ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಕೊಡುತ್ತೇವೆ ಎನ್ನುವಾಗ ಕೇಂದ್ರದ ಕಡೆಗೆ ಸಿದ್ದರಾಮಯ್ಯ ಕೈ ತೋರಿಸುವುದಿಲ್ಲ. ಬರದ ಬಗ್ಗೆ ಸಂಕಷ್ಟಕ್ಕೆ ತುತ್ತಾದ ರೈತರಿಗೆ ಬೆಳೆ ಹಾನಿ ಪರಿಹಾರದ ಬಗ್ಗೆ ಕೇಳಿದಾಗ ಮಾತ್ರ ತಪ್ಪದೇ ಕೇಂದ್ರದತ್ತ ಬೊಟ್ಟು ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದರು.
ದಾವಣಗೆರೆ ಜಿಲ್ಲೆಯ ಜಮ್ಮಾಪುರ ಗ್ರಾಮದ ರೈತ ಕುಟುಂಬ ಮರುಳಪ್ಪ, ಸಿದ್ದಮ್ಮನವರ ಜಮೀನಿಗೆ ಭೇಟಿ ನೀಡಿ ಅವರು ಮಾತನಾಡಿದರು, “ಸಿದ್ದರಾಮಯ್ಯನವರಿಗೆ ಒಂದು ಮಾತು ಹೇಳಲಿಚ್ಛಿಸುತ್ತೇನೆ. ಮುಖ್ಯಮಂತ್ರಿಗಳೇ ನೀವು ಚುನಾವಣಾ ರಾಜಕಾರಣವನ್ನು ನಂತರ ಮಾಡಿಕೊಳ್ಳಿ. ಸದ್ಯಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ, ಬರ ಹೊಡೆತದಿಂದ ತತ್ತರಿಸಿರುವ ರೈತರಿಗೆ ಮೊದಲು ಪರಿಹಾರ ನೀಡುವ ಕೆಲಸ ಮಾಡಿ” ಎಂದರು.
“ಹೊಸ ವರ್ಷದ ಹಿನ್ನೆಲೆಯಲ್ಲಿ ಬೂಟಾಟಿಕೆ ಮಾಡಲು ನಾನು ಬರ ಅಧ್ಯಯನ ಪ್ರವಾಸ ಕೈಗೊಂಡಿಲ್ಲ. ರೈತರ ಬಗ್ಗೆ ಕಾಳಜಿಯಿಂದ ಬರ ಅಧ್ಯಯನ ಮಾಡುತ್ತಿದ್ದೇನೆ. ರೈತರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಸರ್ಕಾರದ ಗಮನ ಸೆಳೆದು, ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದೇನೆ. ರೈತರು ಅಂದರೆ ಲಿಂಗಾಯತರಷ್ಟೇ ಇಲ್ಲ. ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲ ಜಾತಿ, ಧರ್ಮಿಯರೂ ಇದ್ದಾರೆ ಎಂದರು. ದಲಿತ ಕುಟುಂಬದ ರೈತರ ಜಮೀನಿಗೆ ಇಲ್ಲಿ ಭೇಟಿ ನೀಡಿದ್ದೇನೆ. ಬಡ ರೈತ ದಂಪತಿಗಳ ಕಣ್ಣೀರು ನಮ್ಮ ಮನಸ್ಸಿಗೂ ನೋವುಂಟು ಮಾಡುತ್ತಿದೆ” ಎಂದರು.
“ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಓಲೈಕೆ ಶುರು ಮಾಡಿದ್ದಾರೆ. ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಅನುದಾನ ನೀಡುವ ಘೋಷಣೆ ಮಾಡಿದ್ದಾರೆ. ಹೀಗೆ ಸಾವಿರಾರು ಕೋಟಿ ಅನುದಾನ ನೀಡುತ್ತಿರುವ ಸಿದ್ದರಾಮಯ್ಯ ರೈತರ ಬಗ್ಗೆಯೂ ಗಮನ ಹರಿಸಲಿ, ಅನ್ನದಾತರ ಸಂಕಷ್ಟಕ್ಕೂ ಸ್ಪಂದಿಸಲಿ” ಎಂದು ಒತ್ತಾಯಿಸಿದರು.
“ಲಕ್ಷಾಂತರ ರೈತ ಕುಟುಂಬಗಳು ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಆ ರೈತರ ಬಗ್ಗೆಯೂ ಗಮನ ಹರಿಸಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಆದ್ಯತೆ ಕೇವಲ ಅಲ್ಪಸಂಖ್ಯಾತರ ಕಡೆಗೆ ಮಾತ್ರ ಇದೆ. ಹಿಂದುಗಳ ಬಗ್ಗೆ ಯಾವುದೇ ಆದ್ಯತೆ ನೀಡುತ್ತಿಲ್ಲ. ಹಿಂದುಗಳೆಂದರೆ ಕೇವಲ ಲಿಂಗಾಯತ, ಬ್ರಾಹ್ಮಣರಷ್ಟೇ ಅಲ್ಲ, ಎಲ್ಲಾ ಪರಿಶಿಷ್ಟರು, ಹಿಂದುಳಿದವರೂ ಸೇರುತ್ತಾರೆ” ಎಂದು ಆಗ್ರಹಿಸಿದರು.
ಈ ವೇಳೆ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ್, ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಹರಿಹರ ಶಾಸಕ ಬಿ.ಪಿ.ಹರೀಶ, ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಉಪಾಧ್ಯಕ್ಷರಾದ ಟಿ.ಶ್ರೀನಿವಾಸ ದಾಸಕರಿಯಪ್ಪ, ಮಂಜಾನಾಯ್ಕ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಯಶವಂತರಾವ್ ಜಾಧವ್, ಜಿ.ಎಸ್.ಅನಿತ್ ಕುಮಾರ, ಪಿ.ಸಿ.ಶ್ರೀನಿವಾಸ ಭಟ್, ಜಿ.ಎಸ್.ಶ್ಯಾಮ ಮಾಯಕೊಂಡ, ಬಿ.ಎಂ.ಸತೀಶ ಕೊಳೇನಹಳ್ಳಿ, ಲೋಕಿಕೆರೆ ನಾಗರಾಜ, ಬಿ.ಟಿ.ಸಿದ್ದಪ್ಪ, ಕೆ.ಪ್ರಸನ್ನಕುಮಾರ, ಶಿವನಗೌಡ ಪಾಟೀಲ, ಹೆಬ್ಬಾಳ್ ಮಹೇಂದ್ರ, ಶ್ಯಾಗಲೆ ದೇವೇಂದ್ರಪ್ಪ ಇತರರು ಹಾಜರಿದ್ದರು.