- ರಾಜ್ಯದಲ್ಲಿ ಸದ್ಯ ಸಿಐಡಿ ಹೆಚ್ಚು ಶಕ್ತಿಯುತವಾಗಿದೆ
- ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆಯೂ ತನಿಖೆ
ಬಿಟ್ ಕಾಯಿನ್ ಬಗ್ಗೆ ಹಿಂದಿನ ಸರ್ಕಾರ ತನಿಖೆ ಮುಕ್ತಾಯಗೊಳಿಸಿದೆ. ಈಗ ನಾವು ಈ ಬಗ್ಗೆ ಮರುತನಿಖೆ ಮಾಡಿ ಸತ್ಯ ಹೊರಹಾಕುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ವಿಧಾನಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, “ಬಿಟ್ ಕಾಯಿನ್ ತನಿಖೆಯನ್ನು ಸಿಐಡಿಗೆ ಕೊಡಬೇಕಾ ಅಥವಾ ಬೇರೆ ತನಿಖಾ ಸಂಸ್ಥೆಗೆ ಕೊಡಬೇಕಾ ಎಂಬುದನ್ನು ನಿರ್ಧರಿಸುತ್ತೇವೆ” ಎಂದರು.
“ರಾಜ್ಯದಲ್ಲಿ ಸದ್ಯ ಸಿಐಡಿ ಹೆಚ್ಚು ಶಕ್ತಿಯುತವಾಗಿದೆ. ಬೇರೆ ಬೇರೆ ಏಜೆನ್ಸಿಗಳ ಸಹಕಾರವನ್ನು ಸಿಐಡಿಗೆ ನೀಡಿ, ತನಿಖೆಯನ್ನು ಸಿಐಡಿಗೆ ಕೊಡುವ ಬಗ್ಗೆ ತೀರ್ಮಾನ ಮಾಡಲಾಗುತ್ತಿದೆ” ಎಂದು ಹೇಳಿದರು.
“ಎರಡು ಬಾರಿ ಬಿಟ್ ಕಾಯಿನ್ ಹಗರಣ ಕುರಿತು ಸಭೆ ನಡೆಸಲಾಗಿದೆ. ತಾಂತ್ರಿಕವಾಗಿ ಯಾರಿಗೆಲ್ಲ ಹಣ ಹೋಗಿದೆ? ಕಾನೂನುಬಾಹಿರವಾಗಿ ಸಾವಿರಾರು ಕೋಟಿ ಹಣ ವರ್ಗಾವಣೆಯಾಗಿದೆ. ಕೆಲವೊಂದು ವಿಚಾರಗಳನ್ನು ಹೇಳಲು ಆಗಲ್ಲ. ಯಾವ ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ತನಿಖೆ ಮಾಡಿಸುತ್ತೇವೆ” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಹಿಂದಿನ ಸರ್ಕಾರದ ಪ್ರಮುಖ ಹಗರಣಗಳ ತನಿಖೆ ನಡೆಸುತ್ತೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಪಿಎಸ್ಐ ಪ್ರಕರಣ
“ಪಿಎಸ್ಐ ಪ್ರಕರಣವನ್ನು ನ್ಯಾಯಾಲಯ ತೀರ್ಪಿನ ಆಧಾರದಲ್ಲಿ ನಿರ್ಧಾರ ಮಾಡುತ್ತೇವೆ. ಯಾವ ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಆ ಬಗ್ಗೆ ತನಿಖೆ ಮಾಡಿಸುತ್ತೇವೆ. ಇದೇ ಮಾತನ್ನು ಸಿಎಂ ಕೂಡ ಹೇಳಿದ್ದಾರೆ” ಎಂದರು.
ಫೇಕ್ ನ್ಯೂಸ್ ಹರಡುವವರಿಗೆ ಶಿಕ್ಷೆ
“ಫೇಕ್ ನ್ಯೂಸ್ ಹರಡುವುದರಲ್ಲಿ ಕೆಲವರು ನಿರತರಾಗಿದ್ದಾರೆ. ಅದು ರಾಜಕೀಯ ಇರಬಹುದು ಅಥವಾ ಸಮಾಜದ ಶಾಂತಿ ಕದಡುವ ವಿಚಾರ ಇರಬಹುದು. ಸುಳ್ಳು ಸುದ್ದಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದನ್ನು ಗಮನಿಸಿದ್ದೇವೆ. ಫೇಕ್ ನ್ಯೂಸ್ ಹರಡುವವರಿಗೆ ಶಿಕ್ಷೆ ನೀಡುವ ನಿಟ್ಟಿನಲ್ಲಿ ಸೂಕ್ತ ಕಾನೂನು ಜಾರಿಗೆ ತರಲಾಗುವುದು” ಎಂದು ಇದೇ ವೇಳೆ ಪರಮೇಶ್ವರ್ ತಿಳಿಸಿದರು.
“ಸಂಬಂಧವೇ ಇಲ್ಲದ ಫೋಟೋಗಳನ್ನು ಹಾಕಿ ಸಂಬಂಧ ಕಲ್ಪಿಸುವುದು ನಡೆಯುತ್ತಿದೆ. ಸರ್ಕಾರ ರಚನೆ ಆದಮೇಲೆ ಫೇಕ್ ನ್ಯೂಸ್ ಗಮನಿಸಿದ್ದೇವೆ. ಇದನ್ನು ಇಲ್ಲಿಗೆ ನಿಲ್ಲಿಸದಿದ್ದರೆ ಬಹಳಷ್ಟು ಸಮಸ್ಯೆ ಎದುರಿಸಲಿದ್ದಾರೆ” ಎಂದು ಎಚ್ಚರಿಸಿದರು.