ನ್ಯಾಯಾಧೀಶರೊಬ್ಬರು ಕಾಲೇಜೊಂದರಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಪುಸ್ತಕ ಹಂಚಿ, ‘ಜೈ ಶ್ರೀರಾಮ್’ ಘೋಷಣೆ ಕೂಗಿದ್ದಾರೆ. ಮಾತ್ರವಲ್ಲದೆ, ‘ಭಗವದ್ಗೀತೆಯು ಭಾರತದ ಸಂವಿಧಾನಕ್ಕೆ ಸಮವಾದ ಗ್ರಂಥವಾಗಿದೆ’ ಎಂದೂ ಹೇಳಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನವರಿ 25ರಂದು ನಡೆದಿದೆ.
ಹಿರಿಯ ವ್ಯವಹಾರಿಕ (ದಿವಾಣೆ) ನ್ಯಾಯಾಧೀಶ ಎಸ್.ಎಸ್ ಭರತ್ ಅವರು ಭಗವದ್ಗೀತೆ ಹಂಚಿ, ಭಾಷಣದಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ತಹಶೀಲ್ದಾರ್ ಹಾಗೂ ತಾಲ್ಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಕಾರ್ಯಾಲಯವು ಭಗವದ್ಗೀತೆ ಕೃತಿಯನ್ನು ನೆನಪಿನ ಕಾಣಿಕೆಯಾಗಿ ನೀಡಿದೆ ಎಂದು ಕನ್ನಡದ ಸುದ್ದಿತಾಣ ‘ಕನ್ನಡ ಪ್ಲಾನೆಟ್’ ವರದಿ ಮಾಡಿದೆ.
ರಾಷ್ಟ್ರೀಯ ಮತದಾನದ ದಿನಾಚರಣೆಯ ಅಂಗವಾಗಿ ಚುನಾವಣಾ ಸಾಕ್ಷರತಾ ಕ್ಲಬ್, ಐಕ್ಯುಎಸಿ, ತಹಶೀಲ್ದಾರ್ ಕಚೇರಿ ಹಾಗೂ ಸರ್ಕಾರಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಗುರುವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ನ್ಯಾ. ಎಸ್.ಎಸ್ ಭರತ್, ನ್ಯಾ. ಯಶವಂತ್ ಕುಮಾರ್ ಕೆ, ಎಪಿಪಿ ಕವಿತಾ ಎಚ್.ಡಿ, ಜಕ್ಕನಗೌಡರ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ್ದ ನ್ಯಾಯಾಧೀಶ ಎಸ್.ಎಸ್ ಭರತ್, “ನಮ್ಮ ಧರ್ಮಗ್ರಂಥ ಭಗವದ್ಗೀತೆಯು ಸಂವಿಧಾನಕ್ಕೆ ಸಮವಾಗಿದೆ” ಎಂದಿದ್ದಾರೆ. ಮಾತ್ರವಲ್ಲದೆ, ಭಾಷಣದ ಕೊನೆಯಲ್ಲಿ ‘ಜೈ ಶ್ರೀರಾಮ್‘ ಎಂದೂ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕ ವಿಜಯೇಂದ್ರ, “ಕಾರ್ಯಕ್ರಮದಲ್ಲಿ ಯಾರು ಏನು ಮಾತನಾಡಿದರೆಂದು ಎಲ್ಲವನ್ನೂ ಗಮನಿಸಲಾಗುವುದಿಲ್ಲ. ಆದರೆ, ನ್ಯಾಯಮೂರ್ತಿಗಳು ತಮ್ಮ ಭಾಷಣದ ಕೊನೆಯಲ್ಲಿ ಜೈಶ್ರೀರಾಮ್ ಎಂದು ಹೇಳಿದ್ದಂತೆ ಕೇಳಿಸಿತು. ವಿದ್ಯಾರ್ಥಿಗಳು ಯಾರೂ ಜೈ ಶ್ರೀರಾಮ್ ಎಂದು ಕೂಗಲಿಲ್ಲ. ಅಲ್ಲದೆ, ನಾವು ನ್ಯಾಯಾಧೀಶರನ್ನು ಪ್ರಶ್ನೆ ಮಾಡವುದಕ್ಕಾಗಲೀ, ತಿಳಿಹೇಳುವುದಕ್ಕಾಗಲೀ ಸಾಧ್ಯವಿಲ್ಲ” ಎಂದು ತಿಳಿಸಿರುವುದಾಗಿ ‘ಕನ್ನಡ ಪ್ಲಾನೆಟ್’ ವರದಿ ಮಾಡಿದೆ.
“ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗುವ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಭಗವದ್ಗೀತೆ ಹಂಚಲಾಗಿಲ್ಲ. ವೇದಿಕೆಯ ಮೇಲಿದ್ದ ಅತಿಥಿಗಳಿಗೆ ತಹಶೀಲ್ದಾರ್ ಕಚೇರಿಯಿಂದಲೇ ಪುಸ್ತಕಗಳನ್ನು ಪ್ರಾಯೋಜಿಸಲಾಗಿತ್ತು” ಎಂದು ಅವರು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ತಹಶೀಲ್ದಾರ್ ಕಚೇರಿಯಿಂದ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಲಾಗಿದೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿರುವ ಶಹಶೀಲ್ದಾರ್ ಜಕ್ಕನ ಗೌಡರ್, “ಕಾರ್ಯಕ್ರಮದಲ್ಲಿ ಯಾವ ಪುಸ್ತಕ ಕೊಟ್ಟರು ಎಂದು ನನಗೆ ಗೊತ್ತಿಲ್ಲ. ವಿಚಾರಿಸುತ್ತೇನೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಶೆಟ್ಟರ್ ನಡೆಯಿಂದ ಬೆಳಗಾವಿಯಲ್ಲಿ ಅಂಗಡಿ ಕುಟುಂಬದ ಟಿಕೆಟ್ ಭದ್ರ?
ಭಾರತದ ಸಂವಿಧಾನವು ಧರ್ಮದ ವಿಷಯದಲ್ಲಿ ಸರ್ಕಾರ ಮತ್ತು ಆಡಳಿತಾಂಗಗಳು ಕಡ್ಡಾಯವಾಗಿ ತಟಸ್ಥತೆ ವಹಿಸಬೇಕೆ ಎನ್ನುತ್ತದೆ. ಯಾವುದೇ ಧರ್ಮವನ್ನಾಗಲೀ, ಧಾರ್ಮಿಕ ಗ್ರಂಥಗಳನ್ನಾಗಲೀ ಸರ್ಕಾರ ಉತ್ತೇಜಿಸುವುದು ಸಂವಿಧಾನದ ಮೂಲತತ್ವಗಳಿಗೆ ವಿರೋಧಿಯಾಗಿದೆ. ಹೀಗಿದ್ದರೂ, ಸರ್ಕಾರಿ ಕಾಲೇಜಿನಲ್ಲಿ ಸರ್ಕಾರದ ಆಡಳಿತಾಂಗವೇ ಆಯೋಜಿಸಿದ ಕಾರ್ಯಕ್ರಮದಲ್ಲಿ ಧಾರ್ಮಿಕ ಗ್ರಂಥ ಭಗವದ್ಗೀತೆಯನ್ನು ಹಂಚಿರುವುದು ಮತ್ತು ನ್ಯಾಯಮೂರ್ತಿಯೊಬ್ಬರು ಜೈಶ್ರೀರಾಮ್ ಎಂದು ಘೋಷಣೆ ಕೂಗುವುದು ಸಂವಿಧಾನ ವಿರೋಧಿ ನಡೆಯೆಂದು ಹಲವರು ಕಿಡಿಕಾರಿದ್ದಾರೆ.
“ಉನ್ನತ ಸ್ಥಾನದಲ್ಲಿ ಕುಳಿತವರು ಜೈಶ್ರೀರಾಮ್ ಎಂದು ಘೋಷಣೆ ಕೂಗಿದ ಬಗ್ಗೆ ನನ್ನ ಮಗ ಬಂದು ಹೇಳಿದ. ಕಾಲೇಜೊಂದು ಹೀಗೆ ರಾಜಕೀಯ ಕೇಂದ್ರವಾದರೆ ನಮ್ಮ ಮಕ್ಕಳು ಪೂರ್ವಾಗ್ರಹಪೀಡಿತರಾಗುವ ಸಾಧ್ಯತೆ ಇರುತ್ತದೆ. ಕಾಲೇಜುಗಳು ವಿದ್ಯಾರ್ಥಿಗಳಲ್ಲಿ ಸಂಯಮ, ಸಹಬಾಳ್ವೆ, ಸರ್ವಧರ್ಮ ಸಮನ್ವಯಗಳನ್ನು ಬೋಧಿಸಬೇಕು. ಸಂವಿಧಾನದ ಮೌಲ್ಯಗಳನ್ನು ತಿಳಿಸಬೇಕು. ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಹುಟ್ಟಿದ ಜಿಲ್ಲೆಗೆ ಯಾರೂ ಕಳಂಕ ಹಚ್ಚಬಾರದು” ಎಂದು ಕಾಲೇಜು ವಿದ್ಯಾರ್ಥಿಯೊಬ್ಬರ ಪೋಷಕ ನರೇಂದ್ರ ಕುಮಾರ್ ಹೇಳಿರುವುದಾಗಿ ‘ಕನ್ನಡ ಪ್ಲಾನೆಟ್’ ವರದಿ ಮಾಡಿದೆ.