ಒಂದು ದೇಶ-ಒಂದು ಚುನಾವಣೆ ಸರ್ವಾಧಿಕಾರಕ್ಕೆ ಮುನ್ನುಡಿಯೇ?

Date:

Advertisements

ಆರೆಸ್ಸೆಸ್‌ ಮತ್ತು ಭಾರತೀಯ ಜನತಾ ಪಕ್ಷದ ಮೂಲ ಮಂತ್ರವೇ “ಒಂದು ರಾಷ್ಟ್ರ ಹಿಂದು ರಾಷ್ಟ್ರ ಒಂದು ಪಕ್ಷ, ಒಬ್ಬನೇ ನಾಯಕ”. ಇದನ್ನು ಮರೆಮಾಚಲು ಒಂದು ದೇಶ ಒಂದು ಚುನಾವಣೆಯ ಮೂಲಕ ಶುದ್ಧ ರಾಜಕಾರಣ, ಬಿಗಿ ಆಡಳಿತ, ಕಡಿಮೆ ಖರ್ಚು, ಉತ್ಪಾದನೆಯ ನೆಪ ಹೇಳುತ್ತಿದ್ದಾರೆ.

ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಂಬಂಧ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಸಲ್ಲಿಸಿದ್ದ ವರದಿಗೆ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಸೆಪ್ಟಂಬರ್‌ 18ರಂದು ಅನುಮೋದನೆ ನೀಡಿದೆ. ‘ಒಂದು ರಾಷ್ಟ್ರ , ಒಂದು ಚುನಾವಣೆ’ ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಲ್ಲಿಸಿದ್ದ ವರದಿಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಸ್ವಾತಂತ್ರ್ಯ ಭಾರತದಲ್ಲಿ ಮೊಟ್ಟಮೊದಲಿಗೆ ಸ್ವಾಯತ್ತ ಸಂವಿಧಾನಿಕ ಚುನಾವಣಾ ಆಯೋಗವನ್ನು ಸ್ಥಾಪಿಸಿಕೊಂಡು ಅದರ ಮೂಲಕ ಒಂದೇ ನಾಣ್ಯದ ಮುಖಗಳಂತಿರುವ Free and Fair ಚುನಾವಣೆ ಮಾಡಿಕೊಂಡು ಬಂದಿದ್ದೇವೆ. ಆದರೂ ವೆಚ್ಚಮುಕ್ತ ಮತ್ತು ಭಯಮುಕ್ತ ಚುನಾವಣೆಗಳತ್ತ ಸಾಗಬೇಕಾದ ಅಗತ್ಯ ನಮ್ಮನ್ನು ಕಾಡುತ್ತಲೇ ಇದೆ.

Advertisements

ಒಂದು ರಾಷ್ಟ್ರ ಒಂದು ಚುನಾವಣೆಯ ಕುರಿತಾಗಿ ಇತಿಹಾಸದಲ್ಲಿ ಮೂಡಿದ ಹೆಜ್ಜೆಗಳು

1952ರಲ್ಲಿ ಪ್ರಥಮ ಬಾರಿಗೆ ಸಂಸತ್ ಮತ್ತು ರಾಜ್ಯ ವಿಧಾನ ಸಭೆಗಳಿಗೆ ನಡೆದ ಮಹಾ ಚುನಾವಣೆಯಲ್ಲಿ ಇಡೀ ಭಾರತ ಏಕಕಾಲಕ್ಕೆ ಚುನಾವಣೆಗಳನ್ನು ಎದುರಿಸಿ ಮಹಾ ಹಬ್ಬವನ್ನೇ ಆಚರಿಸಿ ವಿಜೃಂಭಿಸಿತ್ತು. 1952ರಿಂದ 1967ರವರೆಗೆ ಲೋಕಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಮತದಾನ ನಡೆಸಲಾಗಿತ್ತು. ಈ ಬಳಿಕ 1968 ಮತ್ತು 1969 ರಲ್ಲಿ ಹಲವು ವಿಧಾನ ಸಭೆಗಳ ಅವಧಿಪೂರ್ವ ವಿಸರ್ಜನೆ ಹಾಗೂ 1970ರ ನಂತರ 4, 6, 7, 9, 11, 12 ಮತ್ತು 13 ಲೋಕಸಭೆ ಅವಧಿ ಪೂರ್ವ ವಿಸರ್ಜನೆಯಾಗಿವೆ. ಲೋಕಸಭೆಯ ಅವಧಿಪೂರ್ವ ವಿಸರ್ಜನೆಯಿಂದಾಗಿ ಏಕಕಾಲದ ಚುನಾವಣೆ ಪ್ರಕ್ರಿಯೆಗೆ ತೆರೆ ಬಿದ್ದಿತು.

ನಂತರ ಭಾರತದ ಕಾನೂನು ಆಯೋಗವು 1999ರ ವರದಿಯಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಪ್ರಸ್ತಾಪ ಮಾಡಿತ್ತು. ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನ ಸಭೆ ಚುನಾವಣೆಗಳನ್ನು ನಡೆಸಲು ಪ್ರದಾನಿ ನರೇಂದ್ರ ಮೋದಿಯೂ 2014ರ ಲೋಕಸಭಾ ಚುನಾವಣೆಗೆ ಮುಂಚೆ ಪ್ರಸ್ತಾಪ ಮಾಡಿದ್ದರು. ಆದರೆ ಭಾರತದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಎಂಬುದು ಅತ್ಯಂತ ಸವಾಲಿನ ಕೆಲಸ. ಆದರೆ ಅದರ ಅನಿವಾರ್ಯತೆಯನ್ನು ಹೇಳಲು ಹೊರಟಿದೆ ಮೋದಿ ಸರಕಾರ. ಆ ಅನಿವಾರ್ಯತೆಗೆ ಅವರು ಕೊಡುವ ಕಾರಣಗಳಿವು.

  • ಮೊದಲನೆಯದಾಗಿ ಚುನಾವಣಾ ವೆಚ್ಚ
  • ಎರಡನೆಯದಾಗಿ ರಾಜ್ಯ ಮತ್ತು ದೇಶದಲ್ಲಿ ಪದೇ ಪದೇ ಉದ್ಭವಿಸುವ ಚುನಾವಣೆಗಳಿಂದಾಗಿ ತಿಂಗಳುಗಟ್ಟಲೆ ಮಾದರಿ ನೀತಿ ಸಂಹಿತೆ ಅನ್ವಯಿಸುವ ಕಾರಣ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಲಾಗದ ಪರಿಸ್ಥಿತಿ ಹಾಗೂ ಆಡಳಿತ ಯಂತ್ರದ ವೇಗ ಕುಂಠಿತವಾಗುವ ಸಮಸ್ಯೆ
  • ಮೂರನೆಯದಾಗಿ ತಿಂಗಳುಗಟ್ಟಲೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ನೈಜ ಸಮಸ್ಯೆಗಳಿಗೆ ಸ್ಪಂದಿಸದೆ ಚುನಾವಣೆ ಕರ್ತವ್ಯಗಳಲ್ಲಿ ನಿರತರಾಗುತ್ತಿದ್ದಾರೆ.

ಈ ಎಲ್ಲ ಕಾರಣಗಳಿಂದಾಗಿ ಒಂದು ಬಾರಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಸಿದರೆ ಮಾನವ ಶ್ರಮ, ಸಮಯ, ಮತ್ತು ಭಾರಿ ಮೊತ್ತದ ಹಣ ಉಳಿತಾಯವಾಗುತ್ತದೆ ಎನ್ನುತ್ತಾರೆ ಮೋದಿ ಸರಕಾರ. ಆದರೆ ಇದು ಕೇಳೋದಕ್ಕೆ ಉತ್ತಮವಾಗಿದೆಯಲ್ಲ ಅಂತ ಯಾರಿಗೇ ಆದರೂ ಅನ್ನಿಸದೇ ಇರದು. ಆದರೆ ಇದರ ಹಿಂದಿನ ರಾಜಕೀಯ ಉದ್ದೇಶ ಬೇರೆನೆ ಇದೆ. ಯಾಕಂದ್ರೆ ಒಂದೇ ಚುನಾವಣೆ ನಡೆಯ ಬೇಕಾದರೆ ಮುಖ್ಯವಾಗಿ ಅಗತ್ಯವಾದ ಸಂವಿಧಾನಿಕ ತಿದ್ದುಪಡಿಗಳು ಆಗಲೇ ಬೇಕಿದೆ. ಏಕಕಾಲದಲ್ಲಿ ಚುನಾವಣೆ ನೀತಿಯು ಸಾಕಾರಗೊಳ್ಳಲು ಸಂವಿಧಾನದ ಕನಿಷ್ಠ ಐದು ವಿಧಿಗಳನ್ನು ತಿದ್ದುಪಡಿ ಮಾಡಲೇಬೇಕು. ಅದರಲ್ಲೂ ಲೋಕಸಭೆ ಮತ್ತು ವಿಧಾನಸಭೆಗಳ ಅವಧಿ ಕಡಿತ ಹಾಗೂ ವಿಸರ್ಜನೆಗೆ ಸಂಬಂಧಿಸಿದ ತಿದ್ದುಪಡಿಗಳು ಅನಿವಾರ್ಯವಾಗಿವೆ. ಆ ವಿಧಿಗಳು ಯಾವುದೆಂದರೆ.

ವಿಧಿ 83 (2) – ಸಂಸತ್ತಿನ ಸದನಗಳ ಅವಧಿಯನ್ನು ವಿಸ್ತರಿಸುವ ಇಲ್ಲವೆ ಕಡಿತಗೊಳಿಸುವುದು.
ವಿಧಿ 85 (2) (ಬಿ) – ರಾಷ್ಟ್ರಪತಿಯವರಿಂದ ಲೋಕಸಭೆಯ ವಿಸರ್ಜನೆ ಮಾಡುವ ತಿದ್ದುಪಡಿ.
ವಿಧಿ 172 (1) ರಾಜ್ಯ ವಿಧಾನಸಭೆಗಳ ಅವಧಿ ವಿಸ್ತರಿಸುವ ಅಥವಾ ಕಡಿತಗೊಳಿಸುವುದು.
ವಿಧಿ 174 (2) (ಬಿ) – ರಾಜ್ಯ ವಿಧಾನಸಭೆಗಳ ವಿಸರ್ಜನೆ
ವಿಧಿ 356 ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ವಿಧಿಸುವುದು.
ಇಲ್ಲಿ ಮುಖ್ಯವಾಗಿ ಜನಪ್ರತಿನಿಧಿಗಳ ಕಾಯ್ದೆ – 1951ರ ಕಾನೂನನ್ನು ಅಮೂಲಾಗ್ರವಾಗಿ ಬದಲಾಯಿಸಬೇಕಾಗಿದೆ.

ಇಲ್ಲಿ ಒಂದು ವೇಳೆ ಏಕಕಾಲಕ್ಕೆ ಚುನಾವಣೆಯನ್ನೆದುರಿಸಿ ಅಸ್ತಿತ್ವಕ್ಕೆ ಬಂದ ಸರ್ಕಾರಗಳಲ್ಲಿ ಅಸ್ಥಿರತೆ ಉಂಟಾಗಿ ಬಿದ್ದುಹೋಗುವ ಸಂಭವ ಉಂಟಾದರೆ ಎಷ್ಟು ವರ್ಷಕ್ಕಿಂತ ಕಡಿಮೆ ಅವಧಿ ಉಳಿದಿರುವ ವಿಧಾನ ಸಭೆಗಳಿಗೆ ರಾಷ್ಟ್ರಪತಿ ಆಡಳಿತ ವಿಧಿಸುವುದು, ಎಷ್ಟು ವರ್ಷಕ್ಕಿಂತ ಹೆಚ್ಚು ಅವಧಿ ಇರುವಾಗ ಸರ್ಕಾರ ವಿಸರ್ಜನೆಯಾದರೆ ಮಧ್ಯಂತರ ಚುನಾವಣೆ ಮಾಡುವಂತೆ ಸಂವಿಧಾನ ತಿದ್ದುಪಡಿಗೆ ಚರ್ಚಿಸಿ ತೀರ್ಮಾನಿಸಬೇಕಾಗಿದೆ. ಇದುವೇ ವಿವಾದಕ್ಕೆಡೆ ಮಾಡುವ ಪ್ರಮುಖ ಅಂಶವಾಗಿದೆ.

ಈಗಿನ ವ್ಯವಸ್ಥೆಯಲ್ಲಿ ಆಳುವ NDA ಸರ್ಕಾರಕ್ಕೆ ಸಂವಿಧಾನ ತಿದ್ದುಪಡಿಗೆ ಬೇಕಾದಷ್ಟು ಸದಸ್ಯರ ಸಂಖ್ಯೆಯ ಕೊರತೆ ಇದೆ. ಇದನ್ನು ಕಾರ್ಯರೂಪಕ್ಕೆ ತರುವುದು ಕಷ್ಟವಿದೆ. ಇವೆಲ್ಲವೂ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಗೊತ್ತಿದೆ. ಗೊತ್ತಿದ್ದೂ ದೇಶದ ಜನರಲ್ಲಿ ಗೊಂದಲ ಹುಟ್ಟುಹಾಕಲು, ಗಮನ ಬೇರೆಡೆಗೆ ಸೆಳೆಯಲು ಹಾಗೂ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಒಂದು ದೇಶ ಒಂದು ಚುನಾವಣೆಯನ್ನು ಮುನ್ನಲೆಗೆ ತರಲಾಗ್ತಿದೆ ಎಂಬುದೇ ವಿರೋಧ ಪಕ್ಷಗಳ ಅಭಿಪ್ರಾಯವಾಗಿದೆ.

ಅಷ್ಟಕ್ಕೂ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಬೇರೆ ಬೇರೆ ಕಾಲದಲ್ಲಿ ಚುನಾವಣೆ ಆಗುವುದು ನಮ್ಮ ಸಾಂವಿಧಾನಿಕ ಅಡಿಪಾಯದ ಎರಡು ಮೂಲಭೂತ ತತ್ವಗಳಾದ ಸಂಸದೀಯ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ಒತ್ತುಕೊಡುವಂಥದ್ದು ಆ ಮೂಲಕ ದೇಶದ ಹಲವು ರಾಜ್ಯಗಳು, ಆ ರಾಜ್ಯಗಳ ಭಾಷೆ, ಸಂಸ್ಕೃತಿ ವೈವಿಧ್ಯತೆ, ಪ್ರಾದೇಶಿಕತೆ, ಚುನಾವಣೆಯ ಹಬ್ಬದಲ್ಲಿ ಸಣ್ಣ ಪುಟ್ಟ ಪಕ್ಷಗಳು ಪಾಲ್ಗೊಳ್ಳುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಬೆಲೆ ಬರುತ್ತಿತ್ತು ಮತ್ತಷ್ಟು ಗಟ್ಟಿಗೊಳ್ಳುತ್ತಿತ್ತು. ಆದರೆ, ಈಗ ಪ್ರಾದೇಶಿಕ ಅಸ್ಮಿತೆಯನ್ನೇ ಅಳಿಸಿ: ಅಲ್ಲಿ ಒಂದು ದೇಶ ಒಂದೇ ಪಕ್ಷ, ಒಬ್ಬನೇ ನಾಯಕ ಎನ್ನುವುದನ್ನು ಬಲವಂತವಾಗಿ ಹೇರುವ, ಅನಿವಾರ್ಯವಾಗಿ ಒಪ್ಪಿಕೊಳ್ಳುವ ಸ್ಥಿತಿಗೆ ದೂಡಲಾಗುತ್ತಿದೆ. ಅದು ಪ್ರಜಾಪ್ರಭುತ್ವವನ್ನು ಮಣ್ಣು ಮಾಡುತ್ತದೆ. ಸರ್ವಾಧಿಕಾರಿಯನ್ನು ಪ್ರತಿಷ್ಠಾಪಿಸುತ್ತದೆ.

ಒಂದು ಚುನಾವಣೆ
ರಾಮನಾಥ ಕೋವಿಂದ್‌

ಆರೆಸ್ಸೆಸ್‌ ಮತ್ತು ಭಾರತೀಯ ಜನತಾ ಪಕ್ಷದ ಮೂಲ ಮಂತ್ರವೇ ಒಂದು ರಾಷ್ಟ್ರ ಹಿಂದು ರಾಷ್ಟ್ರ ಒಂದು ಪಕ್ಷ, ಒಬ್ಬನೇ ನಾಯಕ. ಇದನ್ನು ಮರೆಮಾಚಲು ಒಂದು ದೇಶ ಒಂದು ಚುನಾವಣೆಯ ಮೂಲಕ ಶುದ್ಧ ರಾಜಕಾರಣ, ಬಿಗಿ ಆಡಳಿತ, ಖರ್ಚು, ಉತ್ಪಾದನೆಯ ನೆಪ ಹೇಳುತ್ತಿದ್ದಾರೆ. ಅಷ್ಟಕ್ಕೂ ಭಾರತ ಎಂದರೆ, ಹಲವು ಧರ್ಮಗಳ, ನೂರಾರು ಭಾಷೆಗಳ, ಸಾವಿರಾರು ಜಾತಿಗಳ, ಭಿನ್ನ ಆಚಾರ-ವಿಚಾರಗಳ, ವೈವಿಧ್ಯಮಯ ಬದುಕಿನ ದೇಶ. ಇದನ್ನೇ ಉಸಿರಾಗಿಸಿಕೊಂಡಿರುವರು ಭಾರತೀಯರು. ಮೋದಿ – ಶಾಗಳ ಕುಟಿಲ ರಾಜಕಾರಣಕ್ಕೆ ಬಗ್ಗದೆ, ರಾಜ್ಯಗಳ ಸ್ವಾಯತ್ತತೆ, ವಿಕೇಂದ್ರೀಕರಣ, ಪ್ರಾದೇಶೀಕರಣಗಳನ್ನು ಗಟ್ಟಿಗೊಳಿಸುವತ್ತ ಹೆಜ್ಜೆ ಹಾಕಬೇಕಿದೆ. ಒಕ್ಕೂಟ ವ್ಯವಸ್ಥೆಯನ್ನು ಧ್ವಂಸಗೊಳಿಸುವ ವಿಚ್ಛಿದ್ರಕಾರಿಗಳ ಷಡ್ಯಂತ್ರವನ್ನು ಸೋಲಿಸಲೇಬೇಕಿದೆ.

ಒಂದೇ ಚುನಾವಣೆ ಬಗ್ಗೆ ಭಾರತದ ಪ್ರಮುಖ ಚುನಾವಣಾ ತಜ್ಞರಾದ ಯೋಗೇಂದ್ರ ಯಾದವ್‌ ಹೇಳ್ತಾರೆ,”ಭಾರತವು ಒಂದು ಕಣ್ಕಟ್ಟುಗಳ ದೇಶವಾಗಿದೆ. ಈ ಸತ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗಿಂತ ಚೆನ್ನಾಗಿ ಇನ್ಯಾರೂ ಅರಿತಿಲ್ಲ. ದೇಶದಲ್ಲಿ ಬೆಲೆ ಏರಿಕೆ ಇರಲಿ, ಅದಾನಿಯ ಹಗರಣವಿರಲಿ ಅಥವಾ ನಮ್ಮ ಭೂಮಿಯ ಮೇಲೆ ಚೀನಾದ ಆಕ್ರಮಣವಿರಲಿ- ಇವುಗಳ ಬಗ್ಗೆ ನೀವು ಚಿಂತಿಸಬೇಡಿ; ಒಂದು ಹೊಸ ಕಣ್ಕಟ್ಟನ್ನು ತೇಲಿಬಿಡಿ: ʼಒಂದು ದೇಶ ಒಂದು ಚುನಾವಣೆʼ. ಟಿವಿ ಚಾನೆಲ್‌ಗಳಿಗೆ ಸೂಚನೆ ನೀಡಿಬಿಡಿ. ಜನರು ತಮ್ಮ ಕಷ್ಟಗಳನ್ನು ಮರೆತು ಹೊಸ ನಾಟಕ ನೋಡಲು ಶುರುಮಾಡುತ್ತಾರೆ. ಅಲ್ಲಿಗೆ ಆಟವೂ ಮುಗೀತು, ವೋಟು ಬ್ಯಾಂಕು ಆಯಿತು. ಈ ಕಣ್ಕಟ್ಟಿನ ಅಸಲಿಯತ್ತನ್ನು ಅರಿಯಲು, ಮೋದಿಯ ಬಣ್ಣಬಣ್ಣದ ಲಕೋಟೆಯನ್ನು ತೆರೆದು ಅದರಲ್ಲಿರುವ ಎಂಟು ಭ್ರಾಂತಿಗಳನ್ನು ಗುರುತಿಸಿ, ಅದರ ಹಿಂದಿರುವ ಸಂಪೂರ್ಣ ಸತ್ಯವನ್ನು ಅರಿಯುವ ಅವಶ್ಯಕತೆ ಇದೆ ಎನ್ನುತ್ತಾರೆ.

ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್

ಮೊದಲ ಭ್ರಾಂತಿ: “ಒಂದು ದೇಶ ಒಂದು ಚುನಾವಣೆ” ಎಂಬುದು ಒಂದು ಸಾಧಾರಣವಾದ ಆಡಳಿತಾತ್ಮಕ ಸುಧಾರಣೆಯಾಗಿದ್ದು, ಅದು ದೇಶದ ಚುನಾವಣಾ ಕ್ಯಾಲೆಂಡರ್‌ನಲ್ಲಿರುವ ಕೊರತೆಗಳನ್ನು ನೀಗಿಸಲು ಇರುವ ಪರಿಹಾರವಾಗಿದೆ. ಆದರೆ ವಾಸ್ತವ ಅದಲ್ಲ ಸ್ವಾಮಿ, ಇದು ಯಾವುದೇ ಸಣ್ಣಪುಟ್ಟ ಆಡಳಿತಾತ್ಮಕ ಸುಧಾರಣೆ ಅಲ್ಲ. ಸದಾಕಾಲ ಲೋಕಸಭೆಯೊಂದಿಗೆ ವಿಧಾನಸಭೆಗಳಿಗೆ ಚುನಾವಣೆ ನಡೆಸಬೇಕಾದರೆ ನಮ್ಮ ಸಂವಿಧಾನದ ಅಡಿಪಾಯದ ಮೂಲರೂಪವನ್ನೇ ಬದಲಿಸಬೇಕಾಗುತ್ತದೆ. ಇದು ಸಂವಿಧಾನದ ಬಹು ದೊಡ್ಡ ತಿದ್ದುಪಡಿಯಾಗುತ್ತದೆ.

ಎರಡನೆಯ ಭ್ರಾಂತಿ: ದೇಶದ ಏಕತೆ ಮತ್ತು ಚುನಾವಣೆಗಳಲ್ಲಿ ಏಕರೂಪತೆ ತರಲು ಇದೊಂದು ಸ್ವಾಭಾವಿಕ ಹೆಜ್ಜೆಯಾಗಿದೆ ಎನ್ನುತ್ತಾರೆ. ಆದರೆ ಇಲ್ಲಿರೋ ವಾಸ್ತವ ಅದಲ್ಲ, ಇಲ್ಲಿ ’ಒಂದು ಚುನಾವಣೆ’ಯ ಅರ್ಥ ಒಂದೇ ಸಮಯಕ್ಕೆ ಚುನಾವಣೆ ಎಂದು. ಇದಕ್ಕೂ ಏಕತೆಗೂ ಅಥವಾ ಏಕರೂಪತೆಗೂ ಯಾವ ಸಂಬಂಧವೂ ಇಲ್ಲ. ಪಂಚಾಯತಿ ಮತ್ತು ನಗರ ಪಾಲಿಕೆಗಳ ಚುನಾವಣೆಗಳಲ್ಲಿ ಬಳಕೆಯಾಗುವ ಮತದಾರರ ಪಟ್ಟಿ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬಳಕೆಯಾಗುವ ಪಟ್ಟಿ ಬೇರೆಯಾಗಿದ್ದು, ಅದನ್ನು ಒಂದೇ ಆಗಿಸಬೇಕಿದೆ. ವಾಸ್ತವದಲ್ಲಿ ದೇಶದಲ್ಲಿ ಚುನಾವಣಾ ಏಕರೂಪತೆಗೆ ಅವಶ್ಯಕತೆ ಇರುವುದು ಇಲ್ಲಿ. ಆದರೆ ಈ ಪ್ರಸ್ತಾಪದಲ್ಲಿ ಈ ಅವಶ್ಯಕ ಏಕರೂಪತೆಗಾಗಿ ಯಾವ ಸ್ಥಾನವೂ ಕಂಡುಬಂದಿಲ್ಲ.

ಮೂರನೆಯ ಭ್ರಾಂತಿ: ಇದೊಂದು ಸಾರ್ವತ್ರಿಕ ಪ್ರಸ್ತಾಪವಾಗಿದ್ದು, ಇದರ ಬಗ್ಗೆ ದೀರ್ಘಕಾಲದಿಂದ ರಾಷ್ಟ್ರೀಯ ಒಮ್ಮತಕ್ಕೆ ಬರಲಾಗಿದೆ ಎನ್ನುತ್ತಾರೆ. ಆದರೆ ವಾಸ್ತವ ಹೇಳುತ್ತೆ ಈ ಪ್ರಸ್ತಾಪವನ್ನು ಕಳೆದ ನಾಲ್ಕು ದಶಕಗಳಲ್ಲಿ ಪದೇಪದೇ ಮುಂದಿಡಲಾಗಿದೆ. ಕಾಲಕಾಲಕ್ಕೆ ಹಲವು ಸರಕಾರಿ ಸಮಿತಿಗಳು ಹಾಗೂ ಚುನಾವಣಾ ಆಯೋಗವು ಇದರ ಸಮರ್ಥನೆ ಮಾಡಿವೆ. ಆದರೆ, ಈ ಬಾರಿಯ ರೀತಿಯಲ್ಲಿಯೇ, ಅನೇಕ ಪಕ್ಷಗಳು ಮತ್ತು ವಿಶೇಷಜ್ಞರು ಇದನ್ನು ಆಗಲೂ ವಿರೋಧಿಸಿದ್ದಾರೆ. ಇಷ್ಟು ದೊಡ್ಡ ಸಾಂವಿಧಾನಿಕ ಬದಲಾವಣೆಯನ್ನು ಸರ್ವಪಕ್ಷಗಳ ಒಮ್ಮತವಿಲ್ಲದೇ ಅನುಷ್ಠಾನಗೊಳಿಸುವುದು ಪ್ರಜಾಪ್ರಭುತ್ವಕ್ಕೆ ತುಂಬಾನೆ ಅಪಾಯಕಾರಿಯಾಗಿದೆ.

ನಾಲ್ಕನೆಯ ಭ್ರಾಂತಿ: ಸಂವಿಧಾನ ಅನುಷ್ಠಾನಗೊಂಡ ನಂತರ ಆರಂಭದಲ್ಲಿ “ಒಂದು ದೇಶ ಒಂದು ಚುನಾವಣೆ”ಯ ಆಧಾರದ ಮೇಲೆ ಚುನಾವಣೆ ನಡೆಯುತ್ತಿದ್ದವು. ನಂತರ ಚುನಾವಣಾ ಚಕ್ರ ಬೇರೆ ಬೇರೆಯಾಗಿದ್ದ ಕಾರಣದಿಂದ ವಿಕೃತಿ ಹುಟ್ಟಿಕೊಂಡಿದೆ ಎಂದರು. ಆದರೆ ಅದು ಸತ್ಯ ಅಲ್ಲ, ಲೋಕಸಭೆ ಮತ್ತು ವಿಧಾನಸಭೆಗಳಿಗೆ ಬೇರೆ ಬೇರೆ ಕಾಲದಲ್ಲಿ ಚುನಾವಣೆ ಆಗುವುದು ಯಾವ ವಿಕೃತಿಯೂ ಅಲ್ಲ. ಅದರ ಬದಲಿಗೆ ನಮ್ಮ ಸಾಂವಿಧಾನಿಕ ಅಡಿಪಾಯದ ಎರಡು ಮೂಲಭೂತ ತತ್ವಗಳ ಅಂದರೆ ಸಂಸದೀಯ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯ ಸ್ವಾಭಾವಿಕ ಪರಿಣಾಮವಾಗಿದೆ. ಆರಂಭದಲ್ಲಿ ಎರಡೂ ಚುನಾವಣೆಗಳು ಒಂದೇ ಕಾಲಕ್ಕೆ ಆಗಲೇಬೇಕಿತ್ತು. ಏಕೆಂದರೆ, ಆರಂಭದಲ್ಲಿ ಏಕಕಾಲಕ್ಕೆ ಆಗುವುದು ಸ್ವಾಭಾವಿಕವಾಗಿತ್ತು. ಸಂವಿಧಾನದ ರಚನಾಕಾರರು ಕೂಡಾ ಇದನ್ನು ಅರಿತಿದ್ದರು. ಚಿಕಿತ್ಸೆ ನೀಡಬೇಕಾದಂತಹ ಯಾವ ವಿಕೃತಿಯೂ ಇದರಲ್ಲಿ ಇಲ್ಲ.

ಐದನೆಯ ಭ್ರಾಂತಿ: ‌ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ಸರಕಾರದ ಚುನಾವಣಾ ವೆಚ್ಚ ತುಂಬಾ ಕಡಿಮೆಯಾಗಲಿದೆ ಎಂಬುದಾಗಿದೆ. ಇಲ್ಲೂ ವಾಸ್ತವ ಏನಂದ್ರೆ ಸ್ವಾಭಾವಿಕವಾಗಿಯೇ ಬೇರೆ ಬೇರೆ ಚುನಾವಣೆ ನಡೆಸುವುದರ ಬದಲಿಗೆ ಒಂದೇ ಬಾರಿ ಚುನಾವಣೆ ನಡೆಸುವುದರಿಂದ ಸರಕಾರಿ ವೆಚ್ಚದಲ್ಲಿ ಉಳಿತಾಯವಾಗುವುದು. ಆದರೆ ಪ್ರಶ್ನೆ ಇರುವುದು, ಎಷ್ಟುಉಳಿತಾಯ ಆಗುತ್ತೆ ಎಂಬುದು. ಈ ರೀತಿಯಲ್ಲಿ ಚುನಾವಣೆ ನಡೆಸುವುದರಿಂದ ಹೆಚ್ಚೆಂದರೆ ಐದು ವರ್ಷಗಳಲ್ಲಿ 5,000 ಕೋಟಿ ಉಳಿತಾಯ ಆಗಬಲ್ಲದು. ಈ ಮೊತ್ತ ಮುಂದಿನ ಐದು ವರ್ಷಗಳ ಕೇಂದ್ರೀಯ ಬಜೆಟ್‌ನ 0.02%ಆಗಲಿದೆ. ಅಂದರೆ 100 ರೂಪಾಯಿಗಳಲ್ಲಿ ಐದು ಪೈಸೆ ಬಳಸಿದಂತೆ. ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣೆಗಳಲ್ಲಿ ಎಷ್ಟು ಖರ್ಚು ಮಾಡುತ್ತಾರೋ, ಅದನ್ನು ನೋಡಿದರೆ. ಈ ಸರಕಾರಿ ವೆಚ್ಚವು ಏನೇನೂ ಅಲ್ಲ.

ಆರನೆಯ ಭ್ರಾಂತಿ: ಪದೇಪದೇ ಚುನಾವಣೆ ನಡೆಸುವಾಗ ನೀತಿಸಂಹಿತೆ ಜಾರಿಯಾಗುವುದರಿಂದ ಸರಕಾರಿ ಕೆಲಸಗಳು ನಿಂತುಕೊಳ್ಳುತ್ತವೆ, ಸರ್ಕಾರಗಳ ಮೇಲೆ ಸದಾಕಾಲ ಚುನಾವಣೆಗಳ ಒತ್ತಡ ಇರುತ್ತದೆ. ಈ ಸಮಸ್ಯೆಗೆ ಇದೊಂದೇ ಪರಿಹಾರ ಎನ್ನುವುದು. ಇದರಲ್ಲಿ ಮಾತ್ರ ಒಂದಿಷ್ಟು ಸತ್ಯಾಂಶವಿದೆ. ಆದರೆ ಈ ಸಮಸ್ಯೆ ಪರಿಹರಿಸಲು ಇನ್ನೂ ಸುಲಭವಾದ ಮಾರ್ಗಗಳಿವೆ. ಸದ್ಯಕ್ಕೆ ಐದು ವರ್ಷಗಳಲ್ಲಿ ಕನಿಷ್ಠ ಎಂಟು ಬಾರಿ ದೊಡ್ಡ ರಾಜ್ಯಗಳ ಚುನಾವಣೆ ನಡೆಯುತ್ತವೆ. ಇದನ್ನು ಕಡಿಮೆ ಮಾಡಲು, ಒಂದು ವರ್ಷದಲ್ಲಿ ಬರುವ ಎಲ್ಲಾ ರಾಜ್ಯಗಳ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಬಹುದಾಗಿದೆ. ಆಯಾ ರಾಜ್ಯಗಳಿಗೆ ವಿಶೇಷ ಸಂಬಂಧವಿಲ್ಲದೇ ಇದ್ದರೆ ಕೇಂದ್ರ ಸರ್ಕಾರದ ಎಲ್ಲಾ ತೀರ್ಮಾನಗಳನ್ನು ನಿಲ್ಲಿಸದೇ ಇರುವಂತೆ ನೀತಿ ಸಂಹಿತೆಯಲ್ಲಿ ತಿದ್ದುಪಡಿ ಮಾಡಬೇಕಿದೆ. ರಾಜ್ಯ ಚುನಾವಣೆಗಳನ್ನು ಹಲವಾರು ಸುತ್ತುಗಳಲ್ಲಿ ಮಾಡುವುದರ ಬದಲಿಗೆ ಒಂದು ಅಥವಾ ಎರಡು ಸುತ್ತಿನಲ್ಲಿ ಮಾಡುವುದರಿಂದ ಚುನಾವಣೆಯ ಅವಧಿಯನ್ನು ಕಡಿಮೆ ಮಾಡಬಹುದಾಗಿದೆ.

ಏಳನೆಯ ಭ್ರಾಂತಿ: ಏನಂದ್ರೆ ಈ ಪ್ರಸ್ತಾಪದಲ್ಲಿ ಹೆಚ್ಚಿನ ಲಾಭ ಇಲ್ಲವೆಂದಿಟ್ಟುಕೊಂಡರೂ, ಯಾವುದೇ ನಷ್ಟವೂ ಇಲ್ಲಎಂಬುದು. ಆದರೆ ವಾಸ್ತವದಲ್ಲಿ ನಷ್ಟ ಇದೆ. ಅದೇನೆಂದರೆ, ಇದರಿಂದ ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯ ಕುಸಿದುಬೀಳುತ್ತದೆ. ಒಂದುವೇಳೆ ಯಾವುದೋ ರಾಜ್ಯದಲ್ಲಿ ಸರಕಾರವು ವಿಧಾನಸಭೆಯಲ್ಲಿ ಬಹುಮತ ವಿಶ್ವಾಸ ಕಳೆದುಕೊಳ್ಳುತ್ತದೆ ಹಾಗೂ ಇತರ ಯಾವ ಪಕ್ಷಕ್ಕೂ ಬಹುಮತ ಇಲ್ಲದಿರುವ ಸಂದರ್ಭದಲ್ಲಿ ಏನಾಗುವುದು? ಬಜೆಟ್ ಜಾರಿಗೊಳಿಸಲಾಗದ, ದುಡ್ಡು ಖರ್ಚು ಮಾಡುವ ಅಧಿಕಾರವಿಲ್ಲದ ಆ ಸರಕಾರವು ಐದು ವರ್ಷ ಮುಂದುವರಿಯುವಂತೆ ಮಾಡಲಾಗುವುದೇ? ಅಥವಾ ವಿಧಾನಸಭೆಯನ್ನು ವಿಸರ್ಜಿಸಿ, ಹಲವಾರು ವರ್ಷಗಳ ತನಕ ರಾಜ್ಯಪಾಲರ ಆಳ್ವಕೆ ನಡೆಯುವುದೇ? ಹಾಗೂ ಒಂದುವೇಳೆ ಈ ರೀತಿ ಕೇಂದ್ರದಲ್ಲಿ ಆದರೆ ಏನಾಗುವುದು? ಇದು ಪ್ರಜಾಪ್ರಭುತ್ವದೊಂದಿಗೆ ಆಟವಾಡಿದಂತೆ ಆಗುವುದು.

ಎಂಟನೆಯ ಭ್ರಾಂತಿ: ಇದು ಚುನಾವಣಾ ಸುಧಾರಣೆಯ ನಿಜವಾದ ಪ್ರಯತ್ನವಾಗಿದೆ. ಇದಕ್ಕೂ ರಾಜಕೀಯಕ್ಕೂ ಯಾವ ಸಂಬಂಧವೂ ಇಲ್ಲಎಂಬುದು. ವಾಸ್ತವ ಅದಲ್ಲ ಯಾಕಂದ್ರೆ ಒಂದು ವೇಳೆ ರಾಜಕೀಯಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದಲ್ಲಿ, ಕಳೆದ 25 ವರ್ಷಗಳಲ್ಲಿ ಪದೇ ಪದೇ ಕೇವಲ ಬಿಜೆಪಿ ಮತ್ತು ಅದರ ನಾಯಕರೇ ಈ ಪ್ರಸ್ತಾಪದ ವಕಾಲತ್ತು ಮಾಡುತ್ತಿರುವುದು ಏಕೆ? ಒಂದು ವೇಳೆ ಲೋಕಸಭೆಗೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆದರೆ ರಾಷ್ಟ್ರೀಯ ಚುನಾವಣೆಯ ವಾತಾವರಣ ಸೃಷ್ಟಿಯಾಗಿ, ವಿಧಾನಸಭೆಯ ಚುನಾವಣೆಯಲ್ಲಿಯೂ ದೊಡ್ಡ ರಾಷ್ಟ್ರೀಯ ಪಕ್ಷಕ್ಕೆ ಹೆಚ್ಚಿನ ಮತಗಳು ಸಿಗುತ್ತವೆ ಎಂಬುದು ಸ್ವಾಭಾವಿಕ ಹಾಗೂ ಇಂದಿನ ಸಂದರ್ಭದಲ್ಲಿ ಹೆಚ್ಚಿನ ಲಾಭ ಬಿಜೆಪಿಗೆ ಆಗುತ್ತದೆ ಎಂಬುದು ಸಹಜವಾಗಿದೆ. ಅಲ್ಲದೇ ಯೋಚಿಸಿ, ಒಂದುವೇಳೆ ಈ ಪ್ರಸ್ತಾಪದ ಹಿಂದಿನ ಉದ್ದೇಶ ಶುದ್ಧ ರಾಜಕೀಯ ಸುಧಾರಣೆಯೇ ಆಗಿದ್ದರೆ, 2019ರಲ್ಲಿ ಪ್ರಧಾನಮಂತ್ರಿ ಇದರ ವಕಾಲತ್ತು ವಹಿಸಿದ್ದಾಗ ಈ ಸಮಿತಿಯನ್ನು ಏಕೆ ರಚಿಸಲಿಲ್ಲ? ಲೋಕಸಭೆ ಚುನಾವಣೆಗೆ ಕೇವಲ ಎಂಟು ತಿಂಗಳ ಮುನ್ನ ಹಾಗೂ ಸಂಸತ್ತಿನ ಪ್ರಸ್ತಾಪಿತ ವಿಶೇಷ ಅಧಿವೇಶನಕ್ಕೆ 20 ದಿನಗಳ ಮುನ್ನ ದಿಢೀರನೇ ಒಂದು ಹೈ-ಪವರ್ ಸಮಿತಿ ರಚಿಸಲಾಗಿ, ಅದರಲ್ಲಿಯೂ ರಾಜ್ಯಸಭೆಯ ವಿರೋಧಪಕ್ಷಗಳನ್ನು ಹೊರಗಿಟ್ಟು, ಹಳೆಯ ಜಿ-ಹುಜೂರ್‌ಗಳನ್ನು ಅಂದರೆ ಆಜ್ಞೆಯನ್ನು ಪಾಲಿಸುವವರನ್ನಷ್ಟೇ ತುಂಬಿಸಲಾಗಿ, ರಾತ್ರೋರಾತ್ರಿ ಸಮಿತಿಯ ಕೆಲಸ ಶುರುಮಾಡಲಾಗಿದೆ. ಇಷ್ಟಾದ ಮೇಲೆ ಇದರ ಹಿಂದೆ ಯಾವುದೇ ರಾಜಕೀಯ ಇಲ್ಲ ಎನ್ನುತ್ತೀರಿ, ಇದರಿಂದ ಇದೊಂದು ಪ್ರಜಾಪ್ರಭುತ್ವಕ್ಕೆ ಎಸಗುವ ಮಂಕು ಭೂದಿಯ ಪ್ರಯೋಗ ಅಷ್ಟೇ.

IMG 20240918 WA0010
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X