ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಡೆ ಕ್ಷಣದಲ್ಲಿ ಪದಕ ಕಳೆದುಕೊಂಡ ಕುಪ್ತಿಪಟು ದೀಪಕ್ ಪೂನಿಯಾ ಮತ್ತು ಮತ್ತೊಬ್ಬ ಕುಸ್ತಿಪಟು ಸುಜೀತ್ ಕಲ್ಕಲ್ ಅವರು ಏಷ್ಯನ್ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದ್ದಾರೆ. ಅರ್ಹತಾ ಪಂದ್ಯಗಳು ನಡೆಯುತ್ತಿರುವ ಕಿರ್ಗಿಸ್ತಾನ್ ರಾಜಧಾನಿ ಬಿಶ್ಕೆಕ್ಗೆ ಅವರು ಸರಿಯಾದ ಸಮಯಕ್ಕೆ ತಲುಪದ ಕಾರಣ ಕ್ರೀಡಾ ಆಯೋಜಕರು ಅವರಿಗೆ ಅವಕಾಶ ನೀಡಿಲ್ಲ ಎಂದು ವರದಿಯಾಘಿದೆ.
ಅವರಿಬ್ಬರೂ ಮಂಗಳವಾರದಿಂದ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು. ದುಬೈನಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ, ಎಲ್ಲ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಅವರು ಶುಕ್ರವಾರ ಬೆಳಗ್ಗೆ 8 ಗಂಟೆಗೆ ಬಿಷ್ಕೆಕ್ ತಲುಪಿದ್ದಾರೆ. ಆದರೆ, ಈ ವೇಳೆಗಾಗಲೇ ಅವರು ತಮ್ಮ ದೇಹದ ತೂಕವನ್ನು ದಾಖಲಿಸಬೇಕಿತ್ತು ಮತ್ತು ಕ್ರೀಡಾ ಮಾನದಂಡಗಳನ್ನು ಪೂರೈಸಬೇಕಿತ್ತು.
ತಡವಾಗಿ ಬಂದ ಪೂನಿಯಾ ಮತ್ತು ಕಲ್ಕಲ್ ಅವರಿಗೆ ಸಂಘಟಕರು ಅವಕಾಶ ನೀಡಲು ನಿರಾಕರಿಸಿದ್ದಾರೆ. ತಾವು ಎದುರಿಸಿದ ಸಮಸ್ಯೆಗಳ ಬಗ್ಗೆ ವಿವರಿಸಿದರೂ, ಸಂಘಟಕರು ಅವಕಾಶ ನೀಡಿಲ್ಲ ಎಂದು ತಿಳಿದುಬಂದಿದೆ.
ಈಗ ಸಧ್ಯಕ್ಕೆ, ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ಮುಂದಿನ ತಿಂಗಳು ನಡೆಯಲಿರುವ ವಿಶ್ವ ಕ್ವಾಲಿಫೈಯರ್ಸ್ ಕ್ರಿಡಾಕೂಟವು ಪುನಿಯಾ ಮತ್ತು ಕಲ್ಕಲ್ ಕಡೆಯ ಅವಕಾಶವಾಗಿದೆ.
ಭಾರೀ ಮಳೆಯಿಂದಾಗಿ, ಕುಸ್ತಿಪಟುಗಳು ತಮ್ಮ ತರಬೇತುದಾರ ಕಮಲ್ ಮಾಲಿಕೋವ್ ಮತ್ತು ಫಿಸಿಯೋ ಶುಭಂ ಗುಪ್ತಾ ಅವರೊಂದಿಗೆ ಮಂಗಳವಾರದಿಂದ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು. ವಿಮಾನ ನಿಲ್ದಾಣದ ಮಹಡಿಯಲ್ಲಿ ಮಲಗಿದ್ದ ಅವರಿಗೆ ಸರಿಯಾಗಿ ಊಟ ಸಿಗದ ಕಾರಣ ಅವರ ಯೋಗಕ್ಷೇಮದ ಚಿಂತೆ ಕಾಡುತ್ತಿದೆ ಎಂದು ಕಲ್ಕಲ್ ಅವರ ತಂದೆ ದಯಾನಂದ ಗುರುವಾರ ಹೇಳಿದ್ದರು.
ಶನಿವಾರ ನಡೆಯುವ ಅರ್ಹತಾ ಪಂದ್ಯದಲ್ಲಿ ಭಾಗವಹಿಸಲು ವಿನೇಶ್ ಫೋಗಟ್ ಸೇರಿದಂತೆ ಇತರ ಭಾರತೀಯ ಕುಸ್ತಿಪಟುಗಳು ದೆಹಲಿಯಿಂದ ನೇರವಾಗಿ ಬಿಷ್ಕೆಕ್ಗೆ ತೆರಳಿದರೆ, ಪುನಿಯಾ ಮತ್ತು ಕಲ್ಕಲ್ ಏಪ್ರಿಲ್ 2 ರಿಂದ 15 ರವರೆಗೆ ರಷ್ಯಾದ ಡಾಗೆಸ್ತಾನ್ನಲ್ಲಿ ತರಬೇತಿ ಪಡೆಯುತ್ತಿದ್ದರು. ಹೀಗಾಗಿ, ಅವರಿಬ್ಬರು ಏಪ್ರಿಲ್ 16 ರಂದು, ಮಕಚ್ಕಲಾದಿಂದ ದುಬೈ ಮೂಲಕ ಬಿಷ್ಕೆಕ್ಗೆ ಪ್ರಯಾಣ ಆರಂಭಿಸಿದ್ದರು.