18ನೇ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ “ಜೈ ಭೀಮ್, ಜೈ ಮೀಮ್, ಜೈ ಪ್ಯಾಲೆಸ್ತೀನ್” ಎಂದು ಘೋಷಣೆ ಕೂಗಿದ್ದಕ್ಕಾಗಿ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿರುವ ಎಐಎಂಐಎಂ ಅಧ್ಯಕ್ಷ ಹಾಗೂ ಹೈದರಾಬಾದ್ನ ಸಂಸದ ಅಸಾದುದ್ದೀನ್ ಒವೈಸಿ ಅವರ ದೆಹಲಿಯ ಮನೆ ಮೇಲೆ ಕಪ್ಪು ಶಾಯಿ ಎಸೆದಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ದೆಹಲಿಯ ಅಶೋಕ ರಸ್ತೆಯಲ್ಲಿರುವ ಸಂಸದರ ಮನೆ ಬಳಿ ಬಂದಿದ್ದ ಇಬ್ಬರು ಈ ಕೃತ್ಯ ಎಸಗಿರುವುದಾಗಿ ವರದಿಯಾಗಿದ್ದು, ಘಟನೆಯ ಬಳಿಕ ದೆಹಲಿ ಪೊಲೀಸರೇ ಎದುರು ನಿಂತು ಶಾಯಿಯನ್ನು ನೀರಿನಿಂದ ಸ್ವಚ್ಛಗೊಳಿಸಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅಸಾದುದ್ದೀನ್ ಒವೈಸಿ, “ಕೆಲವು ಅಪರಿಚಿತ ದುಷ್ಕರ್ಮಿಗಳು ಇಂದು ನನ್ನ ಮನೆಯ ಮೇಲೆ ಕಪ್ಪು ಶಾಯಿಯಿಂದ ದಾಳಿ ಮಾಡಿದ್ದಾರೆ. ನನ್ನ ದೆಹಲಿ ನಿವಾಸವನ್ನು ಎಷ್ಟು ಬಾರಿ ಗುರಿಪಡಿಸಲಾಗಿದೆ ಎಂಬ ಲೆಕ್ಕಾಚಾರವನ್ನು ನಾನು ಈಗ ಕಳೆದುಕೊಂಡಿದ್ದೇನೆ” ಎಂದು ತಿಳಿಸಿದ್ದಾರೆ.
Some “unknown miscreants” vandalised my house with black ink today. I have now lost count the number of times my Delhi residence has targeted. When I asked @DelhiPolice officials how this was happening right under their nose, they expressed helplessness. @AmitShah this is… pic.twitter.com/LmOuXu6W63
— Asaduddin Owaisi (@asadowaisi) June 27, 2024
“ನಿಮ್ಮ ಮೂಗಿನ ನೇರಕ್ಕೆ ಇದು ಹೇಗೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳನ್ನು ಕೇಳಿದಾಗ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅಮಿತ್ ಶಾ ಅವರೇ, ಇದು ನಿಮ್ಮ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆಯೇ?” ಎಂದು ಒವೈಸಿ ಪ್ರಶ್ನಿಸಿದ್ದಾರೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನೂ ಕೂಡ ಟ್ಯಾಗ್ ಮಾಡಿರುವ ಹೈದರಾಬಾದ್ನ ಸಂಸದ, “ಸಂಸದರ ಸುರಕ್ಷತೆಯನ್ನು ಖಾತರಿಪಡಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ದಯವಿಟ್ಟು ನಮಗೆ ತಿಳಿಸಿ” ಎಂದು ಪ್ರಶ್ನಿಸಿದ್ದು, “ಸಾವರ್ಕರ್ ಮಾದರಿಯ ಈ ರೀತಿಯ ಹೇಡಿತನವನ್ನು ನಿಲ್ಲಿಸಿ ಮತ್ತು ನನ್ನನ್ನು ಎದುರಿಸುವಷ್ಟು ಪುರುಷರಾಗಿರಿ. ಇಂಥದ್ದಕ್ಕೆಲ್ಲ ನಾನು ಹೆದರುವುದಿಲ್ಲ” ಎಂದು ಅಸಾದುದ್ದೀನ್ ಒವೈಸಿ ತಿಳಿಸಿದ್ದಾರೆ.
