17 ವರ್ಷಗಳ ಹಿಂದೆ 2008ರಲ್ಲಿ ಮಹಾರಾಷ್ಟ್ರದ ಮಾಲೇಗಾಂವ್ ನಗರದಲ್ಲಿ ನಡೆದ ಭೀಕರ ಸ್ಫೋಟ ಪ್ರಕರಣದ ತೀರ್ಪನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ಇಂದು ಪ್ರಕಟಿಸಲಿದೆ.
ಸೆಪ್ಟೆಂಬರ್ 29, 2008 ರಂದು ನಾಶಿಕ್ ಜಿಲ್ಲೆಯ ಮುಸ್ಲಿಂ ಪ್ರಾಬಲ್ಯದ ಪಟ್ಟಣದಲ್ಲಿ ನಡೆಯಿತು. ಅದು ನವರಾತ್ರಿಯ ಮುನ್ನಾದಿನ ಮತ್ತು ರಂಜಾನ್ ಮಾಸವಾಗಿತ್ತು. ಈ ಸ್ಫೋಟದಲ್ಲಿ ಆರು ಜನರು ಸಾವನ್ನಪ್ಪಿ, 101 ಮಂದಿ ಗಾಯಗೊಂಡಿದ್ದರು.
ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ (ನಿವೃತ್ತ) ಸೇರಿದಂತೆ ಏಳು ಜನರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಏಪ್ರಿಲ್ 19 ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಆರಂಭದಲ್ಲಿ, ಎಲ್ಲ ಏಳು ಆರೋಪಿಗಳು ಮೇ 8 ರಂದು ತೀರ್ಪಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ನಂತರ ತೀರ್ಪನ್ನು ಜುಲೈ 31 ಕ್ಕೆ ಮುಂದೂಡಲಾಯಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಾನವೀಯತೆಯ ಪಸೆ ಉಳಿದಿದೆಯೇ ತುಸುವಾದರೂ?
ಆರಂಭದಲ್ಲಿ ಈ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ವಿಶೇಷ ಇನ್ಸ್ಪೆಕ್ಟರ್ ಜನರಲ್ ಹೇಮಂತ್ ಕರ್ಕರೆ ನಿರ್ವಹಿಸುತ್ತಿದ್ದರು, ನಂತರ ಅವರು 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದರು. ಈ ಪ್ರಕರಣದಲ್ಲಿ ಎಟಿಎಸ್ 2009 ರಲ್ಲಿ ತನ್ನ ಆರೋಪಪಟ್ಟಿಯನ್ನು ಸಲ್ಲಿಸಿತು.
ಆರೋಪಿಗಳಾದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ (ನಿವೃತ್ತ), ಮೇಜರ್ ರಮೇಶ್ ಉಪಾಧ್ಯಾಯ (ನಿವೃತ್ತ), ಸಮೀರ್ ಕುಲಕರ್ಣಿ, ಅಜಯ್ ರಾಹಿರ್ಕರ್, ಸುಧಾಕರ್ ಧರ್ ದ್ವಿವೇದಿ ಅಲಿಯಾಸ್ ದಯಾನಂದ ಪಾಂಡೆ ಮತ್ತು ಸುಧಾಕರ್ ಚತುರ್ವೇದಿ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 12 ಆರೋಪಿಗಳಿದ್ದು, ಅವರಲ್ಲಿ ಐವರನ್ನು ಈಗಾಗಲೇ ಖುಲಾಸೆಗೊಳಿಸಲಾಗಿದೆ. ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗುವ ಮೊದಲೇ ಈ ಐವರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.
