ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದರೆ ಜಾತಿ ಗಣತಿ ನಡೆಸಲಾಗುವುದು ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಬುಂದೇಲ್ಖಂಡ್ ಪ್ರಾಂತ್ಯದ ಸಾಗರ್ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಶಿಫಾರಸಿನ ಮೇರೆಗೆ ಮಂಜೂರಾದ ಬುಂದೇಲ್ಖಂಡ್ ಪ್ಯಾಕೇಜ್ ಅನ್ನು ಬಿಜೆಪಿ ಸರ್ಕಾರ ಜಾರಿಗೊಳಿಸಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷರು, ಹಿಂಸಾಚಾರ ಪೀಡಿತ ಮಣಿಪುರಕ್ಕೆ ಕೇಂದ್ರ ಸರ್ಕಾರ ಏನನ್ನೂ ಮಾಡಿಲ್ಲ ಎಂದರು.
ಈ ತಿಂಗಳ ಆರಂಭದಲ್ಲಿ ಪ್ರಧಾನಿ ಮೋದಿ ಅವರು 100 ಕೋಟಿ ರೂ. ವೆಚ್ಚದಲ್ಲಿ ಸಂತ ರವಿದಾಸ್ ಅವರ ಸ್ಮಾರಕ ಮತ್ತು ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದನ್ನೂ ಟೀಕಿಸಿದ ಖರ್ಗೆ ಅವರು, ಪ್ರಧಾನಿ ಮೋದಿ ಚುನಾವಣಾ ಸಂದರ್ಭದಲ್ಲಿ ಮಾತ್ರ ಸಂತ ರವಿದಾಸರನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ದೆಹಲಿಯಲ್ಲಿ ಸಂತ ರವಿದಾಸ್ ಅವರ ಸ್ಮಾರಕವನ್ನು ಕೆಡವಲಾಗಿದೆ” ಎಂದು ಪ್ರಧಾನಿಯ ಇಬ್ಬಗೆ ನೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಅತಿಕ್ರಮ ಪ್ರವೇಶ ಯತ್ನಿಸಿದ ನೂರಾರು ಇಥಿಯೋಪಿಯನ್ ವಲಸಿಗರ ಕೊಂದ ಸೌದಿ ಯೋಧರು
2011 ರ ಜನಗಣತಿಯ ಪ್ರಕಾರ, ಮಧ್ಯಪ್ರದೇಶದಲ್ಲಿ ದಲಿತ ಸಮುದಾಯದವರ ಜನಸಂಖ್ಯೆ 1.13 ಕೋಟಿಯಷ್ಟಿದೆ.
ಈಶಾನ್ಯ ಮಧ್ಯಪ್ರದೇಶದ ಬುಂದೇಲ್ಖಂಡ್ ಆರು ವಿದಾನಸಭಾ ಸ್ಥಾನಗಳು ಪರಿಶಿಷ್ಟ ಜಾತಿ ಸಮುದಾಯ ಮೀಸಲು ಕ್ಷೇತ್ರಗಳಾಗಿವೆ. 2018 ರ ರಾಜ್ಯ ಚುನಾವಣೆಯಲ್ಲಿ ಬಿನಾ, ನಾರ್ಯೋಲಿ, ಜಟಾರಾ, ಚಾಂಡಾಲ ಮತ್ತು ಹಟ್ಟಾಗಳಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಗುನ್ನೂರು ಕ್ಷೇತ್ರವನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು.
ಬುಂದೇಲ್ಖಂಡ್ ಪ್ರಾಂತ್ಯದ ಸಾಗರ್, ಚತ್ತರ್ಪುರ್, ಟಿಕಮ್ಗಢ್, ನಿಮಾರಿ, ದಾಮೋಹ್ ಮತ್ತು ಪನ್ನಾ ಜಿಲ್ಲೆಗಳು 26 ವಿಧಾನಸಭಾ ಸ್ಥಾನಗಳನ್ನು ಹೊಂದಿವೆ. ಇದರಲ್ಲಿ ಕಳೆದ ರಾಜ್ಯ ಚುನಾವಣೆಯಲ್ಲಿ 15 ಸ್ಥಾನವನ್ನು ಬಿಜೆಪಿ ಗೆದ್ದಿದ್ದರೆ, ಕಾಂಗ್ರೆಸ್ ಒಂಭತ್ತು ಮತ್ತು ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ತಲಾ ಒಂದು ಕ್ಷೇತ್ರವನ್ನು ಗೆದ್ದಿವೆ.
ಬಿಜೆಪಿ ಆಡಳಿತವಿರುವ ಮಧ್ಯ ಪ್ರದೇಶ ರಾಜ್ಯದಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.