ಅಕ್ರಮ ಬಂಧನದಲ್ಲಿದ್ದ 9 ವರ್ಷದ ಬುಡಕಟ್ಟು ಬಾಲಕ ಯಾನಾಡಿ ವೆಂಕಟೇಶು ಭೂಮಾಲೀಕರ ದೌರ್ಜನ್ಯದಿಂದ ಸಾವನ್ನಪ್ಪಿದ್ದಾರೆ. ಅವರ ಸಾವಿನ ಬಳಿಕ, ಕಾನೂನುಬಾಹಿರ ಜೀತ ಪದ್ದತಿಯು ಬೆಳಕಿಗೆ ಬಂದಿದೆ. ಆರೋಪಿಗಳನ್ನು ಪೊಲೀಸರುಬಂಧಿಸಿದ್ದಾರೆ.
ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಸತ್ಯವೇಡು ಮಂಡಲದ ಎನ್.ಆರ್ ಅಗ್ರಹಾರದಲ್ಲಿ ಜೀತ ಪದ್ದತಿ ಇನ್ನೂ ಜೀವಂತವಾಗಿದೆ ಎಂಬುದು ಪ್ರಕರಣದಿಂದ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಬಾಲಕ ಮತ್ತು ಆತನ ಕುಟುಂಬವನ್ನು ಜೀತಕ್ಕೆ ಇರಿಸಿಕೊಂಡು ಶೋಷಿಸುತ್ತಿದ್ದ ಭೂಮಾಲೀಕ ಕುಟುಂಬದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಬಗ್ಗೆ ಸತ್ಯವೇಡು ಪೊಲೀಸ್ ಠಾಣೆಯಲ್ಲಿ ಪುತ್ತೂರು ಡಿಎಸ್ಪಿ ಜಿ. ರವಿಕುಮಾರ್ ಅವರು ವಿವರಿಸಿದ್ದಾರೆ. “ಪ್ರಕರಣದಲ್ಲಿ ಭೂಮಾಲಿಕರಾದ ಎನ್ ಮುತ್ತು (60), ಅವರ ಪತ್ನಿ ಎಂ ಧನಭಾಗ್ಯಂ (52) ಹಾಗೂ ಅವರ ಮಗ ಎಂ ರಾಜಶೇಖರ್ (32) ಎಂಬವರನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಗುಡೂರು ಮಂಡಲದ ಚವಟಪಾಲೆಂ ಮೂಲದ ದಂಪತಿಗಳಾದ ಅನಕಮ್ಮ ಮತ್ತು ಪ್ರಕಾಶ್ ತಮ್ಮ ಪುತ್ರ ಮೃತ ವೆಂಕಟೇಶು ಸೇರಿದಂತೆ ಮೂವರು ಮಕ್ಕಳೊಂದಿಗೆ ನೆಲ್ಲೂರು ಜಿಲ್ಲೆಯ ದತ್ತಲೂರು ಮಂಡಲದ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅವರನ್ನು ಆರೋಪಿ ಮುತ್ತು ಮತ್ತು ಆತನ ಪತ್ನಿ ಸಂಪರ್ಕಿಸಿದ್ದು, ತಮ್ಮ ಜಮೀನಿನಲ್ಲಿ ಕೆಲಸಕ್ಕೆ ಬಂದರೆ, ಮಾಸಿಕ 10,000 ರೂ. ಸಂಬಳ ನೀಡುವ ಭರವಸೆ ಕೊಟ್ಟಿದ್ದರು. ಅಲ್ಲದೆ, 15,000 ರೂಪಾಯಿನ್ನು ಮುಂಗಡವಾಗಿ ಪಾವತಿಸಿದ್ದರು. ಅವರ ಭರವಸೆಯಂತೆ ಪ್ರಕಾಶ್ಅವರ ಕುಟುಂಬವು ಮುತ್ತು ಅವರ ಜಮೀನಿಗೆ ಕೆಲಸಕ್ಕೆ ಬಂದಿತ್ತು” ಎಂದು ಅವರು ಹೇಳಿದ್ದಾರೆ.
ಆದರೆ, ಕೆಲಸಕ್ಕೆ ಬಂದ ಬಳಿಕ, ಸಂತ್ರಸ್ತ ಕುಟುಂಬ ಒಂದು ವರ್ಷ ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ಮುತ್ತು ಅವರ ಜಮೀನಿನಲ್ಲಿ ಕೃಷಿ, ಬಾತುಕೋಳಿಗಳ ನಿರ್ವಹಣೆ ಸೇರಿದಂತೆ ವಿವಿಧ ರೀತಿಯ ಕೆಲಸಗಳನ್ನು ಮಾಡಿತ್ತು. ಸಂಬಳ ಹೆಚ್ಚಳಕ್ಕೆ ಬೇಡಿಕೆ ಇಟ್ಟಾಗ ಮುತ್ತು ನಿರಾಕರಿಸಿದ್ದರು. ಈ ನಡುವೆ ಪ್ರಕಾಶ್ ನಿಧನರಾಗಿದ್ದರು. ಅನಕಮ್ಮ ತನ್ನ ಪತಿಯ ಅಂತಿಮ ವಿಧಿವಿಧಾನಗಳಿಗಾಗಿ ಊರಿಗೆ ತೆರಳಿದ್ದರು.
ಅನಕಮ್ಮ ತೆರಳುವ ವೇಳೆ, ಇಲ್ಲೇ ಕೆಲಸ ಮುಂದುವರಿಸಿದರೆ 25,000 ರೂಪಾಯಿ ಬಾಕಿ ಹಣವನ್ನು ಕೊಡುವುದಾಗಿ ಮುತ್ತು ಭರವಸೆ ಕೊಟ್ಟಿದ್ದರು. ಆದರೆ, ಕೆಲಸದ ಪರಿಸ್ಥಿತಿ ಅಸಹನೀಯವಾಗಿದ್ದ ಕಾರಣ ಅದನ್ನು ಬಿಟ್ಟು ಹೋಗಲು ಅನಕಮ್ಮ ಮುಂದಾಗಿದ್ದರು. ಈ ವೇಳೆ ತನಗೆ 45,000 ರೂಪಾಯಿ ಪಾವತಿಸುವಂತೆ ಮುತ್ತು ಬೇಡಿಕೆ ಇಟ್ಟಿದ್ದ. ತಕ್ಷಣ ಅಷ್ಟು ದೊಡ್ಡ ಮೊತ್ತವನ್ನು ಹೊಂದಿಸಲು ಸಾಧ್ಯವಾಗದೆ, ಊರಿಗೆ ಹೋಗಿ ಹಣದೊಂದಿಗೆ ಹಿಂತಿರುಗುವ ಭರವಸೆ ನೀಡಿದ ಅನಕಮ್ಮ ತನ್ನ ಮಗನನ್ನು ಮುತ್ತು ಬಳಿ ಬಿಟ್ಟು ಹೋಗಿದ್ದರು.
ಅನಕಮ್ಮ ಊರಿಗೆ ಹೋಗಿ ಹಣ ಹೊಂದಿಸಿ 9 ತಿಂಗಳು ಕಳೆದು ವಾಪಸ್ ಬರುವ ಹೊತ್ತಿಗೆ, ವೆಂಕಟೇಶುವಿನಿಂದ ಕಠಿಣ ಕೆಲಸಗಳನ್ನು ಮಾಡಿಸಿದ್ದ ಭೂ ಮಾಲೀಕ ಮುತ್ತು ಮತ್ತು ಆತನ ಕುಟುಂಬ, ಕೊನೆಗೆ ಆತ ಅನಾರೋಗ್ಯಕ್ಕೆ ತುತ್ತಾಗಿ ಸಾಯಲು ಕಾರಣರಾಗಿದ್ದರು. ಆದರೆ, ವೆಂಕಟೇಶು ಮೃತಪಟ್ಟ ಬಳಿಕ, ಆತ ತಪ್ಪಿಸಿಕೊಂಡಿರುವುದಾಗಿ ಮುತ್ತು ಕಥೆ ಕಟ್ಟಿದ್ದ. ಆತನನ್ನು ಕೆಲಸಕ್ಕೆಂದು ಹೊರಗಡೆ ಕಳಿಸಿದ್ದೆ. ಅಲ್ಲಿ ಅವನು ಅನಾರೋಗ್ಯಕ್ಕೆ ಒಳಗಾಗಿದ್ದ, ಆಸ್ಪತ್ರೆಗೆ ದಾಖಲಿಸಿದ್ದೆ. ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿಸಿದ್ದ.
ವರದಿಗಳ ಪ್ರಕಾರ, ಅನಕಮ್ಮ ಬಿಟ್ಟು ಹೋದ ಬಳಿ ಮುಂದಿನ ಒಂಬತ್ತು ತಿಂಗಳು ಆರೋಪಿ ಮುತ್ತು ಬಾಲಕ ವೆಂಕಟೇಶುವಿನಿಂದ ಕಠಿಣ ಕೆಲಸಗಳನ್ನು ಮಾಡಿಸಿದ್ದ. ಆತ ಪದೇ ಪದೇ ತಾಯಿಯ ಬಳಿಗೆ ಹೋಗಲು ಅವಕಾಶ ನೀಡುವಂತೆ ಅಳುತ್ತಿದ್ದ. ಆದರೆ, ಮುತ್ತು ಅದಕ್ಕೆ ಅವಕಾಶ ನೀಡಿರಲಿಲ್ಲ. ಅನಕಮ್ಮ ಕೂಡ ತನ್ನ ಮಗನನ್ನು ಬಿಟ್ಟು ಕಳಿಸುವಂತೆ ಬೇಡಿಕೊಂಡಿದ್ದರು. ಆದರೆ, ಮುತ್ತು ಬೇರೆ ಬೇರೆ ಕಾರಣ ಕೊಟ್ಟು ಬಾಯಿ ಮುಚ್ಚಿಸುತ್ತಿದ್ದ.ಕಠಿಣ ಪರಿಸ್ಥಿತಿಯಿಂದ ತನ್ನನ್ನು ರಕ್ಷಿಸುವಂತೆ ವೆಂಕಟೇಶು ಅಮ್ಮನ ಬಳಿ ಬೇಡಿಕೊಂಡಿದ್ದ. ಅಮ್ಮ-ಮಗನ ಕೊನೆಯ ಸಂಭಾಷಣೆ ಫೋನ್ ಮೂಲಕ ಏಪ್ರಿಲ್ 15ರಂದು ನಡೆದಿತ್ತು.
ಈ ವರದಿ ಓದಿದ್ದೀರಾ?: ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷಗಳು: ಆಗಿದ್ದೇನು, ಆಗಬೇಕಿರುವುದೇನು?
ಮಗನ ಬಗ್ಗೆ ಮಾಹಿತಿ ಸಿಗದ ಹಿನ್ನೆಲೆ ಅನಕಮ್ಮ ಮೇ 19ರಂದು ಸತ್ಯವೇಡು ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿ ಜೀತಪದ್ಧತಿ (ನಿರ್ಮೂಲನೆ) ಕಾಯ್ದೆ, ಬಾಲಕಾರ್ಮಿಕ (ತಡೆ) ಕಾಯ್ದೆ, ಬಾಲ ನ್ಯಾಯ ಕಾಯ್ದೆ ಮತ್ತು ಎಸ್ಸಿ/ಎಸ್ಟಿ ದೌರ್ಜನ್ಯ (ತಡೆ) ಕಾಯ್ದೆ ಸೇರಿದಂತೆ ಹಲವು ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.
ತನಿಖೆಯ ಭಾಗವಾಗಿ ಬಾಲಕ ಕೆಲಸ ಮಾಡುತ್ತಿದ್ದ ಮನೆಯ ಯಜಮಾನ ಮುತ್ತು, ಆತನ ಪತ್ನಿ ಧನಭಾಗ್ಯಂ ಮತ್ತು ಅವರ ಮಗ ರಾಜಶೇಖರ್ ಅನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.
ತನಿಖೆಯ ಆರಂಭದಲ್ಲಿ ಬಾಲಕ ವೆಂಕಟೇಶು ತೀವ್ರ ಅಸ್ವಸ್ಥಗೊಂಡಿದ್ದ ಹಿನ್ನೆಲೆ, ಏಪ್ರಿಲ್ 11ರಂದು ತಮಿಳುನಾಡಿನ ಪುದುಪಾಲಂನ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೆ ಏಪ್ರಿಲ್ 12ರಂದು ಆತನ ಕೊನೆಯುಸಿರೆಳೆದಿದ್ದ. ಕಾನೂನಿಗೆ ಹೆದರಿ ಮುತ್ತು ಹಾಗೂ ಆತನ ಕುಟುಂಬ ಬಾಲಕನ ಶವವನ್ನು ಪಾಲಾರ್ ನದಿಯಲ್ಲಿ ಹೂತು ಹಾಕಿದ್ದಾರೆ ಎಂಬುವುದು ಬಯಲಾಗಿತ್ತು. ಅದಕ್ಕೆ ಪುಷ್ಠಿ ನೀಡುವ ಸಿಸಿಟಿವಿ ವಿಡಿಯೋಗಳು ಲಭ್ಯವಾಗಿತ್ತು.
ತಮಿಳುನಾಡಿನ ಪುದುಪಾಲಂನಲ್ಲಿ ಮುತ್ತುವಿನ ಅತ್ತೆಯನ್ನು ನೋಡಿಕೊಳ್ಳುವುದು, ಅವರ ಬಾತುಕೋಳಿಗಳನ್ನು ನಿರ್ವಹಣೆ ಮಾಡುವುದು ಸೇರಿದಂತೆ ವಿವಿಧ ಕೆಲಸಗಳಿಗೆ ಬಾಲಕ ವೆಂಕಟೇಶುವನ್ನು ನೇಮಿಸಲಾಗಿತ್ತು. ಆತ ಸಾವನ್ನಪ್ಪಿದ ಬಳಿಕ ಶವವನ್ನು ಕಾಂಚಿಪುರಂ ಬಳಿ ಪಾಲಾರ್ ನದಿಯಲ್ಲಿ ಸಮಾಧಿ ಮಾಡಲಾಗಿತ್ತು.
ಕಾಂಚಿಪುರಂ ಸಬ್-ಕಲೆಕ್ಟರ್ ಮತ್ತು ಮ್ಯಾಜಿಸ್ಟ್ರೇಟ್ ರಫೀಕ್ ಅವರ ಮೇಲ್ವಿಚಾರಣೆಯಲ್ಲಿ, ಪೊಲೀಸರು ಶವವನ್ನು ಹೊರತೆಗೆದು ಚೆಂಗಲ್ಪಟ್ಟು ವೈದ್ಯಕೀಯ ಕಾಲೇಜಿನಲ್ಲಿ ಶವ ಪರೀಕ್ಷೆ ನಡೆಸಿದ್ದಾರೆ. ವಶಕ್ಕೆ ಪಡೆದಿದ್ದ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಡಿಎಸ್ಪಿ ತಿಳಿಸಿದ್ದಾರೆ.