ಅಕ್ರಮ ಅದಿರು ಸಾಗಣೆ ಮಾಡಿ ರಾಜ್ಯದ ಬೊಕ್ಕಸಕ್ಕೆ ₹200 ಕೋಟಿಗೂ ಹೆಚ್ಚಿನ ನಷ್ಟ ಉಂಟು ಮಾಡಿದ ಆರು ಕ್ರಿಮಿನಲ್ ಆರೋಪಗಳಲ್ಲಿ ದೋಷಿಯಾಗಿ ಜೈಲು ಸೇರಿರುವ ಕಾರವಾರ ಶಾಸಕ ಸತೀಶ್ ಸೈಲ್ ಅವರ ವಿರುದ್ಧ ಬಂದಿರುವ ತೀರ್ಪು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಆರೋಪಿತರಾಗಿರುವ ಕಾಂಗ್ರೆಸ್ ಸರ್ಕಾರದ ಭ್ರಷ್ಟರೆಲ್ಲರೂ ಸತೀಶ್ ಸೈಲ್ ಅವರ ಹಾದಿಯನ್ನು ಹಿಂಬಾಲಿಸಬೇಕಾದ ಸ್ಥಿತಿ ಎದುರಾಗಲಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಎಕ್ಸ್ ತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, “ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ತಪ್ಪಿತಸ್ಥರೆಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಈ ನೆಲದ ಕಾನೂನು ಅದೆಷ್ಟು ಗಟ್ಟಿಯಾಗಿದೆ ಎನ್ನುವುದನ್ನು ನಿರೂಪಿಸಿದೆ” ಎಂದಿದ್ದಾರೆ.
“ಈ ತೀರ್ಪು ಮುಡಾ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳಂತಹ ಲೂಟಿಕೋರತನ ಹಾಗೂ ಭ್ರಷ್ಟತೆಯ ಆರೋಪ ಎದುರಿಸುತ್ತಿರುವವರ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ” ಎಂದು ಹೇಳಿದ್ದಾರೆ.
“ಮುಡಾ ಹಗರಣದ ಕುರಿತು ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನುಮತಿಯನ್ನು ಎತ್ತಿ ಹಿಡಿದಿರುವ ಉಚ್ಛ ನ್ಯಾಯಾಲಯದ ಸುದೀರ್ಘ ತೀರ್ಪಿನಲ್ಲಿ ಹಗರಣದ ಕುರಿತಾದ ಉಲ್ಲೇಖಗಳು ಸ್ಪಷ್ಟವಾಗಿ ನಮೂದಾಗಿವೆ. ಈ ನಿಟ್ಟಿನಲ್ಲಿ ಇ.ಡಿ ಹಾಗೂ ಲೋಕಾಯುಕ್ತದಲ್ಲಿ ತನಿಖೆಯೂ ಸಾಗಿದೆ, ಹೀಗಾಗಿಯೂ ಭಂಡತನ ಮೆರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕ ಸತೀಶ್ ಸೈಲ್ ವಿರುದ್ಧದ ತೀರ್ಪಿನಿಂದಾದರೂ ಎಚ್ಚೆತ್ತುಕೊಂಡು ನೈತಿಕತೆ ಮೆರೆದರೆ ಭವಿಷ್ಯತ್ತಿನಲ್ಲಿ ಅವರು ಕಿಂಚಿತ್ತಾದರೂ ಗೌರವ ಉಳಿಸಿಕೊಳ್ಳಬಹುದು” ಎಂದಿದ್ದಾರೆ.
“ಸಿದ್ದರಾಮಯ್ಯ ಅವರು ಪಾಠ ಕಲಿಯದಿದ್ದರೆ ನ್ಯಾಯಾಲಯವೇ ಅವರಿಗೆ ಹಾದಿ ತೋರುವ ಪರಿಸ್ಥಿತಿ ಉದ್ಭವಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಸತೀಶ್ ಸೈಲ್ ಪ್ರಕರಣದ ತೀರ್ಪು ತಿಳಿಸಿಕೊಟ್ಟಿದೆ” ಎಂದು ಹೇಳಿದ್ದಾರೆ.
ಆರ್ ಅಶೋಕ್ ಹೇಳಿದ್ದೇನು?
“ಮತ್ತೊಬ್ಬ ಕಾಂಗ್ರೆಸ್ ಶಾಸಕ ಜೈಲು ಪಾಲು! ವಾಲ್ಮೀಕಿ ಅಭಿವೃದ್ಧಿ ನಿಗಮದ ಎ1 ಆರೋಪಿ ಮಾಜಿ ಸಚಿವ ನಾಗೇಂದ್ರ ಅವರ ನಂತರ ಈಗ ಮತ್ತೊಬ್ಬ ಕಾಂಗ್ರೆಸ್ ಶಾಸಕ ಜೈಲು ಪಾಲಾಗುವ ಸರದಿ ಬಂದಿದೆ. ಬೇಲೆಕೇರಿ ಬಂದರಿನಲ್ಲಿ ಅಕ್ರಮವಾಗಿ ಅದಿರು ಸಾಗರ ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ದೋಷಿ ಎಂದು ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿದೆ. ಈ ಕಡು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಇಡೀ ಸಚಿವ ಸಂಪುಟ ಮತ್ತು ಶಾಸಕರು ಮಾಡಿರುವ ಸರಣಿ ಹಗರಣಗಳ ಮೇಲೆ ‘ಅಲಿ ಬಾಬಾ ಮತ್ತು 135 ಕಳ್ಳರು’ ಎಂದು ಸಿನಿಮಾ ಅಥವಾ ವೆಬ್ ಸೀರೀಸ್ ತೆಗೆಯಬಹುದು” ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ.