ.
ದೆಹಲಿ ಮೂಲದವರೇ ಆದ ನ್ಯಾ. ಸಂಜೀವ್ ಖನ್ನಾ ಅವರು 2005ರಲ್ಲಿ ದೆಹಲಿ ಹೈಕೋರ್ಟ್ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದರು. 2006ರಲ್ಲಿ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ನಿರಂತರ 13 ವರ್ಷ ಹೈಕೋರ್ಟ್ನಲ್ಲಿ ಸೇವೆ ಸಲ್ಲಿಸಿದ ಬಳಿಕ, 2019ರ ಜನವರಿ 18ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.
ನ್ಯಾಯವಾದಿ, ನ್ಯಾಯಮೂರ್ತಿಗಳ ಕೌಟುಂಬಿಕ ಹಿನ್ನೆಲೆ ಹೊಂದಿರುವ ಸಂಜೀವ್ ಅವರು ಹಲವಾರು ಗಮನಾರ್ಹ, ಗಂಭೀರ ಪ್ರಕರಣಗಳಲ್ಲಿ ತೀರ್ಪು ನೀಡಿದ್ದ ನ್ಯಾಯಪೀಠದ ಭಾಗವಾಗಿದ್ದರು. ಪ್ರಮುಖವಾಗಿ ಚುನಾವಣಾ ಬಾಂಡ್ಗಳು ಸಂವಿಧಾನಬಾಹಿರ, ಅಕ್ರಮವೆಂದು ಘೋಷಿಸಿದ ಸಂವಿಧಾನ ಪೀಠದ ನೇತೃತ್ವವನ್ನು ಸಂಜೀವ್ ಖನ್ನಾ ವಹಿಸಿದ್ದರು.
ಸಂಜೀವ್ ಖನ್ನಾ ಅವರ ತಂದೆ ದೇವ್ರಾಜ್ ಖನ್ನಾ ಅವರು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದರು. ಅವರ ಸೋದರ ಮಾವ ಹನ್ಸರಾಜ್ ಖನ್ನಾ ಅವರು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಯಾಗಿ ಸೇವೆಸಲ್ಲಿಸಿದ್ದರು. ಹನ್ಸರಾಜ್ ಖನ್ನಾ ಅವರು 1976ರಲ್ಲಿ ಹೇಬಿಯಸ್ ಕಾರ್ಪಸ್ ಪ್ರಕರಣದಲ್ಲಿ ವಿಭಿನ್ನ ತೀರ್ಪು ನೀಡುವ ಮೂಲಕ, ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಅದೇ ಕಾರಣಕ್ಕಾಗಿ ಸಿಜೆಐ ಆಗುವ ಅವಕಾಶವನ್ನೂ ಕಳೆದುಕೊಂಡಿದ್ದರು.
ಈ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಸಂಜೀವ್ ಖನ್ನಾ ಅವರು 1983ರಲ್ಲಿ ದೆಹಲಿಯ ತೀಸ್ ಹಜಾರಿ ಸೆಷನ್ಸ್ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಆರಂಭಿಸಿದರು. ನಂತರ, ದೆಹಲಿ ಹೈಕೋರ್ಟ್ನಲ್ಲಿ ನ್ಯಾಯವಾದಿಯಾಗಿ ಹಲವು ಪ್ರಕರಣಗಳಲ್ಲಿ ವಾದ ಮಂಡಿಸಿ, ಗೆದ್ದವರು. 2004ರಲ್ಲಿ ದೆಹಲಿ ಸರ್ಕಾರದ ವಕೀಲರಾಗಿ ನೇಮಕಗೊಂಡರು. ಬಳಿಕ, ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿಯೂ ಸೇವೆ ಸಲ್ಲಿಸಿದರು. ಸುದೀರ್ಘ 20 ವರ್ಷಗಳ ವಕೀಲಿ ವೃತ್ತಿಯ ಬಳಿಕ, 2006ರಲ್ಲಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು.
13 ವರ್ಷಗಳ ಕಾಲ ದೆಹಲಿ ಹೈಕೋರ್ಟ್ನಲ್ಲಿ ನ್ಯಾಯದಾನ ಮಾಡಿ, 2019ರಲ್ಲಿ ಸುಪ್ರೀಂ ಕೋರ್ಟ್ಗೆ ಬಡ್ತಿ ಪಡೆದರು. ವಿವಿಧ ಸಂವಿಧಾನ ಪೀಠಗಳ ನೇತೃತ್ವ ವಹಿಸಿಕೊಂಡು, ಹಲವಾರು ಪ್ರಕರಣಗಳಲ್ಲಿ ಗಮನಾರ್ಹ ಆದೇಶಗಳನ್ನು ಹೊರಡಿಸಿದವರು.
ಮುಖ್ಯವಾಗಿ, ಕಳೆದ ವರ್ಷ ರಾಜಕೀಯ ವಲಯದಲ್ಲಿ ಸಂಚಲನ ಉಂಟುಮಾಡಿದ್ದ, ನಾನೇ ಚೌಕಿದಾರ, ʼನಾನು ತಿನ್ನಲ್ಲ-ತಿನ್ನೋಕೂ ಬಿಡಲ್ಲʼ ಎಂಬ ಘೋಷಣೆಯಲ್ಲೇ ಜನರನ್ನು ಯಾಮಾರಿಸುತ್ತಿದ್ದ ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತಂದಿದ್ದ ʼಚುನಾವಣಾ ಬಾಂಡ್’ಗಳನ್ನು ಸಂವಿಧಾನಬಾಹಿರ ಮತ್ತು ಅಕ್ರಮವೆಂದು ಘೋಷಿಸುವಲ್ಲಿ ಸಂಜೀವ್ ಅವರ ಪಾತ್ರ ಪ್ರಮುಖವಾದದ್ದು.
ಈ ವರದಿ ಓದಿದ್ದೀರಾ?: ಸಾಮಾಜಿಕ ನ್ಯಾಯ | ಜಾತಿಗಣತಿ ವರದಿ ಜಾರಿಗೆ ಕಾಂಗ್ರೆಸ್ ಸರ್ಕಾರದ ಮೀನಾಮೇಷ ಯಾಕೆ?
ಅಲ್ಲದೆ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಜಾಮೀನು ನೀಡಿ, ಸಿಬಿಐಅನ್ನು ತರಾಟೆಗೆ ತೆಗೆದುಕೊಂಡು ಕೇಂದ್ರ ಸರ್ಕಾರದ ಆಣತಿಯಲ್ಲಿರುವ ʼಪಂಜರದ ಗಿಳಿʼ ಎಂದು ಚಾಟಿ ಬೀಸಿದ್ದರು. ಚುನಾವಣಾ ಸಮಯದಲ್ಲಿ ಕೇಜ್ರಿವಾಲ್ಗೆ ಮಧ್ಯಂತರ ಜಾಮೀನು ನೀಡಿ, ಪ್ರಜಾಪ್ರಭುತ್ವ ಮತ್ತು ಚುನಾವಣಾ ಮೌಲ್ಯಗಳನ್ನು ಎತ್ತಿಹಿಡಿದಿದ್ದರು.
ಎಲ್ಲ ಕ್ಷೇತ್ರದಲ್ಲೂ ಪಾರದರ್ಶಕತೆ ಇರಬೇಕೆಂದು ಪ್ರತಿಪಾದಿಸಿದ್ದ ಸಂಜೀವ್, ಸುಪ್ರೀಂ ಕೋರ್ಟ್ ಕೂಡ ಆರ್ಟಿಐನಡಿ ಮಾಹಿತಿ ಒದಗಿಸಬೇಕು ಎಂದು ಆದೇಶಿಸಿದ್ದಾರೆ.
ಇಂತಹ ತೀರ್ಪುಗಳನ್ನು ನೀಡಿರುವ ಸಂಜೀವ್ ಖನ್ನಾ ಅವರು ಜಮ್ಮು-ಕಾಶ್ಮೀರದ ಜನರ ಅಸಮಾಧಾನ, ಆಕ್ರೋಶಕ್ಕೂ ಗುರಿಯಾಗಿದ್ದವರು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದವರು. ಜಮ್ಮು-ಕಾಶ್ಮೀರಿಗಳ ಧನಿಯನ್ನು ಹತ್ತಿಕ್ಕಿದ್ದ ಕೇಂದ್ರದ ಧೋರಣೆಗೆ ಸಮ್ಮತಿ ಕೊಟ್ಟವರು.
ಇಂತಹ ಹಲವಾರು ಪ್ರಕರಣಗಳ ವಿಚಾರಣೆಯಲ್ಲಿ ಪಾತ್ರವಹಿಸಿರುವ ಸಂಜೀವ್, 456 ಪೀಠಗಳಲ್ಲಿ ಕಾರ್ಯನಿರ್ವಹಿಸಿದ್ದು 117 ತೀರ್ಪುಗಳನ್ನು ನೀಡಿದ್ದಾರೆ. ಅವರನ್ನು ಡಿ.ವೈ ಚಂದ್ರಚೂಡ್ ಅವರು ತಮ್ಮ ಉತ್ತರಾಧಿಕಾರಿಯಾಗಿ ಸೂಚಿಸಿದ್ದು, ರಾಷ್ಟ್ರಪತಿಗಳ ಅನುಮೋದನೆ ಪಡೆದು, ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ನವೆಂಬರ್ 11ರಿಂದ ಸುಪ್ರೀಂ ಕೋರ್ಟ್ಅನ್ನು ಸಂಜೀವ್ ಖನ್ನಾ ಮುನ್ನಡೆಸಲಿದ್ದಾರೆ.