ರಸ್ತೆಯಲ್ಲಿ ಬಿದ್ದಿದ್ದ ಪಾಕಿಸ್ತಾನದ ಧ್ವಜದ ಮೇಲೆ ಮೂತ್ರ ವಿಸರ್ಜಿಸುವಂತೆ ಶಾಲಾ ಬಾಲಕನನ್ನು ಕೋಮುವಾದಿ ಪುಂಡರ ಗುಂಪೊಂದು ಒತ್ತಾಯಿಸಿ, ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕಳೆದ ವಾರ, ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯ ಬಳಿಕ ದೇಶಾದ್ಯಂತ ಮುಸ್ಲಿಂ ವಿರೋಧಿ ದ್ವೇಷ ಹೆಚ್ಚಾಗಿ ಹಡುತ್ತಿದೆ. ಕಾಶ್ಮೀರಿಗಳ ಮೇಲೆ ಹಲ್ಲೆಗಳು, ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ಹೇಳಿಕೆಗಳು, ದಾಂಧಲೆಗಳನ್ನು ನಡೆಸುವುತ್ತಿರುವುದ ಹೆಚ್ಚುತ್ತಿದೆ. ಮಂಗಳೂರಿನಲ್ಲಿ ಮುಸ್ಲಿಂ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಥಳಿಸಿ, ಹತ್ಯೆ ಮಾಡಲಾಗಿದೆ ಈ ನಡುವೆ, ಅಲಿಗಢದಲ್ಲಿ ಬಾಲಕನಿಗೆ ದುಷ್ಕರ್ಮಿಗಳು ಕಿರುಕುಳ ನೀಡಿರುವ ಘಟನೆ ನಡೆದಿದೆ.
ಬಾಲಕ ಶಾಲೆ ಮುಗಿಸಿ, ತನ್ನ ಸಹಪಾಠಿಗಳೊಂದಿಗೆ ಮನೆಗೆ ಮರಳುತ್ತಿದ್ದಾಗ, ರಸ್ತೆಯಲ್ಲಿ ಪಾಕ್ ಧ್ವಜ ಬಿದ್ದಿರುವುದನ್ನು ಗಮನಿಸಿದ್ದಾರೆ. ಅವರು ಅಲ್ಲಿಂದ ಮುಂದೆ ಸಾಗುವ ವೇಳೆಗೆ ಗುಂಪೊಂದು ಬಾಲಕನನ್ನು ಸುತ್ತುವರೆದಿದೆ. ಆತನ ಹೆಸರು ಕೇಳಿ, ಆತ ಮುಸ್ಲಿಂ ಎಂದು ತಿಳಿದ ಗುಂಪು, ಆತನ ಮೇಲೆ ಧಾರ್ಮಿಕ ನಿಂದನೆ ಮಾಡಿದೆ. ರಸ್ತೆಯಲ್ಲಿ ಬಿದ್ದಿದ್ದ ಪಾಕಿಸ್ತಾನ ಧ್ವಜದ ಮೇಲೆ ಮೂತ್ರ ವಿಸರ್ಜಿಸುವಂತೆ ಒತ್ತಾಯಿಸಿ, ಕಿರುಕುಳ ನೀಡಿದೆ.
ಬಾಲಕನ ಪೋಷಕರು ಸೋಮವಾರ ರಾತ್ರಿ, ಅಲಿಗಢದ ಬನ್ನಾ ದೇವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಓರ್ವ ಅಪರಿಚಿತ ಸೇರಿದಂತೆ ಮೂವರ ವಿರುದ್ಧ ಬಿಎನ್ಎಸ್ನ ಹಲವು ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.
ಈ ವರದಿ ಓದಿದ್ದೀರಾ?: ಸಿಂಧು ಜಲ ಒಪ್ಪಂದ ಸ್ಥಗಿತವು ಭಾರತಕ್ಕೇ ಹಾನಿಕಾರಕ; ಯಾಕೆ ಗೊತ್ತೇ?
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಜ್ ಯಾದವ್, “ಪಹಲ್ಗಾಮ್ ದುರಂತದ ನಂತರ ಕೆಲವರು ಕೋಮು ಸಂಘರ್ಷವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ. ಬಾಲಕನಿಗೆ ಕಿರುಕುಳ ನೀಡಿರುವುದು ಖಂಡನೀಯ. ಆದರೆ, ಇಂದೊಂದೇ ಘಟನೆಯಲ್ಲ, ಇಂತಹ ಹಲವಾರು ಘಟನೆಗಳು ಅಲಿಗಢ ನಗರದಾದ್ಯಂತ ನಡೆಯುತ್ತಿವೆ. ಶಾಂತಿಯನ್ನು ಭಂಗಗೊಳಿಸುವ ಯತ್ನಗಳನ್ನು ತಡೆಯಲು ಆಡಳಿತವು ನಿರ್ಣಾಯಕವಾಗಿ ಕಾರ್ಯನಿರ್ವಹಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಅಲಿಗಢದ ಕುವಾರ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಸುವರ್ಣ ಜಯಂತಿ ನಗರ ಪ್ರದೇಶದಲ್ಲಿ ಹಣ್ಣಿನ ರಸ ಮಾರಾಟಗಾರ ಒಮರ್ ಹುಸೇನ್ ಅವರ ಅಂಗಡಿಯನ್ನು ಧ್ವಂಸ ಮಾಡಲಾಗಿದೆ. ಕೃತ್ಯ ಎಸಗಿದ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
“ಎರಡೂ ಘಟನೆಗಳ ಬಗ್ಗೆ ನಮಗೆ ಮಾಹಿತಿ ಸಿಕ್ಕಿದ್ದು, ತನಿಖೆ ನಡೆಯುತ್ತಿದೆ. ಜನರು ವದಂತಿಗಳನ್ನು ಹರಡುವುದರಿಂದ ಅಥವಾ ಉದ್ವಿಗ್ನತೆಯನ್ನು ಉಂಟುಮಾಡುವುದರಿಂದ ದೂರವಿರಬೇಕು” ಎಂದು ವೃತ್ತ ಅಧಿಕಾರಿ ಅಭಯ್ ಪಾಂಡೆ ಹೇಳಿದ್ದಾರೆ.