ಅಧಿಕ ಭದ್ರತಾ ಪಡೆ ನಿಯೋಜನೆ ಮಾಡಿರುವುದರ ಮತ್ತು ರಾಜ್ಯದ ಕಣಿವೆ ಜಿಲ್ಲೆಗಳ ಗಡಿಯಲ್ಲಿ ಕಾವಲು ಕಾಯುತ್ತಿದ್ದ ಗ್ರಾಮ ಸ್ವಯಂಸೇವಕರ ಬಂಧನದ ವಿರುದ್ಧ ಹಿಂಸಾಚಾರ ಪೀಡಿತ ಮಣಿಪುರದ ಹಲವು ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ.
ಇಂಫಾಲ್ನಲ್ಲಿ, ತಂಗ್ಮೈಬಾಂಡ್ ಡಿಎಂ ಕಾಲೇಜಿನ ಗೇಟ್ನ ಹೊರಗೆ ಧರಣಿ ನಡೆಸಲಾಗಿದೆ. ಇದಲ್ಲದೆ, ಹಲವು ಮಹಿಳಾ ಪ್ರತಿಭಟನಾಕಾರರು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಅಧಿಕೃತ ನಿವಾಸದತ್ತ ಮೆರವಣಿಗೆ ನಡೆಸಿದರು.
ಇನ್ನು ಇಂಫಾಲ್ನ ಕಾಂಚಿಪುರದ ಮಣಿಪುರ ವಿಶ್ವವಿದ್ಯಾಲಯದ ಗೇಟ್ನಲ್ಲಿ ರ್ಯಾಲಿ ನಡೆಸುತ್ತಿದ್ದ ಮಹಿಳೆಯರನ್ನು ಪೊಲೀಸರು ತಡೆದಿದ್ದಾರೆ. ಅದಾದ ಬಳಿಕ ಆ ಪೈಕಿ ಕೆಲವರಿಗೆ ಮನವಿ ಪತ್ರವನ್ನು ಅಧಿಕಾರಿಗಳಿಗೆ ಸಲ್ಲಿಸಲು ಅವಕಾಶ ನಿಡಲಾಗಿದೆ.
ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಸಭೆಯನ್ನು ಕರೆದ ಕೆಲವು ದಿನಗಳ ನಂತರ ಮಣಿಪುರದಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಕಣಿವೆ ಜಿಲ್ಲೆಗಳ ವಿವಿಧೆಡೆ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ| ಸ್ಥಿತಿ ಅವಲೋಕಿಸಲು ಸಭೆ ಕರೆದ ಗೃಹ ಸಚಿವ ಅಮಿತ್ ಶಾ
ಇನ್ನು ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಇಮಗಿ ಮೀರಾ ಒಟ್ಗಾನಿಸ್ ಎಂಬ ಸಂಘಟನೆಯ ಸಂಚಾಲಕಿ ಸುಜಾತಾ ದೇವಿ, “ಸಂಸತ್ತಿನ ಅಧಿವೇಶನ ನಡೆಯುತ್ತಿರುವುದರಿಂದ ಮಣಿಪುರದಲ್ಲಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಬಯಸುತ್ತೇವೆ” ಎಂದು ಹೇಳಿದ್ದಾರೆ.
“ಕೇಂದ್ರ ಅರೆಸೇನಾ ಪಡೆಗಳನ್ನು ದೂರದ ಮತ್ತು ದುರ್ಬಲ ಪ್ರದೇಶಗಳಲ್ಲಿ ನಿಯೋಜಿಸಬೇಕು. ಆದರೆ ಕಣಿವೆ ಪ್ರದೇಶದಲ್ಲಿ ನಿಯೋಜಿಸಲಾಗುತ್ತಿದೆ” ಎಂದರು.
ಮತ್ತೊಬ್ಬ ಮಹಿಳಾ ನಾಯಕಿ ಎಮಾ ನ್ಗಾಂಬ್ಜ್, “ಮಣಿಪುರದ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು. ರಾಜ್ಯದಲ್ಲಿ ಜನರು ಈಗಾಗಲೇ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿರುವಾಗ ಭದ್ರತಾ ಏಜೆನ್ಸಿಗಳ ಅತಿಯಾದ ಅಧಿಕಾರ ಬಳಕೆ ಸದ್ಯಕ್ಕೆ ಅಗತ್ಯವಿಲ್ಲ” ಎಂದು ಅಭಿಪ್ರಾಯಿಸಿದರು.
ಇದನ್ನು ಓದಿದ್ದೀರಾ? ಮಣಿಪುರ | ಸಿಎಂ ಅಧಿಕೃತ ನಿವಾಸದ ಬಳಿ ಭಾರೀ ಬೆಂಕಿ ಅವಘಡ
ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಬಹುಸಂಖ್ಯಾತ ಮೈತಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಮಣಿಪುರದಲ್ಲಿ ಕಳೆದ ವರ್ಷ ಮೇ 3ರಂದು ಬುಡಕಟ್ಟು ಜನಾಂಗದವರ ಒಗ್ಗಟ್ಟಿನ ಮೆರವಣಿಗೆ ನಡೆದಿದ್ದು, ಅದಾದ ಬಳಿಕ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾಗಿದೆ.
ಹಿಂಸಾಚಾರದಲ್ಲಿ ಕುಕಿ ಮತ್ತು ಮೈತಿ ಎರಡೂ ಸಮುದಾಯಗಳಿಗೆ ಸೇರಿದ 220ಕ್ಕೂ ಹೆಚ್ಚು ಜನರು ಮತ್ತು ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಮಣಿಪುರದಲ್ಲಿ ಒಟ್ಟು ಜನಸಂಖ್ಯೆಯ ಶೇಕಡ 53ರಷ್ಟು ಮೈತಿಗಳಿದ್ದು ಅವರಿಗೆ ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ನಾಗಾಗಳು ಮತ್ತು ಕುಕಿಗಳನ್ನು ಸೇರಿದ ಬುಡಕಟ್ಟು ಜನಾಂಗದವರು ಮಣಿಪುರದಲ್ಲಿ ಶೇಕಡ 40ರಷ್ಟಿದ್ದು ಮುಖ್ಯವಾಗಿ ಬೆಟ್ಟ ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ.