ಬಡವರ ಸಂಖ್ಯೆ ಹೆಚ್ಚಳ | ಸತ್ಯ ಒಪ್ಪಿಕೊಂಡ ಗಡ್ಕರಿ, ಬಡತನಕ್ಕೆ ದೂಡಿದವರ ಬಗ್ಗೆಯೂ ಮಾತನಾಡಲಿ: ಬಿ ಕೆ ಹರಿಪ್ರಸಾದ್

Date:

Advertisements

ದೇಶದಲ್ಲಿ ಬಡವರ ಸಂಖ್ಯೆ ಮಿತಿ ಮೀರಿ ಹೆಚ್ಚುತ್ತಿರುವುದರ ಬಗ್ಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸತ್ಯವನ್ನು ಒಪ್ಪಿಕೊಂಡಿದ್ದಕ್ಕೆ ಸ್ವಾಗತ, ಆದ್ರೆ ವಾಸ್ತವವನ್ನು ಮರೆಮಾಚುತ್ತಲೇ ಬಡತನಕ್ಕೆ ದೂಡಿದವರ ಬಗ್ಗೆಯೂ ಮಾತಾಡಿದ್ದರೆ ಸನ್ಮಾನಕ್ಕೂ ಅರ್ಹರಾಗುತ್ತಿದ್ದರು! ಎಂದು ವಿಧಾನ ಪರಿಷತ್‌ ಸದಸ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ್‌ ಕುಟುಕಿದ್ದಾರೆ.

“ಬಡವರ ಸಂಖ್ಯೆ ಹೆಚ್ಚುತ್ತಿದೆ, ಸಂಪತ್ತು ಕೆಲವೇ ಮಂದಿಯ ಪಾಲಾಗುತ್ತಿದೆ” ಎಂಬ ಗಡ್ಕರಿ ಹೇಳಿಕೆಯನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, “ಯುಪಿಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಾರತದಲ್ಲಿ ಬಡತನವನ್ನು ‘ಬಡತನ ರೇಖೆ’ಯ ಆಧಾರದಲ್ಲಿ ನಿರ್ಧರಿಸಲಾಗುತ್ತಿತ್ತು. ಬಡತನ ರೇಖೆ ಎಂದರೆ ಗ್ರಾಮೀಣ ಕುಟುಂಬವೊಂದು ತಿಂಗಳೊಂದರಲ್ಲಿ ₹816 ಮತ್ತು ನಗರ ಪ್ರದೇಶದ ಕುಟುಂಬವೊಂದು ತಿಂಗಳೊಂದರಲ್ಲಿ ₹1,000 ವೆಚ್ಚ ಮಾಡಲು ಸಾಧ್ಯವಾಗದಿದ್ದರೆ, ಅದನ್ನು ಬಡತನದ ರೇಖೆಗಿಂತ ಕೆಳಗೆ ಇರುವ ಕುಟುಂಬ ಎಂದು ಪರಿಗಣಿಸಲಾಗುತ್ತಿತ್ತು (2011–12ರಲ್ಲಿ). ಆದರೆ ಈಗ ಸರ್ಕಾರವು ಈ ಲೆಕ್ಕಾಚಾರವನ್ನೇ ಬಿಟ್ಟಿದೆ” ಎಂದಿದ್ದಾರೆ.

“2011–12ರಲ್ಲಿ ದೇಶದಲ್ಲಿ, ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ 27 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ ಇದೇ ಜನವರಿಯಲ್ಲಿ ಬಿಡುಗಡೆ ಮಾಡಿದ ಬಹು ಆಯಾಮದ ಬಡತನ ಸೂಚ್ಯಂಕ: ಪ್ರಗತಿ ಪರಿಶೀಲನೆ ವರದಿಯಲ್ಲಿ, 2013–14 ಮತ್ತು 2022–23ರ ನಡುವೆ ದೇಶದ 24.28 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಗೆ ಬಂದಿದ್ದಾರೆ ಎಂದು ಘೋಷಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಕೇಂದ್ರದ ಹಲವು ಸಚಿವರು ಮತ್ತು ಬಿಜೆಪಿ ನಾಯಕರು ಈ ಘೋಷಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದೇ ಸಾಧನೆ. ಆದರೆ ಎಲ್ಲಿಯೂ ಅಪ್ಪಿತಪ್ಪಿ ದೇಶದಲ್ಲಿ ಈಗ ಇರುವ ಬಡವರೆಷ್ಟು ಎಂಬುದನ್ನು ಮಾತ್ರ ಹೇಳಿರಲಿಲ್ಲ. ಸತ್ಯವನ್ನು ಮರೆಮಾಚಿದ್ದು ಯಾರು? ಯಾಕೆ? ಎನ್ನುವ ಪ್ರಶ್ನೆಗಳಿಗೆ ಈ ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡುವ ಷೇರುದಾರರು ಉತ್ತರಿಸಲೇ ಇಲ್ಲ” ಎಂದು ಹೇಳಿದ್ದಾರೆ.

Advertisements

“ತಿನ್ನಲು ಪೌಷ್ಟಿಕ ಅನ್ನವಿಲ್ಲದಿದ್ದರೂ ಕೇವಲ ಸೈಕಲ್ ಹೊಂದಿದ್ದರೆ ಬಡತನ ಆಯಾಮಗಳಿಂದ ಹೊರಗಿಟ್ಟಿರುವ ಕೇಂದ್ರದ ನೀತಿಯೇ ಅತ್ಯಂತ ಅವೈಜ್ಞಾನಿಕ. ಇನ್ನೊಂದೆಡೆ ಮೂರೊತ್ತು ಊಟ ಇಲ್ಲದಿದ್ದರೂ, ಸ್ವಂತ ಮನೆ ಇಲ್ಲದೆ, ಕುಡಿಯುವ ನೀರಿನ ಸಂಪರ್ಕವೂ ಇಲ್ಲದೆ, ಆದರೆ ಆ ಕುಟುಂಬವು ಸರ್ಕಾರ ಉಚಿತವಾಗಿ ನೀಡುವ ಅಡುಗೆ ಅನಿಲ ಸಂಪರ್ಕ ಹೊಂದಿದ ಕಾರಣಕ್ಕಾಗಿ ಸರ್ಕಾರದ ದೃಷ್ಟಿಯಲ್ಲಿ ಬಡತನದಿಂದ ಹೊರಗುಳಿದಿರುವುದು ಅವೈಜ್ಞಾನಿಕ ಮಾತ್ರವಲ್ಲ, ಅಂತಃಕರಣವೇ ಇಲ್ಲದ್ದು” ಎಂದು ದೂರಿದ್ದಾರೆ.

“ಭಾರತದಲ್ಲಿ ಹಿಂದೆಂದೂ ಇಲ್ಲದ ರೀತಿಯಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಗಿದ್ದು, ಉಳ್ಳವರು ಮತ್ತು ಇಲ್ಲದವರ ನಡುವೆ ಬೃಹತ್ ಕಂದಕ ಸೃಷ್ಟಿಯಾಗಿದೆ. ಶತಕೋಟ್ಯಧಿಪತಿಗಳು ರಾಜಕೀಯ ಪ್ರಭಾವವನ್ನೂ ಬೆಳೆಸಿಕೊಂಡಿದ್ದಾರೆ ಎಂದು “ಆಕ್ಸ್‌ಫಾಮ್” ಸಂಸ್ಥೆಯೂ ಭಾರತದ ಅಸಮಾನತೆ ಕುರಿತ ವರದಿ ಮಾಡಿದೆ. ಸಾರ್ವಜನಿಕರ ಬೃಹತ್ ಮೊತ್ತದ ಹಣಕ್ಕೆ ಅಪಾಯ ಎದುರಾಗಿದೆ. ನೀತಿ ನಿರೂಪಕರು ತಮ್ಮ ಉದ್ಯಮಿ ಸ್ನೇಹಿತರು ಮತ್ತು ಇತರರ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಭ್ರಷ್ಟಾಚಾರ ಹೆಚ್ಚಾಗಿದ್ದು, ಸರ್ಕಾರಗಳ ಆಡಳಿತದಲ್ಲಿ ಉದ್ಯಮಿಗಳ ಪಾತ್ರವೂ ಹೆಚ್ಚಾಗುತ್ತಿದೆ ಎಂದು ವರದಿ ಮಾಡಿದೆ. ಹಾಗಾದರೆ ಯಾರೂ ಆ ಮೋದಾನಿಗಳು? ಯಾರು ಆ ಕೇಲವೇ ಕೆಲವು ಶತಕೋಟ್ಯಾಧೀಶ್ವರರು? ಎಂಬ ಪ್ರಶ್ನೆಗಳಿಗೆ ಗಡ್ಕರಿಯವರ ಬಳಿ ಉತ್ತರವಂತೂ ಇರಬಹುದು, ಆದರೆ ಸತ್ಯ ಹೇಳುವ ಎದೆಗಾರಿಕೆ ಪ್ರದರ್ಶಿಸುತ್ತಾರಾ” ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ‘ಅಚ್ಛೇ ದಿನ’ದಲ್ಲಿ ಸಾಮಾನ್ಯರಿಗೆ ಸಾಲದ ಹೊರೆ

“ಸರ್ಕಾರವೇ ಈ ಹಿಂದೆ ಹೇಳಿದಂತೆ 24.28 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಗೆ ಬಂದಿದ್ದರೆ, ಉಳಿದ ಬಡವರೆಷ್ಟು ಎಂಬ ಪ್ರಶ್ನೆ ಮೂಡುತ್ತದೆ. 2011–12ರಲ್ಲಿ 27 ಕೋಟಿಯಷ್ಟು ಇದ್ದ ಕಡುಬಡವರಲ್ಲಿ, 24.28 ಕೋಟಿಯನ್ನು ಕಳೆದರೆ 2.72 ಕೋಟಿಯಷ್ಟು ಬಡವರು ಉಳಿಯುತ್ತಾರೆ. ಅಂದರೆ ದೇಶದಲ್ಲಿರುವ ಬಡವರ ಸಂಖ್ಯೆ ಕೇವಲ 2.72 ಕೋಟಿಯೇ.? ಖಂಡಿತ ಇಲ್ಲ. ದೇಶದ ಅಧಿಕೃತ ಜನಸಂಖ್ಯೆಗೆ (2011ರ ಜನಗಣತಿಯಂತೆ 126 ಕೋಟಿ) ಹೋಲಿಸಿದರೆ, 2.72 ಕೋಟಿ ಜನರ ಪ್ರಮಾಣವು ಶೇ 2.1ರಷ್ಟು ಮಾತ್ರ. ಆದರೆ ಜನವರಿಯಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ನೀತಿ ಆಯೋಗವು, ‘ಇನ್ನೂ ಶೇ 11.28ರಷ್ಟು ಜನರು ಬಹು ಆಯಾಮದ ಬಡವರಿದ್ದಾರೆ’ ಎಂದು ಹೇಳಿತ್ತು. 126 ಕೋಟಿ ಜನರಲ್ಲಿ ಶೇ 11.28ರಷ್ಟು ಅಂದರೆ, ಅದು 14.2 ಕೋಟಿಯಷ್ಟಾಗುತ್ತದೆ. 2011ರ ಜನಗಣತಿಯ ಸಂಖ್ಯೆಯ ಪ್ರಕಾರ ದೇಶದಲ್ಲಿ 14.2 ಕೋಟಿ ಜನ ಬಹು ಆಯಾಮದ ಬಡವರಿದ್ದಾರೆ. ಅಂದರೆ ಈ ಸರ್ಕಾರದ ಅವಧಿಯಲ್ಲಿ 24 ಕೋಟಿಗೂ ಹೆಚ್ಚು ಜನರು ಬಹು ಆಯಾಮದ ಬಡತನದಿಂದ ಹೊರಗೆ ಬಂದಿದ್ದರೂ, 12 ಕೋಟಿಗೂ ಹೆಚ್ಚು ಜನರು ಬಡತನಕ್ಕೆ ದೂಡಲ್ಪಟ್ಟಿದ್ದಾರೆ. ಈ ಸತ್ಯವನ್ನು ದೇಶದ ಜನರೆದುರು ಒಪ್ಪಿಕೊಳ್ಳದೆ ಮರೆ ಮಾಚಿರುವುದೇ ಮೋದಿ ಸರ್ಕಾರದ ಸಾಧನೆ” ಎಂದು ಹರಿಹಾಯ್ದಿದ್ದಾರೆ.

“ದೇಶದ ಬಡ ಜನರ ಬದುಕನ್ನು ಮೇಲೆಕ್ಕೆತ್ತಲು ಮೂಲ ಪರಿಹಾರ ಇರುವುದೇ ಜಾತಿ ಹಾಗೂ ಜನಗಣತಿಯಲ್ಲಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ಗಣತಿಯಿಂದಾಗಿ ದೇಶದ ವಾಸ್ತವ ಸ್ಥಿತಿ ತೆರೆದಿಡುತ್ತದೆ. ಆಗ ಮಾತ್ರ ಸರ್ಕಾರ ತುಳಿತಕ್ಕೊಳಗಾದವರ, ಹಿಂದುಳಿದ ಹಾಗೂ ಎಲ್ಲಾ ಸಮುದಾಯಗಳಲ್ಲಿರುವ ಬಡ ಕುಟುಂಬಗಳನ್ನು ಏಳಿಗೆ ಮಾಡಲು ಸಾಧ್ಯ ಎಂದು ನಮ್ಮ ನಾಯಕ ರಾಹುಲ್‌ ಗಾಂಧಿ ಜಾತಿ ಹಾಗೂ ಜನಗಣತಿಯನ್ನು ಒತ್ತಾಯಿಸುತ್ತಿರುವುದು. ಸಮಸ್ಯೆಯ ಮೂಲ ಹುಡುಕದೆ ಪರಿಹಾರ ನೀಡಲು ಸಾಧ್ಯವಿಲ್ಲ. ಸರ್ಕಾರ ಈಗಲಾದರೂ ಗಣತಿ ನಡೆಸಿ ದೇಶದ ಕಟ್ಟಕಡೆಯ ಕುಟುಂಬಕ್ಕೂ ಸರ್ಕಾರದ ಸವಲತ್ತು ಸಿಗುವಂತಾಗಲಿ” ಎಂದು ಒತ್ತಾಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X