2014ರಿಂದ 2024-25ರ ನಡುವೆ ಅಂದರೆ ನರೇಂದ್ರ ಮೋದಿ ಪ್ರಧಾನಿ ಆದಾಗಿನಿಂದ ಈವರೆಗೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಸಂಬಂಧ ಸುಮಾರು 570 ದೂರುಗಳು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ (ಎನ್ಸಿಎಂ) ತಲುಪಿವೆ.
ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆದ ರಾಜ್ಯವಾರು ಪಟ್ಟಿಯಲ್ಲಿ ಉತ್ತರ ಪ್ರದೇಶ ಅಗ್ರ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ 11 ವರ್ಷಗಳ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ 251 ದೂರುಗಳು ದಾಖಲಾಗಿವೆ.
ಇದನ್ನು ಓದಿದ್ದೀರಾ? ಕಲಬುರಗಿ | ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಎಸ್ಯುಸಿಐ ಪ್ರತಿಭಟನೆ
ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಕುರಿತು ಕೇಂದ್ರ ಸರ್ಕಾರವು ನಿರ್ದಿಷ್ಟವಾದ ದತ್ತಾಂಶವನ್ನು ಹೊಂದಿಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಮಾರ್ಚ್ನಲ್ಲಿ ರಾಜ್ಯಸಭೆಗೆ ತಿಳಿಸಿದೆ.
ಎನ್ಸಿಎಂ ನಿರ್ದಿಷ್ಟ ದೂರುಗಳನ್ನು ಪರಿಶೀಲಿಸುತ್ತದೆ. ಅಂತಹ ಅರ್ಜಿಗಳನ್ನು ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳ ಸಂಬಂಧಿತ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ ಎಂದು ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಹೇಳಿದ್ದರು. ವಿಪಕ್ಷದ ಲಿಖಿತ ಪ್ರಶ್ನೆಗೆ ಉತ್ತರಿಸಿದ ರಿಜಿಜು, 11 ವರ್ಷಗಳಲ್ಲಿ 568 ದೂರುಗಳು ಎನ್ಸಿಎಂ ತಲುಪಿವೆ ಎಂದಿದ್ದಾರೆ.
ಕರ್ನಾಟಕ ಯಾವ ಸ್ಥಾನದಲ್ಲಿದೆ?
ಉತ್ತರ ಪ್ರದೇಶದಲ್ಲಿ 251 ದೂರುಗಳು ದಾಖಲಾಗಿದ್ದು ಮೊದಲ ಸ್ಥಾನದಲ್ಲಿದೆ. ದೆಹಲಿಯಲ್ಲಿ 80 ದೂರುಗಳು ದಾಖಲಾಗಿದ್ದು, ಎರಡನೇ ಸ್ಥಾನದಲ್ಲಿದೆ. ಮಧ್ಯಪ್ರದೇಶ ಮತ್ತು ಹರಿಯಾಣದಲ್ಲಿ ತಲಾ 33 ಪ್ರಕರಣಗಳು, ಕೇರಳದಲ್ಲಿ 20 ದೂರುಗಳು ದಾಖಲಾಗಿದೆ. ಈ ರಾಜ್ಯಗಳು ಮೊದಲ ಐದು ಸ್ಥಾನದಲ್ಲಿದೆ.
ಇದನ್ನು ಓದಿದ್ದೀರಾ? ಆಂಧ್ರಪ್ರದೇಶ | ಲೈಂಗಿಕ ಅಲ್ಪಸಂಖ್ಯಾತರ ಕಾಯ್ದೆ ಅಡಿಯಲ್ಲಿ ಮೊದಲ ಪ್ರಕರಣ ದಾಖಲು
2014-15 ಮತ್ತು 2024-25ರ ನಡುವೆ ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಹತ್ತು ದೂರುಗಳು ದಾಖಲಾಗಿವೆ. 2023-24 ಮತ್ತು 2024-25ರಲ್ಲಿ, ಕರ್ನಾಟಕದಿಂದ ಯಾವುದೇ ದೂರುಗಳು ದಾಖಲಾಗಿಲ್ಲ ಎನ್ನಲಾಗಿದೆ. 2018-19ರಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಅತಿ ಹೆಚ್ಚು ಸಂಭವಿಸಿದೆ. ಎನ್ಸಿಎಂಗೆ 109 ದೂರುಗಳು ಬಂದಿವೆ. 2014-15ರಲ್ಲಿ 34, 2023-24ರಲ್ಲಿ 30, 2024-25ರಲ್ಲಿ 29 ದೂರುಗಳು ದಾಖಲಾಗಿವೆ.
2014ರಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ದೇಶದಲ್ಲಿ ಮುಸ್ಲಿಂ ದ್ವೇಷವನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. 2024ರಲ್ಲಿ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರೇ ಹಲವು ಬಾರಿ ಮುಸ್ಲಿಂ ವಿರೋಧಿ ಭಾಷಣವನ್ನು ಮಾಡಿದ್ದಾರೆ. ಈ ಮೂಲಕ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದೆ. ಓರ್ವ ಆರೋಪಿ ಮುಸ್ಲಿಂ ಆಗಿದ್ದರೆ ಆತನ ಮನೆಯನ್ನು ಕೆಡವುವ ಬುಲ್ಡೋಜರ್ ನ್ಯಾಯ ಉತ್ತರ ಪ್ರದೇಶದಲ್ಲಿದೆ.
