ಸಾಮ, ದಾನ, ಭೇದ, ದಂಡ ಬಳಸಿ ಮರು ಮತಾಂತರಕ್ಕೆ ಮುಂದಾಗುವ ಅನಿವಾರ್ಯತೆ ಇದೆ. ಮತಾಂತರ ನಿಷೇಧ ಕಾಯ್ದೆ ಹಿಂದಕ್ಕೆ ಪಡೆದಿರುವುದರಿಂದ ದೇಶ ಮತ್ತು ಹಿಂದೂ ಧರ್ಮ ಉಳಿಸಿಕೊಳ್ಳಲು ಎಲ್ಲ ಸಮುದಾಯದ ಮಠಾಧೀಶರು ಮಹಾ ಪಂಚಾಯತ್ ಕರೆಯಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮನ್ನು ನಾವು ಉಳಿಸಿಕೊಳ್ಳಲು ಸ್ವರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಬೇರೆ ಬೇರೆ ಕಾರಣಕ್ಕೆ ಹಿಂದೂ ಧರ್ಮದಿಂದ ಹೊರ ಹೋದವರನ್ನು ಮರಳಿ ಕರೆತರಬೇಕಾದ ಅವಶ್ಯಕತೆ ಇದೆ. ಕಾಂಗ್ರೆಸ್ಗೆ ಅಂಬೇಡ್ಕರ್ ಕಂಡರೆ ಮಾತ್ರ ಅಸಹನೆ ಎಂದುಕೊಂಡಿದ್ದೆ. ಭಗತ್ ಸಿಂಗ್, ರಾಜಗುರು, ಸುಖದೇವ್ ಬಗ್ಗೆಯೂ ಅಸಹನೆ ಇದೆ ಎಂಬುದು ಅರ್ಥವಾಗಿದೆ. ನಾವು ಇದೇ ಪಠ್ಯಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ. ತಪ್ಪು ಹುಡುಕಲು ಜನರನ್ನು ಕೇಳುತ್ತೇವೆ”’” ಎಂದು ಸಿ ಟಿ ರವಿ ಹೇಳಿದರು.
ಈ ಸುದ್ದಿ ಓದಿದ್ದೀರಾ? 35 ವರ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಸಿಎಂ ಸ್ಥಾನ ನೀಡಿಲ್ಲ: ಬೊಮ್ಮಾಯಿ ತಿರುಗೇಟು
‘ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಕುರಿತ ಪಾಠವನ್ನು ಪಠ್ಯದಿಂದ ಕೈಬಿಡಲಾಗಿದೆ. ಚಕ್ರವರ್ತಿ ಸೂಲಿಬೆಲೆ ಬರೆದಿದ್ದ ಲೇಖನ ದೇಶಪ್ರೇಮಿಗಳ ಬಗ್ಗೆಯೇ ಹೊರತು ಸೂಲಿಬೆಲೆ ಜೀವನ ಚರಿತ್ರೆ ಅಲ್ಲ. ಹೆಡಗೇವಾರ್ ಅವರ ಪಾಠವನ್ನೂ ಕೈಬಿಡಲಾಗಿದೆ. ಕಾಂಗ್ರೆಸ್ ನಾಯಕರಿಗೆ ದೇಶಭಕ್ತಿ ಎಂದರೆ ಅಸಹನೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ ಜತೆ ರಾಹುಲ್ ಗಾಂಧಿ ಒಪ್ಪಂದ ದೇಶಭಕ್ತಿಗೆ ವಿರುದ್ಧವಾದುದು ಎಂಬ ಅನುಮಾನ ಬರುತ್ತಿದೆ’ ಎಂದರು.
ಎಪಿಎಂಸಿ ತಿದ್ದುಪಡಿ ಕಾಯ್ದೆಯಲ್ಲಿ ರೈತರೂ ಉದ್ದಿಮೆದಾರರಾಗುವ ಅವಕಾಶ ಇತ್ತು. ಅದನ್ನು ಹಿಂಪಡೆಯುವ ಮೂಲಕ ರೈತರನ್ನು ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ಸಿಲುಕಿಸುವುದು ಕಾಂಗ್ರೆಸ್ ಉದ್ದೇಶ. ಕಾಂಗ್ರೆಸ್ ಸುಳ್ಳು ಹೇಳಿ ರೈತರ ದಿಕ್ಕು ತಪ್ಪಿಸಿದೆ. ಸದ್ಯದಲ್ಲೇ ಸತ್ಯ ರೈತರಿಗೆ ಅರಿವಾಗಲಿದೆ ಎಂದು ರವಿ ತಿಳಿಸಿದರು.