ಬಿಜೆಪಿ ಸರಕಾರದಿಂದಲೇ ನೇಮಿಸಿದ ಕಳೆದ ಕಾನೂನು ಆಯೋಗವು ನವೆಂಬರ್ 2016ರಲ್ಲಿ ಇದೇ ವಿಷಯದ ಮೇಲೆ ಜನರ ಅಭಿಪ್ರಾಯ ಕೇಳಿತ್ತು. ಅದಕ್ಕೆ ಒಟ್ಟು 75,378 ಸಲಹೆಗಳು ಬಂದಿದ್ದವು. ಅದರ ಆಧಾರದ ಮೇಲೆ 2018ರಲ್ಲಿ ಆಯೋಗವು 185 ಪುಟಗಳ ವರದಿಯನ್ನು ಸಲ್ಲಿಸಿತ್ತು. ಅಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆಂದರೆ, ಈ ಸಮಯದಲ್ಲಿ ಎಲ್ಲಾ ಸಮುದಾಯಗಳ ಬೇರೆ ಬೇರೆ ಕೌಟುಂಬಿಕ ಕಾನೂನುಗಳನ್ನು ಬದಲಿಸಿ ಒಂದು ಸಂಹಿತೆ ರಚಿಸುವುದು ಅವಶ್ಯಕವೂ ಇಲ್ಲ, ಅಪೇಕ್ಷಣೀಯವೂ ಅಲ್ಲ ಎಂದು
ಏಕರೂಪ ನಾಗರಿಕ ಸಂಹಿತೆ ಇರಬೇಕೋ ಇಲ್ಲವೋ ಎಂಬ ಪ್ರಶ್ನೆ ಭಾರತದ ಸಂವಿಧಾನದಲ್ಲಿ ನಂಬಿಕೆ ಇರುವ ಯಾವುದೇ ವ್ಯಕ್ತಿಗೆ ಇರಬಾರದು. ಅಸಲಿ ಪ್ರಶ್ನೆ ಏನೆಂದರೆ, ಏಕರೂಪ ನಾಗರಿಕ ಸಂಹಿತೆ ಹೇಗೆ, ಯಾವಾಗ ಮತ್ತು ಯಾವ ಸಿದ್ಧಾಂತದ ಆಧಾರದಲ್ಲಿ ಜಾರಿಗೊಳಿಸಬೇಕು ಎಂಬುದು. ಆದರೆ ಸರಕಾರದ ನಿಯತ್ತನ್ನು ನೋಡಿದರೆ ಅನ್ನಿಸುವುದೇನೆಂದರೆ, ಮತ್ತೊಮ್ಮೆ ಈ ವಿಷಯದಿಂದ ಅಸಲಿ ಪ್ರಶ್ನೆಗಳಿಂದ ದಿಕ್ಕು ತಪ್ಪಿಸಿ 2024ರ ಚುನಾವಣೆಗಳ ಮುನ್ನ ಕೋಮುವಾದದ ಆತಂಕ ಹುಟ್ಟಿಸುವುದಕ್ಕಾಗಿ ಮುಂದೆ ತರಲಾಗುತ್ತಿದೆ ಎಂದು.
ದೇಶದ ಕಾನೂನು ಆಯೋಗವು ಕಳೆದ ವಾರ ಈ ವಿಷಯದಲ್ಲಿ ಜನರಿಂದ ಅಭಿಪ್ರಾಯ ಕೇಳಿದೆ. ಗಮನಿಸಬೇಕಾದ ವಿಷಯವೇನೆಂದರೆ, ಇದಕ್ಕಿಂತ ಮುನ್ನ ಬಿಜೆಪಿ ಸರಕಾರದಿಂದಲೇ ನೇಮಿಸಿದ ಕಳೆದ ಕಾನೂನು ಆಯೋಗವು ನವೆಂಬರ್ 2016ರಲ್ಲಿ ಇದೇ ವಿಷಯದ ಮೇಲೆ ಜನರ ಅಭಿಪ್ರಾಯ ಕೇಳಿತ್ತು. ಅದಕ್ಕೆ ಒಂದಿಷ್ಟಲ್ಲ, ಒಟ್ಟು 75,378 ಸಲಹೆಗಳು ಬಂದಿದ್ದವು. ಅದರ ಆಧಾರದ ಮೇಲೆ 2018ರಲ್ಲಿ ಕಾನೂನು ಆಯೋಗವು 185 ಪುಟಗಳ ಒಂದು ದೀರ್ಘವಾದ ವರದಿಯನ್ನು ಸಲ್ಲಿಸಿತ್ತು. ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆಂದರೆ, ಈ ಸಮಯದಲ್ಲಿ ಎಲ್ಲಾ ಸಮುದಾಯಗಳ ಬೇರೆ ಬೇರೆ ಕೌಟುಂಬಿಕ ಕಾನೂನುಗಳನ್ನು ಬದಲಿಸಿ ಒಂದು ಸಂಹಿತೆ ರಚಿಸುವುದು ಅವಶ್ಯಕವೂ ಇಲ್ಲ ಹಾಗೂ ಅಪೇಕ್ಷಣೀಯವೂ ಅಲ್ಲ ಎಂದು. ಅದರ ನಂತರ 2023ರಲ್ಲಿ ಇನ್ನೊಮ್ಮೆ ಇದೇ ಪ್ರಕ್ರಿಯೆಯನ್ನು ಪುನರಾರ್ತನೆ ಮಾಡುವುದನ್ನು ನೋಡಿದರೆ ಎಲ್ಲೋ ಕಳೆದ ವರದಿ, ಬಿಜೆಪಿಯ ರಾಜಕೀಯಕ್ಕೆ ಅನುಕೂಲಕರವಾಗಿಲ್ಲ ಎಂಬ ಸಂದೇಹ ಉಂಟಾಗುತ್ತದೆ. ಹಾಗಾಗಿಯೇ ಮತ್ತೊಮ್ಮೆ ವಿವಾದವನ್ನು ಹೊಸ ರೀತಿಯಲ್ಲಿ ತೆರೆದಿಟ್ಟು 2024ರ ಚುನಾವಣೆಯ ತಯಾರಿ ಮಾಡಲಾಗುತ್ತಿದೆ.
ಸೈದ್ಧಾಂತಿಕವಾಗಿ ಏಕರೂಪ ನಾಗರಿಕ ಸಂಹಿತೆ ನಮ್ಮ ಸಂವಿಧಾನದ ಆದರ್ಶಗಳಿಗೆ ಅನುಗುಣವಾಗಿ ಸರಿಯಾದ ದಿಕ್ಕಿನಲ್ಲಿ ಒಂದು ಸರಿಯಾದ ಹೆಜ್ಜೆಯಾದೀತು. ಸಿದ್ಧಾಂತವೇನೆಂದರೆ, ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳಿರುವ ಹಾಗೂ ಕೇವಲ ಧರ್ಮದ ಅಥವಾ ಪಂಥದ ಆಧಾರದ ಮೇಲೆ ಸಂವಿಧಾನಿಕ ಮೌಲ್ಯಗಳ ಉಲ್ಲಂಘನೆ ಮಾಡಲು ಸಾಧ್ಯವಾಗುವುದಿಲ್ಲ ಎಂಬುದು. ಇದೇ ಆಶಯವನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದ ರಚನೆಕಾರರು ಸುದೀರ್ಘವಾದ ಚರ್ಚೆಯ ನಂತರ ರಾಜ್ಯದ ನೀತಿ ನಿರ್ದೇಶಕ ತತ್ವಗಳ ಅಡಿಯಲ್ಲಿ ಸಂವಿಧಾನದ 44 ಅನುಚ್ಛೇದದಲ್ಲಿ ಸರಕಾರಕ್ಕೆ ಸಲಹೆ ನೀಡಲಾಗಿತ್ತು; “ಭಾರತದ ಎಲ್ಲಾ ರಾಜ್ಯ ಕ್ಷೇತ್ರಗಳಲ್ಲಿ ನಾಗರಿಕರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಪಡೆಯುವ ಪ್ರಯತ್ನ’ ಮಾಡಲಾಗುವುದು. ಸಂವಿಧಾನ ಸಭೆಯಲ್ಲಿ ಜವಾಹರಲಾಲ್ ನೆಹರು ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ನಂತರ ರಾಮ್ ಮನೋಹರ್ ಲೋಹಿಯಾ ಕೂಡ ಈ ಸಿದ್ಧಾಂತದ ಪರವಾಗಿ ವಕಾಲತ್ತು ವಹಿಸಿದ್ದರು.
ಪ್ರಶ್ನೆ ಏನೆಂದರೆ, ಸಂವಿಧಾನದಲ್ಲಿ ವರ್ಣಿಸಲಾದ ‘ಯುನಿಫಾರ್ಮ್’ ಅಥವಾ ‘ಏಕರೂಪ’ ನಾಗರಿಕ ಸಂಹಿತೆಯ ಅರ್ಥವೇನು? ಇದರ ಒಂದು ಅಕ್ಷರಶಃ ಅರ್ಥ, ಇಂದು ದೇಶದ ವಿವಾಹ, ವಿಚ್ಛೇದನ, ಉತ್ತರಾಧಿಕಾರ ಹಾಗೂ ಕೌಟುಂಬಿಕ ಸಂಪತ್ತಿನಂತಹ ವಿಷಯಗಳ ಬಗ್ಗೆ ಹಿಂದೂ, ಮುಸ್ಲಿಂ, ಪಾರಸಿ ಹಾಗೂ ಕ್ರೈಸ್ತ ಸಮುದಾಯಗಳಿಗಾಗಿ ಯಾವ ಕಾನೂನುಗಳನ್ನು ರಚಿಸಲಾಗಿದೆಯೋ ಅವುಗಳನ್ನು ಕೊನೆಗೊಳಿಸಿ ಎಲ್ಲಾ ಭಾರತೀಯ ನಾಗರಿಕರಿಗಾಗಿ ಈ ಎಲ್ಲ ವಿಷಯಗಳ ಮೇಲೆ ಒಂದೇ ಕಾನೂನು ಮಾಡಬೇಕು ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಯಾವ ರೀತಿಯಲ್ಲಿ ಅಪರಾಧದ ವಿಷಯಗಳಲ್ಲಿ, ತೆರಿಗೆ ಮತ್ತು ಇತರ ಕಾನೂನುಗಳಲ್ಲಿ ಬೇರೆ ಬೇರೆ ಸಮುದಾಯಗಳಿಗೆ ಬೇರೆ ಬೇರೆ ಕಾನೂನುಗಳಿಲ್ಲವೋ, ಅದೇ ರೀತಿಯಲ್ಲಿ ಕೌಟುಂಬಿಕ ವಿಷಯಗಳಿಗಾಗಿಯೂ ದೇಶದಲ್ಲಿ ಕೇವಲ ಒಂದು ಕಾನೂನು ಇರಬೇಕು ಎಂದು. ಮೊದಲ ನೋಟದಲ್ಲಿ ಇದು ಸುಂದರವಾಗಿ ಕಾಣಿಸುವ ಈ ವ್ಯವಸ್ಥೆಯಲ್ಲಿ ಇರುವ ತೊಡಕೇನೆಂದರೆ ನಮ್ಮ ದೇಶದಲ್ಲಿ ವಿವಾಹ, ವಿಚ್ಛೇದನ ಹಾಗೂ ಉತ್ತರಾಧಿಕಾರದ ಬಗ್ಗೆ ಬೇರೆ ಬೇರೆ ಪದ್ಧತಿಗಳು ನಡೆದುಕೊಂಡು ಬಂದಿವೆ. ಬೇರೆ ಧರ್ಮದ ಅನುಯಾಯಿಗಳ ವಿಷಯ ಬಿಟ್ಟರೂ, ಆಗ ಸ್ವತಃ ಹಿಂದೂ ಸಮುದಾಯದ ಒಳಗಡೆಯೇ ಸಾವಿರಾರು ರೀತಿಯ ರೀತಿನೀತಿಗಳು ನಡೆದುಕೊಂಡು ಬಂದಿವೆ.
ಸ್ವಾಭಾವಿಕವಾಗಿಯೇ ಈ ಎಲ್ಲವನ್ನೂ ಕೊನೆಗೊಳಿಸಿ ‘ಸ್ಪೆಷಲ್ ಮ್ಯಾರೇಜ್ ಆ್ಯಕ್ಟ್’ನಂತಹ ಯಾವುದೇ ಕಾನೂನನ್ನು ಎಲ್ಲಾ ಜನರ ಮೇಲೆ ಅನುಷ್ಠಾನಗೊಳಿಸುವುದು ಅಸಾಧ್ಯವಾದ ಕಸರತ್ತಾಗುವುದು ಹಾಗೂ ಸುಖಾಸುಮ್ಮನೇ ದೇಶದಲ್ಲಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಕೆಲಸವಾಗುತ್ತದೆ. ಇದರಲ್ಲಿ ಒಂದು ಸಮುದಾಯದ ಸಂಹಿತೆಯನ್ನು ಮಿಕ್ಕ ಎಲ್ಲಾ ಸಮುದಾಯಗಳ ಮೇಲೆ ಹೇರುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನವೂ ಇದರಿಂದ ಹುಟ್ಟುಕೊಳ್ಳುತ್ತದೆ. ಹಾಗಾಗಿ, ಕಾನೂನು ಆಯೋಗದ ಹೊಸ ಆರಂಭದಿಂದ ಅನುಮಾನ ಮತ್ತು ವಿವಾದ ಸೃಷ್ಟಿಯಾಗಿದೆ. ಈ ವಿವಾದವನ್ನು ಸೃಷ್ಟಿಸುವುದೇ ಬಹುಶಃ ಇದರ ಉದ್ದೇಶವಾಗಿರಬಹುದು.
ಆದರೆ ಸಮಾನ ನಾಗರಿಕ ಸಂಹಿತೆಯ ಸಿದ್ಧಾಂತದ ಇನ್ನೊಂದು ವ್ಯಾಖ್ಯಾನವು ಹೆಚ್ಚು ತಾರ್ಕಿಕ, ಸಂವಿಧಾನದ ಆಶಯಗಳೊಂದಿಗೆ ಸಮ್ಮತ ಹಾಗೂ ನಮ್ಮ ಪರಿಸ್ಥಿತಿಗೆ ಉಪಯುಕ್ತವೆನಿಸುತ್ತಿದೆ. ಈ ವ್ಯಾಖ್ಯಾನದ ಅನುಗುಣವಾಗಿ ನಾಗರಿಕ ಸಂಹಿತೆ ಸಮಾನವಾಗಿಸಲು ಬೇರೆ ಬೇರೆ ಧರ್ಮದ ಅನುಯಾಯಿಗಳ ಬೇರೆ ಬೇರೆ ರೀತಿ ರಿವಾಜು ಹಾಗೂ ವ್ಯವಸ್ಥೆಗಳನ್ನು ಕೊನೆಗೊಳಿಸುವ ಅವಶ್ಯಕತೆ ಇಲ್ಲ, ಆದರೆ ಅವುಗಳಲ್ಲಿ ಸಮಾನತೆಯನ್ನು ಸ್ಥಾಪಿಸುವ ಅವಶ್ಯಕತೆ ಇದೆ. ಬೇರೆ ಬೇರೆ ಕೌಟುಂಬಿಕ ಕಾನೂನುಗಳಲ್ಲಿ ಸಂವಿಧಾನದ ಮೌಲ್ಯಗಳು ಮತ್ತು ಮೌಲಿಕ ಹಕ್ಕುಗಳೊಂದಿಗೆ ತಾಳೆಯಾಗದೇ ಇರುವ ಯಾವೆಲ್ಲ ಅಂಶಗಳಿವೆಯೋ ಅವುಗಳನ್ನು ಬದಲಿಸಬೇಕು. ವಿವಿಧ ಧಾರ್ಮಿಕ ಸಮುದಾಯಗಳ ಪರಂಪರಾಗತ ರೀತಿ ರಿವಾಜುಗಳು ಹಾಗೂ ಕಾನೂನುಗಳಲ್ಲಿ ಮಹಿಳೆಯರಿಗೆ ತಾರತಮ್ಯ ಮಾಡುವ ಅನೇಕ ವ್ಯವಸ್ಥೆಗಳಿವೆ, ಮಕ್ಕಳ ಹಿತಾಸಕ್ತಿಗಳನ್ನು ಕಡೆಗಣಿಸುವ ಹಾಗೂ ಟ್ರಾನ್ಸ್ಜೆಂಡರ್ ಮತ್ತು ವಿವಾಹೇತರ ಆದ ಮಕ್ಕಳನ್ನು ಅಮಾನ್ಯಗೊಳಿಸುವ ವ್ಯವಸ್ಥೆಗಳಿವೆ. ಇಂತಹ ಎಲ್ಲಾ ಕಾನೂನುಗಳನ್ನು ಬದಲಿಸಬೇಕಿದೆ, ಅವು ಯಾವ ಧಾರ್ಮಿಕ ಸಮುದಾಯದ ಸಂಹಿತೆಯ ಭಾಗವೇ ಆಗಿರಲಿ.
ಉದಾಹರಣೆಗೆ, ಮುಸ್ಲಿಂ ಸಮುದಾಯದಲ್ಲಿಯ ತ್ರಿವಳಿ ತಲಾಕ್ ಮತ್ತು ತಲಾಕ್ಎ ಬಿದ್ದತ್ ನಂತಹ ವ್ಯವಸ್ಥೆಗಳು ಅಮಾನವೀಯವಾಗಿವೆ ಹಾಗೂ ಮಹಿಳೆಯ ವಿರುದ್ಧವಾಗಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಈ ವಿಷಯಗಳ ಮೇಲೆ ರಾಷ್ಟ್ರೀಯ ಚರ್ಚೆ ಆಗುವುದಕ್ಕಿಂತ ಮುನ್ನವೇ ಸರ್ವೋಚ್ಚ ನ್ಯಾಯಾಲಯವು ಈ ಪದ್ಧತಿಗಳನ್ನು ಇಸ್ಲಾಂಗೆ ಅನುಗುಣವಾಗಿಲ್ಲ ಮತ್ತು ಸಂವಿಧಾನದ ಅನುಗುಣವಾಗಿಲ್ಲ ಎಂದು ಹೇಳಿ ಇವುಗಳನ್ನು ಅಮಾನ್ಯಗೊಳಿಸಿದೆ. ಇದೇ ರೀತಿ ಹಿಂದು ಸಮುದಾಯದಲ್ಲಿ ಬಾಲ್ಯ ವಿವಾಹ, ಸತಿ ಮತ್ತು ದೇವದಾಸಿ ಪದ್ಧತಿಗಳನ್ನು ಕಾನೂನುಬಾಹಿರ ಎಂದು ಘೋಷಿಸಲಾಗಿದೆ. ಆದರೆ ಇನ್ನೂ ಎಲ್ಲಾ ಕೌಟುಂಬಿಕ ಕಾನೂನುಗಳಲ್ಲಿ ಮಹಿಳಾವಿರೋಧಿ ಅಂಶಗಳು ಉಳಿದುಕೊಂಡಿವೆ.
ಇದನ್ನು ಓದಿ ಮೋದಿಯನ್ನು ಹೊಗಳುವ ಅಮೆರಿಕ ಅಧ್ಯಕ್ಷರ ಅಸಲಿಯತ್ತೇನು? ಇಲ್ಲಿದೆ ನೋಡಿ…
ಭಾರತೀಯ ಕಾನೂನು ಮುಸ್ಲಿಂ ಪುರುಷನಿಗೆ ಬಹುಪತ್ನಿತ್ವವನ್ನು ಅನುಮತಿಸುತ್ತದೆ. ಈ ವ್ಯವಸ್ಥೆಯನ್ನು ಪಾಕಿಸ್ತಾನ, ಇಜಿಪ್ಟ್ ಹಾಗೂ ಅಲ್ಜೀರಿಯಾದಂತಹ ಅನೇಕ ಮಸ್ಲಿಂ ಬಾಹುಳ್ಯವುಳ್ಳ ದೇಶಗಳು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಅಂದಹಾಗೆ ತ್ರಿವಳಿ ತಲಾಕ್ನಂತೆಯೇ ಮುಸ್ಲಿಮರಲ್ಲಿ ಬಹುಪತ್ನಿತ್ವದ ವ್ಯವಸ್ಥೆಯೂ ಈಗ ಹೆಸರಿಗೆ ಮಾತ್ರ ಉಳಿದುಕೊಂಡಿದೆ. (ಹೆಚ್ಚುಕಡಿಮೆ ಹಿಂದೂಗಳಲ್ಲಿ ಎಷ್ಟು ಪ್ರಮಾಣದಲ್ಲಿದೆಯೋ ಅಷ್ಟೇ ಪ್ರಮಾಣದಲ್ಲಿ, ಆದರೆ ಹಿಂದೂಗಳಲ್ಲಿ ಈ ಪದ್ಧತಿ ಕಾನೂನುಬಾಹಿರವಾಗಿದೆ.) ಆದರೂ ಇದು ಅನ್ಯಾಯಪೂರ್ಣವಾಗಿದೆ. ನಮ್ಮಲ್ಲೂ ಈ ಕಾನೂನಲ್ಲಿ ಬದಲಾವಣೆ ಮಾಡಿ, ಇದನ್ನು ಸೀಮಿತಗೊಳಿಸಬೇಕಿದೆ. ಅದೇ ರೀತಿಯಲ್ಲಿ ಹಿಂದೂ ಸಮುದಾಯದ ಮೇಲೆ ಜಾರಿ ಆಗುವ ಕೌಟುಂಬಿಕ ಕಾನೂನುಗಳಲ್ಲಿ ಇಂದಿಗೂ ಹೆಣ್ಣುಮಕ್ಕಳಿಗೆ ಉತ್ತರಾಧಿಕಾರದ ಸಮಾನ ಹಕ್ಕುಗಳು ಸಂಪೂರ್ಣವಾಗಿ ಸಿಕ್ಕಿಲ್ಲ, ಬಾಲ್ಯ ವಿವಾಹವನ್ನು ರದ್ದುಗೊಳಿಸುವ ಹಕ್ಕುಗಳಿಲ್ಲ ಹಾಗೂ ಅವಿವಾಹಿತ ಹೆಣ್ಣುಮಕ್ಕಳನ್ನು ಅಪ್ರಾಪ್ತೆ ಎಂಬಂತೆ ಕಾಣಲಾಗುತ್ತದೆ. ಉತ್ತರಾಧಿಕಾರದ ವಿಷಯದಲ್ಲಿ ‘ಮಿತಾಕ್ಷರ’ ಕಾನೂನಿನ(ಹಿಂದೂ ಉತ್ತರಾಧಿಕಾರಕ್ಕೆ ಸಂಬಂಧಿಸಿದ ಕಾನೂನು) ಅಡಿಯಲ್ಲಿ ಪಿತ್ರಾರ್ಜಿತ ಆಸ್ತಿಯ ಕಾನೂನು ಬದಲಾಗಬೇಕು ಹಾಗೂ ತೆರಿಗೆಗೆ ‘ಹಿಂದೂ ಅವಿಭಾಜ್ಯ ಕುಟುಂಬ’ ನಂತಹ ವ್ಯವಸ್ಥೆಯ ಯಾವುದೇ ಔಚಿತ್ಯ ಉಳಿದುಕೊಂಡಿಲ್ಲ. ಸಿಖ್ ಸಮುದಾಯದ ಮೇಲೆ ಹಿಂದೂ ಕೌಟುಂಬಿಕ ಕಾನೂನು ಜಾರಿಗೊಳಿಸುವುದರ ಮೇಲೆ ಗಂಭೀರ ಆತಂಕಗಳು ಉಂಟಾಗಿವೆ. ಅದೇ ರೀತಿಯಲ್ಲಿ ಕ್ರೈಸ್ತ ಸಮುದಾಯದ ಕಾನೂನುಗಳಲ್ಲಿ ವಿಚ್ಛೇದನ ವಿರೋಧಿ ವ್ಯವಸ್ಥೆ ಮತ್ತು ದತ್ತು ಪಡೆಯುವ ಕಾನೂನುಗಳಲ್ಲಿ ಬದಲಾವಣೆ ಅವಶ್ಯಕತೆ ಇದೆ.
ಇದನ್ನು ಓದಿ ಮಣಿಪುರ ಹಿಂಸಾಚಾರ ರಾಷ್ಟ್ರದ ಆತ್ಮಸಾಕ್ಷಿಗಾದ ಆಳವಾದ ಗಾಯ: ಶಾಂತಿಗೆ ಮನವಿ ಮಾಡಿದ ಸೋನಿಯಾ ಗಾಂಧಿ
ಒಂದು ವೇಳೆ ಈ ವಿಷಯದಲ್ಲಿ ಸರಕಾರದ ನಿಯತ್ತು ನಿಷ್ಕಲ್ಮಶವಾಗಿದ್ದರೆ ಅದಕ್ಕೆ ಬಹುಸಂಖ್ಯಾತ ಸಮಾಜದ ಕೌಟುಂಬಿಕ ಕಾನೂನುಗಳನ್ನು ಅಲ್ಪಸಂಖ್ಯಾತರ ಮೇಲೆ ಹೇರುವ ಅದರ ಉದ್ದೇಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಪ್ರಶ್ನೆಯ ಮೇಲೆ ಒಂದು ಹೊಸ ವಿವಾದ ಸೃಷ್ಟಿಸುವ ಬದಲಿಗೆ ಮೋದಿ ಸರಕಾರ ತಾನೇ ನೇಮಿಸಿದ ಕಳೆದ ಕಾನೂನು ಆಯೋಗದ ಶಿಫಾರಸ್ಸನ್ನು ಸ್ವೀಕರಿಸಬೇಕು ಹಾಗೂ ಎಲ್ಲಾ ಸಮುದಾಯಗಳ ಕೌಟುಂಬಿಕ ಕಾನೂನಗಳಲ್ಲಿ ತಾರ್ಕಿಕವಾದ ಮತ್ತು ಸಂವಿಧಾನ ಸಮ್ಮತ ಬದಲಾವಣೆ ಮಾಡುವ ಕೆಲಸ ಆರಂಭಿಸಬೇಕು.

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ