ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಮತ್ತು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ನಡುವಿನ ಸಂಘರ್ಷ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ರಾಜ್ಯಪಾಲರು ರಾಜಕೀಯ ಮಾತನಾಡಬಾರದು. ಅವರು ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸಲು ಜವಾಬ್ದಾರರಾಗಿರಬೇಕು ಎಂದು ಹೇಳಿದ್ದಾರೆ.
ಚೆನ್ನೈನ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ಸಚಿವ ಸೆಂಥಿಲ್ ಅವರನ್ನು ರಾಜ್ಯಪಾಲರು ವಜಾಗೊಳಿಸಿರುವ ಕ್ರಮ ಸರಿಯಲ್ಲ. ಇದು ಒಂದು ಪಕ್ಷಕ್ಕೆ ಲಾಭದಾಯಕವಾಗಿದ್ದರೂ ರಾಜಕೀಯವಾಗುತ್ತದೆ. ರಾಜ್ಯಪಾಲರು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಸಲಹೆ ನೀಡಬಹುದು. ಆದರೆ ವಜಾಗೊಳಿಸುವ ನಿರ್ಧಾರ ಸರಿಯಿಲ್ಲ. ರಾಜ್ಯಪಾಲರು ರಾಜಕೀಯ ಮಾತನಾಡುತ್ತಿದ್ದಾರೆ ಎಂದರೆ ಅದು ಡಿಎಂಕೆಯನ್ನು ಗುರಿಯಾಗಿಸುತ್ತದೆ. ಆದರೆ ಬಿಜೆಪಿಗೆ ಲಾಭವಾಗುತ್ತದೆ ಎಂಬುದು ನಮ್ಮ ನಿಲುವಲ್ಲ” ಎಂದು ತಿಳಿಸಿದರು.
“ರಾಜ್ಯಪಾಲರು ರಾಜಕೀಯ ಮಾತನಾಡಬಾರದು. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ರಾಜ್ಯಾಧ್ಯಕ್ಷನಾಗಿ ನಾನು ರಾಜ್ಯಪಾಲರು ರಾಜಕೀಯ ಮಾತನಾಡುತ್ತಿರುವುದು ತಪ್ಪು ನಿದರ್ಶನ ಎಂದು ಪ್ರತಿಪಾದಿಸುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೇಕೆದಾಟು ಯೋಜನೆಗೆ ಕರ್ನಾಟಕಕ್ಕೆ ಅವಕಾಶ ನೀಡುವುದಿಲ್ಲ: ತಮಿಳುನಾಡು ಸಚಿವ
“ರಾಜ್ಯಪಾಲರು ನಿಜವಾಗಿಯೂ ಸರ್ಕಾರವನ್ನು ಟೀಕಿಸಲು ಬಯಸಿದರೆ, ಅವರು ರಾಜ್ಯಪಾಲರ ಭಾಷಣದ ಸಮಯದಲ್ಲಿ ರಾಜ್ಯ ವಿಧಾನಸಭೆಯಲ್ಲಿ ಆ ರೀತಿ ಮಾಡಬಹುದು. ರಾಜ್ಯಪಾಲರು ವಿರೋಧ ಪಕ್ಷಗಳಂತೆ ರಾಜ್ಯ ಸರ್ಕಾರವನ್ನು ಟೀಕಿಸಲು ಸಾಧ್ಯವಿಲ್ಲ. ರಾಜ್ಯಪಾಲರು ರಾಜ್ಯ ಸರ್ಕಾರವನ್ನು ಟೀಕಿಸಲು ಪ್ರಾರಂಭಿಸಿದರೆ, ಅದರ ಆಧಾರದ ಮೇಲೆ ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ” ಎಂದು ಅಣ್ಣಾಮಲೈ ಹೇಳಿದ್ದಾರೆ.
ಅಣ್ಣಾಮಲೈ ಅವರು ರಾಜ್ಯಪಾಲರ ವಿರುದ್ಧ ಟೀಕೆ ವ್ಯಕ್ತಪಡಿಸಿರುವುದು ಇದೇ ಮೊದಲಲ್ಲ. ಈ ವರ್ಷದ ಜನವರಿಯಲ್ಲಿ ಮಾಧ್ಯಮವೊಂದಕ್ಕೆ ಮಾತನಾಡುತ್ತಾ, ತಮಿಳುನಾಡು ಲಾಂಛನವಿಲ್ಲದೆ ಪೊಂಗಲ್ ಆಚರಣೆಗೆ ಆಹ್ವಾನವನ್ನು ನೀಡುವ ರಾಜಭವನದ ನಿರ್ಧಾರ ತಪ್ಪು ಎಂದಿದ್ದರು. ಅಲ್ಲದೆ ತಮಿಳುನಾಡನ್ನು “ತಮಿಳಗಂ” ಎಂದು ಮರುನಾಮಕರಣ ಮಾಡುವ ರಾಜ್ಯಪಾಲರ ಸಲಹೆಗೆ ವಿರೋಧ ವ್ಯಕ್ತಪಡಿಸಿದ್ದರು.
2015ರ ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಿದ್ದ ಕೆಲವು ದಿನಗಳ ನಂತರ ಸರ್ಕಾರದ ಅನುಮತಿಯಿಲ್ಲದೆ ಸಚಿವರನ್ನು ರಾಜ್ಯಪಾಲರು ಏಕಾಏಕಿ ವಜಾಗೊಳಿಸಿದ್ದರು. ನಂತರ ಕೆಲ ಗಂಟೆಗಳಲ್ಲಿ ತಮ್ಮ ನಿರ್ಧಾರವನ್ನು ವಾಪಸ್ ಪಡೆದಿದ್ದರು. ರಾಜ್ಯಪಾಲರ ಸರ್ವಾಧಿಕಾರಿ ಧೋರಣೆ ಈ ಕ್ರಮ ದೇಶಾದ್ಯಂತ ಟೀಕೆ ವ್ಯಕ್ತವಾಗಿತ್ತು.