ಭಾರತದಲ್ಲಿನ ಅಪರಾಧ ಪ್ರಕರಣಗಳ ಕುರಿತಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯನ್ನು ಬಿಡುಗಡೆ ಮಾಡಿದೆ. ವರದಿ ಪ್ರಕಾರ, 2023ರಲ್ಲಿ ದೇಶಾದ್ಯಂತ ಒಟ್ಟು 10,786 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬೃಹತ್ ಪ್ರಮಾಣದ ಆತ್ಮಹತ್ಯೆಯು ಭಾರತದಲ್ಲಿ ಪ್ರತಿ ಗಂಟೆಗೆ ಸರಾಸರಿ ಓರ್ವ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂಬುದನ್ನು ಸೂಚಿಸಿದೆ. ಈ ಪ್ರಮಾಣದ ಆತ್ಮಹತ್ಯೆಗಳು ಕೃಷಿ ಕ್ಷೇತ್ರದಲ್ಲಿನ ಆರ್ಥಿಕ ಒತ್ತಡವನ್ನು ಎತ್ತಿ ತೋರಿಸಿವೆ.
ರೈತರ ಒಟ್ಟು ಆತ್ಮಹತ್ಯೆಗಳಲ್ಲಿ ಅತೀ ಹೆಚ್ಚು ಮಹಾರಾಷ್ಟ್ರದಲ್ಲಿ (38.5%) ಸಂಭವಿಸಿವೆ. 2ನೇ ಸ್ಥಾನದಲ್ಲಿ ಕರ್ನಾಟಕ (22.5%) ಇದೆ. ಮಹಾರಾಷ್ರದಲ್ಲಿ 4,151 ರೈತರು ಆತ್ಮಹತ್ಯೆಗೆ ಬಲಿಯಾಗಿದ್ದರೆ, ಕರ್ನಾಟಕದಲ್ಲಿ 2,423 ರೈತರು ಬಲಿಯಾಗಿದ್ದಾರೆ.
ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ (8.6%), ಮಧ್ಯಪ್ರದೇಶ (7.2%) ಹಾಗೂ ತಮಿಳುನಾಡು (5.9%) ಇದೆ. ಒಂದು ಕಾಲದಲ್ಲಿ ಶ್ರೀಮಂತ ಕೃಷಿ ಪರಂಪರೆಯನ್ನು ಹೊಂದಿದ್ದ ಈ ಐದು ರಾಜ್ಯಗಳು ಈಗ ರೈತರ ಹತಾಶೆ ಮತ್ತು ಸಂಕಷ್ಟಗಳ ರಾಜ್ಯಗಳಾಗಿವೆ.
2023 ರಲ್ಲಿ, ದಾಖಲಾಗಿರುವ ಒಟ್ಟು 1,71,418 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ, ರೈತರ ಆತ್ಮಹತ್ಯೆಗಳು ಪ್ರಕರಣಗಳು 10,786. ಈ ಪೈಕಿ, 4,690 ರೈತರು ಮತ್ತು 6,096 ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಒಟ್ಟು ರೈತರಲ್ಲಿ 4,553 ಪುರುಷರು ಮತ್ತು 137 ಮಹಿಳೆಯರು.
ಈ ಲೇಖನ ಓದಿದ್ದೀರಾ?: NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ
ಆದಾಗ್ಯೂ, ಕೆಲವು ಪ್ರಮುಖ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರೈತರು, ಕೃಷಿಕರು ಹಾಗೂ ಕೃಷಿ ಕಾರ್ಮಿಕರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳನ್ನು ವರದಿ ಮಾಡಿಲ್ಲ. ಅಂತಹ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಜಾರ್ಖಂಡ್, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಗೋವಾ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ, ಚಂಡೀಗಢ (ಯುಟಿ), ದೆಹಲಿ (ಯುಟಿ) ಹಾಗೂ ಲಕ್ಷದ್ವೀಪಗಳಿವೆ.
ಈ ರಾಜ್ಯಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿಯೇ ಇಲ್ಲವೆಂದು ಹೇಳಲಾಗುವುದಿಲ್ಲ. ಆದರೆ, ಆ ಆತ್ಮಹತ್ಯೆಗಳನ್ನು ರೈತ/ಕೃಷಿ ಸಂಬಂಧಿತ ಆತ್ಮಹತ್ಯೆಗಳು ಎಂದು ವರದಿ ಮಾಡಲಾಗಿರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.
2022ರಲ್ಲಿ, ಕೃಷಿ ಕ್ಷೇತ್ರದಲ್ಲಿ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಳವಾಗಿತ್ತು. ಆ ವರ್ಷ, ಒಟ್ಟು 11,290 ರೈತರು/ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಲ್ಲಿ 5,207 ರೈತರು ಮತ್ತು 6,083 ಕೃಷಿ ಕಾರ್ಮಿಕರಿದ್ದರು.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.