- ಬಿಜೆಪಿಯಲ್ಲಿ ಬೊಮ್ಮಾಯಿ ಅವರ ವರ್ಚಸ್ಸು ಕಡಿಮೆ ಆಗಿದೆ
- ಕೋನರೆಡ್ಡಿಯ ಬಹಿರಂಗ ಹೇಳಿಕೆ ಬೆನ್ನಲ್ಲೆ ಆಕ್ಷೇಪ ವ್ಯಕ್ತ
“ಬಸವರಾಜ ಬೊಮ್ಮಾಯಿಗೆ ಹೃದಯಾಘಾತ ಆಗಿದ್ದು ಯಾಕೆ ಗೊತ್ತಾ? ಕರ್ನಾಟಕದಲ್ಲಿ ಹೊಸ ಸರ್ಕಾರ ಬಂದು ಐದು ತಿಂಗಳಾಯ್ತು. ಇನ್ನೂ ವಿರೋಧ ಪಕ್ಷದ ನಾಯಕನ ಆಯ್ಕೆ ಹಾಗೂ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುಲು ಆಗಿಲ್ಲ ಎಂದು ಯೋಚನೆ ಮಾಡಿ ಮಾಡಿಯೇ ಹೃದಯಾಘಾತ ಆಗಿದೆ” ಎಂದು ಕಾಂಗ್ರೆಸ್ ಶಾಸಕ ಎನ್ ಎಚ್ ಕೋನರೆಡ್ಡಿ ಲೇವಡಿ ಮಾಡಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, “ಕರ್ನಾಟಕದಲ್ಲಿ ಬಿಜೆಪಿಯ ಇಂದಿನ ಸ್ಥಿತಿ ಬಗ್ಗೆ ಚಿಂತೆ ಮಾಡಿ ಬೊಮ್ಮಾಯಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಜತೆಗೆ ಅವರ ಪಕ್ಷದಲ್ಲಿ ಅವರ ವರ್ಚಸ್ಸು ಕಡಿಮೆ ಆಗಿದೆ ಎಂಬ ಯೋಚನೆಯಿಂದ ಹಾರ್ಟ್ ಅಟ್ಯಾಕ್ ಆಗಿದೆ” ಎಂದರು.
“ಬಿಜೆಪಿ ಅಧೋಗತಿಗೆ ಹೋಗಿರುವುದನ್ನು ನೋಡಿ ಚಿಂತೆ ಮಾಡಿ ಮಾಡಿ ಬೊಮ್ಮಾಯಿಗೆ ಸಾಕಾಗಿದೆ. ಹೆಚ್ಚು ಯೋಚನೆ ಮಾಡಿದ್ದರಿಂದ ಹೃದಯಾಘಾತವಾಗಿದೆ” ಎಂದಿದ್ದಾರೆ.
ಕೋನರೆಡ್ಡಿಯ ಬಹಿರಂಗ ಹೇಳಿಕೆ ಬೆನ್ನಲ್ಲೆ ಅದರ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. “ಮಾಜಿ ಮುಖ್ಯಮಂತ್ರಿಯ ಅನಾರೋಗ್ಯದ ಕುರಿತು ಸೌಜನ್ಯವನ್ನೇ ಮರೆತು ಕಾಂಗ್ರೆಸ್ ಶಾಸಕ ಮಾತನಾಡಿದ್ದಾರೆ” ಎಂಬ ಮಾತುಗಳು ರಾಜಕೀಯ ಅಂಗಳದಲ್ಲಿ ವ್ಯಕ್ತವಾಗುತ್ತಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹುಲಿಯುಗುರು ಲಾಕೆಟ್ ; ಸಂತೋಷನಿಗೇನೋ ಸುಣ್ಣ, ಸೆಲೆಬ್ರಿಟಿಗಳಿಗೇಕೆ ಬೆಣ್ಣೆ?
ಇತ್ತೀಚೆಗಷ್ಟೇ ಬಸವರಾಜ ಬೊಮ್ಮಾಯಿ ಅವರು ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮಂಡಿನೋವಿನ ಬಾಧೆ ಕಾಡುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಅವರ ಆರೋಗ್ಯ ತಪಾಸಣೆ ನಡೆಸಿದಾಗ ಹೃದಯದ ಕವಾಟಗಳು ಮುಚ್ಚಿಕೊಂಡಿರುವುದು ಪತ್ತೆಯಾಗಿತ್ತು. ನಂತರ ಅವರು ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಕೆಲವು ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಮನೆಗೆ ಮರಳಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.