ಕಳೆದ ನಾಲ್ಕು ವರ್ಷಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮನರೇಗಾ) ಯೋಜನೆಯಡಿ 10.43 ಕೋಟಿ ಫಲಾನುಭವಿಗಳ ಉದ್ಯೋಗ ಕಾರ್ಡ್ಗಳನ್ನು ಮೋದಿ ಸರ್ಕಾರ ರದ್ದುಗೊಳಿಸಿದೆ. ಹಳ್ಳಿಗಾಡಿನ ಕೋಟ್ಯಂತರ ಕೃಷಿಕೂಲಿಗಳ ಹೊಟ್ಟೆ ಮೇಲೆ ಹೊಡೆದಿದೆ.
“ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದ 1.43 ಕೋಟಿ ಕಾರ್ಮಿಕರ ಹೆಸರುಗಳನ್ನು 2021-22ರಲ್ಲಿ ರದ್ದುಗೊಳಿಸಲಾಗಿದೆ. 2022-23ರಲ್ಲಿ 5.53 ಕೋಟಿ ಫಲಾನುಭವಿಗಳ ಹೆಸರುಗಳನ್ನು ಅಳಿಸಲಾಗಿದೆ. 2022-23ರಲ್ಲಿ ಕೇಂದ್ರ ಸರ್ಕಾರವು ಮನರೇಗಾ ದಿನಗೂಲಿಗಳ ಆಧಾರ್ ಆಧರಿತ ಪಾವತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಹಲವಾರು ಸುತ್ತೋಲೆಗಳನ್ನು ಹೊರಡಿಸುವುದೇ ಕಾರ್ಮಿಕರ ಉದ್ಯೋಗ ಕಾರ್ಡ್ ರದ್ದಾಗಲು ಕಾರಣವಾಗಿದೆ” ಎಂದು ಕಾಂಗ್ರೆಸ್ ಸಂಸದ ಕೆ ಸಿ ವೇಣುಗೋಪಾಲ್ ಲೋಕಸಭೆಯಲ್ಲಿ ಆರೋಪಿಸಿದ್ದರು.
‘ಐದು ಅಂಶಗಳನ್ನು ಆಧರಿಸಿ ಉದ್ಯೋಗ ಕಾರ್ಡ್ಗಳನ್ನು ರದ್ದುಮಾಡಲಾಗಿದೆ. ಇದರಲ್ಲಿ ಕೇಂದ್ರದ ಪಾತ್ರವಿಲ್ಲ’ ಎಂಬುದಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಚಂದ್ರಶೇಖರ್ ಪೆಮ್ಮಸಾನಿ ಕಳೆದ ಡಿಸೆಂಬರ್ 3ರಂದು ಹೇಳಿದ್ದುಂಟು. “ಸಚಿವರು ಐದು ಅಂಶಗಳ ಕುರಿತು ಮಾತನಾಡುತ್ತಿದ್ದಾರೆ, ಈ ಐದು ಅಂಶಗಳಿಂದ 10.43 ಕೋಟಿ ಹೆಸರುಗಳನ್ನು ರದ್ದುಗೊಳಿಸಲಾಗುತ್ತದೆಯೇ? ಅರ್ಥವಾಗುತ್ತಿಲ್ಲ. ಮನರೇಗಾ ದಿನಗೂಲಿಗಳನ್ನು ಪರೋಕ್ಷವಾಗಿ ಅವಮಾನಿಸುತ್ತಿದ್ದೀರಿ” ಎಂದು ವೇಣುಗೋಪಾಲ್ ಲೋಕಸಭೆಯಲ್ಲಿ ಕಿಡಿಕಾರಿದ್ದರು.
ಶಿಕ್ಷಣ ತಜ್ಞರು ಮತ್ತು ಕಾರ್ಯಕರ್ತರ ಒಕ್ಕೂಟವಾದ ಲಿಬ್ಟೆಕ್ ಇಂಡಿಯಾ ಒದಗಿಸಿರುವ ಮಾಹಿತಿಯ ಪ್ರಕಾರ, “2024ರ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ 84.8 ಲಕ್ಷ ಕಾರ್ಮಿಕರ ಹೆಸರುಗಳನ್ನು ಯೋಜನೆಯಿಂದ ಅಳಿಸಲಾಗಿದೆ ಎಂದು ‘ದಿ ಹಿಂದು’ ಪತ್ರಿಕೆ ವರದಿ ಮಾಡಿದ್ದು, 2022-23 ಮತ್ತು 2023-24ರ ಹಣಕಾಸು ವರ್ಷಗಳಲ್ಲಿ 8 ಕೋಟಿ ಮಂದಿಯನ್ನು ಮನರೇಗಾ ನೋಂದಣಿಯಿಂದ ಕಿತ್ತು ಹಾಕಲಾಗಿದೆ” ಎಂದು ಲಿಬ್ಟೆಕ್ ಅಂಕಿಅಂಶಗಳನ್ನು ಒದಗಿಸಿದೆ.
ಅಲ್ಲದೆ ಈ ಯೋಜನೆಯ ಬಜೆಟ್ ಕಡಿತದ ಕುರಿತು ವೇಣುಗೋಪಾಲ್ ಹಾಗೂ ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ ಸಂಸದ ಟಿ ಆರ್ ಬಾಲು ಅವರು ಲೋಕಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇದೇ ಮಾರ್ಚ್ 18ರಂದು ರಾಜ್ಯಸಭೆಯಲ್ಲಿ ಶೂನ್ಯ ವೇಳೆ ಸೋನಿಯಾ ಗಾಂಧಿ ಕೂಡಾ ಈ ವಿಷಯವನ್ನು ಪ್ರಸ್ತಾಪಿಸಿದ್ದು, “2005ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮನರೇಗಾ)ಯನ್ನು ಜಾರಿಗೆ ತಂದಿತ್ತು. ಪ್ರಸ್ತುತ ಬಿಜೆಪಿ ಸರ್ಕಾರವು ಮನರೇಗಾ ಯೋಜನೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಿರುವುದು ತೀವ್ರ ಕಳವಳಕಾರಿಯಾಗಿದೆ” ಎಂದು ಆತಂಕ ವ್ಯಕ್ತಪಡಿಸಿದ್ದರು.
“ಈ ಯೋಜನೆಗೆ ಈ ವರ್ಷ ₹86,000 ಕೋಟಿ ಬಜೆಟ್ ಹಂಚಿಕೆಯಾಗಿದ್ದು, ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಇದು ಜಿಡಿಪಿಯ ಶೇಕಡಾವಾರು ಪ್ರಮಾಣದ ಪ್ರಕಾರ ಹೇಳುವುದಾದರೆ ಕಳೆದ 10 ವರ್ಷಗಳ ಅವಧಿಯಲ್ಲಿ ಅತ್ಯಂತ ಕನಿಷ್ಠ. ಹಣದುಬ್ಬರವನ್ನು ಲೆಕ್ಕಕ್ಕೆ ತೆಗೆದುಕೊಂಡರೆ 86 ಸಾವಿರ ಕೋಟಿಗಳಲ್ಲಿ ₹4,000 ಕೋಟಿಗಳಷ್ಟು ಖೋತಾ ಆಗುತ್ತದೆ. ಹಂಚಿಕೆಯಾಗಿರುವ ₹86 ಕೋಟಿಯಲ್ಲಿ ಪ್ರತಿಶತ 20ರಷ್ಟು ಮೊತ್ತ ಹಿಂದಿನ ವರ್ಷಗಳ ಬಾಕಿ ಪಾವತಿಗೆ ವೆಚ್ಚವಾಗುತ್ತದೆ. ಹೀಗಾಗಿ ಈ ವರ್ಷಕ್ಕೆ ಉಳಿಯುವ ಹಂಚಿಕೆ ಅತ್ಯಲ್ಪ” ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮನರೇಗಾ ಬಾಕಿ ಕೂಲಿ ಪಾವತಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ
“ಹೆಚ್ಚುವರಿಯಾಗಿ, ಆಧಾರ್ ಆಧರಿತ ಪಾವತಿ ಮತ್ತು ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ವ್ಯವಸ್ಥೆ, ವೇತನ ಪಾವತಿಯಲ್ಲಿ ನಿರಂತರ ವಿಳಂಬ ಮತ್ತು ಹಣದುಬ್ಬರದ ನಡುವೆ ಅಸಮರ್ಪಕ ವೇತನ ದರಗಳು ಸೇರಿದಂತೆ ಕಾರ್ಮಿಕರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ” ಎಂಬ ಅಂಶ ಕುರಿತು ಅವರು ಗಮನ ಸೆಳೆದರು.
ಕಳೆದ ವರ್ಷ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗುವ ಮುನ್ನ ಕೇಂದ್ರ ಸರ್ಕಾರವು 2024-25ರ ಆರ್ಥಿಕ ವರ್ಷದಲ್ಲಿ ಮನರೇಗಾ ವೇತನವನ್ನು ಶೇ.3-10ರಷ್ಟು ಹೆಚ್ಚಿಸಿದ್ದು, ₹86,000 ಕೋಟಿ ಅನುದಾನ ನೀಡಿತ್ತು. ಒಂದು ವರ್ಷದಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಳ ಮಾಡಿ, ಹಣದುಬ್ಬರಕ್ಕೆ ಸರಿಹೊಂದುವಂತೆ ಬಜೆಟ್ ಹೆಚ್ಚಿಸಬೇಕಿತ್ತು. ಆದರೆ ಕಳೆದ ವರ್ಷ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಮಿಕರನ್ನು ಮರುಳು ಮಾಡಿದ್ದ ಕೇಂದ್ರ ಸರ್ಕಾರ, ಚುನಾವಣೆ ಬಳಿಕ ಮನರೇಗಾ ದಿನಗೂಲಿಗಳನ್ನು ಕಡೆಗಣಿಸಿದ್ದು, 10.43 ಕೋಟಿ ಕಾರ್ಮಿಕರ ಹೊಟ್ಟೆಪಾಡನ್ನು ಕಸಿದುಕೊಂಡಿದೆ.