ರಾಜ್ಯದ ಬಿಜೆಪಿ ಸಂಸದರಿಗೆ ತಾಕತ್ತಿದ್ದರೆ ‘ನಮ್ಮ ಮೆಟ್ರೊ’ ಪ್ರಯಾಣ ದರ ಕಡಿಮೆ ಮಾಡಲಿ. ಬಸ್ ಪ್ರಯಾಣ ದರ ಹೆಚ್ಚು ಮಾಡಿದಾಗ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದು, ಗುಲಾಬಿ ಹೂ ಹಿಡಿದುಕೊಂಡು ಬಸ್ ನಿಲ್ದಾಣಕ್ಕೆ ಹೋಗಿ ಪ್ರಯಾಣಿಕರ ಬಳಿ ಕ್ಷಮೆ ಕೇಳಿದ್ದರು. ಈಗಲೂ ಬಿಜೆಪಿ ನಾಯಕರು ಮೆಟ್ರೊ ನಿಲ್ದಾಣಕ್ಕೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಕ್ಷಮೆ ಕೇಳಲಿ. ಬೇಕಿದ್ದರೆ ಗುಲಾಬಿ ಹೂ ನಾವೇ ಖರೀದಿಸಿ ಕೊಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಬೆಂಗಳೂರು ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಮೆಟ್ರೊ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಈ ಹಿಂದೆ ಮೆಟ್ರೊ ಪ್ರಯಾಣ ದರ ಏರಿಕೆ ಮಾಡುವುದಿಲ್ಲ ಎಂದಾಗ ಇದೇ ಬಿಜೆಪಿ ಸಂಸದರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದರು. ಆದರೆ, ಈಗ ದರ ಏರಿಕೆ ಮಾಡಿದಾಗ ನಾವು(ರಾಜ್ಯ ಸರ್ಕಾರ) ಜವಾಬ್ದಾರಿಯೇ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ‘ನಮ್ಮ ಮೆಟ್ರೋ’ದಿಂದ ಹಗಲು ದರೋಡೆ, ಪ್ರಯಾಣಿಕರಿಗೆ ಆರ್ ಅಶೋಕ್ ಗುಲಾಬಿ ಹೂ ಕೊಡುವುದು ಯಾವಾಗ?
“ಕೇಂದ್ರ ಸರ್ಕಾರ ಮೆಟ್ರೊ ದರ ಕಡಿಮೆ ಮಾಡಿದಾಗ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದು. ಹೆಚ್ಚಳ ಮಾಡಿದಾಗ ಸುಮ್ಮನೆ ಕೂರುವುದಲ್ಲ. ಈಗಲೂ ಕೇಂದ್ರ ಸರ್ಕಾರವನ್ನು ಹೋಗಿ ಕೇಳಲಿ ನೋಡೋಣ” ಎಂದು ಸವಾಲು ಹಾಕಿದರು.
ʼನಮ್ಮ ಮೆಟ್ರೊ’ ಪ್ರಯಾಣ ದರವನ್ನು ಬಿಎಂಆರ್ಸಿಎಲ್ ಶೇ.47ರಷ್ಟು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.