ಬುಧವಾರ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ನಾನಾ ರಾಜ್ಯಗಳಲ್ಲಿಯೂ ಉಪಚುನಾವಣೆ ನಡೆಸಿದೆ. ರಾಜಸ್ತಾನದ ಟೋಂಕ್ ಪ್ರದೇಶದ ಡಿಯೋಲಿ ಉನಿಯಾರಾ ಕ್ಷೇತ್ರದಲ್ಲಿಯೂ ಉಪಚುನಾವಣೆ ನಡೆದಿದ್ದು, ಈ ವೇಳೆ ಚುನಾವಣಾಧಿಕಾರಿ (ಉಪವಿಭಾಗೀಯ ಮ್ಯಾಜಿಸ್ಟ್ರೇಟ್ -ಎಸ್ಡಿಎಂ) ಅಮಿತ್ ಚೌಧರಿ ಅವರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಹಲ್ಲೆ ಆರೋಪದಲ್ಲಿ ಅಲ್ಲಿನ ಸ್ವತಂತ್ರ ಅಭ್ಯರ್ಥಿಯನ್ನು ಬಂಧಿಸುವ ವೇಳೆ, ಹಿಂಸಾಚಾರ ನಡೆದಿದೆ. ಪ್ರಕರಣದಲ್ಲಿ ಬರೋಬ್ಬರಿ 60 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಡಿಯೋಲಿ ಉನಿಯಾರಾ ಕ್ಷೇತ್ರದ ಸಮ್ರಾವತ ಗ್ರಾಮದಲ್ಲಿ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ ಎಂಬವರು ಎಸ್ಡಿಎಂ ಅಮಿತ್ ಚೌಧರಿ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ನರೇಶ್ ಮೀನಾ ಅವರನ್ನು ಬಂಧಿಸಿದ್ದಾರೆ.
ಈ ವೇಳೆ, ಹಿಂಸಾಚಾರ ನಡೆದಿದೆ. ಗಲಭೆಕೋರರು ಅಧಿಕಾರಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸುಮಾರು 24 ದೊಡ್ಡ ವಾಹನಗಳು ಮತ್ತು 48 ದ್ವಿಚಕ್ರ ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಹಿಂಸಾಚಾರ ಪ್ರಕರಣದಲ್ಲಿ ಕನಿಷ್ಠ 60 ಜನರನ್ನು ಬಂಧಿಸಲಾಗಿದೆ. ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಘ್ನಗೊಂಡಿದ್ದು, ವಿಶೇಷ ಕಾರ್ಯಪಡೆ (ಎಸ್ಟಿಎಫ್) ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಅಜ್ಮೀರ್ ರೇಂಜ್ ಐಜಿ ಓಂ ಪ್ರಕಾಶ್ ಖಚಿತಪಡಿಸಿದ್ದಾರೆ.
ಘಟನೆಗಳ ಬಗ್ಗೆ ವಿವರಿಸಿದ ಟೋಂಕ್ ಎಸ್ಪಿ ವಿಕಾಸ್ ಸಾಂಗ್ವಾನ್, “ಸಮ್ರಾವತ ಗ್ರಾಮದಲ್ಲಿ ಕೆಲವರು ಮತದಾನವನ್ನು ಬಹಿಷ್ಕರಿಸಿದ್ದಾರೆ. ಸಮಸ್ಯೆ ಬಗೆಹರಿಸಲು ಎಸ್ಡಿಎಂ, ತಹಸೀಲ್ದಾರ್, ಹೆಚ್ಚುವರಿ ಎಸ್ಪಿ ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ ಮತಗಟ್ಟೆಗೆ ನುಗ್ಗಿ ಎಸ್ಡಿಎಂ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ತಕ್ಷಣ ಹೆಚ್ಚುವರಿ ಎಸ್ಪಿ ಅವರನ್ನು ತಡೆದಿದ್ದಾರೆ. ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ನಮ್ಮ ಮಧ್ಯಸ್ಥಿಕೆಯ ನಂತರ ಮತದಾನ ಶಾಂತಿಯುತವಾಗಿ ಪುನರಾರಂಭವಾಯಿತು” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಮಠಕ್ಕೊಂದು ನ್ಯಾಯ, ವಕ್ಫ್ ಮಂಡಳಿಗೊಂದು ನ್ಯಾಯವೇ?
ಘಟನೆ ಬಗ್ಗೆ ಮಾತನಾಡಿರುವ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ, ಈ ಹಿಂದೆ ಎಸ್ಡಿಎಂ ಅಮಿತ್ ಚೌಧರಿ ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಿದ್ದಾರೆ. “ಈ ಹಿಂದೆ ಹಿಂದೋಳಿಯಲ್ಲಿ ಎಸ್ಡಿಎಂ ಅಮಿತ್ ಅವರು ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಮಹಿಳೆಯ ಪತಿ ಮತ್ತು ಶಿಕ್ಷಕರನ್ನೂ ಥಳಿಸಿದ್ದರು. ಈ ವೇಳೆ ಮತ ಹಾಕುವಂತೆ ಒತ್ತಾಯಿಸಿದ್ದ ಅವರು, ಇಲ್ಲವೆಂದರೆ ಕೆಲಸ ಕಳೆದುಕೊಳ್ಳುತ್ತೀರಿ ಎಂದು ಬೆದರಿಸಿದ್ದರು” ಎಂದು ಹೇಳಿದ್ದಾರೆ.
“ಅಷ್ಟೆ ಅಲ್ಲದೆ, ಅಕ್ಟೋಬರ್ 25 ರಿಂದ ನನ್ನ ಬೆಂಬಲಿಗರಿಗೆ ಕಿರುಕುಳ ನೀಡಲಾಗುತ್ತಿದೆ. ನನ್ನ ಪ್ರಚಾರ ಪೋಸ್ಟರ್ಗಳನ್ನು ಹರಿದು ಹಾಕಲಾಗಿದ್ದು, ಜನರು ನನಗೆ ಮತ ಹಾಕುವುದನ್ನು ತಡೆಯಲು ಈ ಪ್ರಯತ್ನಗಳನ್ನು ಮಾಡಲಾಗಿದೆ” ಎಂದು ಮೀನಾ ಹೇಳಿದ್ದಾರೆ. ಚುನಾವಣಾಧಿಕಾರಿಯ ಮೇಲೆ ಹಲ್ಲೆ
ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿರುವುದರಿಂದ, ಮತ್ತಷ್ಟು ಹಿಂಸಾಚಾರವನ್ನು ತಡೆಗಟ್ಟಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಕಳೆದ ರಾತ್ರಿಯ ಅವ್ಯವಸ್ಥೆಗೆ ಕಾರಣರಾದವರನ್ನು ಗುರುತಿಸಲು ತನಿಖೆಗಳು ನಡೆಯುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ. ಪಕ್ಷೇತರ ಅಭ್ಯರ್ಥಿ ಮೀನಾ ಅವರನ್ನು ಬಂಧಿಸುವಂತೆ ರಾಜಸ್ಥಾನದ ಆಡಳಿತ ಸೇವಾ ಅಧಿಕಾರಿಗಳ ಸಂಘ ಒತ್ತಾಯಿಸಿದೆ.