ಅಕ್ರಮ ಕಲ್ಲುಕೋರೆ: ಬಿಜೆಪಿ ಮುಖಂಡನ ಬಂಧನ; ಠಾಣೆಗೆ ನುಗ್ಗಿ ಪೊಲೀಸರಿಗೆ ಧಮ್ಕಿ ಹಾಕಿದ ಬಿಜೆಪಿ ಶಾಸಕ!

Date:

Advertisements

ಅಕ್ರಮ ಕಲ್ಲುಕೋರೆ ನಡೆಸುತ್ತಿದ್ದ ಆರೋಪದಲ್ಲಿ ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷನನ್ನು ಪೊಲೀಸರು ವಶಕ್ಕೆ ಪಡೆದ ನೆಪದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ಪೊಲೀಸ್ ಠಾಣೆಯಲ್ಲಿ ರಾತ್ರೋರಾತ್ರಿ ಧರಣಿ ನಡೆಸಿದ್ದಲ್ಲದೆ, ಪೊಲೀಸರಿಗೇ ಧಮ್ಕಿ ಹಾಕಿರುವ ಘಟನೆ ವರದಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಪೊಲೀಸರ ಸಹಕಾರದೊಂದಿಗೆ ನಡೆದ ದಾಳಿಯ ಸಂದರ್ಭದಲ್ಲಿ ಸ್ಥಳದಿಂದ ಸ್ಪೋಟಕಗಳು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಹಾಗೂ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಎಂಬವರ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಸ್ಥಳದಿಂದ ಅಕ್ರಮ ಗಣಿಗಾರಿಕೆಯಿಂದ ತೆಗೆದಿರುವ ಕಲ್ಲುಗಳ ರಾಶಿ, ಒಂದು ಹಿಟಾಚಿ ವಾಹನ, ಒಂದು ಟ್ರಾಕ್ಟರ್, ಕಲ್ಲು ಸ್ಫೋಟಕ್ಕೆ ಬಳಸುವ 4 ಸಜೀವ ಮದ್ದುಗುಂಡು, ಬಳಕೆಯಾಗಿರುವ 4 ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದ್ದರು.

Advertisements

ಸ್ಥಳದಲ್ಲಿದ್ದ ಕಾರ್ಮಿಕರನ್ನು ವಿಚಾರಣೆ ನಡೆಸುವ ವೇಳೆ ಅಕ್ರಮ ಗಣಿಗಾರಿಕೆಯನ್ನು ಆರೋಪಿಗಳಾದ ಪ್ರಮೋದ್ ಹಾಗೂ ಶಶಿರಾಜ್ ಎಂಬವರು ನಡೆಸುತ್ತಿರುವುದಾಗಿ ತಿಳಿಸಿದ್ದರು. ಅದರಂತೆ ಬೆಳ್ತಂಗಡಿ ತಹಶೀಲ್ದಾರ್ ನೀಡಿದ್ದ ದೂರಿನಂತೆ ಅವರಿಬ್ಬರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಆರೋಪಿಗಳಾದ ಪ್ರಮೋದ್ ಹಾಗೂ ಶಶಿರಾಜ್ ಎಂಬುವವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ Explosive Actನ ಸಂಬಂಧಪಟ್ಟ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಶಶಿರಾಜ್ ಎಂಬಾತನನ್ನು ಶನಿವಾರ ರಾತ್ರಿ ಮನೆಯಿಂದ ಪೊಲೀಸರು ಬಂಧಿಸಿದ್ದರು. ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಪ್ರಮೋದ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬಂಧನಕ್ಕೊಳಗಾಗಿರುವ ಶಶಿರಾಜ್ ಎಂಬಾತ ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ಕೂಡ ಆಗಿದ್ದಾನೆ. ಬಂಧನ ವಿಷಯ ತಿಳಿಯುತ್ತಿದ್ದಂತೆಯೇ ತಮ್ಮ ಬೆಂಬಲಿಗರೊಂದಿಗೆ ಬೆಳ್ತಂಗಡಿ ಠಾಣೆಗೆ ಆಗಮಿಸಿದ ಬಿಜೆಪಿ ಶಾಸಕ ಹರೀಶ್ ಪೂಂಜಾ, ಠಾಣೆಯ ಎದುರು ಧರಣಿ ಕುಳಿತು ಪೊಲೀಸರ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

WhatsApp Image 2024 05 19 at 3.21.55 PM
ಬಂಧಿತ ಶಶಿರಾಜ್ ಶೆಟ್ಟಿ

ಈ ವೇಳೆ ಪೊಲೀಸರಿಗೆ ಧಮ್ಕಿ ಹಾಕಿದ ಶಾಸಕ ಹರೀಶ್ ಪೂಂಜಾ, “ನಮ್ಮ ಕಾರ್ಯಕರ್ತ ಕೊಲೆ, ರೇಪ್ ಮಾಡಿಲ್ಲ, ಯಾವ ಅಪರಾಧ ಮಾಡಿದ್ದಾನೆಂದು ಹೇಳಿ ರಾತ್ರಿ ವೇಳೆ ಮನೆಗೆ ನುಗ್ಗಿ ಎಳ್ಕೊಂಡು ಬಂದಿದ್ದೀರಿ ? ಯಾವ ಎಫ್‌ಐಆರ್ ಆಗಿದೆ, ನೀವು ದಾಳಿ ನಡೆಸಿದಾಗ ಯಾರಿದ್ದರು, ಅವರನ್ನು ವಶಕ್ಕೆ ತಗೊಂಡಿದ್ದೀರಲ್ವಾ. ಆ ಜಾಗದ ಮಾಲೀಕರು ಇವರ ಹೆಸರು ಹೇಳಿದ್ದಾರೆಯೇ. ಒಬ್ಬ ಅಮಾಯಕ ಕಾರ್ಯಕರ್ತನನ್ನು ಮನೆಗೆ ನುಗ್ಗಿ ಮಹಿಳೆಯರ ಮುಂದಿನಿಂದಲೇ ಏಕಾಏಕಿ ಎಳ್ಕೊಂಡು ಹೋಗುವ ಯಾವ ಅಪರಾಧ ಮಾಡಿದ್ದಾರೆ” ಎಂದು ಜೋರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ.

“ನೀವು ಕಾಂಗ್ರೆಸ್ ಏಜೆಂಟ್‌ ರೀತಿ ವರ್ತಿಸ್ತೀರಿ, ನೀವು ಯಾರ ಒತ್ತಡದಲ್ಲಿ ಕೆಲಸ ಮಾಡ್ತಾ ಇದ್ದೀರಿ ಅಂತ ಗೊತ್ತಿದೆ. ಕಾಂಗ್ರೆಸ್ ಸರ್ಕಾರ ಬಂದಿದೆ ಅಂತ ನಿಮಗೆ ದರ್ಪ ಇದೆ” ಎಂದು ಹೇಳಿದ ಶಾಸಕ ಪೂಂಜಾ, ‘ಪ್ರೊಸೀಜರ್’ ಎಂದು ಹೇಳಿದ ಒಬ್ಬ ಪೊಲೀಸ್ ಅಧಿಕಾರಿಗೆ, “ನಿಮ್ಮ ಪ್ರೊಸೀಜ‌ರ್ ಬಗ್ಗೆ ನನಗೆ ನಿಮಗಿಂತ ಹೆಚ್ಚು ಗೊತ್ತಿದೆ. ಎಫ್‌ಐಆರ್ ಈಗ ಮಾಡಿರೋದಲ್ವಾ. ಇದನ್ನೆಲ್ಲ ಯಾರ ಒತ್ತಡದಲ್ಲಿ ಮಾಡ್ತಿದ್ದೀರಿ ಅಂತ ನನಗೆ ಗೊತ್ತಿದೆ” ಎಂದು ಜೋರು ಧ್ವನಿಯಲ್ಲಿ ಇನ್ಸ್ ಪೆಕ್ಟರ್ ಮತ್ತು ಪೊಲೀಸ್ ಪೇದೆಗಳನ್ನು ಬಿಜೆಪಿ ಶಾಸಕ, ಸರ್ಕಾರಿ ಅಧಿಕಾರಿಗಳ ಕರ್ತವ್ಯವನ್ನೇ ಪ್ರಶ್ನಿಸಿದ್ದಾರೆ.

“ಎಸ್ಪಿ, ತಹಸೀಲ್ದಾ‌ರ್ ಫೋನ್ ರಿಸೀವ್ ಮಾಡ್ತಿಲ್ಲ. ಪೊಲೀಸ್ ಠಾಣೆ ನಿಮ್ಮ ಅಪ್ಪನ ಮನೆ ಆಸ್ತಿಯಲ್ಲ. ಸಾರ್ವಜನಿಕ ಆಸ್ತಿ. ನಮ್ಮ ಕಾರ್ಯಕರ್ತನನ್ನು ಬಿಡದಿದ್ದರೆ ನಾನು ಇಲ್ಲಿಂದ ಹೋಗುವುದಿಲ್ಲ. ಇಲ್ಲಿಯೇ ಕೂರುತ್ತೇನೆ” ಎಂದು ಹೇಳಿ ಪೊಲೀಸ್ ಠಾಣೆಯಲ್ಲಿ ರಾತ್ರಿ ಒಂದು ಗಂಟೆಗೆ ಶಾಸಕ ಪೂಂಜ ತನ್ನ ಜೊತೆಗಿದ್ದ ಕಾರ್ಯಕರ್ತರ ಜೊತೆಗೆ ಧರಣಿ ಕುಳಿತು, ಕೆಲಹೊತ್ತು ಕುಳಿತು ಧಿಕ್ಕಾರ ಕೂಗಿದ್ದಾರೆ. ಆದರೆ ಪೊಲೀಸರು ಕಾರ್ಯಕರ್ತನನ್ನು ಬಿಡಲು ಒಪ್ಪಲಿಲ್ಲ.

ಈ ಎಲ್ಲ ಘಟನೆಯ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, “ಓರ್ವ ಜನಪ್ರತಿನಿಧಿಯಾದವನಿಗೆ, ಸರ್ಕಾರಿ ಅಧಿಕಾರಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬ ಸಾಮಾನ್ಯ ಪರಿಜ್ಞಾನ ಇಲ್ಲ” ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.

ಇದನ್ನು ಓದಿದ್ದೀರಾ? ಅರಣ್ಯಾಧಿಕಾರಿಯನ್ನು ಅವಮಾನಿಸಿದ್ದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್

ಈ ಹಿಂದೆ ಕೂಡ ಇದೇ ರೀತಿ ವರ್ತಿಸಿದ್ದ ಶಾಸಕ

ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಸರ್ಕಾರಿ ಅಧಿಕಾರಿಗಳೊಂದಿಗೆ ಈ ರೀತಿ ನಡೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಕರ್ತವ್ಯದಲ್ಲಿದ್ದ ಅರಣ್ಯಾಧಿಕಾರಿಯನ್ನು ಸಾರ್ವಜನಿಕವಾಗಿ ಅವಮಾನಿಸಿದ್ದರು.

2023 ಅಕ್ಟೋಬರ್ 8ರಂದು ಚಾರ್ಮಾಡಿ ಭಾಗದ ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ-ತೆರವು ಸಂಬಂಧ ಅರಣ್ಯಾಧಿಕಾರಿಗಳು-ಶಾಸಕರ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಅರಣ್ಯಾಧಿಕಾರಿ ಜಯಪ್ರಕಾಶ್ ಎಂಬುವವರನ್ನು “ಲೋಫರ್ ನನ್ ಮಗ” ಅಂತ ಹೀಯಾಳಿಸಿ, ಅವಮಾನಿಸಿದ್ದರು. ಇದರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲೂ ವೈರಲ್ ಆಗಿತ್ತು. ಇದರಿಂದ ಅವಮಾನಗೊಂಡಿದ್ದ ಅರಣ್ಯಾಧಿಕಾರಿ ಜಯಪ್ರಕಾಶ್ ಶಾಸಕ ಪೂಂಜಾ ಹಾಗೂ ಬೆಂಬಲಿಗರ ವಿರುದ್ಧ ಧರ್ಮಸ್ಥಳದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

?s=150&d=mp&r=g
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X