ಬಿಜೆಪಿ ಅಧಿಕಾರದಲ್ಲಿದ್ದಾಗ ಶಾಸಕ ಎಸ್ ಟಿ ಸೋಮಶೇಖರ್ ಅವರಿಗೆ ಸಹಕಾರದಂತಹ ದೊಡ್ಡ ಖಾತೆಯನ್ನೇ ನೀಡಿರಲಿಲ್ಲವೆ. ಪಕ್ಷ ಅವರಿಗೆ ಏನು ಮೋಸ ಮಾಡಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, “ಬಿಜೆಪಿ ಅಧಿಕಾರದಲ್ಲಿದ್ದಾಗ ಅಧಿಕಾರ ಅನುಭವಿಸಿ, ಇಲ್ಲದಿದ್ದಾಗ ಪಕ್ಷ ಸಂಘಟನೆ ಮಾಡುವುದಿಲ್ಲ ಎಂದರೆ ಹೇಗೆ? ಮೈಸೂರಿನಂತಹ ದೊಡ್ಡ ಜಿಲ್ಲೆಯ ಉಸ್ತುವಾರಿ ನೀಡಲಾಗಿತ್ತು. ನಾವೀಗ ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲ, ಸಮಸ್ಯೆಯಲ್ಲಿ ಇದ್ದೇವೆ. ಈ ಸಂದರ್ಭದಲ್ಲಿ ಸೋಮಶೇಖರ್ ವಿಷ ಕುಡಿಯುವ ಸ್ಥಿತಿ ಬಂದಿದೆಯೆಂದು ಮಾತನಾಡಿದರೆ, ಪಕ್ಷ ಕಟ್ಟುವವರು ಯಾರು” ಎಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ.
“ಅಧಿಕಾರದಲ್ಲಿರುವ ಕಾಂಗ್ರೆಸ್ ಖುಷಿಪಡಿಸಲು ಈ ರೀತಿ ಮಾತನಾಡುವುದು ತಪ್ಪಾಗುತ್ತದೆ. ಯಶವಂತಪುರದಲ್ಲಿ ಅವರ ನಾಯಕತ್ವದಲ್ಲೆ ಎಲ್ಲ ಕಾರ್ಯಕ್ರಮ ನಡೆಯುತ್ತಿವೆ. ಅವರನ್ನು ವಿರೋಧಿಸುವವರು ಪಕ್ಷದಲ್ಲಿ ಯಾರೂ ಇಲ್ಲ. ಅವರು ಈಗಲೂ ಪಕ್ಷದಲ್ಲೇ ಉಳಿದು ಸಂಘಟನೆ ಮಾಡಲಿದ್ದಾರೆಂಬ ವಿಶ್ವಾಸವಿದೆ” ಎಂದರು.
“ಡಿ ವಿ ಸದಾನಂದಗೌಡರು ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಬಳಿಕ ನಾನು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಎಂಬ ಊಹಾಪೋಹ ಶುರುವಾಗಿದೆ. ಪಕ್ಷದಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸದ್ಯ ಚಿಕ್ಕಮಗಳೂರು-ಉಡುಪಿ ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ. ಮುಂದೆ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ” ಎಂದು ತಿಳಿಸಿದರು.