ಮಾರ್ಚ್ 19ರಂದು ಪ್ರತಿಭಟನಾನಿರತ ರೈತರ ಮೇಲೆ ನಡೆದಿದ್ದ ಪೊಲೀಸ್ ಕಾರ್ಯಾಚರಣೆಯ ವಿರುದ್ಧ ಪಂಜಾಬ್ನ ಶಂಭು ಪೊಲೀಸ್ ಠಾಣೆಯ ಎದುರು ಮೇ 6ರಂದು ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದರು. ಆದರೆ, ಪ್ರತಿಭಟನಾ ಸ್ಥಳಕ್ಕೆ ತೆರಳಲು ಸಿದ್ದರಾಗುತ್ತಿದ್ದ ರೈತ ನಾಯಕರನ್ನು ಪಂಜಾಬ್ ಸರ್ಕಾರ ಗೃಹಬಂಧನದಲ್ಲಿಟ್ಟಿದೆ ಎಂದು ವರದಿಯಾಗಿದೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಜಾರಿ ಮತ್ತು ಕಾನೂನು ಖಾತರಿಗಾಗಿ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತರು ಶಂಭು ಮತ್ತು ಖನೌರಿ ಗಡಿಗಳಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ, ಮಾರ್ಚ್ 19ರಂದು ಪೊಲೀಸರು ರೈತರ ಮೇಲೆ ದೌರ್ಜನ್ಯ ಎಸಗಿದ್ದು, ಹಲವಾರು ರೈತರು ಗಾಯಗೊಂಡಿದ್ದರು. ಪೊಲೀಸರ ಧೋರಣೆಯನ್ನು ಖಂಡಿಸಿ ಮಂಗಳವಾರ ಪ್ರತಿಭಟನೆಗೆ ಕರೆ ಕೊಡಲಾಗಿತ್ತು.
ಪ್ರತಿಭಟನೆಗೆ ತೆರಳಲು ಸಿದ್ಧರಾಗುತ್ತಿದ್ದ ಸಂಯುಕ್ತ ಕಿಸಾನ್ ಮೋರ್ಚಾ (SKM ರಾಜಕೀಯೇತರ)ದ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಸೇರಿದಂತೆ ಹಿರಿಯ ರೈತ ಮುಖಂಡರು ಮತ್ತು ಹೋರಾಟಗಾರರನ್ನು ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ. ಸೋಮವಾರ ಮುಂಜಾನೆ ಪೊಲೀಸ್ ತಂಡವೊಂದು ದಲ್ಲೇವಾಲ್ ಅವರ ಗ್ರಾಮ ಫರೀದ್ಕೋಟ್ನಲ್ಲಿ ಬೀಡುಬಿಟ್ಟಿದ್ದು, ದಲ್ಲೆವಾಲ್ ಅವರನ್ನು ಗೃಹಬಂಧನದಲ್ಲಿ ಇರಿಸಿದೆ. ಪೊಲೀಸರು ತಮ್ಮನ್ನು ಗೃಹಬಂಧನದಲ್ಲಿ ಇಟ್ಟಿರುವುದಾಗಿ ದಲ್ಲೇವಾಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ.
ಖನೌರಿ ಮತ್ತು ಶಂಭುವಿನಿಂದ ಪೊಲೀಸರು ರೈತರನ್ನು ಬಲವಂತವಾಗಿ ಹೊರಹಾಕಿದಾಗ, ಅವರು ಪೊಲೀಸರಿಂದ ತೊಂದರೆಗೆ ಒಳಗಾಗಿದ್ದಾರೆ ಮತ್ತು ಟ್ರ್ಯಾಕ್ಟರ್ಗಳು ಸೇರಿದಂತೆ ಅವರ ಹಲವಾರು ವಸ್ತುಗಳು ಕಾಣೆಯಾಗಿವೆ ಎಂದು ದಲ್ಲೆವಾಲ್ ಆರೋಪಿಸಿದ್ದಾರೆ. ಇದರ ನಂತರ ಸರ್ಕಾರ ಪರಿಹಾರವನ್ನು ಭರವಸೆ ನೀಡಿತು.
ಕಾಣೆಯಾದ ವಸ್ತುಗಳನ್ನು ಅಂತಿಮವಾಗಿ “ಎಎಪಿ ನಾಯಕರು ಮತ್ತು ಪೊಲೀಸ್ ಸಿಬ್ಬಂದಿಯ ಆಪ್ತ ಸಹಚರರ ಬಳಿ ಪತ್ತೆಹಚ್ಚಲಾಗಿದೆ” ಎಂದು ಅವರು ಹೇಳಿದ್ದಾರೆ. “ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಪೊಲೀಸರು ರೈತರ ಕಾಣೆಯಾದ ವಸ್ತುಗಳನ್ನು ಪತ್ತೆಹಚ್ಚಿದವರ ವಿರುದ್ಧವೆ ಪ್ರಕರಣ ದಾಖಲಿಸಲು ಪ್ರಾರಂಭಿಸಿದರು” ಎಂದು ಅವರು ಹೇಳಿದ್ದಾರೆ. ಅದಕ್ಕಾಗಿಯೇ ನಾವು ಮೇ 6 ರಂದು ಪೊಲೀಸರ ವರ್ತನೆಯ ವಿರುದ್ಧ ಆಂದೋಲನವನ್ನು ಯೋಜಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಸರ್ಕಾರವು ನಮ್ಮ ಆಂದೋಲನವನ್ನು ಹಳಿತಪ್ಪಿಸಲು ಪ್ರಯತ್ನಿಸಿದೆ ಎಂದು ರೈತ ಮುಖಂಡರು ಹೇಳಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ (ದೋಬಾ) ಅಧ್ಯಕ್ಷ ಮಂಜಿತ್ ಸಿಂಗ್ ರೈ ಮತ್ತು ಇತರ ಪದಾಧಿಕಾರಿಗಳಾದ ದವೀಂದರ್ ಸಿಂಗ್ ಸಂಧ್ವಾನ್ ಮತ್ತು ಸತ್ನಮ್ ಸಿಂಗ್ ಸಾಹ್ನಿ ಅವರನ್ನು ಸಹ ಗೃಹಬಂಧನದಲ್ಲಿ ಇರಿಸಲಾಗಿದೆ. ಬಲದೇವ್ ಸಿಂಗ್ ಸಿರ್ಸಾ ಅವರಂತಹ ನಾಯಕರೂ ಸಹ ಗೃಹಬಂಧನದಲ್ಲಿದ್ದಾರೆ ಎಂದು ವರದಿಯಾಗಿದೆ.
In view of the farmers’ protest call to surround Shambhu Border police station on May 6, the Punjab govt has once again begun detaining and placing farmers under house arrest. Today, Punjab Police detained farmer leader Jagjit Singh Dallewal. pic.twitter.com/VAapMKLUvD
— Gagandeep Singh (@Gagan4344) May 5, 2025
ರೈತ ಮುಖಂಡರ ಬಂಧನಗಳ ನಂತರ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಎಕ್ಸ್ನಲ್ಲಿ ಪ್ರತಿಕ್ರಿಯಿಸಿ, “ರಸ್ತೆಗಳು ಅಥವಾ ರೈಲುಮಾರ್ಗಗಳನ್ನು ನಿರ್ಬಂಧಿಸುವುದು ಅಥವಾ ಸಾರ್ವಜನಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುವುದು ಮತ್ತು ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸುವುದನ್ನು ಒಳಗೊಂಡಂತೆ ಯಾವುದೇ ಘೋಷಣೆಗಳು, ಪ್ರತಿಭಟನೆಗಳು ಅಥವಾ ಮುಷ್ಕರಗಳನ್ನು ಸಾರ್ವಜನಿಕರ ವಿರುದ್ಧದ ಕೃತ್ಯಗಳೆಂದು ಪರಿಗಣಿಸಲಾಗುತ್ತದೆ” ಎಂದು ಹೇಳಿದ್ದಾರೆ.
ಎಲ್ಲಾ ಸಂಘಟನೆಗಳು, ಒಕ್ಕೂಟಗಳು ಮತ್ತು ಗುಂಪುಗಳು ಇದನ್ನು ಪರಗಣಿಸುವಂತೆ ಸೂಚಿಸಲಾಗಿದೆ. ವಿರೋಧ ವ್ಯಕ್ತಪಡಿಸಲು ಇತರ ಮಾರ್ಗಗಳಿವೆ, ಆದರೆ ಜನರಿಗೆ ತೊಂದರೆ ಮಾಡುವುದು ಸರಿಯಲ್ಲ. ಜನರಿಗೆ ತೊಂದರೆ ಮಾಡಿದರೆ ಕಠಿಣ ಕಾನೂನು ಕ್ರಮಕ್ಕೆ ಸಿದ್ಧರಾಗಿರಿ. ಪಂಜಾಬ್ನ ಶ್ರಮಶೀಲ ಜನರ ಹಿತದೃಷ್ಟಿಯಿಂದ ಇದನ್ನು ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.