90 ಡಿಗ್ರಿ ಕೋನದಷ್ಟು ತೀಕ್ಷ್ಣ ತಿರುವು ಹೊಂದಿರುವ ನೂತನವಾಗಿ ನಿರ್ಮಾಣಗೊಂಡಿರುವ ಮೇಲ್ಸೇತುವೆಯ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಿಗೇ, ಈ ಸೇತುವೆಯನ್ನು ಮರುವಿನ್ಯಾಸಗೊಳಿಸಲು ಸರ್ಕಾರ ನಿರ್ಧರಿಸಿದೆ.
ಇದಕ್ಕಾಗಿ ಹೆಚ್ಚುವರಿ ಭೂಮಿ ಒದಗಿಸಲು ಭಾರತೀಯ ರೈಲ್ವೆ ಕೂಡಾ ಸಮ್ಮತಿ ಸೂಚಿಸಿದೆ. ಈ ಮೇಲ್ಸೇತುವೆಯ ವಿನ್ಯಾಸ ಬಗ್ಗೆ ಸಾರ್ವಜನಿಕರಿಂದ ತೀವ್ರ ಕಳವಳ ಹಾಗೂ ಮಾಧ್ಯಮಗಳಿಂದ ಒತ್ತಡ ವ್ಯಕ್ತವಾಗಿದ್ದರಿಂದ, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
648 ಮೀಟರ್ ಉದ್ದ ಹಾಗೂ 8.5 ಮೀಟರ್ ಅಗಲ ಹೊಂದಿರುವ ಈ ಮೇಲ್ಸೇತುವೆಯನ್ನು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ, ಈ ಸೇತುವೆ 90 ಡಿಗ್ರಿ ಕೋನದಷ್ಟು ತೀಕ್ಷ್ಣ ತಿರುವು ಹೊಂದಿದ್ದು, ಇದರಿಂದಾಗಿ ಈ ತಿರುವು ಅಪಘಾತಗಳ ಕೇಂದ್ರ ಸ್ಥಾನವಾಗಬಹುದು ಎಂಬ ತೀವ್ರ ಕಳವಳ ಸ್ಥಳೀಯ ನಿವಾಸಿಗಳು ಹಾಗೂ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ವ್ಯಕ್ತವಾಗಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪಾದಚಾರಿಗಳನ್ನು ‘ಬೇವರ್ಸಿ’ಗಳಂತೆ ನಡೆಸಿಕೊಳ್ತಿದೆ ಬೆಂಗಳೂರು ನಗರ!
ಈ ಕುರಿತು ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಇಲಾಖೆ, ರೈಲ್ವೆಯು ಅಗತ್ಯ ಭೂಮಿಯನ್ನು ಹಸ್ತಾಂತರಿಸುತ್ತಿದ್ದಂತೆಯೇ, ಮೇಲ್ಸೇತುವೆಗೆ ಸೂಕ್ತ ಮಾರ್ಪಾಡುಗಳನ್ನು ಮಾಡಲಾಗುವುದು ಎಂದು ತಿಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಈ ಮಾರ್ಪಾಡು ಕ್ರಮವು 90 ಡಿಗ್ರಿಯಷ್ಟು ತೀಕ್ಷ್ಣ ತಿರುವು ಹೊಂದಿರುವ ಜಾಗದಲ್ಲಿನ ಹಳಿಗಳನ್ನು ಕಿತ್ತು ಹಾಕುವುದು ಸೇರಿದೆ. ಈ ಸ್ಥಳವು ಭಾರಿ ಸಂಚಾರಿ ದಟ್ಟಣೆಯ ಕೇಂದ್ರ ಸ್ಥಾನ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
90 ಡಿಗ್ರಿ ಕೋನದ ತಿರುವು ಹೊಂದಿರುವ ಮೇಲ್ಸೇತುವೆಯ ಬಳಿಗೆ ಬುಧವಾರ ತಂಡವೊಂದು ವಿಸ್ತೀರ್ಣ ಮಾಪಕ ಯಂತ್ರದೊಂದಿಗೆ ತೆರಳಿ ಪರೀಕ್ಷಿಸಿದೆ.