ನಕಲಿ ಜಾತಿ ಪ್ರಮಾಣ ಪತ್ರವನ್ನು ಬಳಸಿಕೊಂಡು ಅನರ್ಹರು ಮೀಸಲಾತಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಸೇರಿದ ಯುವಕರು ಛತ್ತೀಸ್ಘಡ ವಿಧಾನಸಭೆಯ ಮುಂಗಾರು ಅಧಿವೇಶನದ ಮೊದಲ ದಿನವಾದ ಮಂಗಳವಾರ ವಿಧಾನಸೌಧದ ಬಳಿ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು.
ಸುಮಾರು 20 ಯುವಕರು ಭಿತ್ತಿಪತ್ರಗಳನ್ನು ಹಿಡಿದುಕೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರಾಜ್ಯ ವಿಧಾನಸಭೆ ಭವನದ ಕಡೆಗೆ ಬೆತ್ತಲೆಯಾಗಿ ಸಾಗಿದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ಮುಂದೆ ಹೋಗದಂತೆ ಬೆನ್ನಟ್ಟಿ ತಡೆದು ತಮ್ಮ ವಶಕ್ಕೆ ಪಡೆದರು.
ಛತ್ತೀಸ್ಘಡ ವಿಧಾನಸಭೆಯ ಮುಂದೆ ನಡೆದ ನಗ್ನ ಪ್ರದರ್ಶನ ನಡೆಸಿದ ಪ್ರತಿಭಟನಾಕಾರರು, ನಕಲಿ ಜಾತಿ ಪ್ರಮಾಣಪತ್ರ ಹೊಂದಿರುವ ವ್ಯಕ್ತಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯ ರಚನೆಯಾದಾಗಿನಿಂದ ಸರ್ಕಾರಿ ಉದ್ಯೋಗಗಳು ಮತ್ತು ರಾಜಕೀಯ ಸ್ಥಾನಗಳಲ್ಲಿ ಎಸ್ಟಿ ಎಸ್ಟಿಗೆ ಮೀಸಲಾದ ಕೋಟಾಗಳನ್ನು ದುರ್ಬಳಕೆ ಮಾಡಿಕೊಂಡಿರುವ ಮೀಸಲಾತಿ ವರ್ಗಗಳಿಗೆ ಸೇರದ ವ್ಯಕ್ತಿಗಳ ನಿದರ್ಶನಗಳನ್ನು ಹಲವಾರು ಸರ್ಕಾರಿ ಇಲಾಖೆಗಳು ವರದಿ ಮಾಡಿವೆ. ಈ ಬಗ್ಗೆ ಸ್ಪಂದಿಸಿದ ರಾಜ್ಯ ಸರ್ಕಾರವು ಉನ್ನತ ಮಟ್ಟದ ಜಾತಿ ಪರಿಶೀಲನಾ ಸಮಿತಿ ರಚಿಸಿತ್ತು.
ಈ ಸುದ್ದಿ ಓದಿದ್ದೀರಾ? ಕನ್ನಡ ಚಿತ್ರರಂಗದ ಸದ್ಯದ ದೊಡ್ಡ ಸಮಸ್ಯೆ ಯಾವುದು? ರಾಜ್ ಬಿ ಶೆಟ್ಟಿ ಹೇಳಿದ್ದು ನಿಜವೇ?
ಸಮಿತಿ ತನಿಖೆ ಕೈಗೊಂಡು 2000 ರಿಂದ 2020 ರವರೆಗಿನ ಅವಧಿಯ 758 ಪ್ರಕರಣಗಳಲ್ಲಿ 267 ಜಾತಿ ಪ್ರಮಾಣ ಪತ್ರಗಳ ವಂಚನೆ ಪ್ರಕರಣಗಳನ್ನು ದಾಖಲಿಸಿದೆ. ಇದರ ಪರಿಣಾಮವಾಗಿ, ನಕಲಿ ಪ್ರಮಾಣ ಪತ್ರಗಳನ್ನು ಹೊಂದಿರುವ ಅಧಿಕಾರಿಗಳು ಮತ್ತು ನೌಕರರನ್ನು ನಿರ್ಣಾಯಕ ಸ್ಥಾನಗಳಿಂದ ತಕ್ಷಣವೇ ತೆಗೆದುಹಾಕಲು ಸರ್ಕಾರವು ಆದೇಶವನ್ನು ಹೊರಡಿಸಿತು. ಈ ಆದೇಶಗಳ ಅಸಮರ್ಪಕ ಅನುಷ್ಠಾನದ ಬಗ್ಗೆ ಎಸ್ಟಿ ಎಸ್ಟಿ ಸಮುದಾಯದ ಸಂಘರ್ಷ ಸಮಿತಿಯ ವಕ್ತಾರ ವಿನಯ್ ಕೌಶಲ್ ನಿರಾಶೆ ವ್ಯಕ್ತಪಡಿಸಿದ್ದಾರೆ.
ನಕಲಿ ಪ್ರಮಾಣ ಪತ್ರ ಪಡೆದುಕೊಂಡ ಕೆಲವರು ನಿವೃತ್ತರಾದರು ಮತ್ತು ಒಂದಷ್ಟು ಜನ ಸಮಿತಿಯ ವರದಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಹೆಚ್ಚುವರಿಯಾಗಿ, ಸರ್ಕಾರದ ನಿರ್ದೇಶನದ ಹೊರತಾಗಿಯೂ ಅನೇಕ ನಕಲಿ ಪ್ರಮಾಣ ಪತ್ರ ಹೊಂದಿರುವವರು ಬಡ್ತಿಗಳನ್ನು ಪಡೆಯಲು ಮತ್ತು ಮಹತ್ವದ ಸ್ಥಾನಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿನಯ್ ಕೌಶಲ್ ಬೇಸರ ವ್ಯಕ್ತಪಡಿಸಿದ್ದಾರೆ.