ವಾಣಿಜ್ಯೋದ್ಯಮಿ ಮತ್ತು ಸ್ಟಾರ್ಟ್ಅಪ್ ಸಂಸ್ಥಾಪಕರೊಬ್ಬರು “ದೇಶದಲ್ಲಿ ಅಧಿಕ ವೇತನ ಇರುವವರು ದೇಶ ತೊರೆಯಲು ಇದು ಸಕಾಲ” ಎಂದು ಸಲಹೆ ನೀಡಿದ್ದಾರೆ. ಈ ಬಗ್ಗೆ ರೆಡಿಟ್ನಲ್ಲಿ ಬರೆದುಕೊಂಡಿದ್ದಾರೆ.
ಸಬ್ರೆಡಿಟ್ ಆರ್/ಇಂಡಿಯಾದಲ್ಲಿ ಬಳಕೆದಾರರು ತಾವು ದೇಶದ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಯುಎಸ್ಎನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವುದಾಗಿ ಹೇಳಿದ್ದಾರೆ. ಹಾಗೆಯೇ ಬ್ಯಾಂಕ್ಗಳಲ್ಲಿ ಉದ್ಯೋಗ ಮಾಡಿದ್ದು ಸ್ವಂತ ಕಂಪನಿಯನ್ನು ಪ್ರಾರಂಭಿಸಲು 2018 ರಲ್ಲಿ ಭಾರತಕ್ಕೆ ಮರಳಿರುವವರು ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಭಾರತದ 82 ಸ್ಟಾರ್ಟ್ಅಪ್ಗಳಲ್ಲಿ ಉದ್ಯೋಗ ಕಳೆದುಕೊಂಡ 23 ಸಾವಿರ ಟೆಕ್ಕಿಗಳು
ಸುಮಾರು 30 ಜನರಿಗೆ ಸರಾಸರಿ 15 ಲಕ್ಷ ರೂಪಾಯಿ ವೇತನ ಪಾವತಿಸುತ್ತಿರುವುದಾಗಿ ಹೇಳಿರುವ ಸ್ಟಾರ್ಟ್ಅಪ್ ಒಂದರ ಸಂಸ್ಥಾಪಕ, “ದೇಶವನ್ನು ತೊರೆಯಿರಿ, ಇದು ಉತ್ತಮ ಸಮಯ! ಉತ್ತಮ ಆದಾಯದ ಉದ್ಯಮ ನಡೆಸುತ್ತಿರುವವನಾಗಿ ನಾನು ನಿಮಗೆ ಈ ಸಲಹೆ ನೀಡುತ್ತಿದ್ದೇನೆ” ಎಂದು ಸುದೀರ್ಘ ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ.
ದೇಶ ತೊರೆಯಲು ಸಲಹೆ ನೀಡಲು ತನಗೆ ಪ್ರೇರಣೆ ನೀಡಿದ ಹಲವು ಕಾರಣಗಳನ್ನೂ ಕೂಡಾ ವಿವರಿಸಿದ್ದಾರೆ. “ಭಾರತದಲ್ಲಿ ‘ಮೂರ್ಖ’ ನಿಯಮಗಳಿಂದಾಗಿ ನಾವೀನ್ಯತೆ ಎಂಬುದರ ಕೊಲೆಯಾಗಿದೆ” ಎಂದು ಆರೋಪಿಸಿದ್ದಾರೆ.
“ಭಾರತದಲ್ಲಿ ನೀವು ಯಾವುದೇ ಕೆಲಸವನ್ನು ಮಾಡಬೇಕಾದರೂ ಕೂಡಾ ನೀವು ಅಧಿಕಾರಶಾಹಿ, ರಾಜಕಾರಣಿ ಅಥವಾ ಸೆಲೆಬ್ರೆಟಿ ಆಗಿರಬೇಕು. ಅದಕ್ಕಾಗಿ ನಾನು ನಿಮಗೆ ಒಂದು ಉದಾಹರಣೆಯನ್ನು ನೀಡುತ್ತೇನೆ. ನಮ್ಮ ಅಪ್ಲಿಕೇಶನ್ನಲ್ಲಿ ಒಂದು ವಂಚನೆ ಪ್ರಕರಣ ನಡೆದಿದೆ ಎಂದು ಎಫ್ಐಆರ್ ದಾಖಲಿಸಲಾಗಿದೆ. ನಾವು ಪ್ರಕರಣವನ್ನು ಪರಿಹರಿಸಿದೆವು. ಪೊಲೀಸರಿಗೆ ಸಹಾಯ ಮಾಡಿದೆವು. ಇದರಿಂದಾಗಿ ಸಂತ್ರಸ್ತರಿಗೆ ಹಣವು ವಾಪಸ್ ಲಭಿಸಿದೆ. ಆದರೆ ನಮ್ಮ ಮೇಲೆಯೇ ಆರೋಪ ಮಾಡಲಾಗಿದೆ. ಪೊಲೀಸರು ಈ ಪ್ರಕರಣವನ್ನು ಕ್ಲೋಸ್ ಮಾಡಿಲ್ಲ. ನಮ್ಮಿಂದಲೇ ಹಣವನ್ನು ಪೊಲೀಸರು ಬಯಸುತ್ತಿದ್ದಾರೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಸಿವಿಲ್ ಕೋಡ್ | ‘ಏಕರೂಪ’ದಿಂದ ‘ಜಾತ್ಯತೀತ’ಕ್ಕೆ ಬದಲಾದ ಬಿಜೆಪಿ; ಸಮಾಲೋಚನೆಗೆ ಎನ್ಡಿಎ ಕರೆ
ಹಾಗೆಯೇ ದೇಶದಲ್ಲಿರುವ ಪ್ರಾದೇಶಿಕ ಭಿನ್ನಾಭಿಪ್ರಾಯದ ಸಮಸ್ಯೆಯನ್ನು ಕೂಡಾ ಬೊಟ್ಟುಮಾಡಿದ್ದಾರೆ. ತರಕಾರಿ ವ್ಯಾಪಾರಿಗಳು, ಆಟೋ ಚಾಲಕರು, ಕ್ಯಾಬ್ ಚಾಲಕರು ಮೊದಲಾದವರು ದೇಶದಲ್ಲಿ ನಿರಂತರವಾಗಿ ಈ ‘ಪ್ರಾದೇಶಿಕ ದ್ವೇಷ’ಕ್ಕೆ ಒಳಗಾಗುತ್ತಾರೆ ಎಂದು ಹೇಳಿದ್ದಾರೆ. “ನೀವು ಶ್ರೀಮಂತರಾಗಿ ಕಾಣದಿದ್ದರೆ ಅಥವಾ ಬ್ರ್ಯಾಂಡೆಡ್ ತೊಡುಗೆಯಲ್ಲಿ ಇಲ್ಲದಿದ್ದರೆ, ನೀವು ಈ ದೇಶದಲ್ಲಿ ಹೊಲಸು ವ್ಯಕ್ತಿ” ಎಂದು ಹೇಳಿದರು.
ಅಮೃತಕಾಲವೆಂಬ ಭ್ರಮೆ; ದೇಶ ತೊರೆಯುತ್ತಿರುವ ಲಕ್ಷಾಂತರ ಜನ
ದೇಶದಲ್ಲಿ 2011ರಿಂದ 2023ರವರೆಗೆ ಸುಮಾರು 1.75 ಮಿಲಿಯನ್ ಭಾರತೀಯರು ತನ್ನ ಪಾಸ್ಪೋರ್ಟ್ ಅನ್ನು ಸ್ವಯಂಪ್ರೇರಿತವಾಗಿ ಹಿಂದಿರುಗಿಸಿದ್ದಾರೆ. ಅಂದರೆ ದೇಶದ ನಾಗರಿಕತೆ ತೊರೆದು ಇತರೆ ದೇಶದ ನಾಗರಿಕತೆ ಪಡೆದಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳುತ್ತದೆ. ಅದರಲ್ಲೂ 2014ರಿಂದ 2022ರವರೆಗೆ ಸುಮಾರು 246,580 ಭಾರತೀಯರು ದೇಶ ತೊರೆದಿದ್ದಾರೆ. ಕಳೆದ ವರ್ಷ 2023ರಲ್ಲಿ 216,219 ಮಂದಿ ಮತ್ತು 2022ರಲ್ಲಿ 225,620 ಮಂದಿ ಭಾರತೀಯ ನಾಗರಿಕತೆ ತ್ಯಜಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಮೃತಕಾಲವಿದು, ದೇಶ ಅಭಿವೃದ್ಧಿಯಾಗುತ್ತಿದೆ ಎಂದು ಹೇಳುತ್ತಾರೆ. ಆದರೆ ಈ ಅಮೃತಕಾಲದಲ್ಲೂ ಇಷ್ಟೊಂದು ಜನರು ದೇಶ ತೊರೆಯುವುದೇಕೆ?
