- ‘ಮೌನೇಶ್ ಎಂಬುವವ ಸಚಿವ ಭೈರತಿ ಸುರೇಶ್ ಅವರಿಗೆ ಆಪ್ತನಾಗಿದ್ದಾನೆ’
- ‘ದುಡ್ಡು ಕೊಟ್ಟರೆ ನಕಲಿ ವೋಟರ್ ಐಡಿ, ಡಿಎಲ್ ಮಾಡಿಕೊಡುತ್ತಿದ್ದರು’
ನಕಲಿ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ಗಳನ್ನು ಮಾಡಿಕೊಡುತ್ತಿರುವ ಆರೋಪದ ಮೇಲೆ ಸಚಿವ ಭೈರತಿ ಸುರೇಶ್ ಅವರ ಆಪ್ತ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದುಡ್ಡು ಕೊಟ್ಟರೆ ವೋಟರ್ ಐಡಿ, ಆಧಾರ್, ಡಿಎಲ್ ಮಾಡಿಕೊಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಹೆಬ್ಬಾಳದ ಕನಕ ನಗರದಲ್ಲಿರುವ ಎಂಎಸ್ಎಲ್ ಟೆಕ್ನೊ ಸಲ್ಯೂಷನ್ ಕಂಪನಿ ಮೇಲೆ ದಾಳಿ ಮಾಡಿ, ಮೌನೇಶ್ ಕುಮಾರ್, ಭಗತ್ ಹಾಗೂ ರಾಘವೇಂದ್ರ ಅವರನ್ನು ವಶಕ್ಕೆ ಪಡೆದಿದ್ದಾರೆ.
ಇವರಲ್ಲಿ ಮೌನೇಶ್ ಎಂಬುವವ ಸಚಿವ ಭೈರತಿ ಸುರೇಶ್ ಅವರಿಗೆ ಆಪ್ತನಾಗಿದ್ದು, ಅವರ ಜೊತೆಗಿನ ಸಾಕಷ್ಟು ಫೋಟೋಗಳು ವೈರಲ್ ಆಗುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯ ವೇಳೆ ಚಿಲುಮೆ ಸಂಸ್ಥೆ ಹೆಸರಿನಲ್ಲಿ ವೋಟರ್ ಐಡಿಯಿಂದ ಹೆಸರುಗಳನ್ನು ಡಿಲೀಟ್ ಮಾಡಿರುವ ಆರೋಪ ಕೇಳಿಬಂದಿತ್ತು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಕಲಿ ವೋಟರ್ ಐಡಿ ತಯಾರಿಸುತ್ತಿದ್ದ ಈ ಮೂವರ ಪ್ರಕರಣ ಮಹತ್ವ ಪಡೆದುಕೊಂಡಿದೆ.
ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾಗುವುದಕ್ಕೆ ಸಹಕಾರ ನೀಡಿದ್ದಾರೆ ಎಂಬ ಆರೋಪ ಇವರ ಮೇಲಿದೆ. ಒರಿಜಿನಲ್ ಐಡಿ ಕಾರ್ಡ್ ಎಂದು ಹಣ ಪಡೆದು ಸರ್ಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ ಎನ್ನಲಾಗಿದೆ.
ಯಾವುದೇ ಕ್ಷೇತ್ರದ ವೋಟರ್ ಐಡಿ, ಯಾವುದೇ ಆಧಾರ್ ಕೇಳಿದರೂ ಮಾಡಿಕೊಡುತ್ತಾರೆ ಎಂಬ ಆರೋಪದ ಬಗ್ಗೆ ಮಾಹಿತಿ ಪಡೆದು, ದಾಳಿ ನಡೆಸಿದ ಸಿಸಿಬಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೃತ್ಯಕ್ಕೆ ಬಳಸುತಿದ್ದ ಕಂಪ್ಯೂಟರ್ ಸೇರಿ ಹಲವಾರು ವಸ್ತುಗಳನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆದರೆ ಆರೋಪಿಗಳನ್ನು ಇನ್ನೂ ಬಂಧನ ಮಾಡಿಲ್ಲ ಎನ್ನಲಾಗಿದೆ. ಕೇವಲ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.