ಕಳೆದ ಹತ್ತು ವರ್ಷಗಳಿಂದ ನಿರಂಕುಶ ಅಧಿಕಾರದ ಅಡಿಯಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಮಾನ್ಯ ಮಾಡದೆ ಇಡೀ ಆಡಳಿತ ವ್ಯವಸ್ಥೆಗೆ ಮಸಿ ಬಳಿದಿರುವ ಮೋದಿ ಸರ್ಕಾರ, ತನ್ನ ತಪ್ಪುಗಳನ್ನು ತಿದ್ದುಕೊಂಡು ಜನರ ಧ್ವನಿಗೆ ಮಾನ್ಯತೆ ಕೊಡುವ ಬದಲು ವಿರೋಧ ಪಕ್ಷದ ನಾಯಕರ ಮಾತುಗಳನ್ನು ಅಲ್ಲಗಳೆಯುವ ಉದ್ಧಟತನ ತೋರುತ್ತಿದೆ ಎಂದು ಮಾಜಿ ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷ ರಮೇಶ್ ಬಾಬು ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆದ ರಾಹುಲ್ ಗಾಂಧಿ ಅವರು ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಾಯದ ಸಂದರ್ಭದಲ್ಲಿ ಅತ್ಯಂತ ಸಮರ್ಥವಾಗಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ” ಎಂದರು.
“ಕರ್ನಾಟಕದಲ್ಲಿ ಮೊದಲ ಬಾರಿಗೆ ವಿಧಾನಸಭೆಯ ಸದಸ್ಯರಾಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ರಾಹುಲ್ ಗಾಂಧಿ ಭಾಷಣವನ್ನು ಆಧಾರರಹಿತ ಸುಳ್ಳು ಆರೋಪ ಎಂದು ಟೀಕಿಸಿದ್ದಾರೆ. ಮೂರು ಹೆತ್ತವಳು ಆರು ಹೆತ್ತವಳಿಗೆ ಹೇಳಿದಂತೆ ಎನ್ನುವ ಗಾದೆ ಮಾತಿಗೆ ಅನುಗುಣವಾಗಿ ವಿಜಯೇಂದ್ರ ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಟೀಕಿಸುವ ಪ್ರಯತ್ನ ಮಾಡಿದ್ದಾರೆ” ಎಂದು ಕುಟುಕಿದರು.
“ರಾಹುಲ್ ಗಾಂಧಿರವರು 5ನೇ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದು ಭಾರತ್ ಜೋಡೋ/ ನ್ಯಾಯಯಾತ್ರೆ ಮುಖಾಂತರ ದೇಶದ ಉದ್ದಗಲಕ್ಕೂ ಪಾದಯಾತ್ರೆ ಮಾಡಿ ಜನಸಾಮಾನ್ಯರ ನಾಡಿಮಿಡಿತವನ್ನು ಅರಿತಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕರು ಹಿಂದೂ ಧರ್ಮ ಯಾವತ್ತೂ ದ್ವೇಷ ಮತ್ತು ಭಯವನ್ನು ಹರಡುವುದಿಲ್ಲ ಎಂದು ಹೇಳಿದ್ದಾರೆ” ಎಂದರು.
“ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ವ್ಯವಸ್ಥಿತವಾಗಿ ಈ ಕೆಲಸ ಮಾಡುತ್ತಿದೆ ಮತ್ತು ಸಂವಿಧಾನವನ್ನು ತಿರುಚುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ. ದುರ್ಬಲರ, ದಲಿತರ ಮತ್ತು ಅಲ್ಪ ಸಂಖ್ಯಾತರ ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯವರು ಸರ್ಕಾರದ ವೈಫಲ್ಯಗಳನ್ನು ಬೆತ್ತಲೆಗೊಳಿಸಿದರೆ ಉತ್ತರಿಸಲಾಗದ ಮೋದಿ ಸರ್ಕಾರ ಧರ್ಮದ ಹೆಸರಿನಲ್ಲಿ ರಕ್ಷಣೆ ಪಡೆದುಕೊಳ್ಳಲು ಮುಂದಾಗಿದೆ” ಎಂದು ಟೀಕಿಸಿದ್ದಾರೆ.
“ರಾಜ್ಯದಲ್ಲಿ ಯತ್ನಾಳರಂತಹ ನಾಯಕರಿಗೆ ಉತ್ತರ ನೀಡಲು ಸಾಧ್ಯವಾಗದೆ ಕದ್ದು ಓಡಾಡುವ ವಿಜಯೇಂದ್ರ ರಾಹುಲ್ ಗಾಂಧಿ ಅವರ ಟೀಕೆಗೆ ಮುಂದಾಗಿರುವುದು ಅವರ ಫಲಾಯನ ವಾಡದ ಸಂಕೇತವಾಗಿದೆ. ಎ ಕೆ ಸುಬ್ಬಯ್ಯ ಅವರಿಂದ ನಳಿನ್ ಕುಮಾರ್ ಕಟೀಲ್ ವರೆಗೆ ಬಿಜೆಪಿಯಲ್ಲಿ ಅನೇಕರು ಅಧ್ಯಕ್ಷರಾಗಿದ್ದು, ವಿಜಯೇಂದ್ರರಂತಹ ವೈಫಲ್ಯದ ನಾಯಕರನ್ನು ಬಿಜೆಪಿ ಯಾವತ್ತೂ ಕಂಡಿರಲಿಲ್ಲ” ಎಂದು ವಾಗ್ದಾಳಿ ನಡೆಸಿದರು.
“ಬಿಜೆಪಿ ಗುಂಪುಗಾರಿಕೆಯೇ ಇವರ ನಾಯಕತ್ವದಲ್ಲಿ ಮಿತಿ ಮೀರಿದ್ದು, ಇವರು ಮತ್ತು ಆರ್ ಅಶೋಕ್ ಅವರು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಇಂತಹ ಪೊಳ್ಳು ಟೀಕೆಗಳನ್ನು ಮಾಡುತ್ತಿದ್ದಾರೆ. ಲೋಕಸಭೆಯ ಸಮರ್ಥ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಟೀಕೆ ಮಾಡಿ ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳುವುದಾದರೆ ಕಾಂಗ್ರೆಸ್ ಪಕ್ಷ ಅವರಿಗೆ ಶುಭ ಹಾರೈಸುತ್ತದೆ” ಎಂದು ಲೇವಡಿ ಮಾಡಿದ್ದಾರೆ.
