“ಆರ್ಸಿಬಿ ತಂಡದ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಘಟನೆಯ ಹಿಂದೆ ಬಿಜೆಪಿಯ ಷಡ್ಯಂತ್ರ ಅಡಗಿದೆ” ಎಂದು ಆರೋಪಿಸಿ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ನೇತೃತ್ವದ ಕಾಂಗ್ರೆಸ್ ನಿಯೋಗವು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಆಯೋಗಕ್ಕೆ ಸೋಮವಾರ ದೂರು ನೀಡಿದೆ.
ದೂರು ನೀಡಿದ ಬಳಿಕ ಮಾತನಾಡಿದ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್, “ಬಿಜೆಪಿಯವರ ಟ್ವೀಟ್ಗಳು ಮತ್ತು ವಿಡಿಯೋಗಳನ್ನು ದೂರಿನ ಜೊತೆಗೆ ಸಾಕ್ಷ್ಯವಾಗಿ ಆಯೋಗಕ್ಕೆ ನೀಡಲಾಗಿದೆ” ಎಂದರು.
“ಆರ್ಸಿಬಿ ವಿಜಯೋತ್ಸವದ ವೇಳೆ ಜನಸಂದಣಿ ನಡುವೆ ಬಿಜೆಪಿಯ ಕೆಲವು ಗೂಂಡಾಗಳು ಸೇರಿಕೊಂಡು ನೂಕಾಟ, ತಳ್ಳಾಟ ಉಂಟಾಗುವಂತೆ ಮಾಡಿದ್ದಾರೆ. ಯಾರು ಆ ರೀತಿ ತಳ್ಳಿದ್ದಾರೆ ಎಂಬುದನ್ನು ಗುರುತು ಮಾಡಿ ವಿಡಿಯೋ ನೀಡಿದ್ದೇವೆ. ಇದರ ಹಿಂದೆ ದೊಡ್ಡ ಸಂಚು ಇರುವುದು ನಿಶ್ಚಿತ. ಹೀಗಾಗಿ, ವಿವಿಧ ಆಯಾಮಗಳಿಂದ ತನಿಖೆ ಆಗಬೇಕು” ಎಂದು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಆಯೋಗಕ್ಕೆ ಒತ್ತಾಯಿಸಿದ್ದಾರೆ.
ದೂರಿನಲ್ಲೇನಿದೆ?
ಕಳೆದ ಜೂನ್ 4,2025ರಂದು ಬೆಂಗಳೂರು ನಗರದಲ್ಲಿ ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ದುರ್ಘಟನೆಯಲ್ಲಿ 11 ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರತೀಯ ಜನತಾ ಪಕ್ಷ ಹಾಗೂ ಜನತಾದಳ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಹೇಳಿಕೆಯನ್ನು ನೀಡಿ ಜನರ ಭಾವನೆಯನ್ನ ಕೆರಳಿಸುವಂತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಮಾಹಿತಿ ಹಂಚಿಕೊಂಡಿದೆ. ಬಿಸಿಸಿಐ ಹಾಗೂ ಐಸಿಸಿ ಸಮಿತಿಗಳ ನಿರ್ಲಕ್ಷದಿಂದಲೂ ಈ ದುರ್ಘಟನೆ ಸಂಭವಿಸಿರುವುದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಗುಜರಾತ್ನಲ್ಲಿ ಜೂನ್ 3ರಂದು ನಡೆದ ಐಪಿಎಲ್ ನ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಆರ್ಸಿಬಿ ತಂಡ ಪಂದ್ಯವನ್ನು ಗೆದ್ದಿತ್ತು. ಆ ದಿನ ರಾತ್ರಿ ಇಡೀ ಬೆಂಗಳೂರು ನಗರದ ಜನತೆ ವಿಜಯೋತ್ಸವನ್ನು ಆಚರಿಸಿ ಸುಮಾರು ಬೆಳಗಿನ ಜಾವ ಮೂರು ನಾಲ್ಕು ಗಂಟೆವರೆಗೂ ಜನರು ವಿಜಯೋತ್ಸವವನ್ನು ಆಚರಿಸುತ್ತಿದ್ದರು, ಲಕ್ಷಾಂತರ ಜನರು ಈ ವಿಜಯೋತ್ಸವದಲ್ಲಿ ಭಾಗವಹಿಸಿದ್ದರೂ ಸಹ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದ ಹಾಗೆ ಸೂಕ್ತ ಬಂದೋಬಸ್ತ್ ಕ್ರಮವನ್ನು ಕೈಗೊಳ್ಳಲಾಗಿತ್ತು. ಜೂ.4ರಂದು ಆರ್ಸಿಬಿ ತಂಡ ದಿಢೀರ್ ಆಗಿ ಬೆಂಗಳೂರು ನಗರಕ್ಕೆ ಆಗಮಿಸಿರುವುದು ಈ ದುರ್ಘಟನೆಗೆ ಮೂಲ ಕಾರಣ, ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರ್ಘಟನೆಗೆ ಕೆ.ಎಸ್.ಸಿ.ಎ.. ಆರ್ಸಿಬಿ ಪ್ರಾಯೋಜಕರು ಹಾಗೂ ಇದರಿಂದ ತೆರಿಗೆ ಲಾಭ ಪಡೆಯುತ್ತಿರುವ ಸಂಸ್ಥೆಗಳೇ ಜವಾಬ್ದಾರರು ಎಂದು ದೂರಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಹಾಗೂ ಕಾನೂನು ಸುವ್ಯಸ್ಥೆಗೆ ಭಂಗ ತರುವ ಅಂಶವನ್ನು ಬಿಜೆಪಿ ಜೆಡಿಎಸ್ ಪಕ್ಷದ ವತಿಯಿಂದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸರ್ಕಾರದ ವಿರುದ್ಧ ಮಾಹಿತಿಯನ್ನು ನೀಡಿ ಪ್ರಚೋದಿಸಿದ್ದಾರೆ. ಇದರಿಂದ ಇಂತಹ ದುರ್ಘಟನೆಗೆ ಹಾಗೂ ಸಾವಿಗೆ ಅವರ ಟ್ವಿಟರ್ ಸಂದೇಶವೇ ಮೂಲ ಕಾರಣ ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಅವಮಾನ ಅನುಭವಿಸಿದ್ದ ನಾಯಕ: ದಕ್ಷಿಣ ಆಫ್ರಿಕಾಕ್ಕೆ 27 ವರ್ಷದ ಬಳಿಕ ಐಸಿಸಿ ಟ್ರೋಫಿ ತಂದುಕೊಟ್ಟ
ಐಪಿಎಲ್ ಕ್ರಿಕೆಟ್ ತಂಡಕ್ಕೆ ಮೂಲ ವಾರಸುದಾರರೇ ಬಿಸಿಸಿಐ ಹಾಗೂ ಐಸಿಸಿ ಸಮಿತಿಗಳು ಈ ಸಮಿತಿಯ ಮುಖ್ಯಸ್ಥರು ಮತ್ತು ಐಸಿಸಿ ಮುಖ್ಯಸ್ಥರಾದ ಜಯ್ ಶಾ ಇವರ ವಿರುದ್ಧ ಇಲ್ಲಿಯವರೆಗೂ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ ಇದರ ಸಂಪೂರ್ಣ ಹೊಣೆಯನ್ನ ಈ ಸಮಿತಿಗಳೇ ವಹಿಸಿಕೊಳ್ಳಬೇಕು. ಬಿಜೆಪಿ ಹಾಗೂ ಜೆಡಿಎಸ್ನ ಸಾಮಾಜಿಕ ಜಾಲತಾಣದಲ್ಲಿ ಅಳವಡಿಸಿರುವ ಮಾಹಿತಿಯನ್ನು ಈಗಾಗಲೇ ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಮಹಾ ನಿರ್ದೇಶಕರಿಗೆ ಮಾಹಿತಿಯನ್ನು ನೀಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ದೂರನ್ನು ನೀಡಿದ್ದೇವೆ. ತಮ್ಮ ನೇತೃತ್ವದಲ್ಲಿ ರಚನೆಯಾಗಿರುವ ಏಕ ಸದಸ್ಯ ತನಿಖಾ ಆಯೋಗದ ಮುಂದೆ ಈ ದಾಖಲಾತಿಗಳನ್ನು ಸಲ್ಲಿಸುತ್ತಿದ್ದೇವೆ. ದಯಮಾಡಿ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ನಿಯೋಗವು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಆಯೋಗಕ್ಕೆ ಸೋಮವಾರ ದೂರು ನೀಡಿದೆ.
