- ಜೆಡಿಎಸ್ನ ಹಂಗಾಮಿ ಅಧ್ಯಕ್ಷರನ್ನು ಯಾವ ಆಧಾರದಲ್ಲಿ ಮಾಡಿದ್ದೀರಿ?
- ‘3/2 ನೇ ಸದಸ್ಯರ ಅನುಮತಿ ಪಡೆದು ನನಗೆ ನೋಟಿಸ್ ಕೊಡಬೇಕಿತ್ತು’
ಎಚ್ ಡಿ ಕುಮಾರಸ್ವಾಮಿ ಅವರನ್ನು ಜೆಡಿಎಸ್ನ ಹಂಗಾಮಿ ಅಧ್ಯಕ್ಷರು ಅಂತ ಯಾವ ಆಧಾರದಲ್ಲಿ ಮಾಡಿದ್ದೀರಿ? ಎಂದು ಜೆಡಿಎಸ್ ನಿಕಟಪೂರ್ವ ಅಧ್ಯಕ್ಷ ಸಿಎಂ ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳ ವಿಸರ್ಜನೆ ವಿಚಾರವಾಗಿ ಕುಮಾರಸ್ವಾಮಿ ವಿರುದ್ಧ ಬೆಂಗಳೂರಿನಲ್ಲಿ ವಾಗ್ದಾಳಿ ನಡೆಸಿದ ಅವರು, “ದೇವರು ಮತ್ತು ಜನ ನನ್ನ ಕೈಹಿಡಿಯುತ್ತಾರೆ. ಎಲ್ಲವನ್ನೂ ಹೊರಗೆ ತಂದರೆ ಒಳ್ಳೆಯದಲ್ಲ, ವಿಸರ್ಜನೆ ತಪ್ಪು. ಆದೇಶ ವಾಪಸ್ ಪಡೆದು ಪಕ್ಷದ ಸಭೆ ಕರೆಯಿರಿ” ಎಂದು ಒತ್ತಾಯಿಸಿದ್ದಾರೆ.
“ನಾನು ಹೋಗದೇ ಇದ್ದರೆ ಚನ್ನಪಟ್ಟಣದಲ್ಲಿ ಎಚ್ ಡಿ ಕುಮಾರಸ್ವಾಮಿ ಗೆಲ್ಲುತ್ತಿದ್ದರಾ? ಯಾವ ಒಕ್ಕಲಿಗ ನಾಯಕರನ್ನು ಬೆಳೆಸಿದ್ದೀರಿ ನೀವು? ಇಷ್ಟು ದೊಡ್ಡ ವಯಸ್ಸಿನಲ್ಲಿ ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಾನು ಹಾಸನ, ಮಂಡ್ಯ, ಹೊಳೆನರಸೀಪುರಕ್ಕೆ ಹೋಗಿ ಸಭೆ ಮಾಡುತ್ತೇನೆ” ಎಂದು ಜೆಡಿಎಸ್ ವರಿಷ್ಠ ದೇವೇಗೌಡರ ಬಗ್ಗೆ ಹರಿಹಾಯ್ದರು.
“ಅವರಿಗೆ ನನ್ನನ್ನು ತೆಗೆಯುವ ಅಧಿಕಾರ ಇಲ್ಲ. ಕಾರ್ಯಕಾರಿ ಸಮಿತಿಯ 3/2 ನೇ ಸದಸ್ಯರ ಅನುಮತಿ ಪಡೆದು ಮೊದಲು ನನಗೆ ನೋಟಿಸ್ ಕೊಡಬೇಕು. ನನ್ನನ್ನು ಕೆಣಕಿದ್ದೀರಿ, ಇದರ ಪರಿಣಾಮ ಮುಂದೆ ಏನಿರುತ್ತದೆ ಅಂತ ಕಾದು ನೋಡಿ” ಎಂದು ಎಚ್ಚರಿಸಿದರು.
ಗೌಡರಿಗೆ ಸ್ವಲ್ಪವಾದರೂ ಪ್ರಜ್ಞೆ ಬೇಡವಾ?
“ಇವತ್ತಿನ ಸಭೆಗೆ ನನಗೆ ಆಹ್ವಾನ ಇರಲಿಲ್ಲ. ಸಭೆ ಬಗ್ಗೆ ನನಗೆ ಗೊತ್ತೂ ಇಲ್ಲ. ಕಂಡೋರ ಮಕ್ಕಳು ಸಿಕ್ಕಿದ್ದೇವೆ ಅಂತ ಹೀಗೆಲ್ಲಾ ಮಾಡುವುದು ಸರಿಯಲ್ಲ ಗೌಡ್ರೇ. ನನಗೆ ಅಧಿಕಾರದ ಆಸೆ ಇಲ್ಲ. ಜೆಡಿಎಸ್ ಕುಟುಂಬದ ಸ್ವತ್ತು ಅಂತ ತೋರಿಸಿಬಿಟ್ಟಿರಿ. ಗೌಡರಿಗೆ ಸ್ವಲ್ಪವಾದರೂ ಪ್ರಜ್ಞೆ ಬೇಡವಾ?” ಎಂದು ಕಿಡಿಕಾರಿದರು.
“ನಾನು ಒಬ್ಬ ಹಿರಿಯ, ಪರಿಷತ್ ಸದಸ್ಯ ಸ್ಥಾನ ಬಿಟ್ಟು ಬಂದಿದ್ದೇನೆ. ನನ್ನ ಜೊತೆ ಮಾತಾಡಬೇಕು ಅಂತ ಅನ್ನಿಸಲಿಲ್ವಾ? ರಾತ್ರಿ ಹಗಲು ಓಡಾಡಿ ಅವರ ಮಗನನ್ನು ಗೆಲ್ಲಿಸಿದ್ದೇನೆ. ನನಗೆ ಅವರು ಒಳ್ಳೆಯ ಬಹುಮಾನ ಕೊಟ್ಟಿದ್ದಾರೆ” ಬೇಸರ ವ್ಯಕ್ತಪಡಿಸಿದರು
“ನಾನು ಸಿಎಂ ಸಿದ್ದರಾಮಯ್ಯ ಅವರನ್ನು ಬೈಯುತ್ತಿಲ್ಲ ಅಂತ ದೇವೇಗೌಡರಿಗೆ ಬೇಸರ ಇದೆ. ಸುಮ್ಮ ಸುಮ್ಮನೆ ನಾನ್ಯಾಕೆ ಸಿದ್ದರಾಮಯ್ಯರನ್ನು ಬೈಯಲಿ? ಸಿದ್ದರಾಮಯ್ಯ ಜೊತೆ ಯಾವುದೇ ವೈಷಮ್ಯ ಇಲ್ಲ. ಅವರು ಅವರ ಪಾಡಿಗೆ ಅಧಿಕಾರ ಮಾಡುತ್ತಿದ್ದಾರೆ. ನನಗೆ ಕಾಂಗ್ರೆಸ್ ಬಿಟ್ಟಿದ್ದು ತಪ್ಪು ಅನ್ನಿಸಿಲ್ಲ. ನನ್ನ ಹೋರಾಟ ಶುರುವಾಗಿದೆ” ಎಂದರು.