- ಹೊಂದಾಣಿಕೆ ರಾಜಕಾರಣ ಹೇಳಿಕೆ ವಿಚಾರವಾಗಿ ಚರ್ಚೆ
- ಕಾರ್ಯಕರ್ತರ ಅಭಿಪ್ರಾಯ ಹೇಳಿದ್ದೇನೆ: ಪ್ರತಾಪ್ ಸಿಂಹ
ವಿಧಾನಸಭೆ ಚುನಾವಣೆಯಲ್ಲಿ ಉಂಟಾದ ಹೀನಾಯ ಸೋಲಿನ ಪರಾಮರ್ಶೆ ನಡೆಸುವ ಬದಲು ಪಕ್ಷದೊಳಗಿನ ಭಿನ್ನಮತವನ್ನು ಶಮನಗೊಳಿಸುವುದೇ ಬಿಜೆಪಿಗೆ ದೊಡ್ಡ ಸವಾಲಾಗಿದೆ.
ಪಕ್ಷದೊಳಗಿನ ಭಿನ್ನಮತವನ್ನು ಗಂಭೀರವಾಗಿ ಪರಿಗಣಿಸಿದಂತಿರುವ ವರಿಷ್ಠರು, ಮಾತುಕತೆ ನಡೆಸಿ, ಸ್ಪಷ್ಟ ಸೂಚನೆ ನೀಡಿ ಎಂದು ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು.
ರಾಷ್ಟ್ರೀಯ ಸಂದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹಾಗೂ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜು ನೇತೃತ್ವದಲ್ಲಿ ಸಭೆ ನಡೆಯಿತು.
ಈ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋತಿರುವುದಕ್ಕೆ ಹೊಂದಾಣಿಕೆ ರಾಜಕಾರಣವೇ ಕಾರಣ ಎಂದು ಹೇಳಿಕೆ ನೀಡಿರುವ ಪ್ರತಾಪ ಸಿಂಹ್ನನ್ನು ಬೊಮ್ಮಾಯಿ ಅವರು ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.
“ರಾಜಕಾರಣದಲ್ಲಿ ನಾವೆಲ್ಲಾ ಕಷ್ಟಪಟ್ಟು ಮೇಲೆ ಬಂದಿದ್ದೇವೆ. ಹಿಂದೆ ಮುಂದೆ ಯೋಚಿಸದೇ ನಮ್ಮ ಮೇಲೆ ಮಸಿ ಬಳಿದರೆ ನಮ್ಮ ಕತೆ ಏನಾಗಬೇಕು? ಸಾರ್ವಜನಿಕ ಜೀವನದಲ್ಲಿಇಂತಹ ಕಳಂಕವನ್ನು ತೊಡೆದುಕೊಳ್ಳುವುದಕ್ಕೆ ಎಷ್ಟು ಕಷ್ಟ ಎಂಬುದು ಗೊತ್ತಾ? ಮಾತನಾಡುವುದು ಸುಲಭ. ಆದರೆ ಕೊಳೆಯಾದ ಬಟ್ಟೆಯನ್ನು ಸ್ವಚ್ಛ ಮಾಡುವುದು ಕಷ್ಟ” ಎಂದು ಬೊಮ್ಮಾಯಿ ಸಿಟ್ಟಿನಿಂದ ಮಾತನಾಡಿದ್ದಾರೆ.
ಮುಂದುವರಿದು, “ಚುನಾವಣಾ ಫಲಿತಾಂಶದ ನಂತರ ಹೊಂದಾಣಿಕೆ ರಾಜಕಾರಣ ಪ್ರಸ್ತಾಪ ಮಾಡುವ ಅಗತ್ಯ ಇತ್ತಾ? ಇಂತಹ ಮಾತುಗಳಿಂದ ಪಕ್ಷದ ಮೇಲೆ ಆಗುವ ಪರಿಣಾಮವೇನು? ನಮ್ಮೆಲ್ಲರ ವ್ಯಕ್ತಿತ್ವದ ಮೇಲಾಗುವ ನಕಾರಾತ್ಮಕ ಪರಿಣಾಮದ ಬಗ್ಗೆ ಯೋಚಿಸಿದ್ದೀರಾ” ಎಂದು ಪ್ರತಾಪ್ ಸಿಂಹನನ್ನು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು ದಶಪಥ ಹೆದ್ದಾರಿ | ಶ್ರೀರಂಗಪಟ್ಟಣದಲ್ಲಿ ಟೋಲ್ ಸಂಗ್ರಹಿಸದಂತೆ ಕೇಂದ್ರಕ್ಕೆ ತಡೆ ನೀಡಲು ಸಿಎಂಗೆ ಮನವಿ
ನಾನು ಆಡಿರುವ ಮಾತಲ್ಲಿ ತಪ್ಪೇನಿದೆ?: ಪ್ರತಾಪ್ ಸಿಂಹ
ಬೊಮ್ಮಾಯಿ ಮಾತಿಗೆ ಸಭೆಯಲ್ಲಿ ಪ್ರತ್ಯುತ್ತರಿಸಿದ ಪ್ರತಾಪ್ ಸಿಂಹ, “ನಾನು ಆಡಿರುವ ಮಾತುಗಳಲ್ಲಿ ತಪ್ಪೇನಿದೆ? ಪಕ್ಷಕ್ಕೆ ನಿಷ್ಠನಾದ ನಾನು ಪಕ್ಷಕ್ಕೆ ಹಾನಿಯಾಗುವಂತಹ ಹೇಳಿಕೆ ನೀಡಲು ಸಾಧ್ಯವೇ? ನಾನು ಕಾರ್ಯಕರ್ತರ ಅಭಿಪ್ರಾಯದ ಮೇಲೆ ಮಾತನಾಡಿದ್ದೇನೆ” ಎಂದಿದ್ದಾರೆ.
“ಕಾಂಗ್ರೆಸಿಗರನ್ನು ನಾನು ಪ್ರಶ್ನಿಸಿದ್ದು ತಪ್ಪೇ? ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಿಕೊಂಡರೆ ನಾನೇನು ಮಾಡಲಿ. ಹೊಂದಾಣಿಕೆ ರಾಜಕಾರಣದ ಹೇಳಿಕೆಗೂ ಮೊದಲು ನೀವು ಬಿಟ್ ಕಾಯಿನ್, ಪಿಎಸ್ಐ ಹಗರಣದ ಬಗ್ಗೆ ಮಾತನಾಡಿದ್ದೀರಲ್ಲ. ಇದೀಗ ನೀವೇ ಅಧಿಕಾರದಲ್ಲಿದ್ದೀರಿ ತನಿಖೆ ನಡೆಸಿ ಎಂದು ಕಾಂಗ್ರೆಸ್ನವರನ್ನು ನಾನು ಪ್ರಶ್ನಿಸಿದ್ದೆ. ವಾರದ ಬಳಿಕ ಕಾಂಗ್ರೆಸ್ನವರು ತನಿಖೆ ನಡೆಸುವುದಾಗಿ ಹೇಳಿಕೆ ನೀಡಿದ್ದರು. ಈಗ ಅಧಿಕಾರಕ್ಕೆ ಬಂದವರು ತನಿಖೆ ನಡೆಸಲಿಲ್ಲ ಎಂದರೆ ಹೊಂದಾಣಿಕೆ ರಾಜಕಾರಣವಾಗುವುದಿಲ್ಲವೇ? ಎಂದು ಕಾಂಗ್ರೆಸಿಗರನ್ನು ನಾನು ಪ್ರಶ್ನಿಸಿದ್ದೆ” ಎಂದು ಪ್ರತಾಪ್ ಉತ್ತರಿಸಿದ್ದಾರೆ.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಧ್ಯ ಪ್ರವೇಶಿಸಿ, “ನಿಮ್ಮ ಅಸಮಾಧಾನಗಳನ್ನು ಪಕ್ಷದ ವೇದಿಕೆಯಲ್ಲಿ ಹೇಳಿ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಬಹಿರಂಗ ಹೇಳಿಕೆ ನೀಡಬೇಡಿ” ಎಂದು ಸೂಚಿಸಿದರು. ಅದಕ್ಕೆ ಪ್ರತಾಪ್ ಸಿಂಹ, “ಮಾತಾಡಬೇಡಿ ಎಂದರೆ ಮಾತಾಡುವುದೇ ಇಲ್ಲ ಬಿಡಿ” ಎಂದು ಕೋಪದಿಂದ ಉತ್ತರಿಸಿ, ದಿಢೀರ್ ಆಗಿ ಸಭೆಯಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.
ನಿಮಗೆ ಇನ್ನು ಇದೇ ಗತಿ, ಮಕ್ಕಳನ್ನು ಕಳಕೊಂಡ ತಾಯಂದಿರ ಕಣ್ಣೀರ ಶಾಪ.