ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳ ಹೋರಾಟಗಾರ್ತಿ ಡಾ. ಅಕ್ಕೈ ಪದ್ಮಶಾಲಿ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ(ಕೆಪಿಸಿಸಿ) ಉಪಾಧ್ಯಕ್ಷೆ ಹುದ್ದೆ ಹಾಗೂ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸೋಮವಾರ(ಆಗಸ್ಟ್ 11) ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರವನ್ನು ಅಕ್ಕೈ ಸಲ್ಲಿಸಿದ್ದಾರೆ.
“2020ರ ಸೆಪ್ಟೆಂಬರ್ 20ರಂದು ತನಗೆ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವ ಕೊಟ್ಟು, ಬಳಿಕ ಕೆಪಿಸಿಸಿಗೆ ತನ್ನನ್ನು ಸೇರಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷೆ ಹುದ್ದೆಗಳನ್ನು ನೀಡಿರುವುದಕ್ಕೆ ತಾನು ಅಭಾರಿ” ಎಂದು ತಿಳಿಸಿದ್ದಾರೆ. ಹಾಗೆಯೇ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯ ಮತ್ತು ಲೈಂಗಿಕ ಕಾರ್ಯಕರ್ತರ ಸಮುದಾಯಗಳ ಹೋರಾಟಗಳಿಗೆ ಬೆಂಬಲ ನೀಡಿದ ಕಾಂಗ್ರೆಸ್ ನಾಯಕರಿಗೆ ಧನ್ಯವಾದ ತಿಳಿಸಿದರು.
ಇದನ್ನು ಓದಿದ್ದೀರಾ? ಯಶ್ಪಾಲ್ ಸುವರ್ಣರೇ… ನೀವೇಕೆ ಇನ್ನೂ ಲಿಂಗ ಪರಿವರ್ತನೆ ಮಾಡಿಕೊಂಡಿಲ್ಲ!?: ಅಕ್ಕೈ ಪದ್ಮಶಾಲಿ
“ನಮ್ಮ ತುಳಿತಕ್ಕೊಳಗಾದ ಹಾಗೂ ಶೋಷಿತ ಅಂತರ್ಲಿಂಗಿ , ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯಕರ್ತೆಯ ಸಮುದಾಯವು ಇಂದಿನ ಪ್ರಸ್ತುತ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಕಾನೂನು, ಮೂಲಭೂತ ಹಕ್ಕುಗಳ ಹಾಗೂ ನೀತಿ ನಿರೂಪಣೆಗಳ ನೆಲೆಗಟ್ಟಿನಿಂದ ತೀರಾ ಹಿಂದುಳಿದಿದೆ. ನಮ್ಮ ಸಮುದಾಯವನ್ನು ರಾಷ್ಟ್ರದಾದ್ಯಂತ ಸಂಘಟಿಸುವ ಸಾಮಾಜಿಕ ಜವಾಬ್ದಾರಿ ಹಾಗೂ ಸಂವಿಧಾನದ ನೈತಿಕತೆಯನ್ನು ಎತ್ತಿ ಹಿಡಿಯುವ ಜವಾಬ್ದಾರಿ ನಿಭಾಯಿಸುವ ಸಲುವಾಗಿ ಕೆಪಿಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
“ನಾವು ಸಮಾಜದ ಅತ್ಯಂತ ಅಂಚಿನಲ್ಲಿರುವ ವರ್ಗ. ಒಂದು ಪಕ್ಷದೊಳಗೆ ಇರುವುದು ಒಂದು ರೀತಿಯಾದರೆ, ಅದರಿಂದ ಹೊರಬರುವುದು ನನ್ನನ್ನು ಇನ್ನಷ್ಟು ಮುಕ್ತ ಮತ್ತು ಬಲಶಾಲಿಯಾಗಿ ಮಾಡುತ್ತದೆ ಎಂದು ನಾನು ಭಾವಿಸಿದ್ದೇನೆ. ಅದಕ್ಕಾಗಿಯೇ ಈ ರಾಜಕೀಯ ವ್ಯವಸ್ಥೆಯಿಂದ ಹೊರಬಂದು ನನ್ನ ಚಳವಳಿಯ ತೊಡಗಿಸಿಕೊಳ್ಳಲು ನಿರ್ಧರಿಸಿದೆ” ಎಂದು ಹೇಳಿದ್ದಾರೆ.
