ಸಚಿವ ಪ್ರಿಯಾಂಕ್ ಖರ್ಗೆ ಮಾತಿಗೆ ಮುಂಚೆ ಊರಿಗೆಲ್ಲ ಬುದ್ಧಿ ಹೇಳುತ್ತಿದ್ದರು. ಈಗ ಅವರೇ ಬುದ್ಧಿ ಹೇಳಿಸಿಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.
ಮಂಡ್ಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿ, “ಖರ್ಗೆ ಅವರು ದೇಶಕ್ಕೆ, ನಾಡಿಗೆಲ್ಲ ಬುದ್ದಿ ಹೇಳುವವರು, ಉಪದೇಶ ಮಾಡುವವರು. ಯಾವ ಆಧಾರದ ಮೇಲೆ ಕೆಐಎಡಿಬಿ ಜಾಗವನ್ನು ತೆಗೆದುಕೊಂಡಿದ್ದಾರೆ” ಎಂದು ಕೇಂದ್ರ ಪ್ರಶ್ನಿಸಿದರು.
“ದುಡ್ಡು ಕೊಟ್ಟು ಖರೀದಿಸಲು ಆಗುತ್ತಿರಲಿಲ್ಲವಾ? ಖಾಸಗಿ ಜಮೀನು ಖರೀದಿ ಮಾಡಬಹುದಿತ್ತು. ಕೆಐಎಡಿಬಿ ಜಾಗವೇ ಬೇಕಿತ್ತಾ? ಇದು ಅಧಿಕಾರ ದುರಪಯೋಗ. ದೇಶಕ್ಕೆ ಬುದ್ದಿ ಹೇಳುವವರು ಇದಕ್ಕೆ ಉತ್ತರ ಹೇಳಬೇಕು ಎಂದು” ಆಗ್ರಹಿಸಿದರು.
ರಾಜಭವನ ಚಲೋಗೆ ಸಚಿವರ ವ್ಯಂಗ್ಯ
“ಕಾಂಗ್ರೆಸ್ ನಾಯಕರು 30ನೇ ತಾರೀಖು ರಾಜಭವನ ಚಲೋ ಮಾಡುತ್ತಿರುವುದಕ್ಕೆ ಬಹಳ ಸಂತೋಷ. ಅವರು ರಾಜಭವನದ ಜೊತೆಗೆ ರಾಷ್ಟ್ರಪತಿ ಭವನ ಚಲೋ ಕೂಡ ಮಾಡಲಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮನೆಗೆ ಕೂಡ ಹೋಗಲಿ. ಸತ್ತಿರುವ ವಿಚಾರ ಇಟ್ಟುಕೊಂಡು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಮಹಾನ್ ಅಪರಾಧ ಮಾಡಿದ್ದಾರೆ ಎನ್ನುತ್ತಿದ್ದಾರೆ. ನಾನೇ ಕೈ ಜೋಡಿಸಿ ಮನವಿ ಮಾಡುತ್ತೇನೆ . ರಾಜ್ಯಪಾಲರ ಅನುಮತಿ ಪಡೆದು ತನಿಖೆ ಮಾಡಲಿ” ಎಂದರು.
“ಮಂತ್ರಿಗಳ ಲೇಟರ್ ಪ್ಯಾಡ್ ನಲ್ಲಿ ಈ ಜನ ಏನೆಲ್ಲಾ ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಎಲ್ಲರಿಗೂ ಇದೆ. ಮುಡಾ ದಾಖಲೆಗಳಲ್ಲಿ ಸಹಿ ವ್ಯತ್ಯಾಸ ಜನ ಮಾತನಾಡುತ್ತಿದ್ದಾರೆ. ಈ ಹಗರಣದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ಟಾರ್ಚ್ ಹಾಕಿ ನೋಡಿದರೂ ಅಷ್ಟೇ, ಹಾಕದೇ ನೋಡಿದರೂ ಅಷ್ಟೇ. ಅದು ಸರ್ಕಾರಿ ಭೂಮಿ. ಸರ್ಕಾರಿ ಭೂಮಿ ಲಪಟಾಯಿಸಿ ಮುಡಾ ಸೈಟ್ ಪಡೆದಿದ್ದಾರೆ. ಇದಕ್ಕೆ ಉತ್ತರ ಕೊಡಲಿ” ಎಂದು ಒತ್ತಾಯ ಮಾಡಿದರು.
ಮಂಡ್ಯ ನಗರಸಭೆ ಚುನಾವಣೆ ಮತದಾನದ ವೇಳೆಯಲ್ಲೇ ಚುನಾವಣಾಧಿಕಾರಿ ಸಮಕ್ಷಮದಲ್ಲಿಯೇ ಸ್ಥಳೀಯ ಶಾಸಕರು ನಮ್ಮ ಪಕ್ಷದ ಸದಸ್ಯರಿಗೆ ಅಡ್ಡ ಮತದಾನಕ್ಕೆ ಕುಮ್ಮಕ್ಕು ನೀಡಿ ಕಣ್ಸನ್ನೇ, ಕೈಸನ್ನೇ ಮೂಲಕ ಹಣದ ಆಮೀಷ ಒಡ್ಡಿದರು ಎಂದು ಶಾಸಕ ಗಣಿಗ ರವಿ ವಿರುದ್ಧ ಕುಮಾರಸ್ವಾಮಿ ಆರೋಪಿಸಿದರು.
ಮಾಜಿ ಜಾತ್ಯತೀತ ಕುಮಾರಣ್ಣ,, ಸೈಟ್, ಜಮೀನು, ರಿಯಲ್ ಎಸ್ಟೇಟ್ ರಾಜಕೀಯ ಎಲ್ಲವೂ ನಿಮ್ಮೊಬ್ಬರ ಗುತ್ತಿಗೆಯಾ,,