ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಭಾರತವನ್ನು ವಿಭಜಿಸಿ ಅನೇಕ ದೇಶಗಳನ್ನಾಗಿಸಲು ಬಯಸಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದಾಖಲೆಗಳ ಪ್ರಕಾರ, ನಿಷೇಧಿತ ಪ್ರತ್ಯೇಕತಾವಾದಿ ಗುಂಪಿನ ಸಿಖ್ಸ್ ಫಾರ್ ಜಸ್ಟಿಸ್ನ ಮುಖ್ಯಸ್ಥ ಪನ್ನುನ್, ಭಾರತದ ಏಕತೆ ಮತ್ತು ಸಮಗ್ರತೆಗೆ ಆಡಿಯೋ ಸಂದೇಶಗಳ ಮೂಲಕ ಸವಾಲು ಹಾಕಿದ್ದು ಮತ್ತು ಕಾಶ್ಮೀರದ ಜನರಿಗೆ ಪ್ರತ್ಯೇಕ ಮುಸ್ಲಿಂ ದೇಶವನ್ನು ರಚಿಸಲು ಬಯಸಿದ್ದ ಎಂದು ಹೇಳಿದೆ.
ಕಳೆದ ವಾರವಷ್ಟೆ ಚಂಡೀಗಢ ಮತ್ತು ಅಮೃತಸರದಲ್ಲಿ ಪನ್ನುನ್ಗೆ ಸೇರಿದ್ದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಪನ್ನುನ್ ಪಂಜಾಬ್ ಮತ್ತು ದೇಶದಾದ್ಯಂತ ಭಯವನ್ನು ಹರಡಲು ಭಯೋತ್ಪಾದಕ ಕೃತ್ಯಗಳನ್ನು ಎಸಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕೆ 2019 ರಿಂದ ಎನ್ಐಎಗೆ ಬೇಕಾಗಿದ್ದಾನೆ.
ಜುಲೈ 2020 ರಲ್ಲಿ ಕೇಂದ್ರ ಗೃಹ ಸಚಿವಾಲಯವು ಪನ್ನುನನ್ನು ಭಯೋತ್ಪಾದಕ ಎಂದು ಘೋಷಿಸಿತು. ರೆಡ್ ಕಾರ್ನರ್ ನೋಟಿಸ್ ನೀಡುವಂತೆ ಭಾರತ ಮಾಡಿದ ಮನವಿಯನ್ನು ಸಾಕ್ಷ್ಯಾದಾರಗಳ ಕೊರತೆಯಿಂದಾಗಿ ಇಂಟರ್ಪೋಲ್ ಎರಡು ಬಾರಿ ತಿರಸ್ಕರಿಸಿತ್ತು.
ಇತ್ತೀಚೆಗೆ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಕುರಿತು ಭಾರತ ಮತ್ತು ಕೆನಡಾ ನಡುವಿನ ಬೃಹತ್ ರಾಜತಾಂತ್ರಿಕ ಕಲಹದ ಮಧ್ಯೆ ಪನ್ನುನ್ ಕೆನಡಾದಲ್ಲಿ ಹಿರಿಯ ಭಾರತೀಯ ರಾಜತಾಂತ್ರಿಕರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದ. ಕೆನಡಾದ ಪ್ರಜೆಯಾಗಿದ್ದ ನಿಜ್ಜರ್ನನ್ನು ಭಾರತ ಸರ್ಕಾರದ “ಏಜೆಂಟರು” ಕೊಂದಿದ್ದಾರೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯಾರು ಹಸಿದಿದ್ದರು, ಯಾವುದು ಹಳಸಿತ್ತು?
ಕಳೆದ ವರ್ಷ ಹಿಮಾಚಲ ಪ್ರದೇಶ ವಿಧಾನಸಭೆಯ ಕಟ್ಟಡದ ಗೋಡೆಗಳ ಮೇಲೆ ‘ಖಾಲಿಸ್ತಾನ್’ ಬ್ಯಾನರ್ ಮತ್ತು ಗೀಚುಬರಹ ಕಾಣಿಸಿಕೊಂಡ ಪ್ರಕರಣದಲ್ಲಿ ಪನ್ನುನ್ ಪ್ರಮುಖ ಆರೋಪಿಯಾಗಿದ್ದಾನೆ. 1947 ರಲ್ಲಿ ಭಾರತ ವಿಭಜನೆಯ ಸಮಯದಲ್ಲಿ ಅವರ ಕುಟುಂಬ ಪಾಕಿಸ್ತಾನದ ಖಾನ್ಕೋಟ್ ಎಂಬ ಹಳ್ಳಿಯಿಂದ ಅಮೃತಸರಕ್ಕೆ ಬಂದಿದೆ.
ಈತ ಪಂಜಾಬ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದು. ಪಂಜಾಬ್, ದೆಹಲಿ ಮತ್ತು ಹಿಮಾಚಲ ಪ್ರದೇಶ, ಹಾಗೆಯೇ ಹರಿಯಾಣ ಮತ್ತು ಉತ್ತರಾಖಂಡಗಳಲ್ಲಿ ಪನ್ನುನ್ ವಿರುದ್ಧ ಒಟ್ಟು 16 ಪ್ರಕರಣಗಳಿವೆ.
ಇಂಡಿಯಾ ಗೇಟ್ನಲ್ಲಿ ಖಲಿಸ್ತಾನಿ ಧ್ವಜವನ್ನು ಹಾರಿಸುವ ಯಾರಿಗಾದರೂ 25 ಲಕ್ಷ ಅಮೆರಿಕನ್ ಡಾಲರ್ ನೀಡುವುದಾಗಿ ಹಾಗೂ 2021ರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಲ್ಲಿ ಭಾರತದ ಧ್ವಜವನ್ನು ಹಾರಿಸುವುದನ್ನು ತಡೆದ ಯಾವುದೇ ಪೊಲೀಸ್ ಸಿಬ್ಬಂದಿಗೆ 10 ಲಕ್ಷ ಅಮೆರಿಕನ್ ಡಾಲರ್ ನೀಡುವುದಾಗಿ ಪನ್ನುನ್ ಘೋಷಣೆ ಮಾಡಿದ್ದ ಪ್ರಕರಣಗಳು 16 ಪ್ರಕರಣಗಳಲ್ಲಿ ಒಳಗೊಂಡಿವೆ.