ಮದ್ಯನಿಷೇಧದ ಬಗ್ಗೆ ರಾಷ್ಟ್ರೀಯ ಚರ್ಚೆಯು ಎರಡು ರೀತಿಯ ಭ್ರಮೆಯ ಆಲೋಚನೆಗಳಿಗೆ ಬಲಿಯಾಗಿರುತ್ತದೆ. ಒಂದೆಡೆ ಸಂಪೂರ್ಣ ಮದ್ಯನಿಷೇಧದ ಬೆಂಬಲಿಗರು ಇದನ್ನು ಒಂದು ನೈತಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಶ್ನೆಯ ರೂಪದಲ್ಲಿ ಮಂಡಿಸುತ್ತಾರೆ. ಇನ್ನೊಂದೆಡೆ ಸರಕಾರದಿಂದ ಮದ್ಯನಿಷೇಧದ ವಿರೋಧ ಮಾಡುವ ಜನರಿದ್ದಾರೆ. ಅವರು ಇದನ್ನು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಮತ್ತು ಆಧುನಿಕವಲ್ಲದ ಸಾಂಪ್ರದಾಯಿಕ ಚಿಂತನೆ ಎಂದು ಕರೆಯುತ್ತಾರೆ
ಐಐಟಿ ದೆಹಲಿಯ ಮೂರು ಸಂಶೋಧಕರು ಮಾಡಿರುವ ಹೊಸ ಸಂಶೋಧನೆಯು ಮದ್ಯನಿಷೇಧದ ವಿಷಯದ ಮೇಲೆ ನೀತಿ ರಚಿಸುವವರು ಹೊಸದಾಗಿ ಯೋಚಿಸುವಂತೆ ಮಾಡಬಹುದಾಗಿದೆ. ಮಹಿಳೆಯರ ಬಗ್ಗೆ ಈ ವಿಷಯದಲ್ಲಿ ಕೇಂದ್ರ ಸರಕಾರ ಹೇಗೆ ಯೋಚಿಸಬೇಕು ಎಂಬುದನ್ನು ಈ ಅಧ್ಯಯನ ತೋರಿಸಬಹುದಾಗಿದೆ. ಇದು ದೇಶದಾದ್ಯಂತ ಮಹಿಳೆಯರು ಮದ್ಯನಿಷೇಧವನ್ನು ಏಕೆ ಬೆಂಬಲಿಸುತ್ತಾರೆ ಎಂಬುದನ್ನು ಅರ್ಥಮಾಡಿಸಬಲ್ಲದು. ಕನಿಷ್ಠ ಮದ್ಯನಿಷೇಧದ ಬಗ್ಗೆ ಹೇಗೆ ಯೋಚಿಸಬೇಕು ಎಂಬುದಂತೂ ಕಲಿಸಿಕೊಡುತ್ತದೆ.
ಮದ್ಯನಿಷೇಧದ ಬಗ್ಗೆ ರಾಷ್ಟ್ರೀಯ ಚರ್ಚೆಯು ಎರಡು ರೀತಿಯ ಭ್ರಮೆಯ ಆಲೋಚನೆಗಳ ಬಲಿಯಾಗಿರುತ್ತದೆ. ಒಂದೆಡೆ ಸಂಪೂರ್ಣ ಮದ್ಯನಿಷೇಧದ ಬೆಂಬಲಿಗರು ಇದನ್ನು ಒಂದು ನೈತಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಶ್ನೆಯ ರೂಪದಲ್ಲಿ ಮಂಡಿಸುತ್ತಾರೆ. ಇನ್ನೊಂದೆಡೆ ಸರಕಾರದಿಂದ ಮದ್ಯನಿಷೇಧದ ವಿರೋಧ ಮಾಡುವ ಜನರಿದ್ದಾರೆ, ಅವರು ಇದನ್ನು ವೈಯಕ್ತಿಕ ಸ್ವಾತಂತ್ರದ ಉಲ್ಲಂಘನೆ ಮತ್ತು ಆಧುನಿಕವಲ್ಲದ ಸಾಂಪ್ರದಾಯಿಕ ಚಿಂತನೆ ಎಂದು ಕರೆಯುತ್ತಾರೆ. ಎರಡೂ ತರ್ಕಗಳಲ್ಲಿ ಹುರುಳಿಲ್ಲ. ಮದ್ಯ ಕುಡಿಯುವುದರಿಂದ ಅಥವಾ ಕುಡಿಯದೇ ಇರುವುದರಿಂದ ಯಾರದೇ ಗುಣವು ಒಳ್ಳೆಯದು ಅಥವಾ ಕೆಟ್ಟದಾಗುವುದಿಲ್ಲ. ಹಾಗೂ ನಮ್ಮ ಸಮಾಜದಲ್ಲಿ ಒಂದಲ್ಲ ಒಂದು ಮಾದಕ ದ್ರವ್ಯ ಸೇವಿಸುವ ಪುರಾತನ ಪದ್ಧತಿಗಳೇ ಇವೆ. ಅತ್ತ ಪಾಶ್ಚಾತ್ಯ ದೇಶದ ಎಲ್ಲವನ್ನು ನಕಲಿಸುವುದನ್ನು ಆಧುನಿಕತೆ ಎಂದು ಕರೆಯುವುದು ಮಾನಸಿಕ ಗುಲಾಮಗಿರಿಯ ಪ್ರತೀಕವಾಗಿದೆ. ಹಾಗೂ, ಸರಕಾರ ಸಿಗರೇಟ್ ಮತ್ತು ಹೆಲ್ಮೆಟ್ ಮೇಲೆ ನಿಯಂತ್ರಣದ ನಿಯಮ/ಕಾನೂನು ಮಾಡಬಹುದಾದರೆ ಮದ್ಯದ ಮೇಲೆ ಏಕೆ ಮಾಡಬಾರದು?
ಮದ್ಯದ ನಿಯಂತ್ರಣದ ಬಗ್ಗೆ ನಮಗೆ ಒಂದು ಹೊಸ ದೃಷ್ಟಿಕೋನ ರಚಿಸುವ ಅಗತ್ಯವಿದೆ. ಮದ್ಯನಿಷೇಧದ ನೈತಿಕತೆ ವರ್ಸಸ್ ವೈಯಕ್ತಿಕ ಸ್ವಾತಂತ್ರದ ಅನಾವಶ್ಯಕ ಚರ್ಚೆಗಳಿಂದ ಹೊರಗೆ ಬಂದು, ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ನ್ಯಾಯದ ಪರೀಕ್ಷೆಗೆ ಒಳಪಡುವ ಅಗತ್ಯವಿದೆ. ಈ ದೃಷ್ಟಿಕೋನದ ಪ್ರಕಾರ ಮದ್ಯದ ಚಲಾವಣೆಯಿಂದ ಆಗುವ ನಿಜವಾದ ಸಮಸ್ಯೆಗಳು ಏನೆಂದರೆ, ಇದರಿಂದ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ, ಬಡವರ ಮನೆಗಳ ಆರ್ಥಿಕ ಪರಿಸ್ಥಿ ಎಕ್ಕುಟ್ಟುಹೋಗುತ್ತದೆ ಹಾಗೂ ಕುಟುಂಬಗಳು ಒಡೆದುಹೋಗುತ್ತವೆ.
ಪ್ರಶ್ನೆ ಏನೆಂದರೆ, ಮದ್ಯದ ಈ ದುಷ್ಪರಿಣಾಮಗಳನ್ನು ಎದುರಿಸಲು ಸಂಪೂರ್ಣ ಮದ್ಯನಿಷೇಧ ಒಂದು ಪರಿಣಾಮಕಾರಿಯಾದ ಪರಿಹಾರವೇ? ನಮ್ಮ ದೇಶದಲ್ಲಿ ಗುಜರಾತ್, ಆಂಧ್ರಪ್ರದೇಶ ಹಾಗೂ ಹರಿಯಾಣದಲ್ಲಿ ಸಂಪೂರ್ಣ ಮದ್ಯನಿಷೇಧ ಅನುಭವದಿಂದ ಗೊತ್ತಾಗಿರುವುದೇನೆಂದರೆ ಈ ನೀತಿಯಿಂದಲೂ ಅನೇಕ ದುಷ್ಪರಿಣಾಮಗಳು ಆಗುತ್ತವೆ. ಒಂದು ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವುದರಿಂದ ಏನೂ ಆಗುವುದಿಲ್ಲ. ಏಕೆಂದರೆ ಪಕ್ಕದ ರಾಜ್ಯದಿಂದ ಕಳ್ಳಸಾಗಾಣಿಕೆ ಶುರುವಾಗುತ್ತದೆ. ಕಾಳಸಂತೆ ನಡೆಸುವ ಮಾಫಿಯಾ ಹುಟ್ಟಿಕೊಳ್ಳುತ್ತದೆ. ಮದ್ಯ ಮಾರಾಟವನ್ನು ಕಾನೂನಾತ್ಮಕವಾಗಿ ನಿಷೇಧಿಸಿದಾಗ ಕಚ್ಚಾ ಸಾರಾಯಿ, ವಿಷಕಾರಿ ಮದ್ಯ ಹಾಗೂ ಇತರ ಅಮಲು ಪದಾರ್ಥಗಳ ಕಾಣಿಸಿಕೊಳ್ಳುತ್ತವೆ. ಈ ವಾದಗಳ ಕಾರಣದಿಂದ ಮದ್ಯನಿಷೇಧದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಒಮ್ಮತಕ್ಕೆ ಬರಲಾಗಲಿಲ್ಲ. ಸರಕಾರದ ಎಲ್ಲಕ್ಕಿಂತ ದೊಡ್ಡ ವಾದವೇನೆಂದರೆ, ನಿಷೇಧದಿಂದ ಅವರ ರಾಜಸ್ವದಲ್ಲಿ ದೊಡ್ಡ ಕಡಿತವಾಗುತ್ತದೆ ಎಂಬುದು. ದುರಾದೃಷ್ಟವಶಾತ್, ಮದ್ಯದ ಮಾರಾಟದ ಮೇಲೆ ವಿಧಿಸುವ ಅಬಕಾರಿ ಶುಲ್ಕವು ರಾಜ್ಯ ಸರಕಾರಗಳ ಆದಾಯದ ಅತಿದೊಡ್ಡ ಮೂಲವಾಗಿದೆ.

ಇಂತಹ ಸಂದರ್ಭದಲ್ಲಿ 2016ರಲ್ಲಿ ನಿತೀಶ್ ಕುಮಾರ್ ಸರಕಾರವು ಬಿಹಾರದಲ್ಲಿ ಸಂಪೂರ್ಣ ಮದ್ಯನಿಷೇಧ ವಿಧಿಸುವ ತೀರ್ಮಾನ ಎಲ್ಲರನ್ನು ಚಕಿತಗೊಳಿಸಿತು. ಕಳೆದ ಏಳು ವರ್ಷಗಳಿಂದ ಈ ನೀತಿಯ ಒಳ್ಳೆಯ ಕೆಟ್ಟ ಪರಿಣಾಮಗಳ ಬಗ್ಗೆ ಸುದ್ದಿಗಳು ಬರುತ್ತಿದ್ದವು ಆದರೆ ಇದರ ಲಾಭನಷ್ಟಗಳ ಬಗ್ಗೆ ಯಾವುದೇ ಸ್ಪಷ್ಟ ಅಭಿಪ್ರಾಯ ಕಾಣಿಸಲಿಲ್ಲ. ಆದರೆ ಬಿಹಾರ ಸರಕಾರವು ಇದನ್ನು ಸಾರಾಯಿ ಮಾಫಿಯಾದ ಪ್ರಚಾರ ಎಂದು ಕರೆದಿದೆ ಹಾಗೂ ಇದರಿಂದ ಹಿಂದೆ ಸರಿಯುವುದಿಲ್ಲ ಎಂದಿದೆ.
ಇತ್ತೀಚಿಗೆ ಐಐಟಿಯ ದೆಹಲಿಯ ಮೂರು ಅರ್ಥಶಾಸ್ತ್ರಜ್ಞರು (ಹೌದು, ಐಐಟಿಯಲ್ಲಿ ಕೇವಲ ವಿಜ್ಞಾನ ಮತ್ತು ತಂತ್ರಜ್ಞಾನವಲ್ಲ, ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರ ವಿಷಯಗಳ ಬಗ್ಗೆಯೂ ಒಳ್ಳೆಯ ಸಂಶೋಧನೆ ನಡೆಯುತ್ತವೆ.) ಬಿಹಾರದಲ್ಲಿ ಮದ್ಯನಿಷೇಧ ನೀತಿಯಿಂದ ಮಹಿಳೆಯರ ಮೇಲೆ ಆದ ಪರಿಣಾಮಗಳ ಪರಿಶೀಲಿಸಿ, ಈ ನೀತಿಯ ವಸ್ತುನಿಷ್ಠ ಮೌಲ್ಯಮಾಪನಕ್ಕೆ ದಾರಿ ತೆಗೆದಿಟ್ಟಿದ್ದಾರೆ.
ಶಿಶಿರ್ ದೇಬನಾತ್, ಸೌರಭ್ ಪಾಲ್ ಹಾಗೂ ಕೋಮಲ್ ಸರೀನ್ ಅವರು ತಮ್ಮ ಸಂಶೋಧನೆಯಲ್ಲಿ ಒಂದು ದೊಡ್ಡ ಪ್ರಶ್ನೆಯನ್ನು ಕೇಂದ್ರದಲ್ಲಿಟ್ಟುಕೊಂಡರು; ಮದ್ಯನಿಷೇಧದಿಂದ ಮಹಿಳೆಯರ ಮೇಲೆ ಆಗುವ ಹಿಂಸೆಯಲ್ಲಿ ಕಡಿತವಾಗುತ್ತದೆಯೇ? ಮೊದಲು ಇದಕ್ಕೆ ಸಂಬಂಧಿಸಿದಂತೆ ವಾದಗಳನ್ನು ಮಂಡಿಸಲಾಗಿತ್ತು ಹಾಗೂ ಅವನ್ನು ನಿರಾಕರಿಸುವ ಕೆಲಸವೂ ಆಗಿತ್ತು ಆದರೆ ಇಲ್ಲಿಯ ತನಕ ಸ್ಪಷ್ಟವಾದ ಪ್ರಮಾಣಗಳು ಸಿಕ್ಕಿದ್ದಿಲ್ಲ. ಈ ಅಧ್ಯಯನಕ್ಕೆ ಈ ತಜ್ಞರು ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇಯ ಸಹಾಯ ಪಡೆದುಕೊಂಡರು. ಈ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ ಈ ವಿಷಯದ ಮೇಲೆ ದೇಶದ ಅತಿದೊಡ್ಡ ಹಾಗೂ ಪ್ರಮಾಣಿತ ಮಾಹಿತಿಯ ಮೂಲವಾಗಿದೆ. ಈ ಸಮೀಕ್ಷೆಯ ವಿಶೇಷವೇನೆಂದರೆ, ಮದ್ಯದ ಬಳಕೆಯನ್ನು ಅಳೆಯಲು ಸರಕಾರಿ ಅಂಕಿಅಂಶಗಳನ್ನು ಬಳಸಲಾಗುವುದಿಲ್ಲ. ಅದರ ಬದಲಿಗೆ ಮನೆಯಲ್ಲಿ ಮಹಿಳೆಯರಿಗೆ ಕೇಳಲಾಗುತ್ತದೆ. ಅದೇ ರೀತಿಯಲ್ಲಿ ಮಹಿಳೆಯರ ಮೇಲಿನ ಹಿಂಸೆ ಅಥವಾ ಬಹಿಷ್ಕಾರಗಳ ಬಗ್ಗೆ ಪೊಲೀಸ್ ಠಾಣೆಯ ದಾಖಲೆಗಳನ್ನು ನೋಡುವುದಿಲ್ಲ, ಅವುಗಳು ತಪ್ಪುದಿಕ್ಕಗೆ ಸೂಚಿಸುತ್ತವೆಯಾದುದರಿಂದ, ಅದರ ಬದಲಿಗೆ ಖುದ್ದು ಮಹಿಳೆಯರಿಗೇ ಖಾಸಗಿಯಾಗಿ ಕೇಳಲಾಗುತ್ತದೆ. ದೇಶದ ಆರೋಗ್ಯದೊಂದಿಗೆ ಮಹಿಳೆಯರ ಮೇಲೆ ಆಗುತ್ತಿರುವ ಹಿಂಸೆಯ ಅಂಕಿಅಂಶಗಳ ಇದು ಅತ್ಯಂತ ಪ್ರಾಮಾಣಿಕ ಮೂಲವಾಗಿದೆ. ಈ ಸಮೀಕ್ಷೆ ಮೊದಲು 2005-06ರಲ್ಲಿ ನಂತರ 2015-16ರಲ್ಲಿ ಹಾಗೂ ಹೊಸದಾಗಿ 2019-20ರಲ್ಲಿ ನಡೆದಿದೆ.
ಕಾಕತಾಳೀಯವಾಗಿ ಈ ಸಮೀಕ್ಷೆಯ ಎರಡನೆಯ ಸುತ್ತು ಬಿಹಾರದಲ್ಲಿ ಮದ್ಯನಿಷೇಧ ಅನುಷ್ಠಾನಗೊಳಿಸುವುದಕ್ಕೆ ಸ್ವಲ್ಪ ಸಮಯದ ಮುಂಚೆ ಆಗಿತ್ತು. ಅಂದರೆ ಇದರ ಆಧಾರದ ಮೇಲೆ ಮದ್ಯನಿಷೇಧ ಪರಿಣಾಮವನ್ನು ಅಳೆಯಬಹುದಾಗಿದೆ. ಸಮೀಕ್ಷೆಯ ಅಂಕಿಅಂಶಗಳ ಸೂಕ್ಷ್ಮವಾದ ವಿಶ್ಲೇಷಣೆಯ ಆಧಾರದ ಮೇಲೆ ಈ ತಜ್ಞರು ತೋರಿಸಿರುವುದೇನೆಂದರೆ ಮದ್ಯನಿಷೇಧ ಜಾರಿಗೊಳಿಸಿದ ನಂತರ ಬಿಹಾರದಲ್ಲಿ (ಕುಟುಂಬದ ಮಹಿಳೆಯರ ಪ್ರಕಾರ) ಗಂಡಸರು ಸೇವಿಸುವ ಮದ್ಯದ ಪ್ರಮಾಣದಲ್ಲಿ ಭಾರಿ ಕಡಿತವಾಗಿದೆ, ಇದೇ ಅವಧಿಯಲ್ಲಿ ಇತರ ರಾಜ್ಯಗಳಲ್ಲಿ ಮದ್ಯದ ಬಳಕೆಯ ಪ್ರಮಾಣ ಹೆಚ್ಚಾಗಿತ್ತು. ಇದು ನಿರೀಕ್ಷಿತವೇ. ಇದಕ್ಕಿಂತ ಮಹತ್ವಪೂರ್ಣವಾದ ನಿಷ್ಕರ್ಷವೇನೆಂದರೆ, 2016ರ ನಂತರ ಬಿಹಾರದಲ್ಲಿ ಗಂಡಸರು ಮಹಿಳೆಯರ ಮೇಲೆ ಎಸಗುತ್ತಿದ್ದ ನಾನಾ ಪ್ರಕಾರದ ಹಿಂಸೆಯೂ ಸ್ಪಷ್ಟವಾಗಿ ಕಡಿಮೆಯಾಗಿದೆ. ಅಷ್ಟೇ ಅಲ್ಲ, ಮಹಿಳೆಯರು ಹೊರಗೆ ಹೋಗಲು, ಖರ್ಚು ಮಾಡಲು ಮುಂತಾದವುಗಳಿಗೆ ವಿಧಿಸುತ್ತಿದ್ದ ನಿರ್ಬಂಧನೆಗಳಲ್ಲೂ ಕುಸಿತ ಕಂಡುಬಂದಿದೆ. ಈ ಬದಲಾವಣೆ ಬೇರೆ ಯಾವುದೇ ಸರಕಾರಿ ನೀತಿ ಅಥವಾ ಬೇರಾವುದೇ ಕಾರಣದಿಂದ ಆಗಿರಬಹುದು ಎಂಬುದರ ಸಾಧ್ಯತೆಗಳನ್ನು ಈ ಸಂಶೋಧಕರು ಎಚ್ಚರಿಕೆಯಿಂದ ಅಧ್ಯಯನ ಮಾಡಿದ ನಂತರ ತಳ್ಳಿಹಾಕಿದ್ದಾರೆ.
ಇದನ್ನು ಓದಿ ಜೆಡಿಎಸ್ ಬಿಜೆಪಿ ಕೂಡಿಕೆ: ರಾಜಕೀಯ ಪಕ್ಷವಾಗಿ ಸತ್ತು ಅಸ್ತಿತ್ವ ಉಳಿಸಿಕೊಳ್ಳುವ ಬಗೆ
ಈ ಅಧ್ಯಯನವು ಮೊದಲ ಬಾರಿ, ಮಹಿಳೆಯರ ಮೇಲಿನ ಹಿಂಸೆಯನ್ನು ಮದ್ಯಕ್ಕೆ ಸಂಬಂಧವಿದೆ ಎನ್ನುತ್ತದೆ ಹಾಗೂ ಈ ಕಾರಣಕ್ಕಾಗಿ ಮದ್ಯನಿಷೇಧದ ಬೇಡಿಕೆ ಇಡುವ ಮಹಿಳಾ ಸಂಘಟನೆಗಳು ಮತ್ತು ಜನಾಂದೋಲನಗಳ ಅನುಭವಗಳನ್ನು ದೃಢೀಕರಿಸುತ್ತದೆ. ಮದ್ಯನಿಷೇಧದ ವಿಷಯದ ಮೇಲೆ ಯೋಚಿಸುವಾಗ ನೀತಿ ರಚಿಸುವವರು ಈ ಅಂಶದ ಮೇಲೆಯೂ ಗಮನವಿರಿಸುತ್ತಾರೆ ಎಂದು ಆಶಿಸೋಣ. ಆದರೆ ಈ ಅಧ್ಯಯನ ಪ್ರಕಟವಾದ ವಾರವೇ ಸರಕಾರವು ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ ಮಾಡಿದ ಸಂಸ್ಥೆಯಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಾಪ್ಯುಲೇಷನ್ ಸ್ಟಡೀಸ್ನ ನಿರ್ದೇಶಕರನ್ನು ಅಮಾನತುಗೊಳಿಸಿದೆ. ಬಲ್ಲವರು ಹೇಳುವುದೇನೆಂದರೆ, ಅವರನ್ನು ಆ ಸ್ಥಾನದಿಂದ ತೆಗೆಯಲು ಇದ್ದ ಅಸಲಿ ಕಾರಣ, ಈ ಸಮೀಕ್ಷೆಯ ಅಂಕಿಅಂಶಗಳು ಸರಕಾರಕ್ಕೆ ಇಷ್ಟವಾಗಲಿಲ್ಲ ಎಂದು. ಇಂತಹದ್ದರಲ್ಲಿ ಈ ಅಧ್ಯಯನದ ಆಧಾರದ ಮೇಲೆ ನೀತಿ ರಚಿಸಬೇಕು ಎಂದು ನಿರೀಕ್ಷೆ ಮಾಡಬಹುದೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ!

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ
ಉತ್ತಮವಾದ ವರದಿ ♥️🎊