ಕೇಂದ್ರದ ತೆರಿಗೆ ವಿತರಣೆಯ ನೀತಿಯಿಂದ ಹಿಡಿದು ಭಾಷೆಯವರೆಗೆ ಉತ್ತರಭಾರತದ ಹಿಂದಿ ವಲಯವನ್ನು ಓಲೈಸುವುದೇ ಆಗಿದೆ. ಇನ್ನು ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರವಿಂಗಡನೆ ಮಾಡುವುದಾದರೆ ಸಂಸತ್ತಿನಲ್ಲಿ ಪ್ರತಿನಿಧಿಸುವ ಕ್ಷೇತ್ರಗಳೇ ಇಲ್ಲವಾಗಿ ಭಾರತದಲ್ಲಿ ದಕ್ಷಿಣ ಭಾಷಾ ಮೂಲಗಳನ್ನು ದ್ವಿತೀಯ ದರ್ಜೆಯ ಅಥವಾ ಅಲ್ಪಸಂಖ್ಯಾತ ಭಾಷೆಗಳಂತೆ ಉಪಯೋಗಿಸಿ ಬಿಸಾಡುವ ಹಂತಕ್ಕೆ ಬರುತ್ತಾರೆ ಎಂದು ಆತಂಕ ದಿನೇ ದಿನೇ ಹೆಚ್ಚುತ್ತಿದೆ.
ಬೌದ್ದ ತಾತ್ವಿಕತೆಯಲ್ಲಿ ಒಂದು ಪ್ರಬಲವಾದ ಥಿಯರಿ ಇದೆ. ಒಂದಕ್ಕೊಂದು ಸಂಬಂಧದ ಪ್ರಪಂಚದಲ್ಲಿ ಯಾವುದಕ್ಕೂ ಸ್ವತಂತ್ರ ಅಸ್ಥಿತ್ವ ಇಲ್ಲ ಅಂತ. ಇದನ್ನೇ ಕ್ವಾಟಂ ವಿಜ್ಞಾನ ಇನ್ನೊಂದು ಥರದಲ್ಲಿ ಹೇಳುತ್ತೆ. ಬೆಳಕಿನ ಕಣಗಳು ನಾವು ಗಮನಿಸುವುದರಿಂದ ನಮಗೆ ಒಂದು ರೂಪವಾಗಿ ಕಾಣುವಂತೆ ಮನಸ್ಸನ್ನು, ನಮ್ಮ ಕಣ್ಣೋಟವನ್ನು ಸಿದ್ದಗೊಳಿಸುತ್ತವೆ. ಇದು ಸ್ಥೂಲವಾಗಿ ಕಾಣುವ ಜಗತ್ತು. ಸೂಕ್ಷ್ಮ ಜಗತ್ತಿನಲ್ಲಿ ಬೆಳಕಿನ ಕಿರಣಗಳಿಗೆ ರೂಪವೇ ಇರುವುದಿಲ್ಲ. ಅದು ಅಲೆಗಳಂತೆ ಒಂದಕ್ಕೊಂದರ ಸಂಬಂಧದಲ್ಲಿ ಭಿನ್ನಭೇದವಿಲ್ಲದೆ ಹರಿಯುತ್ತಿರುತ್ತದೆ. ಅಂದರೆ ನಮಗೆ ಕಾಣಿಸುವ ರೂಪವೆಲ್ಲವು ನಮ್ಮ ಮನಸ್ಸಿನ ಭಾವನೆಯಷ್ಟೆ. ಅಸಲಿಗೆ ಅದು ರೂಪವಿಲ್ಲದ ಅಲೆಯ ಜಗತ್ತು.
ಹಾಗಾದರೆ ಭಾಷೆಗೂ ಸ್ವತಂತ್ರ ಅಸ್ಥಿತ್ವವಿಲ್ಲವೇ? ಸಾಮಾನ್ಯವಾಗಿ ಈ ಅಲೆಯೂ ಶಬ್ದವಾಗಿ, ಶಬ್ದವು ಆಕಾರವಾಗಿ, ಆಕರವು, ಭಾಷೆಯಾಗಿ ರೂಪುಗೊಂಡಿರಬಹುದು. ಕನ್ನಡದೊಳಗಿನ ಬ್ರಾಹ್ಮಿ, ಸಂಸ್ಕೃತ, ದೇವನಾಗರಿ, ತಮಿಳು ಎಲ್ಲಾ ತೆಗೆಯುತ್ತಾ ಹೋದರೆ ಕಡೆಗೆ ಮತ್ತೆ ಅಲೆಯಾಗೆ ಇರುತ್ತೆ. ಇಲ್ಲದಿದ್ದರೆ ಇದೆಲ್ಲದರ ಸಂಬಂಧದಲ್ಲಿ ಅದಕ್ಕೊಂದು ಅಸ್ಥಿತ್ವ ಪ್ರಾಪ್ತಿಯಾಗುತ್ತೆ ಇಲ್ಲದಿದ್ದರೆ ರೂಪಾಂತರಗೊಳ್ಳುತ್ತಿರುತ್ತದೆ.
ಇತ್ತೀಚೆಗೆ ಬೆವರಹನಿ ಸಂಪಾದಕರಾದ ಕುಚ್ಚಂಗಿ ಪ್ರಸನ್ನ ಅವರ ಜೊತೆ ಮಾತಾಡುವಾಗ ಈಗ ನಮ್ಮ ಎಷ್ಟೋ ಭಾವನೆಗಳು ಎಮೋಜಿಯಲ್ಲೆ ಮುಗಿದುಹೋಗುತ್ತೆ ಅಂತ ಹೇಳಿದರು. ಹೌದು ಎಮೋಜಿ ದ್ವಿಭಾಷೆಯೋ, ಏಕಭಾಷೆಯೋ, ತ್ರಿಭಾಷಾ ಸೂತ್ರದೊಳಗೆ ಬರುತ್ತೋ ನನಗೂ ಗೊತ್ತಿಲ್ಲ. ಹಾಗಾಗಿಯೇ ವಚನಕಾರರು ಭಾಷೆಯೆಂಬುದು ಪ್ರಾಣಘಾತಕ ಎಂದರೋ ತಿಳಿಯದು! ಯಾಕೆಂದರೆ ನೇರ ಸರಳ ಭಾಷೆಯಲ್ಲಿ ತಲುಪಿಸಲು ಸಾಧ್ಯವಿಲ್ಲವೆಂದು ಸಂಸ್ಕೃತದ ಮಹಾಪ್ರಾಣವನ್ನು ಅವರು ಬಳಸಿದರು. ಕಡೆಗೆ ಬೆಡಗಿನ ವಚನದ ಮೂಲಕ ಹೇಳಲು ಪ್ರಯತ್ನಿಸಿದರು. ಕಡೆಗೆ ಅದೊಂದು ಅನುಭಾವವೆಂದರು!!
ಅನುಭಾವವನ್ನು ಭಾಷೆಯಲ್ಲೇ ಹೇಳಿ ಅಂದಾಗ ಭಾಷೆಯೆಂಬುದು ಪ್ರಾಣಘಾತಕವೆಂದರು. ಈಗ ಇಂಗ್ಲಿಷ್, ಹಿಂದಿ ಎದುರು ನಮ್ಮ ಭಾಷೆಯ ಅಸ್ಥಿತ್ವಕ್ಕೆ ಧಕ್ಕೆಯಾಗಿದೆ. ಇದೊಂದು ಗಂಭೀರ ಪ್ರಶ್ನೆ! ಯಾಕೆಂದರೆ ಕೇಂದ್ರದ ತೆರಿಗೆ ವಿತರಣೆಯ ನೀತಿಯಿಂದ ಹಿಡಿದು ಭಾಷೆಯವರೆಗೆ ಉತ್ತರಭಾರತದ ಹಿಂದಿ ವಲಯವನ್ನು ಓಲೈಸುವುದೇ ಆಗಿದೆ. ಇನ್ನು ಜನಸಂಖ್ಯೆ ಗೆ ಅನುಗುಣವಾಗಿ ಕ್ಷೇತ್ರವಿಂಗಡನೆ ಮಾಡುವುದಾದರೆ ಸಂಸತ್ತಿನಲ್ಲಿ ಪ್ರತಿನಿಧಿಸುವ ಕ್ಷೇತ್ರಗಳೇ ಇಲ್ಲವಾಗಿ ಭಾರತದಲ್ಲಿ ದಕ್ಷಿಣ ಭಾಷಾ ಮೂಲಗಳನ್ನು ದ್ವಿತಿಯ ದರ್ಜೆಯ ಅಥವಾ ಅಲ್ಪಸಂಖ್ಯಾತ ಭಾಷೆಗಳಂತೆ ಉಪಯೋಗಿಸಿ ಬಿಸಾಡುವ ಹಂತಕ್ಕೆ ಬರುತ್ತಾರೆ ಎಂದು ಆತಂಕ ದಿನೇ ದಿನೇ ಹೆಚ್ಚುತ್ತಿದೆ. ಇದು ನಂದಿನಿ ಎಂಬ ಹಾಲಿನ ಬ್ರ್ಯಾಂಡ್ ಮೇಲೆ ಅಮುಲ್ ಹೇರುವ ಮೂಲಕ ಹಿಂದಿವಾಲಾಗಳ ವಿರುದ್ದ ದೊಡ್ಡ ಮಟ್ಟದ ಪ್ರತಿರೋಧ ಉಂಟಾಗುವಂತೆ ಮಾಡಿತು. ಮೆಟ್ರೋ ರೈಲಿನ ದರ ಹಾಗೂ ಹಿಂದಿ ಬಳಕೆಯ ಬಗ್ಗೆಯೂ ಹೋರಾಟಗಳಾದವು. ಈಗ ಬೆಳಗಾವಿ ಮರಾಠರ ಪುಂಡಾಡಿಕೆ ವಿರುದ್ದವು ಜಗಳಗಳಾದವು. ಇನ್ನು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ರಂತೂ ಕೇಂದ್ರದ ಶಿಕ್ಷಣ ನೀತಿ ಒಪ್ಪುವುದಿಲ್ಲ, ತ್ರಿಭಾಷಾ ಸೂತ್ರ ಒಪ್ಪುವುದಿಲ್ಲ. ಹಿಂದಿಯವರು ತಮಿಳಿಗೆ ಏನು ಸ್ಥಾನಮಾನಕೊಟ್ಟಿದ್ದಾರೆ ಎಂದು ಚರ್ಚೆಯನ್ನು ತ್ರೀವ್ರಗೊಳಿಸಿದ್ದಾರೆ.

ಇನ್ನು ಸಮಾಜವಾದಿ ಚಿಂತಕ ಯೋಗೆಂದ್ರ ಯಾದವ್ ತ್ರಿಭಾಷಾ ಸೂತ್ರವಾಗಿ ಹಿಂದಿಯನ್ನೆ ತೆಗೆದುಕೊಳ್ಳಬೇಕೆಂದಿಲ್ಲ ದಕ್ಷಿಣದ ಭಾಷೆಯನ್ನೆ ತೆಗೆದುಕೊಳ್ಳಿ. ಹಿಂದಿನ ಆಯೋಗಗಳು ಶಿಕ್ಷಣನೀತಿ ಜಾರಿಗೊಳಿಸುವಾಗ ಮಕ್ಕಳ ಬೌದ್ದಿಕ ಮಟ್ಟಕ್ಕೆ ಮೂರುಭಾಷೆ ಕಲಿಯುವ ಸಾಮರ್ಥ್ಯ ಇರುತ್ತದೆ ಎಂಬ ನೀತಿಗನುಗುಣವಾಗಿ ರೂಪಿಸಿದ ನೀತಿ ಭಾರತದ ಬಹುಭಾಷಾ ವೈವಿಧ್ಯತೆಯನ್ನು ಮಕ್ಕಳಿಗೆ ಪರಿಚಯಿಸಿದಂತಾಗುತ್ತದೆ ಎಂಬಂತೆ ಹೇಳಿದ್ದಾರೆ. ಎರಡು ಸಾವಿರ ವರ್ಷಗಳ ಇತಿಹಾಸವಿರುವ ದಕ್ಷಿಣದ ತಮಿಳು, ಕನ್ನಡ ಇದನ್ನು ಹಿಂದಿ ಹೇರಿಕೆಯ ನೆಲೆಯಲ್ಲೇ ನೋಡುತ್ತಿವೆ. ಇನ್ನು ಎಐ ಸಾಫ್ಟ್ವೇರ್ಗಳಂತೂ ಈ ಜಗವೇ ಬೇಡ ಎಂದು ಪ್ರಾದೇಶಿಕ ಭಾಷೆಯಲ್ಲೂ ಎಐನ್ನು ಅಭಿವೃದ್ದಿಪಡಿಸುತ್ತಿವೆ. ಹಾಗಾಗಿ ಹಿಂದಿ ಹೇರಿಕೆಯ ಬದಲಾಗಿ ಕನ್ನಡ, ಇಂಗ್ಲಿಷ್ ದ್ವಿಭಾಷೆ ಸಾಕು, ಆಗ ಹಿಂದಿ ಹೇರಿಕೆಯನ್ನು ಹದ್ದುಬಸ್ತಿನಲ್ಲಿ ಇಡಬಹುದು ಎಂಬ ವಾದಕ್ಕೆ ದಿನೇದಿನೇ ದಕ್ಷಿಣದ ರಾಜ್ಯದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಈಗ ಇಂಗ್ಲೀಷ್ ಹೆಚ್ಚು ಕಮ್ಮಿ ಜಗತ್ತಿನ ವ್ಯವಹಾರಿಕ ಭಾಷೆಯಾಗಿ ಹೆಚ್ಚು ಪ್ರಚಾರದಲ್ಲಿರುವ ಭಾಷೆ. ಹಿಂದಿ ಉತ್ತರಭಾರತದ ಸಾವಿರಾರು ಭಾಷೆಗಳನ್ನು ಹಿಂದಿಕ್ಕಿ ಅದು ಕೂಡ ವ್ಯವಹಾರಿಕ ಭಾಷೆಯಾಗುತ್ತಿದೆ. ದಕ್ಷಿಣದ ಭಾಷೆಗಳನ್ನು ಒಳಗೊಂಡ ರಾಷ್ಟ್ರ ಭಾಷೆಗಳು (ಕೇವಲ ಹಿಂದಿ ರಾಷ್ಟ್ರ ಭಾಷೆಯೆಂಬುದು ಸುಳ್ಳು) ಈಗ ಈ ಇಂಗ್ಲಿಷ್, ಹಿಂದಿ ಎಂಬ ವ್ಯವಹಾರಿಕ ಭಾಷೆಗಳೆದುರು ನಲುಗುತ್ತಿದೆ. ಆದರೆ, ನೋಡಿ ದಕ್ಷಿಣ ಭಾಷೆಗಳು ವ್ಯವಹಾರಿಕವಾಗಿ ಇತ್ತೀಚೆಗೆ ಗಮನ ಸೆಳೆದದ್ದು ಸಿನಿಮಾಗಳ ಮೂಲಕ ಹಾಗೂ ಕಾಸ್ಮೋಪಾಲಿಟನ್ ಸಿಟಿಗಳ ಮೂಲಕ. ಈಗ ಡಿಜಿಟಲ್ ದುನಿಯಾದಲ್ಲಿ ದಕ್ಷಿಣ ರಾಜ್ಯಗಳ ಪ್ರಾದೇಶಿಕ ಅಸ್ಮಿತೆಗಳು, ಅನುಭವಗಳು, ವೈವಿಧ್ಯಮಯ ಕತೆಗಳು ಹಿಂದಿ ಬೆಲ್ಟ್ನಲ್ಲೂ ಜಯಭೇರಿ ಬಾರಿಸಲು ಶುರುಮಾಡಿತು. ಬಾಲಿವುಡ್ನಲ್ಲಿ ಕತೆಯೇ ಇಲ್ಲ ಎಂದು ದಕ್ಷಿಣದ ನಿರ್ದೇಶಕರನ್ನು ಕರೆಸಿ ಸಿನಿಮಾ ತೆಗೆಯಲಾಯಿತು. ಇನ್ನು ಬೆಂಗಳೂರು, ಹೈದರಾಬಾದ್, ಮದ್ರಾಸ್ ಸಿಟಿಗಳು ಹಿಂದಿ ರಾಜ್ಯಗಳ ಜನರನ್ನು ಕೇವಲ ಸಿನಿಮಾ ಕಾರಣಕ್ಕೆ ಮಾತ್ರವಲ್ಲ, ಬೇರೆ ಬೇರೆ ಉದ್ಯೋಗಕ್ಕೂ ಸೆಳೆದುಕೊಂಡಿದೆ. ಹೀಗಾಗಿ ಭಾಷೆಯ ಹಿಂದಿನ ವ್ಯವಹಾರ, ಉದ್ಯೋಗ, ಭಾವನಾತ್ಮಕತೆ ಸಂಬಂಧವನ್ನು ವಿಸ್ತರಿಸುತ್ತಿದೆ, ರೂಪಾಂತರಿಸುತ್ತಿದೆ. ಈಗ ಯಾವ ಸೇಟುಗೆ ಕನ್ನಡ ಮಾತಾಡಲು ಬರುವುದಿಲ್ಲ ಹೇಳಿ! ಹೀಗೆ ಒಂದಕ್ಕೊಂದರ ಸಂಬಂಧದಲ್ಲಿ ಭಾಷೆ ಬೆಳೆಸುವ ವಿದ್ಯಮಾನ ಹೇಗೆ ಸಾಧ್ಯ ಅನ್ನೋದು ಕೂಡ ದಕ್ಷಿಣದ ರಾಜ್ಯಗಳ ಭಾಷಾ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಭಾಷೆಯ ಕಾರಣಕ್ಕೆ ಪಾಕಿಸ್ತಾನದಿಂದ ಬಾಂಗ್ಲಾದೇಶವೇ ಬೇರೆಯಾಯಿತು. ನಮ್ಮ ದಕ್ಷಿಣದ ರಾಜ್ಯಗಳು ಹಿಂದಿ ಕಾರಣಕ್ಕೆ ಒಂದಾಗುತ್ತವೆ. ಆದರೆ ನದಿ, ಸಿನಿಮಾ, ವ್ಯವಹಾರ ಅಂದಾಗ ದೂರ ಕಾಪಾಡಿಕೊಳ್ಳುತ್ತವೆ. ಇದರ ಮಧ್ಯೆ ರಾಜ್ಯದ ಸಿಲಬಸ್, ಸೆಂಟ್ರಲ್ ಸಿಲಬಸ್ ಹಾಗೂ ಅಂತಾರಾಷ್ಟ್ರೀಯ ಸಿಲಬಸ್ ಎಂಬ ಮೂರು ವಿಭಾಗಗಳಿವೆ. ದ್ವಿಭಾಷಾ ನೀತಿ ಸರ್ಕಾರಿ ಶಾಲೆಯ ಮಕ್ಕಳಿಗೆ ಮಾತ್ರವೆಂಬಂತೆ ಆಗಿ ಸೆಂಟ್ರಲ್ ಹಾಗೂ ಇಂಟರ್ ನ್ಯಾಷನಲ್ ಸಿಲಬಸ್ಗಳು ತ್ರಿಭಾಷಾ ನೀತಿಗೆ ಒಳಪಟ್ಟರೆ ಪ್ರಯೋಜವಿಲ್ಲ. ಆಗ ಖಾಸಗಿ ಶಾಲೆಯ ಮಕ್ಕಳು ಸೆಂಟ್ರಲ್ ಸಿಲಬಸ್ ಅನ್ನೇ ಆಯ್ದುಕೊಳ್ಳುವ ಸಂಭವ ಹೆಚ್ಚಿಗೆ ಇರುತ್ತದೆ. ಆಗ ಹಿಂದಿ ಎಂಬುದು ಹಿಂಬಾಗಿಲಿನ ಮೂಲಕವಾದರೂ ಬರುತ್ತದೆ. ಇನ್ನು ಕೋರ್ಟ್ಗಳಲ್ಲಿ ಭಾಷಾ ನೀತಿಗಳು ಎದುರು ಬಂದಾಗ ಅದು ಪೋಷಕರ ನಿರ್ಧಾರಕ್ಕೆ ಬಿಟ್ಟುಬಿಡುವ ಸಂಭವವೇ ಹೆಚ್ಚು. ಹಾಗಾಗಿ ಪ್ರಾಥಮಿಕ ಶಾಲೆಯವರೆಗಿನ ಕನ್ನಡ ಶಿಕ್ಷಣಕ್ಕೆ ದಾರಿಯೇ ಕಾಣುತ್ತಿಲ್ಲ ಅಷ್ಟರ ಮಟ್ಟಿಗೆ ಖಾಸಗಿ ಶಿಕ್ಷಣ ನೀತಿಗಳು ಪ್ರಬಲವಾಗಿವೆ. ಇವತ್ತಿನ ಆಧುನಿಕ ಕಾಲದಲ್ಲಿ ಇಂಗ್ಲಿಷ್ ಶಿಕ್ಷಣ ಅನಿವಾರ್ಯ ಎಂಬಲ್ಲಿಗೆ ಕನ್ನಡ ಸಾಹಿತಿಗಳೇ ಒಂದುಗೂಡಿದ್ದರು. ಹಾಗಾಗಿ ಇಲ್ಲಿ ವ್ಯವಹಾರ, ಜ್ಞಾನ ಹಾಗೂ ಭಾವನಾತ್ಮಕತೆಯ ನಡುವೆ ಭಾಷಾ ನೀತಿಯ ಪ್ರಾಣ ಅಡಗಿದೆ.

ಮಧ್ಯೆ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಖಾತ್ರಿ ನೀಡುವ ಮೀಸಲಾತಿ ಜಾರಿಯಾದರೆ ಕನ್ನಡಕ್ಕೊಂದು ವ್ಯವಹಾರಿಕ ಭಾಷೆಯ ಮಾನ್ಯತೆಯನ್ನು ಕೊಟ್ಟಂತಾಗುತ್ತದೆ. ರಾಜ್ಯ ಸರ್ಕಾರಗಳು ಇದರ ಬಗ್ಗೆ ಗಮನವೇ ಹರಿಸುತ್ತಿಲ್ಲ. ಸರೋಜಿನಿ ಮಹಿಷಿ ವರದಿ ಜಾರಿ ಮಾಡಿ ಅಂತ ಇನ್ನು ಸರ್ಕಾರದ ಮುಂದೆ ಕನ್ನಡಿಗರು ಅಂಗಲಾಚುತ್ತಿದ್ದೇವೆಂದರೆ ಸರ್ಕಾರಗಳು ಎಷ್ಟರ ಮಟ್ಟಿಗೆ ಬರಗೆಟ್ಟಿರಬೇಕು. ಹಾಗಾಗಿ ಭಾಷೆ ಮತ್ತೊಂದು ಭಾಷೆಯ ಜೊತೆ ಈಗ ವ್ಯವಹಾರಿಕ, ಜ್ಞಾನ ಸಂಬಂಧಿತ ವಿಚಾರಗಳಲ್ಲಿ ಹಾಗೂ ಭಾವನಾತ್ಮಕ ವಿಚಾರಗಳಲ್ಲಿ ಸಂಬಂಧ ಬೆಳೆಸುವ ಮೂಲಕ ತನ್ನ ಅಸ್ಥಿತ್ವ ಸಾಬೀತುಪಡಿಸಿಕೊಳ್ಳುವ ಕಾಲದಲ್ಲಿದ್ದೇವೆ.
ಇದನ್ನೂ ಓದಿ ಜೋಳಿಗೆ | ಪಟ್ಟು ಬಿಡದೆ ಹೋರಾಡಿ ದಟ್ಟ ಕಾಡು ಉಳಿಸಿಕೊಂಡ ರೈತಾಪಿ ಜನ
ಕನ್ನಡದ ಕೆ.ಜಿ.ಎಫ್ ಸಿನಿಮಾ ಇಡೀ ಭಾರತದಲ್ಲಿ ಸಾವಿರಾರು ಕೋಟಿಯ ಸಿನಿಮಾ ಮಾಡುತ್ತಿದ್ದಂತೆ ಅದೇ ಸಿನಿಮಾ ಹೀರೋನ ಮುಂದಿನ ಸಿನಿಮಾ ಏಕಕಾಲಕ್ಕೆ ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಶೂಟ್ ಆಗುವ ಮೂಲಕ ದಾಖಲೆ ಬರೆಯುತ್ತಿದೆ. ಇದು ಕನ್ನಡ ಇಂಡಸ್ಟ್ರಿ ವ್ಯವಹಾರಿಕವಾಗಿ ವಿಸ್ತರಿಸಿಕೊಳ್ಳುತ್ತಿರುವ ರೀತಿ. ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯೂ ಅಷ್ಟೆ ಏಕಕಾಲಕ್ಕೆ ಹಿಂದಿ ಹಾಗೂ ಇಂಗ್ಲಿಷ್ನ ಎದುರು ನಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದಂತಾಗುತ್ತದೆ. ಇಲ್ಲದಿದ್ದರೆ ಹಿಂದಿ ಹಾಗೂ ಇಂಗ್ಲೀಷ್ ಲಾಭಿ, ಹಣದ ಎದುರು ಕನ್ನಡ ಅಸ್ಥಿತ್ವವೇ ಉಳಿಸಿಕೊಳ್ಳುವುದಿಲ್ಲ. ದ್ವಿಭಾಷೆಯೋ, ತ್ರಿಭಾಷೆಯೋ ವ್ಯವಹಾರಿಕವಾಗಿ, ಜ್ಞಾನ ಸಂಪಾದನೆಯಲ್ಲಿ ಹಾಗೂ ಭಾವನಾತ್ಮಕವಾಗಿ ಕನ್ನಡಕ್ಕೆ ಅಸ್ಥಿತ್ವವನ್ನು ಹೇಗೆ ರೂಪಿಸುತ್ತೇವೆ ಎಂಬುದರ ಮೇಲೆ ನಿಂತಿದೆ. ದ್ವಿಭಾಷಾ ನೀತಿ ತಂದು ಮತ್ತೆ ಸೆಂಟ್ರಲ್ ಸಿಲಬಸ್, ಇಂಟರ್ ನ್ಯಾಷನಲ್ ಸಿಲಬಸ್ ಎಂದು ಸರ್ಕಾರಿ ಮಕ್ಕಳನ್ನು ಬೇರೆ ಮಕ್ಕಳೊಂದಿಗಿನ ಸಂಬಂಧದಲ್ಲಿ ವ್ಯತ್ಯಾಸ ತೋರಿಸಿದಂತಾಗಬಾರದು. ಒಂದು ರಾಜ್ಯದಲ್ಲಿ ಶಿಕ್ಷಣದ ನೀತಿ ಎಲ್ಲ ಮಕ್ಕಳಿಗೂ ಸಮಾನವಾಗಿರಬೇಕು. ನಮ್ಮ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಿಂತ ಯಾವುದರಲ್ಲೂ ಕಮ್ಮಿ ಇಲ್ಲ ಎಂಬಂತೆ ಸಾಧಿಸಲು ಇನ್ನು ಸರ್ಕಾರಗಳಿಗೆ ಸಾಧ್ಯವಾಗಿಲ್ಲ.
ಇದನ್ನೂ ಓದಿ ನುಡಿಯಂಗಳ | ಎಲ್ಲೆಲ್ಲೂ ಪಸರಿಸಲಿ ಕನ್ನಡ ಕಂಪು
ಖಾಸಗಿ ಶಾಲೆಗಿಂತ ಉತ್ತಮವಾಗಿ ರೂಪಿಸಲು ಬಜೆಟ್ನಲ್ಲಿ ಸರ್ಕಾರಿ ಶಾಲೆಗೆ ಹಣ ಹೆಚ್ಚಿಗೆ ಮೀಸಲಿಡಲು ಸಾಧ್ಯವೇ? ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಲು ಸಾಧ್ಯವೇ? ಹಿಂದಿ, ಇಂಗ್ಲಿಷ್ ಸಮಾನವಾಗಿ ಕನ್ನಡವನ್ನು ಎತ್ತಿಹಿಡಿಯಲು ಸಾಧ್ಯವೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲೇಬೇಕಾಗಿದೆ. ಕನ್ನಡ ತನ್ನ ಸಂಬಂಧವನ್ನು ವಿಸ್ತರಿಸುತ್ತಾ ಅದು ವ್ಯವಹಾರಿಕ ಆಗಿರಬಹುದು, ಜ್ಞಾನ ಸಂಬಂಧಿ ಆಗಿರಬಹುದು. ಭಾವನಾತ್ಮಕ ವಿಷಯದಲ್ಲಿ ಆಗಿರಬಹುದು ತನ್ನ ಅಸ್ಥಿತ್ವವನ್ನು ಸಾಬೀತುಪಡಿಸಿಕೊಂಡರೆ ಕ್ವಾಟಂ ಜಗತ್ತಿನ ಅಣುವಾಗಿಯೂ (ಅಸ್ಮಿತೆ) ಹಾಗೂ ಅಲೆಯಾಗಿಯೂ (ಸಂಬಂಧದ ವಿಸ್ತರಣೆ) ಎರಡರಲ್ಲಿಯೂ ಪರಿಪೂರ್ಣವಾಗುತ್ತದೆ.
