ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ಗಾಗಿ ಗಡಿಯಾಚೆಗಿನ ಕಳ್ಳಸಾಗಣೆ ಮತ್ತು ಬೇಹುಗಾರಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನುವ ಆರೋಪದ ಮೇಲೆ ಉತ್ತರ ಪ್ರದೇಶದ ರಾಂಪುರದ ಉದ್ಯಮಿಯೊಬ್ಬರನ್ನು ಯುಪಿ ಎಸ್ಟಿಎಫ್ (ಸ್ಪೆಷಲ್ ಟಾಸ್ಕ್ ಫೋರ್ಸ್) ವಶಕ್ಕೆ ಪಡೆದಿದೆ.
ಆರೋಪಿ ಶಹಜಾದ್, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ. ಅಲ್ಲದೇ ಒಂದು ವರ್ಷದಲ್ಲೇ ಹಲವು ಬಾರಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದ. ಮೇಕಪ್ ವಸ್ತು, ಬಟ್ಟೆ, ಮಸಾಲೆ ಪದಾರ್ಥಗಳು ಮತ್ತು ಇನ್ನಿತರ ವಸ್ತುಗಳನ್ನು ಕಳ್ಳಸಾಗಾಟ ಮಾಡುತ್ತಿದ್ದ ಎಂದು ಎಸ್ಟಿಎಫ್ ತಿಳಿಸಿದೆ.
ಶಹಜಾದ್ ಭಾರತದಲ್ಲಿನ ಐಎಸ್ಐ ಏಜೆಂಟ್ಗಳಿಗೆ ಹಣ ಮತ್ತು ಭಾರತೀಯ ಸಿಮ್ ಕಾರ್ಡ್ಗಳನ್ನು ಒದಗಿಸುತ್ತಿದ್ದ. ರಾಮ್ಪುರ ಜಿಲ್ಲೆ ಮತ್ತು ಉತ್ತರ ಪ್ರದೇಶದ ಇತರ ಭಾಗಗಳಿಂದ ಜನರನ್ನು ಐಎಸ್ಐಗಾಗಿ ಕೆಲಸ ಮಾಡಲು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ. ಅಲ್ಲದೇ ಐಎಸ್ಐಗೆ ತೆರಳುತ್ತಿದ್ದ ಜನರ ವೀಸಾದ ವ್ಯವಸ್ಥೆಯನ್ನು ಐಎಸ್ಐ ಏಜೆಂಟ್ಗಳೇ ಮಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬಂಧಿತ ಬಿಎಸ್ಎಫ್ ಯೋಧನನ್ನು ಭಾರತಕ್ಕೆ ಹಸ್ತಾಂತರಿಸಿದ ಪಾಕಿಸ್ತಾನ
ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ನಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನಿ ಸಿಬ್ಬಂದಿಗೆ ಭದ್ರತೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ನೀಡುತ್ತಿದ್ದಳು ಎಂಬ ಆರೋಪದಡಿ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾರನ್ನು ಕೆಲದಿನಗಳ ಹಿಂದಷ್ಟೇ ಬಂಧಿಸಲಾಗಿತ್ತು.