ಜಮ್ಮು ಮತ್ತು ಕಾಶ್ಮೀರದಲ್ಲಿನ ಕಿರು ಜಲ ವಿದ್ಯುತ್ ಯೋಜನೆಯಲ್ಲಿ ಭಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ, ಪುಲ್ವಾಮ ದಾಳಿ ಸಂಬಂಧ ಮೋದಿ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದ ಸತ್ಯಪಾಲ್ ಮಲಿಕ್ ವಿರುದ್ಧ ‘ಸಿಬಿಐ’ ಜಾರ್ಜ್ಶೀಟ್ ಸಲ್ಲಿಸಿದೆ. ಜಾರ್ಜ್ಶೀಟ್ನಲ್ಲಿ ಮಲಿಕ್ ಮಾತ್ರವಲ್ಲದೆ, ಇನ್ನೂ ಐವರನ್ನು ಹೆಸರಿಸಿದೆ.
2019ರಲ್ಲಿ, ಕಿಶ್ತ್ವಾರ್ ಜಿಲ್ಲೆಯಲ್ಲಿ, ಚೆನಾಬ್ ನದಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಗುತ್ತಿಗೆಯನ್ನು ‘ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್’ಗೆ (ಸಿವಿಪಿಪಿಪಿಎಲ್) ನೀಡುವಲ್ಲಿ ಮತ್ತು ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ. ಯೋಜನೆಯ ಸಿವಿಲ್ ಕೆಲಸಗಳಿಗಾಗಿ ಖಾಸಗಿ ಕಂಪನಿಗೆ 2,200 ಕೋಟಿ ರೂ.ಗಳ ಒಪ್ಪಂದವನ್ನು ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿತ್ತು. 2020ರಲ್ಲಿ, ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ, ಯೋಜನೆಯನ್ನು ಮರು-ಟೆಂಡರ್ ಮಾಡಲು ಸಿವಿಪಿಪಿಪಿಎಲ್ ಮಂಡಳಿಯು ತೆಗೆದುಕೊಂಡ ನಿರ್ಧಾರವನ್ನು ಕಾರ್ಯಗತಗೊಳಿಸಲಾಗಿಲ್ಲ. ನಿಯಮ ಬಾಹಿರವಾಗಿ ಒಪ್ಪಂದವನ್ನು ಪಟೇಲ್ ಎಂಜಿನಿಯರಿಂಗ್ ಲಿಮಿಟೆಡ್ಗೆ ನೀಡಲಾಗಿದೆ. ಇದರಲ್ಲಿ, ಅಕ್ರಮ ನಡೆದಿದೆ ಎಂದು ಆರೋಪಿಸಿತ್ತು.
ಅಲ್ಲದೆ, 2018ರ ಆಗಸ್ಟ್ 23ರಿಂದ 2019ರ ಅಕ್ಟೋಬರ್ 30ರವರೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಮಲಿಕ್ ಅವರು ಯೋಜನೆಗೆ ಸಂಬಂಧಿಸಿದ ಎರಡು ಕಡತಗಳಿಗೆ ಸಹಿ ಹಾಕಲು 300 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದೂ ಸಿಬಿಐ ಆರೋಪಿಸಿದೆ.
ಇದೇ ಆರೋಪದ ಮೇಲೆ, 2025ರ ಫೆಬ್ರವರಿ 22ರಂದು ಮಲಿಕ್ ಅವರ ಮನೆ ಮತ್ತು ಇತರ ಆಸ್ತಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. ಇದೀಗ, ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ. ಚರ್ಜ್ಶೀಟ್ನಲ್ಲಿ ಮಲಿಕ್ ಜೊತೆಗೆ, ಸಿವಿಪಿಪಿಪಿಎಲ್ನ ಮಾಜಿ ಅಧ್ಯಕ್ಷ ನವೀನ್ ಮಾರ್ ಚೌಧರಿ, ಎಂ.ಎಸ್. ಬಾಬು, ಎಂ.ಕೆ. ಮಿತ್ತಲ್, ಅರುಣ್ ಕುಮಾರ್ ಮಿಶ್ರಾ ಹಾಗೂ ನಿರ್ಮಾಣ ಸಂಸ್ಥೆ ಪಟೇಲ್ ಎಂಜಿನಿಯರಿಂಗ್ ಲಿಮಿಟೆಡ್ನ ಅಧಿಕಾರಿಗಳ ಹೆಸರನ್ನೂ ಉಲ್ಲೇಖಿಸಿದೆ.
ಈ ನಡುವೆ, ಮಲಿಕ್ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದಿದ್ದು, ಬುಧವಾರದಿಂದ ಡಯಾಲಿಸಿಸ್ಗೆ ಒಳಗಾಗಿದ್ದಾರೆ. “ಮಲಿಕ್ ಅವರನ್ನು ಮೇ 11ರಂದು ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಮೂತ್ರ ವಿಸರ್ಜನೆ ಸಾಧ್ಯವಾಗುತ್ತಿಲ್ಲ. ಅವರು ತೀವ್ರ ಮೂತ್ರ ಸೋಂಕು ಮತ್ತು ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿದ್ದಾರೆ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಪ್ರಸ್ತುತ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ” ಎಂದು ಮಲಿಕ್ ಅವರ ಸಹಾಯಕ ಕೆ.ಎಸ್. ರಾಣಾ ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷಗಳು: ಆಗಿದ್ದೇನು, ಆಗಬೇಕಿರುವುದೇನು?
ಅಂದಹಾಗೆ, ಸತ್ಯಪಾಲ್ ಮಲಿಕ್ ಅವರು 2019ರ ಫೆಬ್ರವರಿ 14ರಂದು ನಡೆದಿದ್ದ ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. “ಪುಲ್ವಾಮ ದಾಳಿಯು ಸರ್ಕಾರದ ನಿರ್ಲಕ್ಷ್ಯ ಮತ್ತು ಸುರಕ್ಷಾ ವೈಫಲ್ಯದ ಫಲಿತಾಂಶವಾಗಿದೆ. ದಾಳಿಗೆ ಬಳಸಲಾದ 300 ಕೆ.ಜಿ RDX ಬಾಂಬ್ಅನ್ನು ಹೊತ್ತ ಕಾರು 10–15 ದಿನಗಳ ಕಾಲ ಕಾಶ್ಮೀರದ ರಸ್ತೆಗಳಲ್ಲಿಯೇ ಸಂಚರಿಸುತ್ತಿತ್ತು. ಆದರೆ ಯಾವುದೇ ಗುಪ್ತಚರ ಸಂಸ್ಥೆ ಅಥವಾ ಭದ್ರತಾ ಪಡೆಗಳು ಇದನ್ನು ಪತ್ತೆಹಚ್ಚಲಿಲ್ಲ. ಸಿಆರ್ಪಿಎಫ್ ಯೋಧರ ಪ್ರಯಾಣಕ್ಕೆ ವಿಮಾನ ಒದಗಿಸುವಂತೆ ಕೇಂದ್ರ ಗೃಹಸಚಿವಾಲಯಕ್ಕೆ ಮನವಿ ಮಾಡಲಾಗಿತ್ತು. ಆದರೆ, ಸರ್ಕಾರ ನಿರಾಕರಿಸಿತು. ಪರಿಣಾಮವಾಗಿ, ಯೋಧರು ಭದ್ರತೆ ಇಲ್ಲದ ರಸ್ತೆಯಲ್ಲಿ ಪ್ರಯಾಣಿಸಬೇಕಾಯಿತು. ಇದರಿಂದ 40 ಯೋಧರು ಜೀವ ಕಳೆದುಕೊಂಡರು” ಎಂದು ಆರೋಪಿಸಿದ್ದರು.
ಅಲ್ಲದೆ, “ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದರು. ಭದ್ರತಾ ವೈಫಲ್ಯವನ್ನು ಮರೆಮಾಚಿ, ದಾಳಿಯ ಸಂಪೂರ್ಣ ಹೊಣೆಗಾರಿಕೆಯನ್ನು ಪಾಕಿಸ್ತಾನದ ಮೇಲೆ ಹಾಕುವುದು ಇದರ ಉದ್ದೇಶವಾಗಿತ್ತು” ಎಂದು ಮಲಿಕ್ ಆರೋಪಿಸಿದ್ದರು.
ಮಲಿಕ್ ಅವರು ಮೋದಿ ಸರ್ಕಾರದ ವಿರುದ್ಧ ಈ ಗಂಭೀರ ಆರೋಪಗಳನ್ನು ಮಾಡಿದ್ದಕ್ಕಾಗಿಯೇ ಅವರ ವಿರುದ್ಧ ಭ್ರಷ್ಟಾಚಾರ ಆರೋಪ, ಪ್ರಕರಣ, ದಾಳಿಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.
ಫೆಬ್ರವರಿಯಲ್ಲಿ ತಮ್ಮ ನಿವಾಸದ ಮೇಲೆ ಸಿಬಿಐ ನಡೆಸಿದ್ದ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದ ಮಲಿಕ್, “ನಾನು ರೈತನ ಮಗ. ಇಂತಹ ದಾಳಿಗಳಿಗೆ ಹೆದರುವುದಿಲ್ಲ” ಎಂದು ಹೇಳಿದ್ದರು. ಆಗ ಟ್ವೀಟ್ ಮಾಡಿದ್ದ ಅವರು, “ಭ್ರಷ್ಟಾಚಾರ ಎಸಗಿರುವ ಆರೋಪಿಗಳ ವಿರುದ್ಧ ನಾನು ದೂರು ನೀಡಿದ್ದೆ. ಆದರೆ, ಸಿಬಿಐ ಆ ಆರೋಪಿಗಳನ್ನು ಹುಡುಕುವ ಬದಲು ನನ್ನ ಮನೆಯ ಮೇಲೆ ದಾಳಿ ಮಾಡಿದೆ. ನನ್ನ ಮನೆಯಲ್ಲಿ 4-5 ಕುರ್ತಾ ಪೈಜಾಮಾಗಳನ್ನು ಹೊರತುಪಡಿಸಿ ಅವರಿಗೆ ಏನೂ ಸಿಗುವುದಿಲ್ಲ. ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವವರು ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ನನ್ನನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ರೈತನ ಮಗ, ನಾನು ಇದೆಲ್ಲಕ್ಕೆ ಹೆದರುವುದಿಲ್ಲ, ತಲೆಬಾಗುವುದಿಲ್ಲ” ಎಂದಿದ್ದರು.