ಅಮರನಾಥದಲ್ಲಿ ಸಿಲುಕಿದ್ದ ಕರ್ನಾಟಕದ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಮರನಾಥದಲ್ಲಿ ಸಿಲುಕಿರುವ ಕರ್ನಾಟಕದ ಯಾತ್ರಾರ್ಥಿಗಳ ರಕ್ಷಣೆಗೆ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಶ್ಮಿ ಅವರನ್ನು ನೇಮಿಸಲಾಗಿದೆ. ಮಳೆಯಾಗುತ್ತಿರುವುದರಿಂದ ಅವರನ್ನು ಹೆಲಿಕಾಪ್ಟರ್ ಅಥವಾ ವಿಮಾನದ ಮೂಲಕ ರಕ್ಷಿಸಲಾಗುತ್ತಿಲ್ಲ. ನಮ್ಮ ಅಧಿಕಾರಿಗಳು ಅಲ್ಲಿನ ಪ್ರಾದೇಶಿಕ ಆಯುಕ್ತರು ಹಾಗೂ ಡಿಸಿ, ಮತ್ತು ಪೊಲೀಸರೊಂದಿಗೆ ಮಾತನಾಡಿದ್ದಾರೆ. ಮಳೆ ಕಡಿಮೆಯಾದ ನಂತರ ರಕ್ಷಣಾ ಕಾರ್ಯ ನಡೆಸಲಾಗುತ್ತದೆ ಎಂದರು.
ಗದಗದಿಂದ ಅಮರನಾಥ ಯಾತ್ರೆಗೆ 23 ಯಾತ್ರಿಕರು ತೆರಳಿದ್ದರು. ದೇವರ ದರ್ಶನ ಪಡೆದು ಮರಳಿ ಬರುವಾಗ ಗುಡ್ಡ ಕುಸಿತವಾಗಿ ರಸ್ತೆ ಮಧ್ಯೆ ಸಿಲುಕಿದ್ದಾರೆ. ಅಮರನಾಥದಿಂದ ಸುಮಾರು 10 ಕಿ.ಮೀ ದೂರದಲ್ಲಿ ಗುಡ್ಡ ಕುಸಿತವಾಗಿದೆ.
ಯಾತ್ರಿಗಳ ಜೊತೆ ಗದಗ ಡಿಸಿ ವೈಶಾಲಿ ಸಂಪರ್ಕ
ಯಾತ್ರಿಗಳನ್ನು ಗದಗ ಜಿಲ್ಲಾಧಿಕಾರಿ ವೈಶಾಲಿ ಸಂಪರ್ಕಿಸಿದ್ದು, ಹೆಲಿಕಾಪ್ಟರ್ ಕಳಿಸಿ ನಮ್ಮನ್ನು ರಕ್ಷಣೆ ಮಾಡಿ ಅಂತ ಯಾತ್ರಿಗಳು ಮನವಿ ಮಾಡಿದ್ದಾರೆ. ಗಾಬರಿಯಲ್ಲಿದ್ದರು, ಆದರೂ ಎಲ್ಲರೂ ಸೇಫ್ ಜಾಗದಲ್ಲಿ ಇದ್ದಾರೆ. ವೆದರ್ ಕ್ಲೀಯರ್ ಆದರೆ ಇವತ್ತು ನಾಳೆ ಸ್ಥಳಾಂತರ ಮಾಡುತ್ತಾರೆ. ಜಮ್ಮು ಕಾಶ್ಮೀರದಲ್ಲಿ ಕರ್ನಾಟಕದ ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಇದ್ದಾರೆ. ಐಎಎಸ್ ಅಧಿಕಾರಿಗಳಾದ ರಶ್ಮಿ ಹಾಗೂ ತುಳಸಿ ಮದ್ದಿನೇನಿ ಅವರನ್ನು ಸಂಪರ್ಕ ಮಾಡಲಾಗಿದೆ. ಯಾತ್ರಿಗಳ ಜೊತೆ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದೆ. ಸೇಫ್ ಆಗಿದ್ದಾರೆ ಊಟ, ಉಪಹಾರ ಯಾವುದೇ ಸಮಸ್ಯೆ ಇಲ್ಲ. ಕೂಡಲೇ ಅಲ್ಲಿಂದ ರಕ್ಷಣೆ ಮಾಡಲಾಗುತ್ತೆ ಎಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಪಕ್ಷ ನಾಯಕ ಆಯ್ಕೆ ವಿಚಾರದಲ್ಲಿ ಸಾಕಷ್ಟು ಮುಜುಗರ ಅನುಭವಿಸಿದ್ದೇವೆ: ಎನ್ ರವಿಕುಮಾರ್
ಧಾರವಾಡ ಜಿಲ್ಲೆಯಿಂದ ತೆರಳಿದ್ದ ಐವರು ಯಾತ್ರಿಕರು ಪಂಚತೀರಣಿ ಬಳಿ ನಾಲ್ಕು ದಿನಗಳಿಂದ ಸಿಲುಕಿದ್ದಾರೆ. ವಿಠ್ಠಲ ಬಾಚಗುಂಡಿ, ರಾಕೇಶ ನಾಜರೆ, ಹರೀಶ ಸಾಳುಂಕೆ, ನಾಗರಾಜ ಹಳಕಟ್ಟಿ, ಮಡಿವಾಳಪ್ಪ ಕೊಟಬಾಗಿ ಸಿಲುಕಿದ ಯುವಕರು.
ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮತ್ತು ಭಾರೀ ಮಳೆ ಹಿನ್ನೆಲೆ ಕಾಶ್ಮೀರ ಕಣಿವೆಯ ಬಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಅಮರನಾಥ ಯಾತ್ರೆಯನ್ನು ಸತತ ಎರಡನೇ ದಿನವೂ ಸ್ಥಗಿತಗೊಳಿಸಲಾಗಿದೆ. ಅದರಂತೆ, ಜಮ್ಮುವಿನಿಂದ ಕಾಶ್ಮೀರಕ್ಕೆ ಯಾವುದೇ ಹೊಸ ಯಾತ್ರಾರ್ಥಿಗಳಿಗೆ ತೆರಳಲು ಅವಕಾಶವಿಲ್ಲ. ಹಿಲ್ಲರ್ ಅನಂತನಾಗ್ ರೈಲು ನಿಲ್ದಾಣದಲ್ಲಿ ನೀರು ನಿಂತಿದ್ದರಿಂದ ಖಾಜಿಗುಂಡ್ ಮತ್ತು ಬನಿಹಾಲ್ ನಡುವಿನ ರೈಲು ಸಂಚಾರಗಳನ್ನೂ ಸ್ಥಗಿತಗೊಳಿಸಲಾಗಿದೆ.