ರಾಜಸ್ಥಾನದಲ್ಲಿ ದಲಿತ ಮಹಿಳೆಯರನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡುವ ಸರಣಿ ಮುಂದುವರಿದಿದೆ.
ಬಿಕಾನೇರ್ನಲ್ಲಿ ಮಂಗಳವಾರ, ಇಬ್ಬರು ಪೊಲೀಸರು ಸೇರಿದಂತೆ ಮೂವರು ದುಷ್ಕರ್ಮಿಗಳು 20 ವರ್ಷದ ದಲಿತ ಯುವತಿಯನ್ನು ಮನೆಯಿಂದ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಬಳಿಕ ಯುವತಿಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮಹಾನಿರೀಕ್ಷಕ (ಐಜಿ) ಓಂ ಪ್ರಕಾಶ್ ತಿಳಿಸಿದ್ದಾರೆ.
ʻಖಾಜುವಾಲಾ ಪ್ರದೇಶದಲ್ಲಿ 20 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಮನೋಜ್ ಮತ್ತು ಭಗೀರಥ ಎಂಬ ಇಬ್ಬರು ಪೊಲೀಸರು ತಮ್ಮ ಸ್ನೇಹಿತನ ಜೊತೆಗೂಡಿ ಯುವತಿಯ ಮೇಲೆ ಅತ್ಯಾಚಾರವೆಸಗಿದ ಬಳಿಕ ಕೊಲೆ ಮಾಡಿದ್ದಾರೆʼ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆʼ ಎಂದು ಐಜಿ ಹೇಳಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಆರೋಪಿಗಳಾದ ಇಬ್ಬರು ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸಲಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಓಂ ಪ್ರಕಾಶ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬಿಜೆಪಿ ಸೋಲಿಸಲು ಹಿಂದುತ್ವದ ಮೊರೆ ಹೋಗುತ್ತಿದೆಯಾ ಕಾಂಗ್ರೆಸ್? ಅಗತ್ಯವೇನಿದೆ?
ಮರಣೋತ್ತರ ಪರೀಕ್ಷೆಗೆ ಒಪ್ಪದ ಕುಟುಂಬ
ಮೂವರು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿರುವ ಮೃತ ಯುವತಿಯ ಕುಟುಂಬಸ್ಥರು, ಇಬ್ಬರು ಪೊಲೀಸರು ಸೇರಿದಂತೆ ಮೂವರು ಆರೋಪಿಗಳ ಬಂಧನವಾಗುವರೆಗೂ, ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡುವುದಿಲ್ಲ ಎಂದು ಧರಣಿ ನಡೆಸಿದ್ದಾರೆ.
ಯುವತಿಯ ಪರಿಚಯಸ್ಥನಾಗಿದ್ದ ಯುವಕನ ಸಹಾಯದಿಂದ ಮನೋಜ್ ಮತ್ತು ಭಗೀರಥ ಎಂಬ ಇಬ್ಬರು ಪೊಲೀಸರು ಯುವತಿಯನ್ನು ಮನೆಯಿಂದ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ.